ಮಗು ಬದುಕಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ ಆಕ್ಷನ್ ಪ್ರಿನ್ಸ್ ; ಧ್ರುವ ಸರ್ಜಾ ನೆರವಿಗೆ ಮೆಚ್ಚುಗೆ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅದೆಷ್ಟೇ ಬ್ಯುಸಿಯಾಗಿದ್ದರೂ ಅಭಿಮಾನಿಗಳಿಗಾಗಿ ಸಮಯವನ್ನು ಮೀಸಲಿಡುತ್ತಾರೆ. ತಮ್ಮ ಬಿಡುವಿನ ವೇಳೆ ಜಿಮ್ ಆಯ್ತು. ಅಭಿಮಾನಿಗಳಾಯ್ತು ಅಷ್ಟೇ. ಪ್ರತಿ ಭಾನುವಾರವಂತೂ ಮನೆ ಬಳಿ ಬರುವ ಅಭಿಮಾನಿಗಳನ್ನು ತಾಳ್ಮೆಯಿಂದ ಭೇಟಿ ಮಾಡಿ ಕಳುಹಿಸುತ್ತಾರೆ. ಸದ್ಯ ಧ್ರುವ ಸರ್ಜಾ ತಮ್ಮ ಮುಂದಿನ ಸಿನಿಮಾ ಕೆಡಿ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ' ಇದೇ ತಿಂಗಳು ರಿಲೀಸ್ ಆಗುತ್ತಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದು, ಇನ್ನೇನು ಭರ್ಜರಿ ಪ್ರಚಾರ ಶುರು ಆಗಲಿದೆ. ಹೀಗಾಗಿ ಫುಲ್ ಬ್ಯುಸಿ ಇದ್ದಾರೆ. ಈ ಗ್ಯಾಪ್ನಲ್ಲಿಯೂ ಮಗುವಿನ ನೆರವಿಗೆ ಬಂದಿದ್ದಾರೆ. ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಎರಡು ವರ್ಷದ ಬಾಲಕನಿಗೆ ನೆರವಾಗುವಂತೆ ಕೋರಿಕೊಂಡಿದ್ದಾರೆ.

ಹೌದು, ಎರಡು ವರ್ಷದ ಮಗು ಗಂಭೀರ ಕಾಯಿಲೆಯಿಂದ ಬಳಲುತ್ತಿದೆ. ಇದಕ್ಕೆ ದೊಡ್ಡ ಮೊತ್ತದ ಅವಶ್ಯಕತೆಯಿದೆ. ಹೀಗಾಗಿ ಆ ಮಗುವಿನ ಪೋಷಕರು ಧ್ರುವ ಸರ್ಜಾ ಬಳಿ ಬಂದಿದ್ದರು. ಮಗುವಿನ ಆರೋಗ್ಯದ ಗಂಭೀರತೆಯನ್ನು ಅರಿತ ಆಕ್ಷನ್ ಪ್ರಿನ್ಸ್ ಸಾರ್ವಜನಿಕರಲ್ಲಿ ನೆರವಿಗೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ 100 ರೂಪಾಯಿ ಕೂಡ ದೊಡ್ಡ ಬದಲಾವಣೆ ತರಬಹುದು ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಧ್ರುವ ಸರ್ಜಾ ನೆರವಿಗಾಗಿ ಮನವಿ ಮಾಡಿರುವ ವಿಡಿಯೋದಲ್ಲಿ ಮಗು ಹಾಗೂ ಮಗುವಿನ ಪೋಷಕರು ಕೂಡ ಇದ್ದಾರೆ. ಅವರ ಸಮ್ಮುಖದಲ್ಲಿಯೇ ಧ್ರುವ ಸರ್ಜಾ ನೆರವು ಕೋರಿದ್ದಾರೆ. ಧ್ರುವ ಸರ್ಜಾ ಅವರ ಈ ಸಹಾಯ ಮನೋಭಾವವನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಭೇಷ್ ಎಂದಿದ್ದಾರೆ.
ಅಷ್ಟಕ್ಕೂ ಆ ವಿಡಿಯೋದಲ್ಲಿ ಮಗುವಿನ ಸಮ್ಮುಖದಲ್ಲಿ ಕಾಯಿಲೆ ಬಗ್ಗೆ ಮಾತಾಡಿಲ್ಲ. ನೆರವಿಗಷ್ಟೇ ಮನವಿ ಮಾಡಿದ್ದು, ವಿಡಿಯೋ ಜೊತೆಗೆ ಸಮಸ್ಯೆ ಏನು ಅನ್ನೋದು ಲಿಖಿತ ರೂಪದಲ್ಲಿ ಬರೆದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅದು ಹೀಗಿದೆ.
"ಎಲ್ಲರಿಗೂ ನಮಸ್ಕಾರ.. ನಾನು ಧ್ರುವ ಸರ್ಜಾ.
ನಾನು ಇಂದು ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವುದಕ್ಕೆ ಕಾರಣ, 2 ವರ್ಷದ ಮಗು ಸಾಯಿ ಚಿರಾಗ್. ಈ ಮಗು SMA ಎಂಬ ಅಪರೂಪದ ಅನುವಂಶಿಕ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾನೆ. ಇದು ಮಗುವಿನ ಚಲಿಸುವ ಮತ್ತು ಉಸಿರಾಡುವ ಸಾಮರ್ಥ್ಯವನ್ನು ಕಸಿದುಕೊಳ್ಳುವ ಕಾಯಿಲೆಯಾಗಿದೆ. ಭಾರತದಲ್ಲಿ ಇದರ ಚಿಕಿತ್ಸೆಗೆ 16 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ವಿದೇಶದಲ್ಲಿ, ಇದೇ ಚಿಕಿತ್ಸೆಗೆ ಕೇವಲ 2 ಕೋಟಿ ರೂಪಾಯಿ ಖರ್ಚಾಗುತ್ತದೆ. ಆತನ ಕುಟುಂಬವು ತಮ್ಮ ಬಳಿ ಇದ್ದದ್ದನ್ನೆಲ್ಲಾ ಖರ್ಚು ಮಾಡಿದೆ. ಆದರೂ ಅವರಿಗೆ ಇನ್ನೂ ಸಹಾಯದ ಅಗತ್ಯವಿದೆ.
ದಯವಿಟ್ಟು ಈಗಲೇ ನಿಮ್ಮ ಸ್ಕ್ರೀನ್ ಮೇಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ದೇಣಿಗೆ ನೀಡಿ - ನಿಮ್ಮ 100 ರೂಪಾಯಿ ಕೂಡ ದೊಡ್ಡ ಬದಲಾವಣೆ ತರಬಹುದು.
ನಿಮಗೆ ದೇಣಿಗೆ ನೀಡಲು ಸಾಧ್ಯವಾಗದಿದ್ದರೆ, ದಯವಿಟ್ಟು ಈ ವಿಡಿಯೋವನ್ನು ಶೇರ್ ಮಾಡಿ . ನಿಮ್ಮ ಸ್ಟೋರಿ, ವಾಟ್ಸಾಪ್ ಗ್ರೂಪ್ಗಳು ಮತ್ತು ಎಲ್ಲೆಡೆ ಹಂಚಿಕೊಳ್ಳಿ. ನೀವು ಮಾಡುವ ಒಂದು ಶೇರ್ ಈ ಮಗುವಿನ ಜೀವ ಉಳಿಸಬಹುದು" ಎಂದು ಧ್ರುವ ಸರ್ಜಾ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications















