ಐಎಫ್ಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್
ವಿಭಿನ್ನ ಬಗೆಯ ಪಾತ್ರಗಳಿಗೆ ಹೆಚ್ಚು ತೆರೆದುಕೊಳ್ಳುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಐತಿಹಾಸಿಕ 'ವೀರ ಮದಕರಿ ನಾಯಕ'ನ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ಸಂಗತಿ. ಈ ಚಿತ್ರ ನಿರ್ದೇಶಿಸುತ್ತಿರುವ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ದರ್ಶನ್ ಮತ್ತೊಂದು ಚಿತ್ರ ಮಾಡಲಿದ್ದಾರೆ.
ದರ್ಶನ್ ಅವರ 'ರಾಬರ್ಟ್' ಚಿತ್ರದ ಬಹುನಿರೀಕ್ಷೆ ಮೂಡಿಸಿದೆ. ಅದರ ಬಿಡುಗಡೆಯ ಬಳಿಕ 'ವೀರ ಮದಕರಿ ನಾಯಕ' ಬಿಡುಗಡೆಯಾಗಲಿದೆ. ಇನ್ನೂ ಚಿತ್ರೀಕರಣ ಬಾಕಿ ಇರುವುದರಿಂದ ಹಾಗೂ ಐತಿಹಾಸಿಕ ಸಿನಿಮಾಕ್ಕೆ ಹೆಚ್ಚಿನ ಶ್ರಮ ಬೇಕಿರುವುದರಿಂದ ಇದು ತೆರೆ ಕಾಣುವುದು ತಡವಾಗಬಹುದು. ಅಷ್ಟರೊಳಗೇ ದರ್ಶನ್ ಮತ್ತು ರಾಜೇಂದ್ರ ಸಿಂಗ್ ಬಾಬು ಜೋಡಿ ಮತ್ತೊಂದು ವಿಭಿನ್ನ ಚಿತ್ರಕ್ಕೆ ಮುಂದಾಗಿದೆ.

ಐಎಫ್ಎಸ್ ಅಧಿಕಾರಿ
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಚಿತ್ರದಲ್ಲಿ ದರ್ಶನ್, ಐಎಫ್ಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. 'ನಾಗರಹೊಳೆ', 'ಸಿಂಹದಮರಿ ಸೈನ್ಯ'ದಂತಹ ಅರಣ್ಯಕ್ಕೆ ಸಂಬಂಧಿಸಿದ ವಸ್ತುಗಳ ಸಿನಿಮಾ ಮಾಡಿದ್ದ ರಾಜೇಂದ್ರ ಸಿಂಗ್ ಬಾಬು, ಸುದೀರ್ಘ ಸಮಯದ ಬಳಿಕ 'ಗಂಧದಗುಡಿ'ಯಂತಹ ಪರಿಪೂರ್ಣ ಅರಣ್ಯ ಕಥಾನಕವೊಂದನ್ನು ಸಿನಿಮಾ ಮಾಡಲು ಬಯಸಿದ್ದಾರೆ.

ಗಂಧದ ಗುಡಿಯಲ್ಲಿ ದರ್ಶನ್
ವಿಶೇಷವೆಂದರೆ ಈ ಚಿತ್ರಕ್ಕೆ ಅವರು 'ಗಂಧದ ಗುಡಿ' ಹೆಸರು ಇಡಲು ತೀರ್ಮಾನಿಸಿದ್ದಾರೆ. ಅರಣ್ಯ ಮತ್ತು ವನ್ಯಜೀವಿಗಳ ಕುರಿತಂತೆ 'ಗಂಧದ ಗುಡಿ'ಯ ಎರಡು ಭಾಗಗಳು ಬಂದಿದ್ದವು. ಮೊದಲನೆಯ ಭಾಗದಲ್ಲಿ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ನಟಿಸಿದ್ದರು. ಎರಡನೆಯ ಭಾಗದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಹೊಸ ಚಿತ್ರ 'ಅಂತರರಾಷ್ಟ್ರೀಯ ಗಂಧದ ಗುಡಿ'ಯಾಗಿರಲಿದೆ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿಕೊಂಡಿದ್ದಾರೆ.

ಬೇಟೆಯ ಕುರಿತ ಕಥೆ
ಆಫ್ರಿಕಾ ಖಂಡದ ತಾಂಜೇನಿಯಾದ ಅರಣ್ಯದಲ್ಲಿನ ಬೇಟೆಯ ಹಾವಳಿಗಳ ಕುರಿತಾದ ಪುಸ್ತಕಗಳನ್ನು ಓದುವಾಗ ಅವರಿಗೆ ಇಂತಹ ವಸ್ತು ಇಟ್ಟುಕೊಂಡು ಸಿನಿಮಾ ಮಾಡುವ ಆಲೋಚನೆ ಮೂಡಿದೆ. ಈ ಹಿಂದೆಯೂ ಕಾಡಿನ ಕುರಿತು ಸಿನಿಮಾಗಳನ್ನು ಮಾಡಿದ್ದರಿಂದ ಅವರಿಗೆ ಇದು ಸಾಧ್ಯ ಎನಿಸಿದೆ. ಕನ್ನಡದ ಖ್ಯಾತ ಲೇಖಕ ಕೆಎನ್ ಗಣೇಶಯ್ಯ ಅವರ ಬರಹಗಳೂ ಅವರಿಗೆ ಸ್ಫೂರ್ತಿಯಾಗಿದೆ.

ಆಫ್ರಿಕಾದ ಕಾಡಲ್ಲಿ ಶೂಟಿಂಗ್
ಇದು ಅಂತರಾಷ್ಟ್ರೀಯ ಗಂಧದ ಗುಡಿಯಾಗಲು ಕಾರಣ ಆಫ್ರಿಕಾ, ಹಾಂಕಾಂಗ್ ಮತ್ತು ಲಂಡನ್ ನಡುವೆ ಕಥೆ ಸಾಗಲಿದೆ. ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ. ದರ್ಶನ್ ನಾಯಕರಾಗಿರುವುದರಿಂದ ಸಿನಿಮಾ ಅಭಿಮಾನಿಗಳಿಗೆ ಭರಪೂರ ಆಕ್ಷನ್ ಮನರಂಜನೆ ಸಿಗುವುದು ಖಾತರಿಯಾಗಿದೆ. ಐಎಫ್ಎಸ್ ಅಧಿಕಾರಿಯ ಗೆಟಪ್ನಲ್ಲಿ ದರ್ಶನ್ ನಟಿಸುವುದು ಕುತೂಹಲ ಮೂಡಿಸಿದೆ.


Click it and Unblock the Notifications











