ಅಣ್ಣಾವ್ರ ಕುಟುಂಬದ ಕುಡಿ ಧ್ರುವನ್ ಜೊತೆ ದರ್ಶನ್ ಸಂಕ್ರಾಂತಿ; ಹಬ್ಬದಂದು ದಾಸ ಹೇಳಿದ್ದೇನು'?
ಸಂಕ್ರಾಂತಿ ಹಬ್ಬವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋರಾಗಿ ಆಚರಣೆ ಮಾಡುತ್ತಾರೆ. ಮೊದಲಿನಿಂದಲೂ ಮೈಸೂರಿನ ಸಮೀಪವಿರುವ ತಮ್ಮ ತೋಟದಲ್ಲಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿ ಕೂಡ ದರ್ಶನ್ ತಮ್ಮ ತೋಟದಲ್ಲಿ ಬೀಡುಬಿಟ್ಟಿದ್ದಾರೆ.
'ಕಾಟೇರ' ಸಿನಿಮಾದ ಭರ್ಜರಿ ಯಶಸ್ಸನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಕ್ರಾಂತಿ ಹಬ್ಬದ ಜೊತೆಯಲ್ಲಿ ಸಂಭ್ರಮಿಸುತ್ತಿದ್ದಾರೆ. ಕಮರ್ಷಿಯಲ್ ಎಲಿಮೆಂಟ್ಸ್ ಅನ್ನು ಪಕ್ಕಕ್ಕೆ ಇಟ್ಟು ತಮ್ಮ ಪಾತ್ರದ ಮೂಲಕವೇ ಪ್ರಯೋಗ ಮಾಡಲು ಮುಂದಾಗಿದ್ದರು. ಈ ವಿಭಿನ್ನ ಪ್ರಯತ್ನ ದರ್ಶನ್ ಕೈ ಹಿಡಿದಿದೆ. ಪ್ರೇಕ್ಷಕರು 'ಕಾಟೇರ' ಸಿನಿಮಾ ಮೆಚ್ಚಿ ಕೊಂಡಾಡಿದ್ದಾರೆ.
'ಕಾಟೇರ' ಬಾಕ್ಸಾಪೀಸ್ನಲ್ಲಿ ಮುನ್ನುಗ್ಗುತ್ತಿದೆ. ಯಾವುದೇ ಪರಭಾಷೆಯ ಸಿನಿಮಾಗೂ ಜಗ್ಗುತ್ತಿಲ್ಲ. ಈಗಾಗಲೇ 190 ಕೋಟಿ ರೂಪಾಯಿ (gross) ಕಲೆಕ್ಷನ್ ಮಾಡಿದ್ದು, ಇಂದಿಗೆ (ಜನವರಿ 17) ದರ್ಶನ್ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆಯಿದೆ.

ಕೇವಲ ಕರ್ನಾಟಕದಲ್ಲಿ 'ಕಾಟೇರ' 135 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದರೊಂದಿಗೆ ವಿದೇಶಗಳಲ್ಲಿ ಈ ಸಿನಿಮಾವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ದರ್ಶನ್ ದುಬೈನಲ್ಲಿ ನಡೆದ ವಿಶೇಷ ಪ್ರೀಮಿಯರ್ನಲ್ಲಿ ಭಾಗವಹಿಸಿದ್ದರು. ಸಿನಿಮಾ ಯಶಸ್ಸಿನ ಬೆನ್ನಲ್ಲೇ ದುಬೈನಲ್ಲಿ ಪ್ರವಾಸ ಮಾಡಿದ್ದರು.
ಈಗ 'ಕಾಟೇರ' ಯಶಸ್ಸನ್ನು ಸಂಕ್ರಾಂತಿ ಹಬ್ಬದೊಂದಿಗೆ ಆಚರಣೆ ಮಾಡುತ್ತಿದ್ದಾರೆ. ಈ ಬಾರಿ ವಿಶೇಷ ಅಂದರೆ, ಡಾ.ಪಾರ್ವತಮ್ಮ ರಾಜ್ಕುಮಾರ್ ಸಹೋದರನ ಪುತ್ರ ಧ್ರುವನ್ ಜೊತೆ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಸ್ವತ: ದರ್ಶನ್ ಅವರೇ ತಮ್ಮ ಫಾರ್ಮ್ ಹೌಸ್ನಲ್ಲಿರುವ ಎತ್ತುಗಳೊಂದಿಗೆ ಧ್ರುವನ್ ಜೊತೆ ತೆಗೆಸಿಕೊಂಡ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.
ಇದರೊಂದಿಗೆ ತಮ್ಮ ಅಭಿಮಾನಿಗಳಿಗೆ ಹಾಗೂ ಸಮಸ್ತ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. "ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ.
ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ." ಎಂದು ಧ್ರುವನ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಧ್ರುವನ್ ಮೂಲ ಹೆಸರು ಸೂರಜ್. ಪಾರ್ವತಮ್ಮ ರಾಜ್ಕುಮಾರ್ ಅವರ ಸಹೋದರನ ಪುತ್ರ. 'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಿತ್ತು. ಅಷ್ಟರಲ್ಲಿಯೇ ಧ್ರುವನ್ಗೆ ಅಪಘಾತವಾಗಿತ್ತು. ಕಳೆದ ವರ್ಷ ಚಾಮರಾಜನಗರ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿತ್ತು. ಈ ವೇಳೆ ಧ್ರುವನ್ ಕಾಲಿಗೆ ಪೆಟ್ಟಾಗಿತ್ತು.
ಅಪಘಾತವಾದ ಬಳಿಕ ಪೊಲೀಸರು ಧ್ರುವನ್ ಅನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಕಾಲಿಗೆ ತೀವ್ರ ಪೆಟ್ಟಾಗಿದ್ದರಿಂದ ಶಸ್ತ್ರ ಚಿಕಿತ್ಸೆ ಮಾಡಿ ಅವರಿಗೆ ಪೆಟ್ಟಾಗಿದ್ದ ಒಂದು ಕಾಲನ್ನು ಕತ್ತರಿಸಿದ್ದರು. ಆ ಬಳಿಕ ಧ್ರುವನ್ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ನಡೆದ 'ಕಾಟೇರ' ಸಿನಿಮಾ ಇವೆಂಟ್ನಲ್ಲಿ ದರ್ಶನ್ ಜೊತೆ ಕಾಣಿಸಿಕೊಂಡಿದ್ದರು. ಈಗ ದರ್ಶನ್ ಫಾರ್ಮ್ ಹೌಸ್ನಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











