ಅಮ್ಮನನ್ನು ಅಪ್ಪಿ ನಿಂತ ದರ್ಶನ್; 'ತಾಯಿಗೆ ತಕ್ಕ ಮಗ' ಎಂದ ಫ್ಯಾನ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೆಬ್ರವರಿ 16ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 48ನೇ ಬರ್ತ್ಡೇಗೆ ಕಾಲಿಟ್ಟಿದ್ದ ದರ್ಶನ್ ಕುಟುಂಬದೊಂದಿಗೆ ಬರ್ತ್ಡೇ ಸೆಲೆಬ್ರೆಟ್ ಮಾಡಿಕೊಂಡಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅಭಿಮಾನಿಗಳೊಂದಿಗೆ ಬರ್ತ್ಡೇ ಆಚರಣೆ ಮಾಡಿಕೊಳ್ಳದೆ ಇರುವುದಕ್ಕೆ ನಿರ್ಧರಿಸಿದ್ದರು. ಈ ಸಂಬಂಧ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ಕಳುಹಿಸಿದ್ದರು.
ಎಲ್ಲರೂ ಸರಿಯಿದ್ದರೆ ದರ್ಶನ್ ತಮ್ಮ 48ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳಬೇಕಿತ್ತು. ರೇಣುಕಾಸ್ವಾಮಿ ಪ್ರಕರಣ, ಜಾಮೀನು, ಅನಾರೋಗ್ಯ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ಸಂಪೂರ್ಣವಾಗಿ ಗುಣಮುಖರಾಗಿ ಅಭಿಮಾನಿಗಳನ್ನು ಭೇಟಿ ಮಾಡುವ ಆಲೋಚನೆ ಇಟ್ಟುಕೊಂಡಿದ್ದಾರೆ. ಈ ಮಧ್ಯೆ ದರ್ಶನ್ ಬರ್ತ್ಡೇ ವೇಳೆ ಅಮ್ಮನನ್ನು ಅಪ್ಪಿ ನಿಂತಿರುವ ಫೋಟೊವನ್ನು ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ಡೇಯನ್ನು ಅವರ ಕುಟುಂಬ ಹಾಗೂ ಆತ್ಮೀಯರ ಸಮ್ಮುಖದಲ್ಲಿ ಆಚರಣೆ ಮಾಡಲಾಗಿದೆ. ಇದಕ್ಕೆ ದರ್ಶನ್ ಅವರ ಅಮ್ಮ ಮೀನಾ ತೂಗುದೀಪ ಶ್ರೀನಿವಾಸ್ ಕೂಡ ಆಗಮಿಸಿ ಮಗನಿಗೆ ಆಶೀರ್ವಾದ ಮಾಡಿದ್ದಾರೆ. ಈ ವೇಳೆ ಅಮ್ಮನನ್ನು ಅಪ್ಪಿ ಹಿಡಿದು ನಿಂತಿರುವ ಫೋಟೊವನ್ನು ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿತ್ತಿದ್ದಾರೆ. ಈ ಫೋಟೊ ಈಗ ಟ್ರೆಂಡ್ ಆಗುತ್ತಿದೆ.
ಖಾಸಗಿ ಹೋಟೆಲ್ ಒಂದರಲ್ಲಿ ದರ್ಶನ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ ಎನ್ನಲಾಗಿದೆ. ಈ ವೇಳೆ ಅವರ ಆತ್ಮೀಯರು ಹಾಗೂ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿರುವ ದರ್ಶನ್ ಆತ್ಮೀಯರು ಬಂದು ದರ್ಶನ್ಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಹೇಳಿದ್ದಾರೆ ಎನ್ನಲಾಗಿದೆ. ಇದೇ ಸಮಾರಂಭದಲ್ಲಿ ದರ್ಶನ್ ತಾಯಿ ಕೂಡ ಬಂದು ಆಶೀರ್ವಾದ ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರುವುದಕ್ಕೂ ಮುನ್ನ ದರ್ಶನ್ ಅಮ್ಮ ಮೀನಾ ತೂಗುದೀಪ ಶ್ರೀನಿವಾಸ್ ಹಾಗೂ ತಮ್ಮ ದಿನಕರ್ ತೂಗುದೀಪ ಅವರೊಂದಿಗೆ ಯಾವುದೋ ಕಾರಣಕ್ಕೆ ಮುನಿಸಿಕೊಂಡಿದ್ದರು. ಆದರೆ, ಬದಲಾದ ಪರಿಸ್ಥಿತಿಯಲ್ಲೀಗ ಕೋಪವನ್ನೆಲ್ಲ ಮರೆತು ಇಡೀ ಕುಟುಂಬ ಒಂದಾಗಿದೆ. ಒಟ್ಟಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದೆ ಎನ್ನಲಾಗಿದೆ.

ಇನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ಗೆ ಕರ್ನಾಟಕದ ಹೈಕೋರ್ಟ್ನಲ್ಲಿ ರೆಗ್ಯೂಲರ್ ಜಾಮೀನು ಮಂಜೂರಾಗಿದೆ. ಈ ಜಾಮೀನನ್ನು ಪ್ರಶ್ನಿಸಿ ದರ್ಶನ್ ವಿರುದ್ಧ ಕರ್ನಾಟಕದ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅದರ ವಿಚಾರಣೆ ನಡೆಯುತ್ತಿದ್ದು, ದರ್ಶನ್ ಪರ ಸುಪ್ರೀಂ ಕೋರ್ಟ್ನಲ್ಲಿ ದೇಶದ ಜನಪ್ರಿಯ ವಕೀಲರಾಗಿರುವ ಕಪಿಲ್ ಸಿಬಲ್ ವಾದ ಮಾಡಲಿದ್ದಾರೆ ಅನ್ನೋ ಮಾತು ಹೇಳಿ ಬರುತ್ತಿದೆ.
ಹಾಗೇ ದರ್ಶನ್ ಹುಟ್ಟುಹಬ್ಬಕ್ಕೆ ದರ್ಶನ್ ನಟಿಸುತ್ತಿರುವ 'ಡೆವಿಲ್' ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಲಾಗಿತ್ತು. ಈ ಟೀಸರ್ಗೆ ದರ್ಶನ್ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ವರ್ಷವೇ 'ಡೆವಿಲ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಜೈಲಿನಿಂದ ಹೊರ ಬಂದ್ಮೇಲೆ ಸಿನಿಮಾ ಶೂಟಿಂಗ್ ಶುರುವಾಗಬಹುದೆಂಬ ನಿರೀಕ್ಷೆಯಿತ್ತು. ಇನ್ನೂ ಶೂಟಿಂಗ್ ಶುರುವಾಗಿಲ್ಲ. ಹೀಗಾಗಿ ಇದೇ ವರ್ಷ ಈ ಸಿನಿಮಾ ರಿಲೀಸ್ ಆಗುತ್ತಾ? ಇಲ್ವಾ? ಅನ್ನೋ ಗೊಂದಲದಲ್ಲಿ ದರ್ಶನ್ ಫ್ಯಾನ್ ಇರುವುದಂತೂ ಸತ್ಯ.


Click it and Unblock the Notifications











