ಪರಪ್ಪನ ಅಗ್ರಹಾರಕ್ಕೆ ದರ್ಶನ್; ವಿನಯ್ ಕುಲಕರ್ಣಿ, ಪ್ರಜ್ವಲ್ ರೇವಣ್ಣ, ದರ್ಶನ್ಗೆ ಸಾಥ್
ಜಾಮೀನನ್ನು ರದ್ದು ಮಾಡಿ ದರ್ಶನ್ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಬಹುದೆಂದು ನಂಬಿಕೆಯಲ್ಲಿ ದರ್ಶನ್ ಇದ್ದಿರಬೇಕು. ಆದರೆ, ಅವರ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ. 'ಸುಪ್ರೀಂ' ಆದೇಶದ ಮೇರೆಗೆ ಒಂದೇ ದಿನ ರೇಣುಕಾಸ್ವಾಮಿ ಕೊಲೆ ಪ್ರಕರಣದ ಏಳೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿ, ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು ಎನ್ನುವಷ್ಟರಲ್ಲಿ ಕೋರ್ಟ್ ಕಲಾಪಗಳು ಮುಗಿದಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಈರಪ್ಪಣ್ಣ ಪವಡಿ ನಾಯ್ಕ್ ಅವರ ನಿವಾಸಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ನ್ಯಾಯಾಧೀಶರು ಆರೋಪಿಗಳನ್ನು ಹಿಂದೆ ಇದ್ದ ಜೈಲಿಗೆ ರವಾನೆ ಮಾಡುತ್ತಾರೋ? ಇಲ್ಲ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸುತ್ತಾರೋ? ಎನ್ನುವ ಗೊಂದಲವಿತ್ತು. ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲ್ಗೆ ಕಳುಹಿಸಲಾಗಿದೆ. ಕಳೆದ ಬಾರಿಯಂತೆ ಜೈಲಿನಲ್ಲೂ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ಗೆ ಈ ಬಾರಿ ರಾಜಾತಿಥ್ಯ ಸಿಗುವುದಿಲ್ಲ. ಸುಪ್ರೀಂ ಕೋರ್ಟ್ ಈ ಬಗ್ಗೆನೂ ಜೈಲಾಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದೆ. ಆದರೆ, ದರ್ಶನ್ಗೆ ಈ ಬಾರಿ ಅವರ ಇಬ್ಬರು ಸ್ನೇಹಿತರು ಸಾಥ್ ಕೊಡಲಿದ್ದರೆ.
ಈಗಾಗಲೇ ದರ್ಶನ್ಗೆ ತೀರಾ ಆತ್ಮೀಯರಾಗಿರುವ ಇಬ್ಬರು ಗೆಳೆಯರು ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ವಿನಯ್ ಕುಲಕರ್ಣಿ ಹಾಗೂ ದರ್ಶನ್ ಇಬ್ಬರೂ ಆತ್ಮೀಯರು. ಅವರ ಫಾರ್ಮ್ಹೌಸ್ಗೆ ದರ್ಶನ್ ಹಲವು ಬಾರಿ ಭೇಟಿ ಕೊಟ್ಟಿದ್ದರು.
ಇನ್ನು ಪ್ರಜ್ವಲ್ ರೇವಣ್ಣ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪ್ರಜ್ವಲ್ ರೇವಣ್ಣ ಜೊತೆನೂ ದರ್ಶನ್ ಉತ್ತಮ ಬಾಂಧವ್ಯ ಹೊಂದಿದ್ದಾರೆಂದು ಹೇಳಲಾಗಿದೆ. ಇಬ್ಬರು ಕೆಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗಿಯಾಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಈಗಾಗಲೇ ಇಬ್ಬರು ಪ್ರಭಾವಿ ವ್ಯಕ್ತಿಗಳು ಇದ್ದಾರೆ. ಈಗ ಅವರೊಂದಿಗೆ ಮೂರನೇ ಪ್ರಭಾವಿ ವ್ಯಕ್ತಿಯಾಗಿ ದರ್ಶನ್ ಸೇರಿಕೊಳ್ಳಲಿದ್ದಾರೆ. ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿ ಜೈಲು ಸೇರುತ್ತಿರುವ ದರ್ಶನ್ ಆಪ್ತರು ಇದ್ದರೂ ಅವರ ಭೇಟಿಗೆ ಅವಕಾಶ ಸಿಗೋದು ಅನುಮಾನ. ಕಳೆದ ಬಾರಿ ಮಾಡಿಕೊಂಡ ಎಡವಟ್ಟು ಇಷ್ಟಕ್ಕೆಲ್ಲ ಕಾರಣ. ಹೀಗಾಗಿ ಈ ಬಾರಿ ದರ್ಶನ್ ಮೇಲೆ ಜೈಲಾಧಿಕಾರಿಗಳು ಹದ್ದಿನ ಕಣ್ಣು ಇಡಬೇಕಾಗಿದೆ. ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದ್ದರಿಂದ ಈ ಬಾರಿ ದರ್ಶನ್ರನ್ನು ಐಷಾರಾಮಿಯಾಗಿ ಇರುವುದಕ್ಕೆ ಬಿಡುವುದು ಅನುಮಾನ.
ಜಾಮೀನು ಸಿಕ್ಕಿದ ಬೆನ್ನಲ್ಲೇ ಆರಾಮಾಗಿ ಓಡಾಡಿಕೊಂಡಿದ್ದ ದರ್ಶನ್ಗೆ ಮತ್ತೆ ಶಾಕ್ ಆಗಿದೆ. ಸುಪ್ರೀಂ ಕೋರ್ಟ್ನಲ್ಲಿ ತನಗೆ ಈ ಮಟ್ಟಿಗೆ ಹಿನ್ನೆಡೆಯಾಗಬಹುದೆಂಬ ನಿರೀಕ್ಷೆ ಕೂಡ ಇರಲಿಲ್ಲ. ಅದರಲ್ಲೂ ಸಮಯವೇ ಕೊಡದೆ ತತಕ್ಷಣವೇ ಬಂಧಿಸಬೇಕು ಎಂಬ ಆದೇಶ ಮುಂದಿನ ಭವಿಷ್ಯದ ಬಗ್ಗೆ ಆತಂಕ ಪಡುವಂತೆ ಮಾಡಿದೆ. ದರ್ಶನ್ ಮುಂದೆ ಏನು ಮಾಡುತ್ತಾರೆ? ಡೆವಿಲ್ ಸಿನಿಮಾದ ಕತೆಯೇನು? ಚಿತ್ರರಂಗದ ಮಂದಿ ಮತ್ತೆ ಬೇಸರ ಹೊರಹಾಕುತ್ತಿದ್ದಾರೆ.


Click it and Unblock the Notifications











