ದರ್ಶನ್ ಬೆನ್ನು ಮೂಳೆ ಜರುಗಿದೆ.. ಶಸ್ತ್ರ ಚಿಕಿತ್ಸೆ ಸಾಧ್ಯವಿಲ್ಲ: ಮೈಸೂರಿನ ಆಸ್ಪತ್ರೆ ವೈದ್ಯರ ವರದಿಯಲ್ಲೇನಿದೆ?
ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಗ್ಯೂಲರ್ ಬೇಲ್ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಜೈಲು ಸೇರಿದ್ದ ನಟನಿಗೆ ರಿಲೀಫ್ ಸಿಕ್ಕಿದೆ. ಆದರೆ, ಅವರ ಬೆನ್ನು ನೋವಿಗೆ ಮಾತ್ರ ಇನ್ನೂ ಪರಿಹಾರ ಸಿಕ್ಕಂತೆ ಕಾಣುತ್ತಿಲ್ಲ. ಇತ್ತೀಚೆಗೆ ಮತ್ತೆ ಬೆನ್ನು ನೋವಿಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ತೆರಳಿದ್ದ ದರ್ಶನ್ಗೆ ವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿದ ಬೆನ್ನಲ್ಲೇ ದರ್ಶನ್ ವಿಶೇಷ ಅನುಮತಿಯನ್ನು ಪಡೆದು ಮೈಸೂರಿಗೆ ತೆರಳಿದ್ದರು. ಅಲ್ಲಿರುವ ತಮ್ಮ ಫಾರ್ಮ್ ಹೌಸ್ನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಇದೇ ವೇಳೆ ಬೆನ್ನು ನೋವಿನ ಹಿನ್ನೆಲೆಯಲ್ಲಿ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಅವರಿಗೆ ಮತ್ತೆ ವೈದ್ಯಕೀಯ ತಪಾಸಣೆಯನ್ನು ಮಾಡಲಾಗಿದೆ ಎನ್ನಲಾಗಿದೆ.

ಬಳ್ಳಾರಿ ಜೈಲಿನಲ್ಲಿ ಇರುವಾಗ ದರ್ಶನ್ಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಅಲ್ಲದೆ ಕಾಲಿಗೂ ಸಮಸ್ಯೆಯಾಗಿದ್ದು, ಕುಂಟುತ್ತಾ ನಡೆಯುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ಗೆ ಬೆನ್ನು ನೋವು ಯಾಕೆ ಕಾಣಿಸಿಕೊಂಡಿದೆ? ಸರ್ಜರಿ ಮಾಡಬೇಕಾ? ಅನ್ನುವ ಬಗ್ಗೆ ದರ್ಶನ್ಗೆ ವೈದ್ಯರು ಸಲಹೆ ನೀಡಿದ್ದಾರೆ. ಆ ಡಿಟೈಲ್ಸ್ ಇಲ್ಲಿದೆ.
ದರ್ಶನ್ ಮಂಗಳವಾರ (ಡಿಸೆಂಬರ್ 24) ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಆ ಬಳಿಕ ವೈದ್ಯರು ಈ ಪರಿಸ್ಥಿತಿಯಲ್ಲಿ ಸರ್ಜರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ದರ್ಶನ್ ಬೆನ್ನು ಮೂಳೆ ಸ್ಪಲ್ಪ ಜರುಗಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಹಾಗೇ ಅವರ ದೇಹದ ನರಗಳು ಕೂಡ ಒತ್ತಿಕೊಂಡಿವೆ. ಹೀಗಾಗಿ ಕಾಲು ನೋವು ಕೂಡ ಹೆಚ್ಚಾಗಿದ್ದಾಗಿ ವೈದ್ಯರು ಹೇಳಿರುವ ಬಗ್ಗೆ ವರದಿಯಾಗಿದೆ.
ಈ ಎರಡು ಸಮಸ್ಯೆಗಳು ಹೆಚ್ಚಾಗಿದ್ದರಿಂದ ದರ್ಶನ್ಗೆ ಈ ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ದರ್ಶನ್ಗೆ ಫಿಸಿಯೋಥೆರಪಿ ಹಾಗೂ ಕೆಲವು ಔಷಧಿಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದು, ಇದರಿಂದಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ವೈದ್ಯರು ಸಲಹೆಯನ್ನು ನೀಡಿದ್ದಾರೆ ಎಂದು ಸುದ್ದಿಯಾಗಿವೆ.
ಫಿಸಿಯೋಥೆರಪಿ, ಹಾಗೂ ಔಷಧಿಗಳಿಂದಲೂ ಸಮಸ್ಯೆ ಬಗೆ ಹರಿಯದೇ ಹೋದರೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಬಹುದೆಂದು ವೈದ್ಯರು ಹೇಳಿದ್ದಾರೆ. ಹಾಗೆಯೇ ಪ್ರತಿದಿನ ವ್ಯಾಯಾಮ ಮಾಡುವಂತೆ ಸಲಹೆಯನ್ನು ನೀಡಿದ್ದಾರೆ. ಇದರೊಂದಿಗೆ ಸ್ಕ್ಯಾನಿಂಗ್ ಮಷಿನ್ ಇಲ್ಲದ ಕಾರಣ, ಬೆಂಗಳೂರಿನಲ್ಲಿ ಮಾಡಿಸಿದ ವರದಿಯನ್ನು ಆಧರಿಸಿ ವೈದ್ಯರು ಸಲಹೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ರೆಗ್ಯೂಲರ್ ಜಾಮೀನು ಪಡೆದ ಬಳಿಕ ದರ್ಶನ್ ಮತ್ತೆ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗುತ್ತಾರೆ ಅನ್ನೋ ಸುದ್ದಿ ಓಡಾಡಿತ್ತು. ಅದಕ್ಕೆ ಪೂರಕವಾಗಿ ದರ್ಶನ್ ಸಹೋದರ ದಿನಕರ್ ತೂಗುದೀಪ ಕೂಡ ಇನ್ನೂ ಒಂದೂವರೆ ತಿಂಗಳು ಹಿಡಿಯಬಹುದೆಂದು ಹೇಳಿದ್ದರು. ಸದ್ಯ ವೈದ್ಯರು ಶಸ್ತ್ರ ಚಿಕಿತ್ಸೆ ಬೇಡವೆಂದು ಹೇಳಿದ್ದರಿಂದ ಮುಂದಿನ ತಿಂಗಳು 'ಡೆವಿಲ್' ಸಿನಿಮಾದ ಶೂಟಿಂಗ್ನಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಆದರೆ, ದರ್ಶನ್ ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕವೇ ಸಿನಿಮಾ ಶೂಟಿಂಗ್ ಆರಂಭ ಆಗುವ ಸಾಧ್ಯತೆಯಿದೆ.


Click it and Unblock the Notifications











