ದರ್ಶನ್ ಎಂಆರ್ಐ ಸ್ಕ್ಯಾನಿಂಗ್ ವರದಿಯಲ್ಲಿ L5 S1 ಸಮಸ್ಯೆ ದೃಢ; ವೈದ್ಯರ ವಾರ್ನಿಂಗ್ ಏನು?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಆ ಜೈಲಿಗೆ ಹೋದಲ್ಲಿಂದ ದರ್ಶನ್ಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಕೂರಲೂ ಆಗದೆ, ನಿಲ್ಲಲೂ ಆಗದೇ ದಾಸ ಪರದಾಡುತ್ತಿದ್ದರು. ಆರಂಭದ ದಿನಗಳಲ್ಲಿ ಜೈಲಿನಲ್ಲಿಯೇ ಚಿಕಿತ್ಸೆ ಪಡೆಯುವುದಕ್ಕೆ ಹಿಂದೇಟು ಹಾಕಿದ್ದರು. ಬಳಿಕ ಚಿಕಿತ್ಸೆಗೆ ಒಪ್ಪಿದ್ದರು.
ಒಂದಿಷ್ಟು ದಿನ ದರ್ಶನ್ಗೆ ಬಳ್ಳಾರಿ ಜೈಲಿನಲ್ಲಿಯೇ ವಿಮ್ಸ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದರು. ಆದರೆ, ದರ್ಶನ್ ಬೆನ್ನು ನೋವು ಕಡಿಮೆಯಾಗಿರಲಿಲ್ಲ. ಹೀಗಾಗಿ ವಿಮ್ಸ್ ನ ಅರ್ಥೊಪೆಡಿಕ್ ಮತ್ತು ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಅವರು ಸ್ಕ್ಯಾನಿಂಗ್ ಮಾಡಿಸುವಂತೆ ಸಲಹೆಯನ್ನು ನೀಡಿದ್ದರು. ಆಗಲೂ ದರ್ಶನ್ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದಕ್ಕೆ ಹಿಂದೇಟು ಹಾಕಿದ್ದರು.

ಆದರೆ, ಬೆನ್ನು ನೋವು ಉಲ್ಬಣಗೊಂಡಿದ್ದರಿಂದ ದರ್ಶನ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಒಪ್ಪಿದ್ದರು. ಅಕ್ಟೋಬರ್ 22ರ ರಾತ್ರಿ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಅಲ್ಲಿ ಅವರಿಗೆ ಎಂಆರ್ಐ ಸ್ಕ್ಯಾನಿಂಗ್ ಮಾಡಲಾಗಿತ್ತು. ಅದರ ವರದಿ ಈಗ ಜೈಲು ಅಧಿಕಾರಿಯ ಕೈ ಸೇರಿದೆ. ಈ ವರದಿಯಲ್ಲಿ ಎಲ್ 5, ಎಸ್ 1 ಸಮಸ್ಯೆ ಇರುವುದು ಧೃಡ ಪಟ್ಟಿದೆ. ಈ ವರದಿ ಬಂದ ಬಳಿಕ ವಿಮ್ಸ್ ವೈದ್ಯರು ದರ್ಶನ್ಗೆ ಎಚ್ಚರಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಎಂಆರ್ಐ ಸ್ಕ್ಯಾನಿಂಗ್ ವರದಿ ಬಂದ ಬಳಿಕ ದರ್ಶನ್ಗೆ ವಿಮ್ಸ್ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಶೀಘ್ರವೇ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವಂತೆ ವಾರ್ನಿಂಗ್ ನೀಡಿದ್ದಾರೆಂದು ವರದಿಯಾಗಿದೆ. ಇದನ್ನು ದರ್ಶನ್ ಗಂಭೀರವಾಗಿ ಪರಿಗಣಿಸಿದ್ದಾರೋ ಇಲ್ಲವೋ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ನಾಳೆ (ಅಕ್ಟೋಬರ್ 24) ದರ್ಶನ್ ಪತ್ನಿಯೊಂದಿಗೆ ಶಸ್ತ್ರಚಿಕಿತ್ಸೆಯ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ದರ್ಶನ್ ಶಸ್ತ್ರ ಚಿಕಿತ್ಸೆಗೆ ಒಪ್ಪದೆ ಇದ್ದರೆ, ಮುಂದೆ ಸಮಸ್ಯೆಯನ್ನು ಎದುರಿಸಬೇಕಾಗುತ್ತೆ ಎಂದು ವೈದ್ಯರು ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ, ದರ್ಶನ್ ಬಳ್ಳಾರಿಯಲ್ಲಿ ಶಸ್ತ್ರ ಚಿಕಿತ್ಸೆ ಬೇಡ. ಬೆಂಗಳೂರಿನಲ್ಲಿಯೇ ಮಾಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆಂದು ವರದಿ ಮಾಡಲಾಗಿದೆ. ಸದ್ಯ ಶಸ್ತ್ರ ಚಿಕಿತ್ಸೆ ಯಾವಾಗ? ಎಲ್ಲಿ ಮಾಡಿಸಿಕೊಳ್ಳುತ್ತಾರೆ? ಅನ್ನೋದು ಸದ್ಯ ಇನ್ನೂ ನಿರ್ಧಾರ ಆಗಬೇಕಿದೆ.
ಇನ್ನು ಇದನ್ನೇ ಆಧಾರವಾಗಿಟ್ಟುಕೊಂಡು ಹೈಕೋರ್ಟ್ನಲ್ಲಿ ಜಾಮೀನು ನೀಡಬೇಕೆಂದು ದರ್ಶನ್ ಪರ ವಕೀಲ ಸಿ ವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ಈಗ ವೈದ್ಯರು ಈ ವರದಿಯನ್ನು ನೀಡಿರುವುದು ದರ್ಶನ್ ಪರ ವಕೀಲರಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ. ಅನಾರೋಗ್ಯವನ್ನು ನ್ಯಾಯಾಧೀಶರ ಗಮನಕ್ಕೆ ತಂದ ಬಳಿಕ ಜಾಮೀನು ಮಾಡಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.
ಏನೇ ಇದ್ದರೂ ದರ್ಶನ್ ಸದ್ಯ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಮತ್ತೊಂದು ಕಡೆ ಅಕ್ಟೋಬರ್ 28ಕ್ಕೆ ಹೈಕೋರ್ಟ್ನಲ್ಲಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡುತ್ತಾರೋ ಇಲ್ಲವೋ ಅನ್ನೋದು ಗೊತ್ತಾಗುತ್ತೆ. ಇನ್ನು ಜಾಮೀನು ಸಿಗುವುದಕ್ಕೂ ಮುನ್ನವೇ ದರ್ಶನ್ಗೆ ಶಸ್ತ್ರ ಚಿಕಿತ್ಸೆ ಆಗುತ್ತಾ? ಇಲ್ಲ ಅದಕ್ಕೂ ಮುನ್ನವೇ ಆಗುತ್ತಾ? ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.


Click it and Unblock the Notifications










