"ನಯನಾ ಮೋಟಮ್ಮ ಖಾಸಗಿ ಫೋಟೊಗಳ ಮೂಲಕ ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ": ನಟ ಚೇತನ್ ಕಿಡಿ
ರಾಜ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಇದೇ ವೇಳೆ ಮೊದಲ ಬಾರಿಗೆ ಎಂಎಲ್ಎಗಳಾಗಿದ್ದಾರೆ. ಇದರಲ್ಲಿ ಚಿಕ್ಕಮಗಳೂರು ಮೀಸಲು ಕ್ಷೇತ್ರದ ಮೂಡಿಗೆರೆ ಎಂಎಲ್ಎ ನಯನಾ ಮೋಟಮ್ಮ ಕೂಡ ಒಬ್ಬರು.
ನಯನಾ ಮೋಟಮ್ಮ ಇದೇ ಮೊದಲ ಬಾರಿಗೆ ಎಂಎಲ್ಎ ಆಗಿರುವ ಖುಷಿಯಲ್ಲಿದ್ದರು. ಇದೇ ವೇಳೆ ಅವರ ಖಾಸಗಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದವು.
ಬಳಿಕ ಸ್ವತ: ಆ ವಿಡಿಯೋವನ್ನು ನಯನಾ ಮೋಟಮ್ಮ ಅವರೇ ಶೇರ್ ಮಾಡಿ, ಎದುರಾಳಿಗಳಿಗೆ ತಿರುಗೇಟು ನೀಡಿದ್ದರು. ಈಗ ಶಾಸಕಿ ನಯನಾ ಮೋಟಮ್ಮಗೆ ಸ್ಯಾಂಡಲ್ವುಡ್ ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಬೆಂಬಲ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ ಹಂಚಿ ತಿರುಗೇಟು
ಮೂಡಿಗೆರೆ ನೂತನ ಶಾಸಕಿ ನಯನಾ ಮೋಟಮ್ಮ ಕಾಂಗ್ರೆಸ್ನ ಹಿರಿಯ ಶಾಸಕಿ ಮೋಟಮ್ಮ ಅವರ ಪುತ್ರಿ. ಈ ಬಾರಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಸ್ವತ: ನಯನಾ ಮೋಟಮ್ಮ ಅವರೇ ಆ ವಿಡಿಯೋವನ್ನು ಶೇರ್ ಮಾಡಿಕೊಂಡು ತಿರುಗೇಟು ನೀಡಿದ್ದರು.
"ಸೋಲಿನ ಹತಾಶೆ ನಿಮ್ಮನ್ನ ಇನ್ನಷ್ಟು ಕಾಡದಿರಲಿ. ಹೌದು... ರಾಜಕೀಯ, ನಾನು, ನನ್ನತನ, ನನ್ನ ವೈಯುಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು." ಎಂದು ಬರೆದು ಶೇರ್ ಮಾಡಿದ್ದರು. ನಯನಾ ಅವರ ಈ ನಡೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದರು. ಈಗ ಚೇತನ್ ಅಹಿಂಸಾ ಬೆಂಬಲ ವ್ಯಕ್ತಪಡಿಸಿದ್ದಾರೆ.
"ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ"
ನಟ ಮತ್ತು ಹೋರಾಟಗಾರ ಚೇತನ್ ಅಹಿಂಸಾ ಮೂಡಿಗೆರೆ ನೂತನ ಶಾಸಕಿ ನಯನಾ ಮೋಟಮ್ಮ ಬೆಂಬಲಕ್ಕೆ ಬಂದಿದ್ದಾರೆ. ಖಾಸಗಿ ಫೋಟೊಗಳನ್ನು ಶೇರ್ ಮಾಡುವ ಮೂಲಕ ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
"ಹೊಸದಾಗಿ ಚುನಾಯಿತ ಶಾಸಕಿ ನಯನಾ ಮೋಟಮ್ಮ ಅವರ ಖಾಸಗಿ ಚಿತ್ರಗಳನ್ನು ಪ್ರಕಟಿಸುವ ಮೂಲಕ ರಾಜಕೀಯ ಪ್ರತಿಸ್ಪರ್ಧಿಗಳು ಅವರ ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ. ಭಾರತದಲ್ಲಿನ ಎಲ್ಲಾ ಮಹಿಳೆಯರು ವಿವಿಧ ಹಂತಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆಗೆ ಬಲಿಪಶುಗಳಾಗಿದ್ದಾರೆ/ಬಲಿಪಶುಳಾಗುತ್ತಿದ್ದಾರೆ. ಅಧಿಕಾರದ ಉನ್ನತ ಸ್ಥಾನಗಳಿಗೆ ಏರುವ ಮಹಿಳೆಯರು ಅದನ್ನು ಸಾರ್ವಜನಿಕ ರೀತಿಯಲ್ಲಿ ಎದುರಿಸುತ್ತಾರೆ. ದೃಢವಾಗಿ ನಿಂತಿರುವ ಶಾಸಕರಿಗೆ ಅಭಿನಂದನೆಗಳು. ಪೊಲೀಸರು ತಪ್ಪು ಮಾಡಿದವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕು." ಎಂದು ಚೇತನ್ ಅಹಿಂಸಾ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿರೋಧದ ನಡುವೆ ನಯನಾ ಮೋಟಮ್ಮ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಡಿಕೆ ಶಿವಕುಮಾರ್ ಬಣದಲ್ಲಿ ನಯನಾ ಮೋಟಮ್ಮ ಗುರುತಿಸಿಕೊಂಡಿದ್ದರು. ಇವರಿಗೆ ಟಿಕೆಟ್ ಕೊಡಲು ಕಾಂಗ್ರೆಸ್ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ವಿರೋಧದ ನಡುವೆಯೂ ಗೆದ್ದು ಬಂದಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಎಂಪಿ ಕುಮಾರಸ್ವಾಮಿ ಜೆಡಿಎಸ್ನಿಂದ ಸ್ಪರ್ಧಿಸಿದ್ದರು. ಬಿಜೆಪಿಯಿಂದ ದೀಪಕ್ ದೊಡ್ಡಯ್ಯ ಕಣಕ್ಕೆ ಇಳಿದಿದ್ದರು. ಇವರನ್ನು ಸೋಲಿಸಿ ನಯನಾ ಮೋಟಮ್ಮ ಗೆಲುವು ಸಾಧಿಸಿದ್ದರು. ಈ ಬೆನ್ನಲ್ಲೇ ಅವರ ಖಾಸಗಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದಕ್ಕೆ ನಯನಾ ತಿರುಗೇಟು ನೀಡಿದ್ದರು.


Click it and Unblock the Notifications











