ಒಂದೇ ವೇದಿಕೆಯಲ್ಲಿ ದರ್ಶನ್-ವಿಜಯಲಕ್ಷ್ಮಿ ಹಾಜರ್; ಅಣ್ಣ-ಅತ್ತಿಗೆ ಅಂತ ಸಂಭ್ರಮಿಸಿದ ಫ್ಯಾನ್ಸ್
ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದು ತೀರಾ ವಿರಳ. ಅದರಲ್ಲೂ ಸಾರ್ವಜನಿಕರು ಭಾಗಿಯಾಗಿದ್ದ ಸಮಾರಂಭದಲ್ಲಿ ಈ ಜೋಡಿ ಒಟ್ಟಿಗೆ ಸೇರಿದ್ದು ತೀರಾ ವಿರಳ. ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದ ಈ ಜೋಡಿ ಆಗಾಗ ಖಾಸಗಿಯಾಗಿ ಜೊತೆಯಾಗಿದ್ದು ಬಿಟ್ಟರೆ, ಇವೆಂಟ್ಗಳಲ್ಲಿ ಭಾಗವಹಿಸಿದ್ದು ಇಲ್ಲ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾದ ಮೇಲೆ ವಿಜಯಲಕ್ಷ್ಮಿ ಪತಿಯ ಪರವಾಗಿ ಮುಂದೆ ನಿಂತಿದ್ದರು. ದರ್ಶನ್ ಕಾನೂನು ಹೋರಾಟಗಳಲ್ಲಿ ಸಾಥ್ ನೀಡಿದ್ದರು. ಈ ಪ್ರಕರಣದಲ್ಲಿ ಪತಿಗೆ ಜಾಮೀನು ಕೊಡಿಸಿ, ಜೈಲಿನಿಂದ ಹೊರಗೆ ಕರೆದುಕೊಂಡು ಬರಲು ಬಹಳಷ್ಟು ಶ್ರಮಿಸಿದ್ದರು. ಅಲ್ಲಿಂದ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಮತ್ತೆ ಒಲವು ಚಿಗುರಿದೆ.

ಜಾಮೀನು ಪಡೆದು ಹೊರ ಬಂದ ಬಳಿಕ ದರ್ಶನ್ ಹಾಗೂ ವಿಜಯಲಕ್ಷ್ಮಿ ಒಟ್ಟಿಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಪಕ್ಕಪಕ್ಕದಲ್ಲಿ ಕೂತಿರುವುದನ್ನು ನೋಡಿ ದರ್ಶನ್ ಅಭಿಮಾನಿಗಳು ಖುಷಿಯಲ್ಲಿ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಇಬ್ಬರನ್ನೂ ಮೆಚ್ಚಿಕೊಂಡಾಡುತ್ತಿದ್ದಾರೆ. ಅಷ್ಟಕ್ಕೂ ದರ್ಶನ್ ದಂಪತಿ ಯಾವ ಕಾರ್ಯಕ್ರಮಕ್ಕೆ ಹೋಗಿದ್ದರು? ತಿಳಿಯಲು ಮುಂದೆ ಓದಿ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ಬಳಿಕ ದರ್ಶನ್ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅರ್ಧಕ್ಕೆ ನಿಂತಿದ್ದ 'ಡೆವಿಲ್' ಸಿನಿಮಾದ ಶೂಟಿಂಗ್ ಅನ್ನು ವೇಗವಾಗಿ ಮುಗಿಸುತ್ತಿದ್ದಾರೆ. ಈಗಾಗಲೇ ಎರಡು ಹಂತದ ಶೂಟಿಂಗ್ ಅನ್ನು ನಿರ್ದೇಶಕ ಮಿಲನಾ ಪ್ರಕಾಶ್ ಮುಗಿಸಿದ್ದಾರೆ. ಮೈಸೂರು ಹಾಗೂ ರಾಜಸ್ಥಾನದ ಕೆಲವು ಭಾಗಗಳಲ್ಲಿ ಸಿನಿಮಾದ ಶೂಟಿಂಗ್ ಅನ್ನು ಮಾಡಲಾಗಿದೆ. ಮತ್ತೊಂದು ಹಂತದ ಚಿತ್ರೀಕರಣ ಆರಂಭ ಆಗುವುದಕ್ಕೂ ಮುನ್ನ ಗ್ಯಾಪ್ ಇದ್ದು, ದರ್ಶನ್ ಪತ್ನಿಯೊಂದಿಗೆ ಇವೆಂಟ್ನಲ್ಲಿ ಭಾಗಿಯಾಗಿದ್ದಾರೆ.
ಸ್ಯಾಂಡಲ್ವುಡ್ನ ಜನಪ್ರಿಯ ನಿರ್ದೇಶಕ ಬಿ.ಸುರೇಶ್ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ಅವರ ಪುತ್ರಿ ಚಂದನಾ ಎಸ್.ನಾಗ್ ನಿನ್ನೆ (ಏಪ್ರಿಲ್ 20) ರಂಗಪ್ರವೇಶ ಮಾಡಿದ್ದರು. ಗಣ್ಯರ ಸಮ್ಮುಖದಲ್ಲಿ ಭರತನಾಟ್ಯಂ ನೃತ್ಯವನ್ನು ಪ್ರದರ್ಶಿಸಿದ್ದರು. ಈ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರನ್ನು ಬಿ.ಸುರೇಶ್ ದಂಪತಿ ಆಹ್ವಾನ ನೀಡಿದ್ದರು. ಈ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಇಬ್ಬರ ಪಕ್ಕದಲ್ಲಿ ಕುಳಿತಿರುವ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಅವರಿಗೆ ದರ್ಶನ್ ಹಾಗೂ ಅವರ ಕುಟುಂಬ ಆತ್ಮೀಯರು. ಒಟ್ಟಿಗೆ ಎರಡು ಸಿನಿಮಾಗಳನ್ನು ಮಾಡಿದ್ದಾರೆ. 'ಯಜಮಾನ' ಸೂಪರ್ ಹಿಟ್ ಆಗಿತ್ತು. 'ಕ್ರಾಂತಿ' ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಈಗ ಇದೇ ಬೆನ್ನಲ್ಲೇ ಮತ್ತೊಂದು ಸಿನಿಮಾದ ಪೂರ್ವ ತಯಾರಿಯಲ್ಲಿ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಇದ್ದಾರೆ. ಬಹುನಿರೀಕ್ಷಿತ 'ವೀರ ಸಿಂಧೂರ ಲಕ್ಷ್ಮಣ' ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸುತ್ತಿದ್ದು, ದರ್ಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಅವರ ಪುತ್ರಿ ಚಂದನಾ ಎಸ್. ನಾಗ್ ಕೂಡ ದರ್ಶನ್ ಸಿನಿಮಾದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. 'ಕ್ರಾಂತಿ' ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ದರ್ಶನ್ ಇಬ್ಬರೂ ಚಂದನಾ ಎಸ್. ನಾಗ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದ್ದಾರೆ. ಇದೇ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.


Click it and Unblock the Notifications











