ದರ್ಶನ್, ಕಿಚ್ಚ ಪ್ರಚಾರ: ಗೆದ್ದ,ಸೋತ ಅಭ್ಯರ್ಥಿಗಳು
ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ದರ್ಶನ್ ತೂಗುದೀಪ್ ಒಂದು ಕಡೆಯಾದರೆ, ಬೆಳ್ಳಿತೆರೆ ಮತ್ತು ಕಿರುತೆರೆ ಎರಡರಲ್ಲೂ ಮಿಂಚುತ್ತಿರುವ ಕಿಚ್ಚ ಸುದೀಪ್ ಒಂದು ಕಡೆ. ಇಬ್ಬರೂ ತಮ್ಮ ಸಿನಿಮಾ ಸಹುದ್ಯೋಗಿಗಳು ಮತ್ತು ಆಪ್ತರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದರು.
ಇನ್ನೇನು ಜನಾದೇಶ ಪಡೆದು ಅಧಿಕಾರಕ್ಕೇರುವ ಹೊಸ್ತಿಲಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ವೀರಣ್ಣ ಮತ್ತಿಕಟ್ಟೆ ನೀಡಿದ ಎಚ್ಚರಿಕೆಗೂ ಸೊಪ್ಪು ಹಾಕದೇ ದರ್ಶನ್ ಜಾತ್ಯತೀತವಾಗಿ ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು.
ಸ್ಟಾರ್ ಪ್ರಚಾರಕ ಪಟ್ಟಿ ತಯಾರಿಸುವಾಗ ಅನುಮತಿ ಪಡೆಯದೇ ನನ್ನ ಹೆಸರನ್ನು ಸೇರಿಸಿದ್ದು ನನ್ನ ತಪ್ಪಲ್ಲ. ಅವರ ಎಚ್ಚರಿಕೆಗೆ ನಾನು ತಲೆಕೆಡಿಸಿ ಕೊಳ್ಳುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿ ದರ್ಶನ ಸಡ್ಡು ಹೊಡೆದಿದ್ದರು.
ಇನ್ನು ಸುದೀಪ್ ಕೂಡಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಅಭ್ಯರ್ಥಿಗಳ ಪರವಾಗಿ ಪಾದಯಾತ್ರೆ ನಡೆಸಿದರು. ದರ್ಶನ್ ಮತ್ತು ಕಿಚ್ಚ ಸುದೀಪ್ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ನಡೆಸಿದ ಪ್ರಚಾರದಲ್ಲಿ ಗೆದ್ದವರು ಮತ್ತು ಸೋತವರ ಪಟ್ಟಿ ಸ್ಲಡಿನಲ್ಲಿ..

ರೆಬೆಲ್ ಸ್ಟಾರ್ ಅಂಬರೀಶ್
ದರ್ಶನ್, ಸುದೀಪ್ ಸಹಿತ ಸ್ಯಾಂಡಲ್ ವುಡ್ದಿನ ದೊಡ್ಡ ದಂಡೇ ಅಂಬರೀಶ್ ಪರವಾಗಿ ಪ್ರಚಾರ ನಡೆಸಿತ್ತು. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಎಂ ಎಚ್ ಅಂಬರೀಶ್ ತನ್ನ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಎಂ ಶ್ರೀನಿವಾಸ್ ವಿರುದ್ದ 42937 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು.

ಆನಂದ್ ಬಾಲಕೃಷ್ಣ ಅಪ್ಪುಗೋಳ್
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕರಾಗಿದ್ದ ಅಪ್ಪುಗೋಳ್ ಪರ ದರ್ಶನ್ ಪ್ರಚಾರ ನಡೆಸಿದ್ದರು. ಕಿತ್ತೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಪ್ಪುಗೋಳ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟು ಪರಾಭವಗೊಂಡರು.

ಅರವಿಂದ ಲಿಂಬಾವಳಿ
ಬೆಂಗಳೂರು ಮಹದೇವಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಿಂಬಾವಳಿ ಪರ ದರ್ಶನ್ ಭರ್ಜರಿ ರೋಡ್ ಶೋ ನಡೆಸಿದ್ದರು. ಲಿಂಬಾವಳಿ ಈ ಕ್ಷೇತ್ರದಲ್ಲಿ 6149 ಮತಗಳ ಅಂತರದಿಂದ ಗೆದ್ದು ಆಯ್ಕೆಯಾಗಿದ್ದಾರೆ.

ಡಾ. ವಿನಯ್ ಕುಲ್ಕರ್ಣಿ
ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ವಿನಯ್ ಕುಲ್ಕರ್ಣಿ ಪರವಾಗಿ ದರ್ಶನ್ ಪ್ರಚಾರ ನಡೆಸಿದ್ದರು. ವಿನಯ್ ಕ್ಷೇತ್ರದಲ್ಲಿ 18320 ಮತಗಳ ಅಂತರದಿಂದ ಜಯಗಳಿಸಿದ್ದರು.

ಅಶೋಕ್ ಖೇಣಿ
ನೈಸ್ ಮಾಲೀಕ, ಚಿತ್ರ ನಿರ್ಮಾಪಕ ಅಶೋಕ್ ಖೇಣಿ ಪರವಾಗಿ ಸುದೀಪ್ ಪ್ರಚಾರ ನಡೆಸಿದ್ದರು. ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಖೇಣಿ 15788 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಆರ್ ಅಶೋಕ್
ಉಪ ಮುಖ್ಯಮಂತ್ರಿ ಆರ್ ಅಶೋಕ್ ವೆಬ್ ಸೈಟ್ ಉಧ್ಗಾಟಿಸುವ ಮೂಲಕ ಕಿಚ್ಚ ಸುದೀಪ್ ಪ್ರಚಾರದಲ್ಲಿ ಭಾಗವಹಿಸಿದ್ದರು. ಅಶೋಕ್ ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಪದ್ಮನಾಭನಗರ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿ ವಿರುದ್ದ 20123 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.


Click it and Unblock the Notifications











