ಪುನೀತ್ ಪುಣ್ಯಸ್ಮರಣೆಯಲ್ಲಿ ಶಿವಣ್ಣನನ್ನು ಅಪ್ಪಿಕೊಂಡ ದರ್ಶನ್
ಪುನೀತ್ ರಾಜ್ಕುಮಾರ್ ಅಕಾಲಿಕ ಸಾವು ಅರಗಿಸಿಕೊಳ್ಳಲು ಇನ್ನೂ ಸಮಯಬೇಕು. ವಿಧಿಯಾಡಿದ ಆಟದ ಮುಂದೆ ಎಲ್ಲರೂ ತಲೆಭಾಗಿ ವಿಧಿಯನ್ನು ಶಪಿಸುವುದನ್ನು ಬಿಟ್ಟು ಬೇರೆ ಏನು ಮಾಡಲು ಸಾಧ್ಯ? ನಿಜಕ್ಕೂ ಕನ್ನಡಿಗರ ಪಾಲಿನ ಕಣ್ಮಣಿಯಾಗಿದ್ದ ಪವರ್ಸ್ಟಾರ್ ಕೇವಲ ನಟನಾಗಿ ಇಷ್ಟೊಂದು ಅಭಿಮಾನಿ ಬಳಗವನ್ನು ಹೊಂದಿಲ್ಲ. ಅವರ ಸಮಾಜಮುಖಿ ಕೆಲಸದಿಂದ ಅಪ್ಪು ಅಪಾರ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದರು. ಇನ್ನು ಚಿತ್ರರಂಗದಲ್ಲಿ ಪುನೀತ್ ರಾಜ್ಕುಮಾರ್ ಅಜಾತಶತ್ರು. ಪುನೀತ್ ದ್ವೇಷ ಮಾಡುವವರು ಯಾರೊಬ್ಬರೂ ಇಲ್ಲ.
ಪುನೀತ್ ರಾಜ್ಕುಮಾರ್ 11ನೇ ಪುಣ್ಯಸ್ಮರಣೆಯಂದು ಇಡೀ ಸ್ಯಾಂಡಲ್ವುಡ್ ಒಟ್ಟಿಗೆ ಸೇರಿತ್ತು. ಅಪ್ಪು ಮನೆಯಲ್ಲಿ ಏರ್ಪಡಿಸಿದ್ದ ಪುಣ್ಯಸ್ಮರಣೆಯಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರು ಭೇಟಿ ಪ್ರಾರ್ಥನೆ ಸಲ್ಲಿಸಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ, ಅಪ್ಪುಗೆ ಆತ್ಮಕ್ಕೆ ಶಾಂತಿ ಕೋರಿದರು. ಈ ವೇಳೆ ಶಿವಣ್ಣನನ್ನು ಅಪ್ಪಿಕೊಂಡ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶಿವಣ್ಣನನ್ನು ಅಪ್ಪಿಕೊಂಡು ಸಂತೈಸಿದ ದರ್ಶನ್
ನಟ ಪುನೀತ್ ರಾಜ್ಕುಮಾರ್ 11ನೇ ದಿನದ ಪುಣ್ಯ ತಿಥಿಯಂದು ಒಂದು ವಿಡಿಯೋ ವೈರಲ್ ಆಗುತ್ತಿದೆ. ಅಪ್ಪು ಆತ್ಮಕ್ಕೆ ಶಾಂತಿ ಕೋರಲು ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೆಲ ಹೊತ್ತು ಪುನೀತ್ ಮನೆಯಲ್ಲೇ ಕಾಲ ಕಳೆದಿದ್ದಾರೆ. ಈ ವೇಳೆ ಶಿವಣ್ಣನೊಂದಿಗೆ ಕೆಲ ಹೊತ್ತು ಮಾತುಕತೆ ಕೂಡ ನಡೆಸಿದ್ದಾರೆ. ಇನ್ನೇನು ಪುನೀತ್ ಮನೆಯಿಂದ ಹೊರಡಬೇಕು ಅನ್ನುವಾಗ ಮತ್ತೆ ಶಿವಣ್ಣ ಎದುರಾಗಿದ್ದಾರೆ. ಈ ವೇಳೆ ತಮ್ಮನನ್ನು ಕಳೆದುಕೊಂಡ ನೋವಿನಲ್ಲಿರುವ ಶಿವರಾಜ್ ಕುಮಾರ್ ಅವರಿಗೆ ದರ್ಶನ್ ಅಪ್ಪಿಕೊಂಡ ಸಂತೈಸಿದ್ದಾರೆ.

ಶಿವಣ್ಣ ಕಂಡರೆ ದರ್ಶನ್ಗೆ ಎಲ್ಲಿಲ್ಲದ ಗೌರವ
ಇಡೀ ಚಿತ್ರರಂಗವೇ ಶೋಕದಲ್ಲಿದೆ. ಪುನೀತ್ ಅಭಿಮಾನಿಗಳು ಅಪ್ಪು ಅಗಲಿಕೆ ನೋವಿನಿಂದ ಇನ್ನೂ ಹೊರಬಂದಿಲ್ಲ. ಇಂತಹ ಸಂದರ್ಭದಲ್ಲಿ ಇಡೀ ಚಿತ್ರರಂಗ ಅಣ್ಣಾವ್ರ ಕುಟುಂಬದೊಂದಿಗೆ ಇದೆ. ಈ ವೇಳೆ ದುಃಖದಲ್ಲಿರುವ ದೊಡ್ಮನೆ ಕುಟುಂಬಕ್ಕೆ ದರ್ಶನ್ ಸಮಾಧಾನ ಮಾಡಿ, ಅಣ್ಣಾವ್ರ ದೊಡ್ಡ ಮಗನಿಗೆ ಧೈರ್ಯ ತುಂಬಿ ಬಂದಿದ್ದಾರೆ. ದರ್ಶನ್ಗೆ ಮೊದಲಿಂದಲೂ ಶಿವಣ್ಣ ಕಂಡರೆ ಗೌರವ. ಸಿನಿಮಾ ಮುಹೂರ್ತಗಳಲ್ಲಿ ಮುಖಾಮುಖಿಯಾದಾಗ ಶಿವಣ್ಣ ಕಾಲಿಗೆ ಬಿದ್ದು ನಮಸ್ಕರಿಸಿದ ಉದಾಹರಣೆಗಳೂ ಇವೆ. ಸಿನಿಮಾಗಳಲ್ಲಿ ಲಾಂಗ್ ಹಿಡಿಯುವುದಕ್ಕೆ ಪ್ರೇರಣೆನೇ ಶಿವರಾಜ್ಕುಮಾರ್. ಈ ಮಾತನ್ನು ಸ್ವತಃ ದರ್ಶನ್ ಅದೆಷ್ಟೋ ಬಾರಿ ಹೇಳಿಕೊಂಡಿದ್ದಾರೆ.

ಸೋದರರಂತೆ ಇದ್ದ ಪುನೀತ್ ರಾಜ್ಕುಮಾರ್, ದರ್ಶನ್
ಅಣ್ಣಾವ್ರ ಯಾವುದೇ ಸಿನಿಮಾ ಶುರುವಾದರೂ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರಿಗೆ ಒಂದು ಪಾತ್ರವಿರುತ್ತಿತ್ತು. ಬಹುತೇಕ ಖಳನಾಯಕನಾಗಿ ನಟಿಸುತ್ತಿದ್ದ ತೂಗುದೀಪ ಶ್ರೀನಿವಾಸ್ ಅವರಿಗೆ ದೊಡ್ಮನೆ ತೀರಾ ಆತ್ಮೀಯವಾಗಿತ್ತು. ಇನ್ನು ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಅಣ್ಣಾವ್ರ ಮಕ್ಕಳೊಂದಿಗೆ ಉತ್ತಮ ಬಾಂಧವ್ಯವಿದೆ. ಅಪ್ಪು ಹಾಗೂ ಪುನೀತ್ ಇಬ್ಬರ ಸ್ನೇಹ ಇಡೀ ಚಿತ್ರರಂಗಕ್ಕೆ ಗೊತ್ತಿದೆ. ಪುನೀತ್ ರಾಜ್ಕುಮಾರ್ ನಟಿಸಿದ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದ ಕೊನೆಯ ದೃಶ್ಯದಲ್ಲಿ ನಟಿ ರಮ್ಯಾ ಜೊತೆ ವಿವಾಹವಾಗುವ ಚಿಕ್ಕ ದೃಶ್ಯದಲ್ಲಿ ದರ್ಶನ್ ನಟಿಸಿದ್ದರು. ಇದೊಂದು ದೃಶ್ಯ ಪುನೀತ್ ಹಾಗೂ ದರ್ಶನ್ ಸ್ನೇಹಕ್ಕೆ ಉತ್ತಮ ಉದಾಹರಣೆ.

ಇದೇ ಕಾರಣಕ್ಕೆ ಪುನೀತ್ ರಾಜ್ಕುಮಾರ್ಗೆ ಹೃದಯಾಘಾತವಾಗಿದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ದರ್ಶನ ಓಡೋಡಿ ವಿಕ್ರಂ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಲ್ಲೇ ಅಗಲಿದ ಅಪ್ಪು ದರ್ಶನ ಪಡೆದಿದ್ದರು. ಒಬ್ಬ ಸ್ನೇಹಿತನ್ನು ಕಳೆದುಕೊಂಡ ನೋವಿನಿಂದಲೇ ನಿರ್ಗಮಿಸಿದ್ದ ದರ್ಶನ್, ಇಂದು ( ನವೆಂಬರ್ 8) ಪುನೀತ್ ಮನೆಗೆ ಭೇಟಿ ನೀಡಿ ಶಿವಣ್ಣನನ್ನು ಅಪ್ಪಿಕೊಂಡು ಸಮಾಧಾನದ ಮಾತುಗಳನ್ನು ಆಡಿದ್ದಾರೆ.


Click it and Unblock the Notifications











