Navagraha Box Office Day 3: 3ನೇ ದಿನ 'ನವಗ್ರಹ' ಕಲೆಕ್ಷನ್ನಲ್ಲಿ ಏರಿಕೆ; ದರ್ಶನ್ ಫ್ಯಾನ್ಸ್ ದಿಲ್ ಖುಷ್
ದರ್ಶನ್ ಹೊಸ ಸಿನಿಮಾ ಇನ್ನೂ ಒಂದು ವರ್ಷ ರಿಲೀಸ್ ಆಗುವುದು ಅನುಮಾನ. ಈ ಬೆನ್ನಲ್ಲೇ ದರ್ಶನ್ ನಟಿಸಿದ ಸಿನಿಮಾಗಳನ್ನು ಆಗಾಗ ಮರು ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ಅವರದ್ದೇ ನಿರ್ಮಾಣ ಸಂಸ್ಥೆಯಲ್ಲಿ ಸೆಟ್ಟೇರಿದ್ದ ಸಿನಿಮಾ 'ನವಗ್ರಹ' ಕೂಡ ಒಂದು. ತೂಗುದೀಪ ಪ್ರೊಡಕ್ಷನ್ ನಿರ್ಮಿಸಿದ್ದ ಈ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹೊಸ ಟ್ರೆಂಡ್ ಅನ್ನು ಸೃಷ್ಟಿ ಮಾಡಿತ್ತು.
ದಿನಕರ್ ತೂಗುದೀಪ ನಿರ್ದೇಶಿಸಿದ್ದ ಈ ಸಿನಿಮಾ ಕನ್ನಡದ ಮಟ್ಟಿಗೆ ಹೊಸ ಪ್ರಯತ್ನ ಆಗಿತ್ತು. 16 ವರ್ಷಗಳ ಹಿಂದೆನೇ 'ನವಗ್ರಹ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಅದರಲ್ಲೂ ಕನ್ನಡ ಚಿತ್ರರಂಗದ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಿದ್ದು ಅಂದಿನ ಕಾಲಕ್ಕೆ ದೊಡ್ಡ ಮಟ್ಟಕ್ಕೆ ಸದ್ದಾಗಿತ್ತು. ಈಗ ಅದೇ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ದಿನಕರ್ ತೂಗುದೀಪ ಯಾವುದೇ ಕಾರ್ಯಕ್ರಮಕ್ಕೆ ಹೋದರೂ 'ನವಗ್ರಹ 2' ಯಾವಾಗ ಮಾಡುತ್ತೀರ? ಎಂಬ ಪ್ರಶ್ನೆ ಎದುರಾಗುತ್ತಲೇ ಇರುತ್ತೆ. ಇನ್ನೂ ಆ ಕ್ರೇಜ್ ಉಳಿಸಿಕೊಂಡಿರುವ 'ನವಗ್ರಹ' ಸಿನಿಮಾ ರೀ-ರಿಲೀಸ್ ಆಗಿದ್ದು, ಕಳೆದ ಮೂರು ದಿನ ಬಾಕ್ಸಾಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಆಗಿದೆ. ಹಾಗಿದ್ದರೆ, ಮೂರನೇ ದಿನ ಈ ಸಿನಿಮಾದ ಕಲೆಕ್ಷನ್ ಎಷ್ಟು? ಮೂರು ದಿನಗಳ ಒಟ್ಟು ಗಳಿಕೆ ಏನು? ತಿಳಿಯಲು ಮುಂದೆ ಓದಿ.
3ನೇ ದಿನದ ಕಲೆಕ್ಷನ್ ಎಷ್ಟು?
ವೀಕೆಂಡ್ನಲ್ಲಿ 'ನವಗ್ರಹ' ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಹೊಸ ಸಿನಿಮಾಗಳಿಗೆ ಹೋಲಿಸಿದರೆ, ರೀ-ರಿಲೀಸ್ ಆದ ಸಿನಿಮಾ ಮಾಡಿರುವ ಕಲೆಕ್ಷನ್ ಚೆನ್ನಾಗಿದೆ. 3ನೇ ದಿನವೂ ಬಾಕ್ಸಾಫೀಸ್ನಲ್ಲಿ ಮೋಡಿ ಮಾಡುತ್ತಿದ್ದು, ಕಲೆಕ್ಷನ್ ಚಿತ್ರತಂಡಕ್ಕೆ ಸಮಾಧಾನ ತಂದಿದೆ ಎನ್ನಲಾಗಿದೆ. ಹಾಗಿದ್ದರೆ, ಮೂರನೇ ದಿನ (ನವೆಂಬರ್ 11) ಈ ಸಿನಿಮಾ ಸುಮಾರು 17 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿವರೆಗೂ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯ ಹೇಳುತ್ತಿದೆ.

3 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಚಾಲೆಂಜಿಂಗ್ ಸ್ಟಾರ್ ಸಿನಿಮಾ ಮೊದಲ ಕೆಲವೆಡೆ ವಿಶೇಷ ಪ್ರದರ್ಶನವನ್ನು ಕಂಡಿತ್ತು. ಹೀಗಾಗಿ ಮೊದಲ ದಿನ 18 ರಿಂದ 22 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿತ್ತು. ಹಾಗೇ ಎರಡನೇ ದಿನ 15 ರಿಂದ 18 ಲಕ್ಷ ರೂಪಾಯಿ. ಹಾಗೇ ಮೂರನೇ ದಿನ 17 ರಿಂದ 20 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಒಟ್ಟು 50 ಲಕ್ಷದಿಂದ 60 ಲಕ್ಷ ರೂಪಾಯಿವರೆಗೆ ಗಳಿಕೆ ಕಂಡಿದೆ ಅನ್ನೋ ಲೆಕ್ಕ ವಿತರಕರ ವಲಯದಿಂದ ಸಿಕ್ಕಿದೆ.
ಒಂದು ಕೋಟಿ ಕಲೆಕ್ಷನ್ ಮಾಡುತ್ತಾ?
ದರ್ಶನ್ ವೃತ್ತಿ ಬದುಕಿನ ವಿಶೇಷ ಸಿನಿಮಾ 'ನವಗ್ರಹ' ಅನ್ನುವುದರಲ್ಲಿ ಎರಡು ಮಾತಿಲ್ಲ. ಮಾಸ್ಗೆ ಮಾಸ್.. ಕ್ಲಾಸ್ಗೆ ಕ್ಲಾಸ್. ಎರಡೂ ವರ್ಗದ ಸಿನಿಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಮೊದಲ ಮೂರು ದಿನ 50 ಲಕ್ಷ ರೂಪಾಯಿ ಕಲೆ ಹಾಕಿದ್ದು, ಇನ್ನು ಉಳಿದ ಸಿನಿಮಾಗಳಲ್ಲಿ 50 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದರೆ, ಬಾಕ್ಸಾಫೀಸ್ನಲ್ಲಿ ಒಂದೊಳ್ಳೆ ಮೈಲಿಗಲ್ಲು ಸೃಷ್ಟಿಸಿದಂತೆ ಆಗುತ್ತೆ.
ಸಂಕಷ್ಟದಿಂದ ಹೊರ ಬರುತ್ತಾರಾ?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದು, ಹೊಸ ಸಿನಿಮಾ ಸದ್ಯ ರಿಲೀಸ್ ಆಗುವುದು ಅನುಮಾನ. ಇನ್ನೂ ಒಂದು ವರ್ಷ ದರ್ಶನ್ ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ? ಆದರೆ, ಇದೂವರೆಗೆ ದರ್ಶನ ನಟಿಸಿದ ಸೂಪರ್ ಹಿಟ್ ಸಿನಿಮಾಗಳು ಆಗಾಗ ರಿಲೀಸ್ ಆಗಬಹುದು. ಅಂದ್ಹಾಗೆ ಈ ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ್ದು, ಚಿತ್ರತಂಡ ಇನ್ನೂ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ.


Click it and Unblock the Notifications











