ಇದೇ ಮೊದಲ ಬಾರಿಗೆ ಜಾಮೀನಿಗೆ ಅರ್ಜಿ ಸಲ್ಲಿಸಿದ ದರ್ಶನ್; ಸಿಗುತ್ತಾ? ಇಲ್ವಾ?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿ 100ಕ್ಕೂ ಹೆಚ್ಚು ದಿನಗಳಾಗಿವೆ. ಈ ಮಧ್ಯೆ ಎರಡು ವಾರಗಳ ಹಿಂದೆನೇ ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಗ್ಯಾಂಗ್ ವಿರುದ್ಧ ಪೊಲೀಸರು ಚಾರ್ಜ್ಶೀಟ್ ಅನ್ನೂ ಸಲ್ಲಿಸಿದ್ದರು. ಆದರೂ ದರ್ಶನ್ ಮಾತ್ರ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿರಲಿಲ್ಲ. ಈಗ ಕೊನೆಗೂ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಈಗಾಗಲೇ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ, ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹಾಗೇ ಈ ಕೇಸ್ನಲ್ಲಿ ಸಿಕ್ಕಿಕೊಂಡಿರುವ ಕೆಲವು ಆರೋಪಿಗಳು ಕೂಡ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದರು. ಹೀಗಿದ್ದರೂ ದರ್ಶನ್ ಮಾತ್ರ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿರಲಿಲ್ಲ.

ಪೊಲೀಸರು ಚಾರ್ಜ್ಶೀಟ್ ಅನ್ನು ಕೋರ್ಟ್ಗೆ ಸಲ್ಲಿಸಿದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಬಹುದೆಂದು ನಿರೀಕ್ಷೆಯಿತ್ತು. ಆದರೆ, ದರ್ಶನ್ ಸಮಯ ತೆಗೆದುಕೊಂಡು ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಬೆಂಗಳೂರಿನ ಸೆಷನ್ ಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆ ಕೂಡ ಇಂದೇ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಕೊಲೆ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿ ಆಗಿದ್ದಾರೆ. ದರ್ಶನ್ ಅಣತಿ ಮೇರೆಗೆ ಅವರ ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಣ ಮಾಡಲಾಗಿತ್ತು. ಬಳಿಕ ಬೆಂಗಳೂರಿಗೆ ಕರೆದುಕೊಂಡು ಬಂದು ಚಿತ್ರಹಿಂಸೆ ನೀಡಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆಂದು ವರದಿಯಾಗಿತ್ತು. ಹೀಗಾಗಿ ದರ್ಶನ್ಗೆ ಇನ್ನೂ ಕೆಲವು ದಿನಗಳು ಜಾಮೀನು ಸಿಗುವುದು ಬಹಳ ಕಷ್ಟ ಅನ್ನೋ ಮಾತು ಕೇಳಿಬಂದಿದ್ದವು.

ಆದ್ರೀಗ ದರ್ಶನ್ ಪರ ವಕೀಲರು ಸಕಲ ಸಿದ್ಧತೆಗಳನ್ನು ಮಾಡಿಕೊಂಡೇ ಜಾಮೀನಿಗೆ ಅರ್ಜಿ ಹಾಕಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ವಕೀಲರು ದರ್ಶನ್ಗೆ ಕೊಲ್ಲಬೇಕೆಂಬ ಉದ್ದೇಶವಿರಲಿಲ್ಲ. ಈ ಘಟನೆ ನಡೆಯುವ ವೇಳೆ ದರ್ಶನ್ ಅಲ್ಲಿರಲಿಲ್ಲ. ಆಕಸ್ಮಿಕವಾಗಿ ಈ ಘಟನೆ ನಡೆದು ಹೋಗಿದೆ. ಈ ಆಧಾರದ ಮೇಲೆ ದರ್ಶನ್ ಪರ ವಕೀಲರು ನ್ಯಾಯಾಧೀಶರ ಬಳಿ ಜಾಮೀನು ಕೇಳಬಹುದೆಂಬ ನಿರೀಕ್ಷೆಯಿದೆ.
ಆದರೆ, ನ್ಯಾಯಾಧೀಶರು ದರ್ಶನ್ ಪರ ವಕೀಲರ ವಾದವನ್ನು ಹೇಗೆ ಪರಿಗಣಿಸುತ್ತಾರೆ? ಅನ್ನೋದರ ಮೇಲೆ ದರ್ಶನ್ಗೆ ಜಾಮೀನು ಸಿಗುತ್ತಾ? ಇಲ್ವಾ ಅನ್ನೋದು ನಿರ್ಧಾರ ಆಗುತ್ತೆ. ಸದ್ಯಕ್ಕಂತೂ ದರ್ಶನ್ಗೆ ಜಾಮೀನು ಸಿಗುವ ಸಾಧ್ಯತೆ ತೀರಾ ಕಡೆ ಎಂದೇ ಹೇಳಲಾಗುತ್ತಿದೆ. ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಬಹುದು. ನ್ಯಾಯಾಧೀಶರಾದ ಜೈಶಂಕರ್ ಅವರು ವಿಚಾರಣೆ ಆಲಿಸುವ ಸಾಧ್ಯತೆಯಿದೆ.
ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಹತ್ಯೆ ಮಾಡಿರುವ ಆರೋಪದ ಮೇಲೆ ದರ್ಶನ್, ಪವಿತ್ರಾ ಗೌಡ ಹಾಗೂ ಗ್ಯಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆರೋಪಿಗಳನ್ನು ವಿಚಾರಣೆ ಮಾಡಿ ತನಿಖೆಯನ್ನು ಚುರುಕುಗೊಳಿಸಿದ್ದರು. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಮಂದಿ ಆರೋಪಿ ಸ್ಥಾನದಲ್ಲಿದ್ದು, ಸದ್ಯ ಬೇರೆ ಬೇರೆ ಜೈಲಿನಲ್ಲಿ ಇದ್ದಾರೆ.


Click it and Unblock the Notifications










