"ನಿರ್ದೇಶಕನೊಬ್ಬ ರಾತ್ರಿ ನನ್ನ ರೂಮಿನ ಬಾಗಿಲು ಮುರಿಯೋ ಹಾಗೆ ಬಡಿದಿದ್ದ": 'ಶಾಸ್ತ್ರಿ' ನಟಿ ಮಾನ್ಯ
ಎಲ್ಲಕ್ಕಿಂತ ಹೆಚ್ಚಾಗಿ ಮಾನ್ಯ ಕನ್ನಡಿಗರಿಗೆ ಇಷ್ಟ ಆಗುವುದಕ್ಕೆ ಮತ್ತೊಂದು ಕಾರಣವಿದೆ. ತೆಲುಗು ಮೂಲದವರಾದರೂ, ಕನ್ನಡ ಸಿನಿಮಾದಲ್ಲಿ ನಟಿಸುವ ಸಲುವಾಗ ಕನ್ನಡ ಕಲಿತು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮೊದಲ ಕನ್ನಡ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಅವರೇ ಡಬ್ ಮಾಡಿದ್ದರು. ಮಾನ್ಯ ಡಬ್ ಮಾಡಿದ್ದನ್ನು ನೋಡಿ ವಿಷ್ಣುದಾದನೇ ಮೆಚ್ಚುಗೆ ಸೂಚಿಸಿದ್ದನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
ವಿವಾಹವಾಗಿ ಅಮೆರಿಕದಲ್ಲಿ ನೆಲೆಸಿರುವ ನಟಿ ಮಾನ್ಯ ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ತಂದೆಯನ್ನು ಕಳೆದುಕೊಂಡ ಬಳಿಕ ಜೀವನ ಹೇಗಿತ್ತು? ಚಿತ್ರರಂಗದಲ್ಲಿ ಅಮ್ಮನಿಗೆ ಲೈನ್ ಹೊಡೆದಿದ್ದು, ಸಿನಿಮಾ ಮಾಡುವಾಗ ನಿರ್ದೇಶಕನೊಬ್ಬ ಬಾಗಿಲು ಮುರಿದು ಹಾಕುವಂತೆ ಬಡಿದ ಸನ್ನಿವೇಶವನ್ನು ಇದೇ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

ಮಾನ್ಯ ತಂದೆ ಇಂಗ್ಲೆಂಡ್ನಲ್ಲಿ ವೈದ್ಯರಾಗಿದ್ದರು. ಆದರೆ, ಮಾನ್ಯ ಮತ್ತು ತಂಗಿ ಚಿಕ್ಕವರಿರುವಾಗಲೇ ನಿಧನರಾಗಿದ್ದರು. ಆ ಬಳಿಕ ಭಾರತಕ್ಕೆ ಬಂದಿದ್ದ ಕುಟುಂಬ ತುಂಬಾನೇ ಕಷ್ಟ ಅನುಭವಿಸಬೇಕಾಯಿತು. ಹೆಣ್ಣು ಮಕ್ಕಳೇ ಇರುವ ಸಂಸಾರವನ್ನು ಸಮಾಜ ಹೇಗೆ ನೋಡಿತ್ತು ಅನ್ನೋದನ್ನು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
"ಮೊದಲಿಗೆ ಒಂದು ಮನೆಯಲ್ಲಿ ಗಂಡಸು ಇಲ್ಲಾ ಅಂದರೇನೆ ಚೀಪ್ ಆಗಿ ನೋಡುತ್ತಾರೆ. ಇದನ್ನು ಬೇಸರದಿಂದ ಹೇಳುತ್ತೇನೆ. ಇಬ್ಬರು ಹೆಣ್ಣು ಮಕ್ಕಳನ್ನು ಇಟ್ಕೊಂಡು ಜೀವನ ನಡೆಸುವುದು ಕಷ್ಟ. ಅದಕ್ಕೆ ಅಮ್ಮ ಇನ್ನೊಂದು ಮದುವೆ ಮಾಡಿಕೊಂಡಿಲ್ಲ. ಮದುವೆ ಮಾಡಿಕೊಂಡರೆ, ಅವರು ನನ್ನ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೋ ಏನೋ? ಮಕ್ಕಳಿಗೆ ತೊಂದರೆ ಆಗುತ್ತೆ ಅಂತ ಮದುವೆನೇ ಆಗಿಲ್ಲ." ಎಂದು ಶಾಸ್ತ್ರಿ ಸಿನಿಮಾ ನಟಿ ಮಾನ್ಯ ಹೇಳಿಕೊಂಡಿದ್ದಾರೆ.
ಮನೆ ಬಾಡಿಗೆ ಕೇಳುವುದಕ್ಕೆ ಹೋದರೆ ಮಾಲೀಕರು ಕೇಳುತ್ತಿದ್ದ ಪ್ರಶ್ನೆಗಳಿಂದ ಈ ಕುಟುಂಬಕ್ಕೆ ಬೇಸರ ಆಗುತ್ತಿತ್ತು. ಅದಕ್ಕೆ ತಂದೆ ತೀರಿಕೊಂಡಿದ್ದಾರೆ ಅನ್ನೋದನ್ನೇ ಹೇಳಿಕೊಂಡಿರಲಿಲ್ಲ. ಚಿತ್ರರಂಗಕ್ಕೆ ಬಂದ ಮೇಲೂ ತಂದೆ ಲಂಡನ್ನಲ್ಲಿ ಇದ್ದಾರೆ ಅಂತಲೇ ಹೇಳಿಕೊಂಡಿದ್ದರು. ಐದಾರು ವರ್ಷ ಈ ರಹಸ್ಯವನ್ನು ಯಾರ ಬಳಿಯೂ ಬಿಟ್ಟುಕೊಟ್ಟಿರಲಿಲ್ಲ ಅನ್ನೋದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಶೂಟಿಂಗ್ಗೆ ಅಮ್ಮನನ್ನ ಕರೆದುಕೊಂಡು ಹೋದರೆ, ಅಲ್ಲಿ ಅವರ ಅಮ್ಮನಿಗೆ ಲೈನ್ ಹೊಡೆಯುತ್ತಿದ್ದ ಸಂಗತಿಯನ್ನು ಹಂಚಿಕೊಂಡಿದ್ದಾರೆ. "ಶೂಟಿಂಗ್ಗೆ ಎಲ್ಲಾ ಹೋಗಬೇಕಾದಾಗ ಅಮ್ಮ ಜೊತೆಯಲ್ಲಿ ಇರುತ್ತಿದ್ದರು. ಅಮ್ಮ ಜೊತೆಯಲ್ಲಿ ಇದ್ದರೆ ನನಗೆ ಕಂಫರ್ಟೆಬಲ್ ಆಗಿರುತ್ತಿತ್ತು. ಕೆಲವೊಮ್ಮೆ ನಮ್ಮ ಅಮ್ಮನಿಗೆ ಲೈನ್ ಹೊಡೆಯುತ್ತಿದ್ದರು. ನಾನು ನಿನ್ನನ್ನು ನೋಡಿಕೊಳ್ಳಬೇಕಾ? ನೀನು ನನ್ನನ್ನು ನೋಡಿಕೊಳ್ಳುತ್ತೀಯಾ? ಅನ್ನುವ ಸಂದರ್ಭ ಎದುರಾಗಿತ್ತು." ಎಂದು ನಟಿ ಮಾನ್ಯ ಬೇಸರ ಪಟ್ಟುಕೊಂಡಿದ್ದಾರೆ.
ಇನ್ನು ತೆಲುಗು ನಿರ್ದೇಶಕರೊಬ್ಬನ ವರ್ತನೆಯಿಂದ ಬೇಸತ್ತು ಆ ಸಿನಿಮಾದಿಂದಲೇ ಹೊರಬಂದಿದ್ದನ್ನು ರಿವೀಲ್ ಮಾಡಿದ್ದಾರೆ. "ತೆಲುಗಿನ ಒಬ್ಬ ನಿರ್ದೇಶಕ ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದ. ಆ ಸಿನಿಮಾ ಮಾಡಲ್ಲ ಅಂತ ಹೊರಬಂದುಬಿಟ್ಟೆ. ಶೂಟಿಂಗ್ ಕೂಡ ಶುರುವಾಗಿತ್ತು. ಅವರ ವರ್ತನೆ ಎಷ್ಟು ಭಯಾನಕ ಆಗಿತ್ತು ಅಂದರೆ, ತಿರುಪತಿಯಲ್ಲಿ ಶೂಟಿಂಗ್ ಮಾಡುತ್ತಿದ್ವಿ. ರಾತ್ರಿ ಬಂದು ರೂಮಿನ ಬಾಗಿಲು ಮುರಿಯುತ್ತಾನೆ ಅನ್ನೋ ಹಾಗೆ ಮಾಡಿದ್ದ. ಹೀಗೆ ಶೂಟಿಂಗ್ ಮಾಡುವುದು ಬೇಡ ಅಂತ ಆ ಸಿನಿಮಾದಿಂದಲೇ ದೂರ ಬಂದುಬಿಟ್ಟೆ." ಎಂದಿದ್ದಾರೆ.


Click it and Unblock the Notifications











