ದರ್ಶನ್ ಜಾಮೀನು ವಿಚಾರ: ಸಿ ವಿ ನಾಗೇಶ್ ವಾದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಪ್ರಬಲ ಪ್ರತಿವಾದ.. ಹೈಲೈಟ್ ಏನು?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಜಾಮೀನು ಅರ್ಜು ವಿಚಾರಣೆ ನಡೆಯುತ್ತಿದೆ. ನಿನ್ನೆಯಿಂದ (ಅಕ್ಟೋಬರ್ 8) ಸರ್ಕಾರದ ಪರ ವಕೀಲರಾದ ಪ್ರಸನ್ನ ಕುಮಾರ್ ಪ್ರತಿವಾದವನ್ನು ಮಂಡಿಸುತ್ತಿದ್ದಾರೆ. ಇದು ಇಂದು (ಅಕ್ಟೋಬರ್ 9) ಕೂಡ ಎಸ್ಪಿಪಿ ಪ್ರಸನ್ನ ಕುಮಾರ್ ವಾದವನ್ನು ಮುಂದುವರೆಸಿದ್ದಾರೆ.
ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ತನಿಖೆಯಲ್ಲಿ ಲೋಪ ಆಗಿದೆ ಎಂದು ವಾದ ಮಂಡಿಸಿದ್ದರು. ಜಾರ್ಚ್ಶೀಟ್ 'ಅರೇಬಿಯನ್ ನೈಟ್ಸ್' ಕಥೆಯಂತೆ ಇದೆ ಎಂದು ಸಿ ವಿ ನಾಗೇಶ್ ಹೇಳಿದ್ದರು. ಇದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಇದು ಅರೇಬಿಯನ್ ನೈಟ್ಸ್ ಅಲ್ಲ. ಇದು ದರ್ಶನ್ ರಕ್ತ ಚರಿತ್ರೆ ಎಂಬ ಅರ್ಥದಲ್ಲಿ ವಾದ ಮಂಡಿಸಿದ್ದಾರೆ.

ಸಿ ವಿ ನಾಗೇಶ್ ವಾದ ಮಂಡಿಸಿದ ಬಳಿಕ ದರ್ಶನ್ಗೆ ಜಾಮೀನು ಸಿಕ್ಕೇ ಬಿಟ್ಟಿತು ಅನ್ನೋ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ನ್ಯಾಯಾಧೀಶರ ಮುಂದೆ ಸರ್ಕಾರದ ಪರ ವಕೀಲ ಪ್ರಸನ್ನ ಕುಮಾರ್ ಮಂಡಿಸಿದ ಪ್ರತಿವಾದ ಅದಕ್ಕೆ ತಣ್ಣೀರು ಎರಚಿದೆ. 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಪ್ರಸನ್ನ ಕುಮಾರ್ ಮಂಡಿಸಿದ ಪ್ರತಿವಾದದ ಹೈಲೈಟ್ ಏನು ಅನ್ನೋದನ್ನು ತುಳಿಯಲು ಮುಂದೆ ಓದಿ.
ಕುಕ್ಕಿ ಒಗೆದರೂ ಡಿಎನ್ಎ ಪತ್ತೆ ಹಚ್ಚಲು ಸಾಧ್ಯ
ಸಿ ವಿ ನಾಗೇಶ್ ವಾದ ಮಂಡಿಸುವಾಗ ದರ್ಶನ್ ಅವರ ಬಟ್ಟೆಯನ್ನು ಕುಕ್ಕಿ ಕುಕ್ಕಿ ಒಗೆಯಲಾಗಿದೆ. ಹೀಗಿದ್ದರೂ, ಅವರು ಧರಿಸಿದ ಬಟ್ಟೆಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ ಆಗುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಿದ್ದು, ದರ್ಶನ್ ಅವರೇ ಹೇಳಿದ ಬಟ್ಟೆಯನ್ನು ವಶ ಪಡಿಸಿಕೊಂಡಿದ್ದೇವೆ. ಹಾಗೇ ಕುಕ್ಕಿ ಕುಕ್ಕಿ ಒಗೆದರೂ, 90 ಡಿಗ್ರಿಯಲ್ಲಿ ಬಟ್ಟೆ ಒಗೆದರೂ ಡಿಎನ್ಎ ಪತ್ತೆ ಹಚ್ಚುವುದಕ್ಕೆ ಸಾಧ್ಯ. ಈ ತಂತ್ರಜ್ಞಾನ ಶೇ.100ರಷ್ಟು ನಿಖರತೆ ಹೊಂದಿದೆ ಎಂದು ವಾದ ಮಂಡಿಸಿದ್ದಾರೆ.
ದರ್ಶನ್ ತೋರಿದ್ದನ್ನೇ ವಶಕ್ಕೆ ಪಡೆದಿದ್ದೇವೆ
ದರ್ಶನ್ ಅಂದು ಚಪ್ಪಳಿ ಧರಿಸಿದ್ದರು. ಆದರೆ, ಪೊಲೀಸರು ತನಿಖೆ ವೇಳೆ ಶೂ ಅನ್ನು ವಶಕ್ಕೆ ಪಡೆದಿದ್ದಾರೆ ಎಂದು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದರು. ಇದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಉತ್ತರ ಕೊಟ್ಟಿದ್ದು, ನಾವು ಪೂರ್ವಗ್ರಹ ಪೀಡಿತರಾಗಿ ತನಿಖೆ ಕೈಗೊಂಡಿಲ್ಲ. ಪೊಲೀಸರ ವಿಚಾರಣೆ ವೇಳೆ ದರ್ಶನ್ ಹೇಳಿದ್ದನ್ನೇ ನಾವು ವಶಕ್ಕೆ ಪಡೆದಿದ್ದೇವೆ ಎಂದಿದ್ದಾರೆ.
ಸಾಕ್ಷಿಗಳ ಹೇಳಿಕೆಗೆ ಸಮಯ ತಗುಲಿದ್ದೇಕೆ?
ದರ್ಶನ್ ಪರ ಸಿ ವಿ ನಾಗೇಶ್ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳುವುದಕ್ಕೆ ವಿಳಂಬ ಮಾಡಲಾಗಿದೆ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಕೌಂಟರ್ ಕೊಟ್ಟಿದ್ದಾರೆ. ಈಗಾಗಲೇ ಸಾಕ್ಷಿ ನೀಡಿರುವ ಪುನೀತ್, ಕಿರಣ್, ಮಲ್ಲಿಕಾರ್ಜುನ್ ಇವರ ಟವರ್ ಲೋಕೇಶನ್ ಕೃತ್ಯ ನಡೆದ ಸ್ಥಳದಲ್ಲಿ ಪತ್ತೆಯಾಗಿದೆ. ರೇಣುಕಾಸ್ವಾಮಿ ಹತ್ಯೆ ನಡೆದ ಬಳಿಕ ಭಯಗೊಂಡು ಮಹದೇಶ್ವರ ಬೆಟ್ಟ, ಕಬ್ಬಾಳಿಗೆ, ಹಾಸನ, ಗೋವಾ, ತಿರುಪತಿ, ಹುಬ್ಬಳ್ಳಿಗೆ ತೆರಳಿದ್ದರು. ಜೂ.20ಕ್ಕೆ ವಾಪಾಸ್ ಬೆಂಗಳೂರಿಗೆ ಬಂದ ಬಳಿಕ ಅವರಿಂದ ಸಾಕ್ಷಿಯನ್ನು ಪಡೆಯಲಾಗಿದ್ದು, ಈ ಕಾರಣಕ್ಕೆ ವಿಳಂಬ ಆಗಿದ್ದಾಗಿ ಪ್ರಸನ್ನ ಕುಮಾರ್ ಪ್ರತಿವಾದಿಸಿದ್ದಾರೆ.
ಪೋಸ್ಟ್ಮಾರ್ಟಂ ವಿಳಂಬ ಯಾಕೆ?
ರೇಣುಕಾಸ್ವಾಮಿ ಪೋಸ್ಟ್ಮಾರ್ಟಂ ಮಾಡುವಲ್ಲಿ ವಿಳಂಬ ಆಗಿದೆ ಎಂದು ಹಿರಿಯ ವಕೀಲರಾದ ಸಿ. ವಿ. ನಾಗೇಶ್ ವಾದ ಮಾಡಿದ್ದರು. ಅದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಪೋಸ್ಟ್ಮಾರ್ಟಂ ವಿಳಂಬಕ್ಕೆ ಕಾರಣ ಯಾಕಾಯ್ತು? ಅನ್ನೋದನ್ನು ವಿವರಿಸಿದ್ದಾರೆ. ಮೃತ ದೇಹ ಸಿಕ್ಕಿದ ಬಳಿಕ ವ್ಯಕ್ತಿಯ ಗುರುತು ಪತ್ತೆ ಆಗಿರಲಿಲ್ಲ. ಹೀಗಾಗಿ ಸಂಬಂಧಿಕರು ಬರುವವರೆಗೂ ಮರಣೋತ್ತರ ಪರೀಕ್ಷೆಗೆ ಕಳಿಸುವುದಕ್ಕೆ ತಡವಾಗಿದೆ. ಅಲ್ಲದೆ, ಮರಣೋತ್ತರ ವರದಿಯಲ್ಲಿ ರೇಣುಕಾಸ್ವಾಮಿ ಸಾಯುವುದಕ್ಕೂ ಮುನ್ನ ಹಲ್ಲೆಯಾಗಿತ್ತು ಎಂದು ಹೇಳಲಾಗಿದೆ ಎಂದು ಪ್ರತಿವಾದ ಮಾಡಿದ್ದಾರೆ.


Click it and Unblock the Notifications











