ರಾಮನಗರ ಚಾಮುಂಡಿ ಉತ್ಸವದಲ್ಲಿ ಡಿ ಬಾಸ್ ಘೋಷಣೆ: ಕುತೂಹಲ ಮೂಡಿಸಿದ್ದೇಕೆ ಡಿಕೆ ಶಿವಕುಮಾರ್ ಹೇಳಿಕೆ?
ರೇಣುಕಾಸ್ವಾಮಿ ಹತ್ಯೆ ಪ್ರಕರಣ ದರ್ಶನ್ಗೆ ಸಂಕಷ್ಟ ತಂದೊಡ್ಡಿದೆ. ಜೈಲಿನಿಂದ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗುವಂತೆ ಕಾಣುತ್ತಿಲ್ಲ. ಅದೇ ಇನ್ನೊಂದು ಕಡೆ ಇವರನ್ನೇ ನಂಬಿದ್ದ ಸಿನಿಮಾ ಮಂದಿನೂ ಕಂಗಾಲಾಗಿದ್ದಾರೆ. ಈ ಮಧ್ಯೆ ದರ್ಶನ್ರನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬರುವುದಕ್ಕೆ ಹಲವು ಕಡೆಯಿಂದ ಶತಪ್ರಯತ್ನ ನಡೆಯುತ್ತಿದೆ. ಅದಕ್ಕೆ ಸರಿಯಾಗಿ ರಾಮನಗರದ ಚಾಮುಂಡಿ ಉತ್ಸವದಲ್ಲಿ ಡಿಕೆ ಶಿವಕುಮಾರ್ ಕೊಟ್ಟ ಹೇಳಿಕೆ ಅಚ್ಚರಿ ಮೂಡಿಸಿದೆ.
ನಿನ್ನೆ (ಜುಲೈ 23) ರಾಮನಗರದಲ್ಲಿ ಅದ್ಧೂರಿಯಾಗಿ ಚಾಮುಂಡಿ ಉತ್ಸವವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರು ಆಗಮಿಸಿದ್ದರು. ಇದೇ ವೇಳೆ ಮುಖ್ಯ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಆಗಮಿಸಿದ್ದರು. ವೇದಿಕೆ ಮೇಲೆ ಡಿಕೆಶಿ ಮಾತು ಆರಂಭಿಸುತ್ತಿದ್ದಂತೆ ಅಭಿಮಾನಿಗಳು ಡಿ ಬಾಸ್ ಅಂತ ಘೋಷಣೆ ಹಾಕುವುದಕ್ಕೆ ಶುರು ಮಾಡಿದ್ದರು.

ಫ್ಯಾನ್ಸ್ ಡಿ ಬಾಸ್ ಅಂತ ಕೂಗುವುದಕ್ಕೆ ಶುರು ಮಾಡುತ್ತಿದ್ದಂತೆ ಡಿ ಕೆ ಶಿವಕುಮಾರ್ "ನಾಳೆ ಬೆಳಗ್ಗೆ" ಅನ್ನೋ ಸಂದೇಶವನ್ನು ನೀಡಿದ್ದರು. ಆದರೂ, ದರ್ಶನ್ ಫ್ಯಾನ್ಸ್ ನಿಲ್ಲಿಸುವ ಹಾಗೆ ಕಾಣಿಸಲಿಲ್ಲ. ಹೀಗಾಗಿ ವೇದಿಕೆ ಮೇಲೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಾಳೆ ಅಂದರೆ, ಇಂದು (ಜುಲೈ 24) ಭೇಟಿ ಮಾಡುವುದಕ್ಕೆ ಸಮಯ ಕೇಳಿದ್ದಾರೆ. ನಾಳೆ ಅವರೊಂದಿಗೆ ಮಾತಾಡುತ್ತೇನೆ ಎಂದು ಹೇಳಿದ್ದರು.
ಇಂದು (ಜುಲೈ 24) ಡಿಕೆ ಶಿವಕುಮಾರ್ ಅವರನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಭೇಟಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ವಿಜಯಲಕ್ಷ್ಮಿ ದರ್ಶನ್ ಭೇಟಿ ಮಾಡುತ್ತಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ದರ್ಶನ್ ಬಿಡುಗಡೆಗೆ ಸಂಬಂಧಿಸಿದ ವಿಚಾರಕ್ಕಾಗಿ ಭೇಟಿ ಮಾಡುತ್ತಿದ್ದಾರಾ? ಯಾವ ಕಾರಣಕ್ಕೆ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.
ರಾಮನಗರದ ಚಾಮುಂಡಿ ಉತ್ಸವದ ವೇದಿಕೆ ಮೇಲೆ ದರ್ಶನ್ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆ ಅಚ್ಚರಿ ಮೂಡಿಸಿದೆ. "ಯುವಕರು ಡಿ ಬಾಸ್ ಬಗ್ಗೆ ಕೇಳುತ್ತಿದ್ದಾರೆ. ಅವರ ಧರ್ಮಪತ್ನಿ ನನ್ನನ್ನು ಭೇಟಿ ಮಾಡುವುದಕ್ಕೆ ಟೈಮ್ ಕೇಳಿದ್ದಾರೆ. ನಾಳೆ ಬೆಳಗ್ಗೆ ಅವರಿಗೆ ಟೈಮ್ ಅನ್ನು ಕೊಟ್ಟಿದ್ದೇನೆ. ನಾನು ಮಾತಾಡುತ್ತೇನೆ. ಏನಾದರೂ ಅನ್ಯಾಯ ಆಗಿದ್ದರೆ, ಸರಿ ಪಡಿಸಲಿಕ್ಕೆ ಖಂಡಿತವಾಗಿಯೂ ಪ್ರಯತ್ನವನ್ನು ಮಾಡುತ್ತೇವೆ. ಆದರೆ, ನಾವು ಕೂಡ ಕಾನೂನಿಗೆ ಗೌರವವನ್ನು ಕೊಡಬೇಕು. ಈ ದೇಶದ ಕಾನೂನು, ಈ ನೆಲದ ಕಾನೂನಿಗೆ ಗೌರವವನ್ನು ಕೊಡಬೇಕು. ಅನ್ಯಾಯ ಯಾರಿಗೆ ಆಗಿದ್ದರೂ, ನ್ಯಾಯ ವದಗಿಸಿಕೊಡುವ ಕೆಲಸವನ್ನು ಮಾಡೋಣ" ಎಂದು ಡಿಕೆ ಶಿವಕುಮಾರ್ ಹೇಳಿದ್ದರು.

ಡಿಕೆ ಶಿವಕುಮಾರ್ ಈ ಹೇಳಿಕೆ ಬಳಿಕ ದರ್ಶನ್ ಅಭಿಮಾನಿಗಳು ಅಲರ್ಟ್ ಆಗಿದ್ದಾರೆ. ಅದೇ ಇನ್ನೊಂದು ಕಡೆ ಡಿಕೆಶಿಯನ್ನು ವಿಜಯಲಕ್ಷ್ಮಿ ಭೇಟಿ ಮಾಡಿದ ಬಳಿಕ ದರ್ಶನ್ ಬಿಡುಗಡೆ ಸುಗಮ ಆಗಬಹುದಾ? ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದು ಕಡೆ ದರ್ಶನ್ ಮೇಲಿನ ಆರೋಪ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುವಷ್ಟು ಸ್ಟ್ರಾಂಗ್ ಆಗಿದೆಯಾ? ಅನ್ನೋ ಪ್ರಶ್ನೆ ಕೂಡ ಮೂಡಿದೆ. ಸದ್ಯ ಈಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ದಿನಕರ್ ಭೇಟಿ ಮಾಡಿದ್ದಾರೆ.


Click it and Unblock the Notifications











