ಅರಸಿಕೆರೆಯಿಂದ ಸ್ಪರ್ಧಿಸುತ್ತಾರಾ ಧನಂಜಯ್? ಗಾಳಿಯಲ್ಲಿ ಹರಡಿದ ಸುದ್ದಿಗೆ ಡಾಲಿ ಹೇಳಿದ್ದೇನು?
ಸ್ಯಾಂಡಲ್ವುಡ್ನಲ್ಲಿ ಡಾಲಿ ಧನಂಜಯ್ಗೆ ಈಗ ಯಶಸ್ಸು ಸಿಗುತ್ತಿದೆ. ತಾವೇ ನಿರ್ಮಿಸಿದ್ದ 'ಬಡವ ರಾಸ್ಕಲ್' ಬಾಕ್ಸಾಫೀಸ್ನಲ್ಲಿ ಗೆಲುವಿನ ನಗೆ ಬೀರಿದೆ. ಬಿದ್ದು, ಎದ್ದು ಗೆದ್ದು ತನ್ನನೇ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿರುವ ಧನಂಜಯ್ ರಾಜಕೀಯ ಅಖಾಡಕ್ಕೆ ಇಳಿಯುತ್ತಿದ್ದಾರೆ ಅನ್ನುವ ಸುದ್ಧಿ ಎಲ್ಲೆಡೆ ಹರಿದಾಡುತ್ತಿದೆ.
ಧನಂಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದ್ದಂತೆ ಅಭಿಮಾನಿಗಳಿಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಧನಂಜಯ್ ದಿಢೀರನೇ ರಾಜಕೀಯ ಪ್ರವೇಶ ಮಾಡುತ್ತಿರುವುದೇಕೆ? ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ? ಸಿನಿಮಾಗೆ ಗುಡ್ ಬೈ ಹೇಳುತ್ತಾರಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಎದುರಾಗಿದ್ದವು. ಆದರೆ, ಸ್ವತ: ಡಾಲಿ ಧನಂಜಯ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜನ ಸೇವೆ ಮಾಡುತ್ತಾರಾ ಧನಂಜಯ್?
ಡಾಲಿ ಧನಂಜಯ್ ಸ್ಯಾಂಡಲ್ವುಡ್ ಅಷ್ಟೇ ಅಲ್ಲ, ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ತಮ್ಮ ಅಭಿನಯದಿಂದಲೇ ದಕ್ಷಿಣ ಭಾರತದ ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಜೊತೆ 'ಪುಷ್ಪ' ಸಿನಿಮಾದಲ್ಲಿ ನಟಿಸಿದ್ದರು. ಧನಂಜಯ್ ಪಾತ್ರಕ್ಕೆ ಪ್ರೇಕ್ಷಕರು ಮೆಚ್ಚಿ ಭೇಷ್ ಅಂದಿದ್ದಾರೆ. ಸಿನಿಮಾಗಳಲ್ಲಿ ಪುರುಸೊತ್ತು ಇಲ್ಲದೆ ದುಡಿಯುತ್ತಿರುವ ಡಾಲಿ ರಾಜಕೀಯಕ್ಕೆ ಧುಮುಕುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಅಸಲಿಗೆ ಧನಂಜಯ್ ರಾಜಕೀಯ ಪ್ರವೇಶ ಮಾಡುತ್ತಾರಾ? ಇಲ್ವಾ? ಈ ಗಾಳಿ ಸುದ್ದಿ ಬಗ್ಗೆ ಸ್ವತ: ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ಎಂಟ್ರಿ ಬಗ್ಗೆ ಧನಂಜಯ್ ಹೇಳಿದ್ದೇನು?
ಕಳೆದ ಕೆಲವು ದಿನಗಳಿಂದ ಹರಡುತ್ತಿರುವ ರಾಜಕೀಯ ಪ್ರವೇಶದ ಸುದ್ದಿಯನ್ನು ಧನಂಜಯ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಟ್ಟಟರ್ನಲ್ಲಿ ರಾಜಕೀಯ ಎಂಟ್ರಿ ಬಗ್ಗೆ ಸ್ಪಷ್ಣನೆ ನೀಡಿದ್ದಾರೆ. "ನಾನು ಶೂಟಿಂಗ್ನಲ್ಲಿ ಎಷ್ಟು ಮುಳುಗಿ ಹೋಗಿದ್ದೀನಿ ಅಂದ್ರೆ, ನನಗೆ ಈ ತರ ಒಂದು ನ್ಯೂಸ್ ಆಗಿದೆ ಅನ್ನೋದೇ ಗೊತ್ತಾಗಿರಲಿಲ್ಲ. ಈ ವಿಷಯಕ್ಕೂ ನನಗೂ, ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕಲಾವಿದನಾಗಿ ಜನ ಸ್ವೀಕರಿಸಿ ಅಪ್ಪಿದ್ದಾರೆ. ನೂರಾರು ಪಾತ್ರಗಳ ಮೂಲಕ ಅಭಿಮಾನಿ ದೇವರುಗಳ ರಂಜಿಸುವ ಕೆಲಸವಷ್ಟೆ ನನ್ನದು." ಎಂದು ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ.

ಧನಂಜಯ್ ರಾಜಕೀಯ ಎಂಟ್ರಿ ಹಬ್ಬಿದ್ದೇಗೆ?
ಸ್ಯಾಂಡಲ್ವುಡ್ ಡಾಲಿ ಧನಂಜಯ್ ಅರಸೀಕೆರೆ ಕ್ಷೇತ್ರದಿಂದ ರಾಜಕೀಯ ಅಖಾಡಕ್ಕೆ ಇಳಿಯುತ್ತಿದ್ದಾರೆ. ಜೆಡಿಎಸ್ ಪಕ್ಷದಿಂದ ಅರಸೀಕೆರೆ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯುತ್ತಾರೆ ಎಂಬುವ ಸುದ್ದಿ ಹರಿದಾಡಿತ್ತು. ಸದ್ಯ ಅರಸೀಕೆರೆ ಕ್ಷೇತ್ರದ ಎಂಎಲ್ಸಿ ಆಗಿರುವ ಶಿವಲಿಂಗೇಗೌಡರ ಬದಲು ಧನಂಜಯ್ ಚುನಾವಣೆಗೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆ ಎಲ್ಲಾ ಊಹಾಪೋಹಗಳಿಗೆ ಧನಂಜಯ್ ತೆರೆ ಎಳೆದಿದ್ದಾರೆ.

ಜೆಡಿಎಸ್ ತೊರೆಯಲಿರುವ ಶಿವಲಿಂಗೇಗೌಡ?
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಜೊತೆ ಅರಸೀಕೆರೆ ಎಂಎಲ್ಸಿ ಶಿವಲಿಂಗೇಗೌಡ ಮನಸ್ತಾಪವಿದೆ. ಅತೀ ಶೀಘ್ರದಲ್ಲಿಯೇ ಜೆಡಿಎಸ್ ಪಕ್ಷವನ್ನು ಶಿವಲಿಂಗೇಗೌಡ ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕಾರಣಕ್ಕೆ ಶಿವಲಿಂಗೇಗೌಡರ ಬದಲಿಗೆ ಡಾಲಿ ಧನಂಜಯ್ ಅಖಾಡಕ್ಕಿಳಿಯುತ್ತಿದ್ದಾರೆ. ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ ಎಂಬ ಸುದ್ದಿ ಹರಿದಾಡಿತ್ತು.


Click it and Unblock the Notifications











