ದರ್ಶನ್ಗೆ ಇನ್ನೂ 14 ದಿನ ಜೈಲು ವಾಸ; ಮನೆಯೂಟ, ಹಾಸಿಗೆ, ಪುಸ್ತಕದ ಬೇಡಿಕೆ ಏನಾಯ್ತು?
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯ ಅವಧಿ ಮುಗಿದ ಬಳಿಕ ಕೋರ್ಟ್ ದರ್ಶನ್ಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು. ಎರಡನೇ ಬಾರಿ ಜುಲೈ 18ರವರೆಗೂ ನ್ಯಾಯಾಂಗ ಅವಧಿಯನ್ನು ವಿಸ್ತರಿಸಲಾಗಿತ್ತು. ಇಂದು (ಜುಲೈ 18) ಆ ಅವಧಿ ಮುಕ್ತಾಯಗೊಳ್ಳಲಿದೆ.
ಇದೇ ವೇಳೆ ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಸಹಚರರಿಗೂ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿತ್ತು. ಈಗ ಮೂರನೇ ಬಾರಿ ದರ್ಶನ್ಗೆ ನ್ಯಾಯಾಂಗ ಬಂಧನವನ್ನು ಇನ್ನೂ 14 ದಿನಗಳ ಕಾಲ ಮುಂದುವರೆಸುವಂತೆ ಆದೇಶ ಹೊರಡಿಸಲಾಗಿದೆ. ದರ್ಶನ್ ಇನ್ನು 14 ದಿನಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಬೇಕಾಗುತ್ತೆ. ಆ ಬಳಿಕ ಮತ್ತೆ ನ್ಯಾಯಾಲಯದ ಮುಂದೆ ಈ ಕೇಸ್ ಬರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ ಬಳಿಕವೇ ದರ್ಶನ್ಗೆ ಜಾಮೀನು ಸಿಗುವ ಬಗ್ಗೆ ಸಾಧ್ಯತೆ ಇರಲಿದೆ ಎನ್ನಲಾಗಿದೆ.

ಇನ್ನು ಕೆಲವು ದಿನಗಳ ಹಿಂದೆ ದರ್ಶನ್ ಪರ ವಕೀಲರು ಕೆಲವು ಬೇಡಿಕೆಗಳನ್ನು ಇಟ್ಟು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ದರ್ಶನ್ಗೆ ಜೈಲಿನ ಊಟ ಸರಿ ಹೋಗುತ್ತಿಲ್ಲ. ಹೀಗಾಗಿ ಮನೆಯೂಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿತ್ತು. ಇದರೊಂದಿಗೆ ಹಾಸಿಗೆ ಹಾಗೂ ಓದಲು ಪುಸ್ತಕವನ್ನು ನೀಡುವಂತೆ ಕೇಳಿಕೊಂಡಿದ್ದರು. ಆ ವಿಚಾರವಾಗಿ ಹೈ ಕೋರ್ಟ್ನಲ್ಲಿ ಇಂದು (ಜುಲೈ 18) ವಿಚಾರಣೆ ಆರಂಭ ಆಗಿತ್ತು.
ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ಆರಂಭಿಸಿದ್ದು, ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ನ್ಯಾಯಪೀಠದ ವಿಚಾರಣೆ ನಡೆಸಿದರು. ಈ ವೇಳೆ ದರ್ಶನ್ ಪರ ಹಿರಿಯ ವಕೀಲ ಕೆ.ಎನ್ ಫಣೀಂದ್ರ ಹಾಜರಿದ್ದರು. ಹಾಗೇ ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಉಪಸ್ಥಿತಿಯಿತ್ತು. ಮನೆಯೂಟ, ಹಾಸಿಗೆ, ಪುಸ್ತಕ ನೀಡಲು ಕಾನೂನಿನಲ್ಲಿ ಏನು ಅವಕಾಶವಿದೆ ಅನ್ನೋದನ್ನು ತಿಳಿದು ಆಮೇಲೆ ನಿರ್ಧಾರ ತೆಗೆದುಕೊಳ್ಳೋಣ ಎಂದು ಹೇಳಿದ್ದಾರೆ. ಜೊತೆಗೆ ಎರಡೂ ಕಡೆಯ ವರದಿಯನ್ನು ಸ್ವೀಕರಿಸಲಾಗಿದ್ದು, ವಿಚಾರಣೆಯನ್ನು ನಾಳೆ (ಜುಲೈ 19) ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ. ನಾಳೆ ಮಧ್ಯಾಹ್ನದವರೆಗೂ ದರ್ಶನ್ಗೆ ಜೈಲೂಟ ಮಾಡಬೇಕಾಗಿದೆ.


Click it and Unblock the Notifications











