ನಿಧಿಮಾ ನೋವು ಕಂಡು ಕಣ್ಣೀರಿಟ್ಟ ಆದಿ: ಶೂಟಿಂಗ್ ವೇಳೆ ನಡೆದ ನೈಜ ಘಟನೆ
'ಲವ್ ಮಾಕ್ಟೇಲ್' ಚಿತ್ರ ಎಷ್ಟು ಜನರ ಕಣ್ಣಲ್ಲಿ ನೀರು ತರಿಸಿಲ್ಲ? ಪ್ರೀತಿ, ನೋವಿನ ಓಲಾಟದ ನಡುವೆ 'ನಿಧಿಮಾ' ಪಾತ್ರದ ಎಂಟ್ರಿ ಪ್ರೀತಿಸುವ ಜೀವಗಳಲ್ಲಿ ಜೀವಂತಿಕೆಯನ್ನು ತುಂಬುತ್ತವೆ. ಆದರೆ ಆ ಖುಷಿ ಹೆಚ್ಚು ಕಾಲ ಉಳಿಯುವುದಿಲ್ಲ. ಮಗುವಿನ ನಿರೀಕ್ಷೆಯಲ್ಲಿರುವ 'ನಿಧಿ'ಯನ್ನು ಕಾಡುವ ಮಹಾಮಾರಿ ಕ್ಯಾನ್ಸರ್ ಮತ್ತು ಆಕೆಯನ್ನು ಉಳಿಸಿಕೊಳ್ಳಲು ಆದಿ ನಡೆಸುವ ವಿಫಲ ಪ್ರಯತ್ನದ ಬಳಿಕ ಆಕೆಯನ್ನು ಕಳೆದುಕೊಳ್ಳುವ ಕಥೆ ಎಂಥಹ ಕಠಿಣ ಮನಸಿನಲ್ಲಿಯೂ ಗಾಢವಾದ ವಿಷಾದ ಉಳಿಸುತ್ತದೆ.
Recommended Video
ಲವಲವಿಕೆಯ ಜೋಡಿಗಳು ಇದ್ದಕ್ಕಿಂದ್ದಂತೆ ಸಾವಿನ ಮನೆಯ ಬಾಗಿಲ ಬಳಿ ಬದುಕಿಗಾಗಿ ಹೋರಾಡುವ ದೃಶ್ಯ, ಚೆಂದದ ಬಾಬ್ ಕಟ್ನಲ್ಲಿ ಎದೆಯಲ್ಲಿ ಕಚಗುಳಿಯಿರಿಸುವ ಸುಂದರಿ ನಿಧಿ, ತನ್ನ ಕೂದಲನ್ನು ಕಳೆದುಕೊಂಡು, ಬೋಳು ತಲೆಯಲ್ಲಿ ನಿಸ್ತೇಜಳಾಗಿ ಮಲಗುವ ಸನ್ನಿವೇಶಗಳು ಸಿನಿಮಾ ನೋಡಿದ ಹಲವು ದಿನಗಳವರೆಗೂ ಕಾಡುತ್ತವೆ. ನಿಧಿಯನ್ನು ಕಳೆದುಕೊಳ್ಳುವ ಆದಿಯ ಬಗ್ಗೆ ಮರುಕ ಉಂಟಾಗುತ್ತದೆ. ಈ ದೃಶ್ಯದ ಚಿತ್ರೀಕರಣವೂ ಎಮೋಷನಲ್ ಆಗಿತ್ತು. ಮುಂದೆ ಓದಿ...

ಆಸ್ಪತ್ರೆಯ ಸನ್ನಿವೇಶ
ಸಿನಿಮಾ ಚಿತ್ರೀಕರಣವಾದರೂ ಅದು ವಾಸ್ತವಕ್ಕೆ ಹತ್ತಿರವಾಗಿರುವಂತೆ ತೋರಿಸುವ ಹೊಣೆಗಾರಿಕೆ ಚಿತ್ರತಂಡದ್ದು. ಅದರಲ್ಲಿಯೂ ಆಸ್ಪತ್ರೆ, ಕಾಯಿಲೆಯಂತಹ ಸೂಕ್ಷ್ಮ ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕು. 'ಲವ್ ಮಾಕ್ಟೇಲ್' ಚಿತ್ರದಲ್ಲಿನ ದೃಶ್ಯಗಳು ಈ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬಂದಿದ್ದವು.

ಸನ್ನಿವೇಶದ ಅರಿವು
ನಿಧಿಮಾ ಪಾತ್ರಧಾರಿ ಮಿಲನಾ ನಾಗರಾಜ್ ಅವರ ಸಹೋದರ ವೈದ್ಯರಾಗಿರುವುದರಿಂದ ಮತ್ತು ಅವರಿಗೆ ಕ್ಯಾನ್ಸರ್ ಕಾಯಿಲೆ ಕುರಿತಾದ ಮಾಹಿತಿ ಚೆನ್ನಾಗಿ ಇದ್ದಿದ್ದರಿಂದ ಅವರು ಆ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಲು ಸಾಧ್ಯವಾಯಿತು.

ಚಿತ್ರೀಕರಣದ ವೇಳೆ ನೋವು
ಆದರೆ, ಚಿತ್ರೀಕರಣದ ವೇಳೆ ಅವರು ತೀವ್ರ ನೋವು ಅನುಭವಿಸಿದ್ದರು ಎನ್ನುವ ಸಂಗತಿ ಈಗ ಬಹಿರಂಗವಾಗಿದೆ. ಆಸ್ಪತ್ರೆಯ ಸನ್ನಿವೇಶದಲ್ಲಿ ನೈಜತೆಗೆ ಹತ್ತಿರವಾಗಿರುವಂತೆ ಅವರಿಗೆ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿತ್ತು.
ನೋವು ಅನುಭವಿಸಿದ್ದೂ ಸಾರ್ಥಕ
ನಿಧಿಮಾ ಕೈಗೆ ಇಂಜೆಕ್ಷನ್ ಕೊಡುವ ಸನ್ನಿವೇಶದಲ್ಲಿ ನಟಿ ಮಿಲನಾ ನಾಗರಾಜ್ ಅವರು ತುಂಬಾ ನೋವು ಅನುಭವಿಸಿದ್ದರು. ಈ ವಿಡಿಯೋವನ್ನು ಹಂಚಿಕೊಂಡಿರುವ ಅವರು, 'ಈ ಎಲ್ಲ ನೋವುಗಳೂ ಲವ್ಮಾಕ್ಟೇಲ್ನಲ್ಲಿ ಯೋಗ್ಯವಾಗಿವೆ' ಎಂದು ಹೇಳಿಕೊಂಡಿದ್ದಾರೆ. ಶಾಟ್ ಆದ ಬಳಿಕ ನೋವಿನಿಂದ ಕೈ ಕೊಡವಿಕೊಂಡ ಅವರು, ಕಳೆದ ಸಲದಷ್ಟು ಈ ಬಾರಿ ನೋವಾಗಲಿಲ್ಲ' ಎಂದು ನಕ್ಕಿದ್ದರು.
'ನೋವುಂಟು ಮಾಡಿದ ದೃಶ್ಯ'
ಈ ಸನ್ನಿವೇಶ ಚಿತ್ರೀಕರಣದ ವೇಳೆ ನಿರ್ದೇಶಕ ಕಂ ನಾಯಕ 'ಆದಿ' ಪಾತ್ರಧಾರಿ ಕೃಷ್ಣ ತೀವ್ರ ಭಾವುಕರಾಗಿದ್ದರು. ನಿಜ ಜೀವನದಲ್ಲಿಯೂ ಜೋಡಿ ಹಕ್ಕಿಗಳಾಗಿರುವ ಕೃಷ್ಣ ಮತ್ತು ಮಿಲನಾ ಸೇರಿ ನಿರ್ಮಿಸಿರುವ ಚಿತ್ರವಿದು. ಈ ದೃಶ್ಯ ಚಿತ್ರೀಕರಣ ಬಹಳ ನೋವುಂಟುಮಾಡಿತ್ತು ಎಂದು ಕೃಷ್ಣ ಹೇಳಿಕೊಂಡಿದ್ದಾರೆ. ಏಕೆಂದರೆ ಇದು ನನ್ನ ಪ್ರೇಯಸಿಗೆ ಘಾಸಿ ಮಾಡುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ನಮಗೂ ನೋವಾಗಿದೆ...
ಕೃಷ್ಣ ಅವರ ಪೋಸ್ಟ್ಗೆ ಅಭಿಮಾನಿಗಳೂ ಅಷ್ಟೇ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.ಈ ದೃಶ್ಯ ನಿಮಗೆ ಮಾತ್ರ ಅಲ್ಲ, ಪ್ರತಿಯೊಬ್ಬರಲ್ಲೂ ನೋವು ಉಂಟುಮಾಡಿದೆ ಎಂದು ಕೆಲವರು ಹೇಳಿದ್ದಾರೆ. ನಿಮ್ಮಿಬ್ಬರ ಜೋಡಿ ಸೊಗಸಾಗಿದೆ ಎಂದು ಅನೇಕರು ಮೆಚ್ಚಿಕೊಂಡಿದ್ದಾರೆ.

ಸೀಕ್ವೆಲ್ಗೆ ಮುಂದಾದ ಕೃಷ್ಣ
'ಲವ್ ಮಾಕ್ಟೇಲ್'ಗೆ ಬಂದಿರುವ ಪ್ರತಿಕ್ರಿಯೆ ಕಂಡು ಪುಳಕಿತರಾಗಿರುವ ಡಾರ್ಲಿಂಗ್ ಕೃಷ್ಣ, ಈ ಚಿತ್ರದ ಕಥೆಯನ್ನು ಮುಂದುವರಿಸುವ ಚಿಂತನೆ ನಡೆಸಿದ್ದಾರಂತೆ. ಆ ನಿಟ್ಟಿನಲ್ಲಿ ಕಥೆ ಹೊಸೆಯಲು ಅವರು ಸಿದ್ಧರಾಗಿದ್ದು, 'ಲವ್ ಮಾಕ್ಟೇಲ್ 2' ಶೀರ್ಷಿಕೆಯನ್ನೂ ನೋಂದಾಯಿಸಿದ್ದಾರೆ ಎನ್ನಲಾಗಿದೆ.


Click it and Unblock the Notifications











