ನಿನ್ನೆ ಪವಿತ್ರಾ ಗೌಡ ಜೈಲಿಂದ ರಿಲೀಸ್.. ಇಂದು ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಬೆನ್ನು ನೋವಿನ ಸಮಸ್ಯೆ ನೀಡಿ ಮಧ್ಯಂತರ ಜಾಮೀನು ಪಡೆದಿದ್ದರು. ಬಳಿಕ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ಬಿಜಿಎಸ್ ಆಸ್ಪತ್ರೆಯಲ್ಲಿಯೇ ದರ್ಶನ್ಗೆ ಚಿಕಿತ್ಸೆ ನಡೆಯುತ್ತಿತ್ತು. ಇಂದು ( ಡಿಸೆಂಬರ್ 18) ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ದರ್ಶನ್ಗೆ ಹೈಕೋರ್ಟ್ನಿಂದ ರೆಗ್ಯೂಲರ್ ಜಾಮೀನು ಸಿಕ್ಕಿದ ಬೆನ್ನಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆಂಬ ನಿರೀಕ್ಷೆಯಿತ್ತು. ಅದರಂತೆ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪತ್ನಿಯ ಅಪಾರ್ಟ್ಮೆಂಟ್ಗೆ ತೆರಳಿದ್ದಾರೆ. ಈ ವೇಳೆ ಕುಂಟುತ್ತಲೇ ಆಸ್ಪತ್ರೆಯಿಂದ ಹೊರ ಬಂದು ತಮ್ಮ ಕಾರಿನ ಮೂಲಕ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪುತ್ರ ವಿನೀಶ್ ತಂದೆಗೆ ಸಾಥ್ ಕೊಟ್ಟಿದ್ದರು.

ನಿನ್ನೆ (ಡಿಸೆಂಬರ್ 17) ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾ ಗೌಡ ರಿಲೀಸ್ ಆಗಿದ್ದರು. ಇಂದು ( ಡಿಸೆಂಬರ್ 18) ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಬಂದಿದ್ದಾರೆ. ಸದ್ಯ ಪತ್ನಿ ವಿಜಯಲಕ್ಷ್ಮಿ ಅವರ ಅಪಾರ್ಟ್ಮೆಂಟ್ನಲ್ಲಿ ದರ್ಶನ್ ಇರುತ್ತಾರೆಂಬ ಮಾಹಿತಿ ಹೊರಬಿದ್ದಿದ್ದು, ವೈದ್ಯರು ಕೆಲವು ಸಲಹೆಗಳನ್ನು ಕೊಟ್ಟು ಕಳುಹಿಸಿದ್ದಾರೆ. ಈ ಮಧ್ಯೆ ದರ್ಶನ್ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲ್ನಿಂದ ಬಿಡುಗಡೆಯಾಗುತ್ತಿದ್ದಂತೆ ನೇರವಾಗಿ ಮನೆಗೆ ತೆರಳದೆ ವಜ್ರಮುನೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಹರಕೆ ತೀರಿಸಿ, ಪೂಜೆ ನೆರವೇರಿಸಿದ ಬಳಿಕ ಅಮ್ಮ ಮನೆಯ ಕಡೆಗೆ ಪಯಣ ಬೆಳೆಸಿದ್ದರು. ಇಂದು ದರ್ಶನ್ ಕೂಡ ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಮೈಸೂರಿನಲ್ಲಿರುವ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಆದರೆ, ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿರುವುದರಿಂದ ದರ್ಶನ್ಗೆ ಬೆಂಗಳೂರು ಬಿಟ್ಟು ಹೊರಗಡೆ ಹೋಗುವುದಕ್ಕೆ ಅನುಮತಿಯನ್ನು ಪಡೆಯಬೇಕು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಚಾಮುಂಡೇಶ್ವರಿ ದೇವಿಯ ಸನ್ನಿಧಿಗೆ ಸದ್ಯಕ್ಕೆ ಹೋಗಲು ಸಾಧ್ಯವಿಲ್ಲ. ಅನುಮತಿ ಪಡೆದ ಬಳಿಕವೇ ಇದು ಸಾಧ್ಯ ಎಂದು ಹೇಳಲಾಗುತ್ತಿದೆ.

ಇನ್ನು ಅವರ ಆರೋಗ್ಯ ವಿಚಾರಕ್ಕೆ ಬರುವುದಾದರೇ, ದರ್ಶನ್ಗೆ ಸರ್ಜರಿ ಆಗಬೇಕು. ಇಲ್ಲದೇ ಹೋದರೆ ಪಾರ್ಶ್ವವಾಯು ಆಗುವ ಸಂಭವವಿದೆ ಎಂದು ಹಿರಿಯ ವಕೀಲರು ವಾದ ಮಂಡಿಸಿದ್ದರು. ಆದ್ರೀಗ ಸರ್ಜರಿ ಮಾಡಿಸಿಕೊಳ್ಳದೇನೆ ಡಿಸ್ಚಾರ್ಜ್ ಆಗಿದ್ದಾರೆ. ದರ್ಶನ್ಗೆ ವೈದ್ಯರು ಮನೆಯಲ್ಲಿಯೇ ಫಿಸಿಯೋಥೆರಪಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಈ ಕಾರಣಕ್ಕೆ ಫಿಸಿಯೋಥೆರಪಿಸ್ಟ್ ಒಬ್ಬರು ಪ್ರತಿದಿನ ಮನೆಗೆ ಬಂದು ಫಿಸಿಯೋಥೆರಪಿ ಕೊಟ್ಟು ಹೋಗುವಂತಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವರದಿಗಳಾಗಿವೆ.
ಸದ್ಯ ಪತ್ನಿ ಮನೆಗೆ ತೆರಳಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಆಸ್ಪತ್ರೆಯಿಂದ ಮನೆಗೆ ತೆರಳುವ ಸಮಯದಲ್ಲಿ ದರ್ಶನ್ ಜೊತೆಗೆ ಪುತ್ರ ವಿನೀಶ್ ಹಾಗೂ ಸ್ಯಾಂಡಲ್ವುಡ್ ನಟ ಧನ್ವೀರ್ ಜೊತೆಯಾಗಿದ್ದಾರೆ. ದರ್ಶನ್ ಧ್ನವೀರ್ ಅವರ ಕಾರಿನಲ್ಲಿಯೇ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಅನ್ನೋ ಸುದ್ದಿಯಿದೆ. ಈಗ ರೆಗ್ಯೂಲರ್ ಜಾಮೀನು ಸಿಕ್ಕಿದ ಮೇಲೆ ದರ್ಶನ್ ಮುಂದಿನ ನಡೆಯೇನು ಅನ್ನೋದನ್ನು ಅವರ ಅಭಿಮಾನಿಗಳು ಕುತೂಹಲದಿಂದ ನೋಡುತ್ತಿದ್ದಾರೆ.


Click it and Unblock the Notifications











