ದರ್ಶನ್ ಕುದುರೆ ಮಾರಾಟಕ್ಕೆ ಇಟ್ಟಿರೋದು ನಿಜವೇ? ಅಸಲಿ ಮ್ಯಾಟರ್ ಏನು? ಎಷ್ಟಕ್ಕೆ ಮಾರಾಟ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಒಂದು ಕಡೆ ಜೈಲಿನಲ್ಲಿ ಕನಿಷ್ಠ ಸೌಕರ್ಯ ಕೂಡ ಸಿಗುತ್ತಿಲ್ಲ ಎಂಬ ಆರೋಪದಡಿಯಲ್ಲಿ ಸುದ್ದಿಯಲ್ಲಿದ್ದಾರೆ. ಅದೇ ಇನ್ನೊಂದು ಕಡೆ ಅವರ ಫಾರ್ಮ್ಹೌಸ್ನಲ್ಲಿ ಕುದುರೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆಂಬ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿ ಇರುವುದರಿಂದ ಅವರು ಸಾಕಿದ್ದ ಕುದುರೆಗಳನ್ನು ಸೇಲ್ ಮಾಡುವುದಕ್ಕೆ ನಿರ್ಧರಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.
ದರ್ಶನ್ ತಮ್ಮ ಫಾರ್ಮ್ ಹೌಸ್ನಲ್ಲಿ ಪ್ರಾಣಿ-ಪಕ್ಷಿಗಳನ್ನು ಸಾಕಿದ್ದಾರೆ. ಅವುಗಳಲ್ಲಿ ಕುದುರೆಗಳು ಕೂಡ ಇವೆ. ತಮ್ಮ ತೋಟದಲ್ಲಿ ಆಗಾಗ ದರ್ಶನ್ ತಮ್ಮ ಪುತ್ರ ವಿನೀಶ್ ಜೊತೆ ಕುದುರೆ ಸವಾರಿ ಮಾಡುವ ಫೋಟೊಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದವು. ಬೇರೆ ರಾಜ್ಯಗಳಿಂದ ವಿಭಿನ್ನ ತಳಿಯ ಕುದುರೆಗಳನ್ನು ತರಿಸಿ ಇಲ್ಲಿ ಸಾಕುತ್ತಿದ್ದರು.

ಕಳೆದೆರಡು ದಿನಗಳಿಂದ ದರ್ಶನ್ ತಮ್ಮ ಫಾರ್ಮ್ ಹೌಸ್ನಲ್ಲಿರುವ ಕುದುರೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿತ್ತು. ದರ್ಶನ್ ಇಲ್ಲದೆ ಕುದುರೆಗಳನ್ನು ನೋಡಿಕೊಳ್ಳುವುದಕ್ಕೆ ಆಗುತ್ತಿಲ್ಲ. ಈ ಕಾರಣಕ್ಕೆ ದರ್ಶನ್ ಕುದುರೆಗಳನ್ನು ಮಾರುವುದಕ್ಕೆ ನಿರ್ಧರಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಇನ್ನೊಂದು ಕಡೆ ಹಣಕಾಸಿನ ಸಮಸ್ಯೆಯಿಂದ ಕುದುರೆ ಮಾರಾಟಕ್ಕೆ ಮುಂದಾಗಿದ್ದಾರೆಂದೂ ಸುದ್ದಿಯಾಗಿತ್ತು. ಈ ಸುದ್ದಿಗಳಿಗೀಗ ದರ್ಶನ್ ಫಾರ್ಮ್ ಹೌಸ್ನ ಮ್ಯಾನೇಜರ್ ಸುನೀಲ್ ವಾವ್ ಕನ್ನಡ ಯೂಟ್ಯೂಬ್ ಚಾನೆಲ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ದರ್ಶನ್ ಫಾರ್ಮ್ ಅಂತಿದ್ದ ಬೋರ್ಡ್ ಅನ್ನು ಹೌಸ್ ವಿನೀಶ್ ದರ್ಶನ್ ಮಾರ್ವಾರಿ ಸ್ಟಡ್ ಫಾರ್ಮ್ ಎಂದು ಬದಲಾಯಿಸಲಾಗಿತ್ತು. ಈಗ ಆ ಬೋರ್ಡ್ ಮುಂದೆ ಕುದುರೆ ಮಾರಾಟಕ್ಕಿದೆ ಎಂದು ಹಾಕಲಾಗಿದೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ವಿನೀಶ್ ದರ್ಶನ್ ಮಾರ್ವಾರಿ ಸ್ಟಡ್ ಫಾರ್ಮ್ನ ಮ್ಯಾನೇಜರ್ ಸುನೀಲ್ ಯೂಟ್ಯೂಬ್ ಚಾನೆಲ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ನಿನ್ನೆ ಮೊನ್ನೆಯಿಂದ ಒಂದು ವಿಚಾರವನ್ನು ಕೇಳುತ್ತಿದ್ದೇವೆ. ದರ್ಶನ್ ಸರ್ ಕುದುರೆ ಮಾರಾಟಕ್ಕೆ ಇಟ್ಟಿದ್ದಾರೆ. ವಿಜಯಲಕ್ಷ್ಮಿ ಮೇಡಂ ದರ್ಶನ್ ಸರ್ ತೊಂದರೆಯಲ್ಲಿ ಇರುವುದರಿಂದ ಮಾರಾಟಕ್ಕೆ ಇಟ್ಟಿದ್ದಾರೆ. ಹೀಗೆ ಸುದ್ದಿಗಳು ಬರುತ್ತಿವೆ. ನಮ್ಮದೊಂದು ಕೆಟ್ಟ ಸಮಯ ಹಾಗೂ ಘಳಿಗೆ ನಡೆಯುತ್ತಿದೆ. ಏನೂ ಮಾಡುವುದಕ್ಕೆ ಆಗಲ್ಲ. ಒಳ್ಳೆಯವರಿಗೆ ಒಳ್ಳೆಯದು ಆಗಲೇ ಬೇಕು." ಎಂದು ಮ್ಯಾನೇಜರ್ ಸುನೀಲ್ ತಿಳಿಸಿದ್ದಾರೆ.

ವಿನೀಶ್ ದರ್ಶನ್ ಮಾರ್ವಾರಿ ಸ್ಟಡ್ ಫಾರ್ಮ್ ಅನ್ನು ನೋಡಿಕೊಳ್ಳುತ್ತಿರುವ ಸುನಿಲ್ ಕುದುರೆ ಮಾರಾಟಕ್ಕಿದೆ ಅನ್ನೋ ಬೋರ್ಡ್ ಹಾಕಿದ್ದೇನಕ್ಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಈ ತೋಟವನ್ನು ನೋಡಿ ಕೊಳ್ಳುತ್ತಿರೋದು ನಾನೇ. ಸುಮ್ಮನೆ ಕುದುರೆ ಮಾರಾಟಕ್ಕೆ ಇಟ್ಟಿದ್ದೀವಿ ಅಂತ ಸುದ್ದಿ ಮಾಡುತ್ತಿದ್ದಾರೆ. ಏನಕ್ಕೆ ಮಾರಾಟಕ್ಕೆ ಇಟ್ಟಿದ್ದೀವಿ ಅನ್ನೋದನ್ನು ತಿಳಿದುಕೊಳ್ಳಿ. ಆ ಬೋರ್ಡ್ ಹಾಕಿನೇ ಒಂದೂವರೆ ವರ್ಷದ ಮೇಲಾಯ್ತು. ಮೈಸೂರು, ಬೆಂಗಳೂರು, ಹಾಸನ ಈ ಸುತ್ತಮುತ್ತ ಇರೋರಿಗೆ ಕುದುರೆ ಸಾಕಬೇಕು ಅಂತ ಆಸೆಯಿರುತ್ತೆ. ಯಾರೋ ರಾಜಸ್ತಾನದವರು ಸಿಗುತ್ತಾರೆ. ತಮಿಳುನಾಡಿನಲ್ಲಿ ಎಲ್ಲೋ ಸಿಗುತ್ತೆ ಅನ್ನೋದನ್ನು ಕೇಳಿದ್ದೇನೆ. ಕುದುರೆ ಸಾಕಬೇಕು ಅಂದರೆ, ಅದನ್ನು ತಿಳಿದುಕೊಂಡು ಸಾಕಬೇಕು. ಈಗ ರಾಜಸ್ತಾನಕ್ಕೆ ಹೋಗಿ ತರಬೇಕು ಅಂದರೆ ಎಷ್ಟು ದೂರ ಆಗುತ್ತೆ. ಕುದುರೆ ಬಗ್ಗೆ ಗೊತ್ತಿರೋರೆ ಮೋಸ ಹೋಗುತ್ತಾರೆ. ಅದಕ್ಕೆ ಒಳ್ಳೆಯ ಕುದುರೆ ತರೋಣ. 10 ಸಾವಿರ ಲಾಭಕ್ಕೆ ಮಾರೋಣ ಎಂದು ಯಜಮಾನರು ಹೇಳಿದ್ದರು." ಎಂದು ಕುದುರೆ ಮಾರಾಟಕ್ಕೆ ಕಾರಣಗಳನ್ನು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಬಹಳ ವರ್ಷಗಳಿಂದ ಈ ಫಾರ್ಮ್ ಹೌಸ್ನಲ್ಲಿ ಕುದುರೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. "ನಮ್ಮದು ಕುದುರೆ ವಹಿವಾಟು ನಡೆಯುತ್ತಿರುತ್ತೆ. ಕುದುರೆಗಳನ್ನು ಬೇರೆ ಕಡೆಯಿಂದ ತರುತ್ತೇವೆ. ಇಲ್ಲಿ ಮಾರಾಟ ಮಾಡುತ್ತೇವೆ. ಕುದುರೆಗಳನ್ನು ತರುತ್ತೇವೆ. ಇಲ್ಲಿ ಸಾಕುತ್ತೇವೆ. ಯಾರಿಗಾದರೂ ಕುದುರೆ ಸಾಕಬೇಕು ಅಂದರೆ ಅದನ್ನು ಮಾಡಬಹುದು. ಇಲ್ಲಿ ಯಾವುದೇ ನಿರ್ಬಂಧವಿಲ್ಲ." ಎಂದು ಗೊಂದಲಕ್ಕೆ ಸುನೀಲ್ ತೆರೆ ಎಳೆದಿದ್ದಾರೆ.


Click it and Unblock the Notifications











