ಅಣ್ಣಾವ್ರಿಗಿಂತಲೂ ನಟ ದರ್ಶನ್ ಒಂದು ಕೈ ಮೇಲಂತೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮದೇ ಆದಂತಹ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಟ. ಇನ್ನು ಅಭಿಮಾನಿಗಳ ವಿಚಾರದಲ್ಲಿ ನಟ ಸಾರ್ವಭೌಮ ಅಣ್ಣಾವ್ರ ವಿಚಾರಕ್ಕೆ ಬಂದರೆ ಅಭಿಮಾನಿಗಳನ್ನು ದೇವರೆಂದು ಕರೆದು ಅವರ ಹೃದಯದಲ್ಲಿ ಗುಡಿಯನ್ನೇ ಕಟ್ಟಿಸಿದ ಮಹಾನ್ ಕಲಾವಿದ.
ಈಗ ಈ ಎರಡೂ ವಿಚಾರಗಳನ್ನು ಪ್ರಸ್ತಾಪಿಸಲು ಕಾರಣ, ಗುರುವಾರ ತೆರೆಕಂಡ 'ಬೃಂದಾವನ' ಚಿತ್ರದಲ್ಲಿ ಅಣ್ಣಾವ್ರ ಪ್ರಸ್ತಾಪ ಮಾಡಲಾಗಿದೆ. ಅವರ ಕುರಿತು ಈ ರೀತಿಯ ಡೈಲಾಗ್ ಒಂದು ಬರುತ್ತದೆ. ಅದೇನೆಂದರೆ "ಅಭಿನಯದಲ್ಲಿ ನೀವು ನಟ ಸಾರ್ವಭೌಮನಿಗಿಂತಲೂ ಒಂದು ಕೈ ಮೇಲೆ ಬಿಡಣ್ಣ" ಎಂಬ ಅರ್ಥದ ಡೈಲಾಗ್.
ಚಿತ್ರದಲ್ಲಿ ದರ್ಶನ್ ಅವರನ್ನು ಹೊಗಳಬೇಕಾದ ಸಂದರ್ಭದಲ್ಲಿ ಈ ಸನ್ನಿವೇಶ ಬರುತ್ತದೆ. ಹಾಸ್ಯ ನಟ ಕುರಿ ಪ್ರತಾಪ್ ಅವರು ಈ ರೀತಿಯ ಡೈಲಾಗ್ ಹೇಳುತ್ತಾರೆ. ನಟ ಸಾರ್ವಭೌಮನಿಗಿಂತಲೂ ನೀವು ದೊಡ್ಡವರು ಬಿಡಣ್ಣ ಎಂಬ ಡೈಲಾಗ್ ಈಗ ವಿವಾದಕ್ಕೆ ಗುರಿಯಾಗಿದೆ.ಈ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿರುವವರು ಕೆ.ವಿ.ರಾಜು. ಈ ಹಿಂದೆ ಅವರು ನವಭಾರತ, ಸಂಗ್ರಾಮ, ಇಂದ್ರಜಿತ್, ಕದನ, ನಂ.1, ಹುಲಿಯಾ, ಯುದ್ಧ, ಯುದ್ಧಕಾಂಡ, ಓ ಗಂಡಸರೇ ನೀವೆಷ್ಟು ಒಳ್ಳೆಯವರು, ರಾಷ್ಟ್ರಗೀತೆ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. [ಬೃಂದಾವನ ಚಿತ್ರ ವಿಮರ್ಶೆ]
'ಬೃಂದಾವನ' ಚಿತ್ರ ತೆಲುಗಿನಲ್ಲಿ ಸೂಪರ್ ಹಿಟ್ ಆದ ಬೃಂದಾವನಂ ಚಿತ್ರದ ರೀಮೇಕ್. ಮೂಲ ಚಿತ್ರದಲ್ಲಿ ಜೂ.ಎನ್ಟಿಆರ್ ಅಭಿನಯಿಸಿದ್ದರು. ದರ್ಶನ್ ಬೃಂದಾವನ ಚಿತ್ರಕ್ಕೆ ಕೆ.ಮಾದೇಶ್ ಅವರು ಚಿತ್ರಕಥೆ, ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಡಿ.ಸುರೇಶ್ ಗೌಡ ನಿರ್ಮಿಸಿದ್ದಾರೆ.


Click it and Unblock the Notifications












