"ವಿಷವಿರೋ ಹಾವನ್ನು ತಂದು ಬಿಡಲಿ.. ಯಾರು ಹಿಡೀತಾರೋ ನೋಡೋಣ"; ದರ್ಶನ್ ಸವಾಲ್ ಯಾರಿಗೆ?
ಕರ್ನಾಟಕದಲ್ಲಿ 'ಕಾಟೇರ' ಹವಾ ಜೋರಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲೂ 'ಕಾಟೇರ' ಮೇನಿಯಾನೇ ಶುರುವಾಗಿದೆ. ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಿದ್ದಷ್ಟೇ. ಚಿತ್ರಮಂದಿರಗಳಲ್ಲಿ ಟಿಕೆಟ್ಗಳು ಕಣ್ಮುಚ್ಚಿ ಕಣ್ಬಿಡುವುದರೊಳಗಾಗಿ ಖಾಲಿ ಆಗುತ್ತಿವೆ.
ಇತ್ತ ಅಭಿಮಾನಿಗಳು ಕೂಡ 'ಕಾಟೇರ' ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. 70ರ ದಶಕದಲ್ಲಿ ಕಥೆಯನ್ನು ತೆರೆಮೇಲೆ ನೋಡುವುದಕ್ಕೆ ಕಾತುರರಾಗಿದ್ದಾರೆ. ಮತ್ತೊಂದು ಚಿತ್ರಮಂದಿರದ ಮುಂದೆ ದೊಡ್ಡ ಮಟ್ಟಕ್ಕೆ ಸೆಲೆಬ್ರೆಷನ್ ನಡೆಯುತ್ತಿದೆ.

ಈ ಮಧ್ಯೆ ದರ್ಶನ್ ತಮ್ಮದೇ ಅಭಿಮಾನಿಗಳ ಯೂಟ್ಯೂಬ್ ಚಾನೆಲ್ ಡಿ ಕಂಪನಿಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ದರ್ಶನ್ "ವಿಷವಿರುವ ಹಾವನ್ನು ತಂದು ಬಿಡಲಿ. ಯಾರು ಹಿಡಿಯುತ್ತಾರೋ ನೋಡೋಣ" ಅಂತ ಸವಾಲು ಎಸೆದಿದ್ದಾರೆ. ಅಷ್ಟಕ್ಕೂ ಇಂತಹ ಸವಾಲು ಹಾಕಿದ್ದು ಯಾರಿಗೆ? ಯಾಕೀ ಸವಾಲು ಹಾಕಿದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾದ ಡೈಲಾಗ್ ಕೆಲವೇ ದಿನಗಳ ಹಿಂದಷ್ಟೇ ರಿಲೀಸ್ ಆಗಿತ್ತು. ಇದರಲ್ಲಿ ಜಬರ್ದಸ್ತ್ ಡೈಲಾಗ್ಸ್ ಇತ್ತು. ಹಾಗೇ ಮಸ್ತ್ ಆಕ್ಷನ್ ಸನ್ನಿವೇಶಗಳೂ ಇದ್ದವು. ಇವುಗಳನ್ನು ನೋಡಿ ಸಿನಿಪ್ರಿಯರು ದಿಲ್ ಖುಷ್ ಆಗಿದ್ದರು. ಆದರೆ, 'ಕಾಟೇರ' ಸಿನಿಮಾದ ಒಂದೇ ಒಂದು ಡೈಲಾಗ್ ವಿವಾದವನ್ನು ಸೃಷ್ಟಿಸಿತ್ತು. ವನ್ಯಜೀವಿ ಸಂರಕ್ಷಣಾ ಒಕ್ಕೂಟ ಒಂದು ಡೈಲಾಗ್ಗೆ ಅಸಮಾಧಾನ ಹೊರ ಹಾಕಿತ್ತು.

'ಕಾಟೇರ' ಸಿನಿಮಾ ಟ್ರೈಲರ್ನಲ್ಲಿ ಜಗಪತಿ ಬಾಬು ಊರಿನ ಬಡ ಜನರನ್ನು ಉದ್ದೇಶಿಸಿ "ಇವ್ರೆಲ್ಲ ಹಾವುಗಳಿದ್ದಂಗೆ. ವಿಷ ಇಲ್ಲ ಅಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು" ಅಂತ ಡೈಲಾಗ್ ಹೊಡೆಯುವ ದೃಶ್ಯವಿದೆ. ಈ ಡೈಲಾಗ್ ಅಳಿವಿನ ಅಂಚಿನಲ್ಲಿರುವ ಹಾವುಗಳ ವಿನಾಶಕ್ಕೆ ಪ್ರಚೋದನೆ ನೀಡಿದಂತೆ ಆಗುತ್ತೆ ಎಂದು ಆರೋಪಿಸಲಾಗಿತ್ತು. ನಿಕಟಪೂರ್ವ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗೆ ಇ ಮೇಲ್ ಮೂಲಕ ದೂರು ನೀಡಿದ್ದಾರೆಂದು ವರದಿಯಾಗಿತ್ತು. ಈ ವಿವಾದಕ್ಕೆ ದರ್ಶನ್ ಸವಾಲೆಸೆದಿದ್ದಾರೆ. ಆ ಸಂದರ್ಶನದ ತುಣುಕು ಇಲ್ಲಿದೆ.
"ಅವರನು ಯಾವತ್ತಾದ್ರೂ ಒಂದು ಪ್ರಾಣಿಗೆ ಊಟ ಹಾಕಿದ್ದು ತೋರಿಸಿ ವಿಡಿಯೋ ಮಾಡಲಿ. ಒಂದು ಹಾವನ್ನು ಹಿಡಿದು ಬಿಟ್ಟಿರೋದನ್ನು ತೋರಿಸಲಿ. ನಾನು ನನ್ನ ಮನೆಯಲ್ಲಿ ಲೀಗಲ್ ಆಗಿ ಸಾಕಬಹುದಾದ ಹಾವನ್ನು ಹಿಡಿದು ಸಾಕುತ್ತಿದ್ದೇನೆ. ಪ್ರಾಣಿ ಪ್ರಿಯ ಅಂದ ಕೂಡಲೇ ಅದಕ್ಕೆ ಸಂರಕ್ಷಣೆ ಅನ್ನೋದಲ್ಲ. ನೀನು ಎಷ್ಟು ಪ್ರಾಣಿಗಳನ್ನು ಸಾಕಿದ್ದೀಯ. ಅದಕ್ಕೆ ಮೇವು ಎಷ್ಟು ಹಾಕುತ್ತಿದ್ದೀಯ ಹೇಳು. ಮನೆಯಲ್ಲಿ ಒಂದು ನಾಯಿ ಸಾಕಿ ಅದಕ್ಕೆ ಮೇವು ಹಾಕ್ತಿದ್ದೀಯಾ? ಆಮೇಲೆ ಮಾತಾಡು." ಎಂದು ದರ್ಶನ್ ಗುಡುಗಿದ್ದಾರೆ.
ಇಷ್ಟೇ ಅಲ್ಲದೆ "ಯಾರು ಮಾಡಿದ್ರೋ ಅವನಿಗೂ ನನಗೂ ಚಾಲೆಂಜ್. ಪಕ್ಕಾ ವಿಷ ಇರುವ ಹಾವನ್ನು ತಂದು ಇಲ್ಲಿ ಬಿಡಲಿ. ಅವನು ಹಿಡಿಲಿ. ನಾನು ಹಿಡಿತೀನಿ. ಯಾರು ಹಾವನ್ನು ಹಿಡಿಯುತ್ತಾರೆ ನೋಡೋಣ. ಆಮೇಲೆ ಯಾವುದೋ ಡಮ್ಮಿ ಹಾವನ್ನು ತರೋದು ಬೇಡ. ಇನ್ನು ಎರಡು ದಿನ ಇಲ್ಲೇ ಇರುತ್ತೇನೆ. ತಗೊಂಡು ಬರಲಿ. ತೋರಿಸಲಿ ಇದಕ್ಕೆ ವಿಷ ಇದೆ ಅಂತ. ಬಿಡಲಿ ಅದನ್ನು. ಅವನು ಹಿಡಿಲಿ. ನಾನು ಹಿಡಿತೀನಿ." ಹೆಸರು ಎತ್ತದೆ ಪರೋಕ್ಷವಾಗಿ ದರ್ಶನ್ ಸವಾಲೆಸೆದಿದ್ದಾರೆ.


Click it and Unblock the Notifications











