ಕಮಲ್ ಭಾಷಾ ವಿವಾದ; ಪ್ರೇಮ್, ಧ್ರುವ ಉತ್ತರಕ್ಕೆ ತಮಿಳು ಪತ್ರಕರ್ತರು ಸೈಲೆಂಟ್
"ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು" ಎಂದು ನಟ ಕಮಲ್ ಹಾಸನ್ ಹೇಳಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಇತಿಹಾಸ ಗೊತ್ತಿಲ್ಲದೇ ಯಾರು ಮಾತನಾಡಬಾರದು, ಕಮಲ್ ಹೇಳಿಕೆಗೆ ಯಾವುದೇ ಆಧಾರ ಇಲ್ಲ ಎಂದು ಕನ್ನಡಿಗರು ತಿರುಗೇಟು ನೀಡಿದ್ದರು. ಕನ್ನಡ ಪರ ಸಂಘಟನೆಗಳು ಕಮಲ್ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರಕ್ಕೆ ಕರ್ನಾಟಕದಲ್ಲಿ ಹಿನ್ನೆಡೆಯಾಗಿತ್ತು. ಕಮಲ್ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳಬೇಕು ಇಲ್ಲದಿದ್ದರೆ ಸಿನಿಮಾ ಬಿಡುಗಡೆಗೆ ನಾವು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಕಮಲ್ ಮಾತ್ರ ತಮ್ಮ ಹೇಳಿಕೆಗೆ ಈವರೆಗೆ ಕ್ಷಮೆ ಕೇಳಲಿಲ್ಲ. ಬಳಿಕ ಈ ವಿಚಾರ ಹೈಕೋರ್ಟ್, ಸುಪ್ರೀಂ ಕೋರ್ಟ್ವರೆಗೆ ಹೋಗಿತ್ತು. ಸುಪ್ರೀಂ ಕೋರ್ಟ್ನಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಸಿಕ್ಕರೂ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡಲಿಲ್ಲ.

'KD' ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಚೆನ್ನೈಗೆ ಹೋಗಿದೆ. ತಮಿಳು ಪತ್ರಕರ್ತರು ಕಮಲ್ ಹಾಸನ್ ವಿವಾದದ ಬಗ್ಗೆ ಧ್ರುವ ಸರ್ಜಾ ಹಾಗೂ ಪ್ರೇಮ್ ಮುಂದೆ ಪ್ರಶ್ನೆ ಇಟ್ಟಿದ್ದಾರೆ. ಅದಕ್ಕೆ ತಕ್ಕ ಪ್ರತ್ಯುತ್ತರವನ್ನೇ ಇಬ್ಬರೂ ನೀಡಿದ್ದಾರೆ. ಧ್ರುವ ಮಾತನಾಡಿ ಮಾತೃಭಾಷೆ ಬಗ್ಗೆ ಯಾರೇ ಮಾತನಾಡಿದರೆ ಯಾರು ಸುಮ್ಮನಿರಲ್ಲ ಎಂದು ಹೇಳಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳಿದ್ದರೆ ಎಲ್ಲಾ ಸರಿ ಹೋಗುತ್ತಿತ್ತು ಎಂದು ಪ್ರೇಮ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು "ಕನ್ನಡ ಸಿನಿಮಾಗಳನ್ನು ಇಲ್ಲಿ ಸುಲಭವಾಗಿ ಬಿಡುಗಡೆ ಮಾಡ್ತಾರೆ. ಆದರೆ ಕರ್ನಾಟಕದಲ್ಲಿ ಇತ್ತೀಚೆಗೆ ಒಂದು ತಮಿಳು ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲಿಲ್ಲ. ಇಲ್ಲಿ ಕೂಡ ಕೆಲವರು ಕನ್ನಡ ಸಿನಿಮಾ ಬಿಡುಗಡೆಗೆ ಬಿಡಲ್ಲ ಎನ್ನುತ್ತಿದ್ದಾರೆ. ನೀವು ನಿಮ್ಮ ಸಿನಿಮಾವನ್ನು ಇಲ್ಲಿ ಹೇಗೆ ತೆರೆಗೆ ತರ್ತೀರಾ? ಎಂದು ಕೇಳಿದ್ದಾರೆ.

ನಟ ಧ್ರುವ ಸರ್ಜಾ ಪ್ರತಿಕ್ರಿಯಿಸಿ "ನಾನು ಹುಟ್ಟುವ ಮುನ್ನ ಕರ್ನಾಟಕದಲ್ಲಿ ಸಾಕಷ್ಟು ತಮಿಳು ಸಿನಿಮಾಗಳು ಬಿಡುಗಡೆ ಆಗಿತ್ತು. ಯಾರೂ ಕೂಡ ತಡೆಯಲಿಲ್ಲ. ಕಮಲ್ ಸರ್ ನೀಡಿದ ಹೇಳಿಕೆಗೆ ಅಲ್ಲಿ ವಿರೋಧ ವ್ಯಕ್ತವಾಯಿತು. ಇಲ್ಲಿ ಎಲ್ಲರೂ ತಮ್ಮ ಮಾತೃಭಾಷೆಯನ್ನು ಪ್ರೀತಿಸುತ್ತಾರೆ. ಅದೇ ರೀತಿ ನಾವು ಕೂಡ ನಮ್ಮ ಮಾತೃಭಾಷೆಯನ್ನು ಪ್ರೀತಿಸ್ತೀವಿ, ಆರಾಧಿಸುತ್ತೀವಿ. ಹಾಗಾಗಿ ಮಾತೃಭಾಷೆ ಬಗ್ಗೆ ಮಾತನಾಡಿದಾಗ ಕಂಡಿತ ಜನ ಪ್ರತಿಕ್ರಿಯಿಸುತ್ತಾರೆ. 'ಥಗ್ ಲೈಫ್' ಬಿಟ್ಟು ಬೇರೆ ಸಿನಿಮಾಗಳು ಬಿಡುಗಡೆಯಾಯಿತು. ಅದನ್ನು ಕನ್ನಡಿಗರು ಮೆಚ್ಚಿದರು. ತಮ್ಮ ಮಾತೃಭಾಷೆ, ಸ್ವಾಭಿಮಾನದ ವಿಚಾರ ಬಂದಾಗ ಯಾರು ಸುಮ್ಮನಿರಲ್ಲ" ಎಂದಿದ್ದಾರೆ.
ಕಲಾವಿದರು ಯಾರು ಅಲ್ಲಿ ಈ ಬಗ್ಗೆ ಮಾತನಾಡಲಿಲ್ಲ ಯಾಕೆ? ಎನ್ನುವ ಪ್ರಶ್ನೆಗೆ "ಕನ್ನಡ ನಮ್ಮ ಮಾತೃಭಾಷೆ ಕೂಡ ಅದಕ್ಕೆ ಮಾತನಾಡಲಿಲ್ಲ" ಎಂದು ಧ್ರುವ ಸರ್ಜಾ ಉತ್ತರಿಸಿದ್ದಾರೆ. ಬಳಿಕ ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿ "ಕರ್ನಾಟಕದಲ್ಲಿ ಎಲ್ಲಾ ತಮಿಳು ಸಿನಿಮಾಗಳು ಬಿಡುಗಡೆ ಆಗ್ತಿದೆ. ಇದು ಬೇರೆ ದೇಶ ಅಲ್ಲ, ಅಕ್ಕಪಕ್ಕದ ರಾಜ್ಯಗಳು. ಎಲ್ಲರೂ ಒಂದೇ. ನಿಮ್ಮ ತಾಯಿಗೆ ಯಾರಾದ್ರೂ ಬೈದ್ರೆ ನೀವು ಸುಮ್ಮನಿರ್ತೀರಾ? ಅದಕ್ಕೆ ಕನ್ನಡಿಗರಿಗೆ ನೋವಾಯ್ತು" ಎಂದು ಉತ್ತರಿಸಿದ್ದಾರೆ.
"ಎಲ್ಲಾ ತಮಿಳು ಸಿನಿಮಾ ಬಿಡುಗಡೆ ಬೇಡ ಎನ್ನಲಿಲ್ಲ. ಕಮಲ್ ಸರ್ ಚಿತ್ರಕ್ಕೆ ಹೇಳಿದ್ರು. ಕಮಲ್ ಸರ್ ಆ ರೀತಿ ಹೇಳಿಕೆ ಕೊಟ್ರು. ಅದಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಅದು ಬಿಟ್ಟರೆ ನಾವೆಲ್ಲಾ ಒಂದೇ, ನಿಮಗೆ ಗೊತ್ತು. ನಿಗಮೆ ಗೊತ್ತು ಯಾವುದೇ ತಮಿಳು ಸಿನಿಮಾ ಕರ್ನಾಟಕದಲ್ಲಿ ತೆರೆಕಂಡು ಹೆಚ್ಚು ಹಣ ಮಾಡುತ್ತೆ. ನನ್ನನ್ನು ಸೇರಿ ಬಹಳ ಜನ ನೋಡ್ತೀವಿ. ನೀವೆಲ್ಲಾ ಬಂದ್ರೆ ನಾವು ಒಳ್ಳೆ ಊಟು ಮಾಡ್ಸಿ ಕಳಿಸ್ತೀವಿ, ಅದು ನಮ್ಮ ಕರ್ನಾಟಕ. ಕನ್ನಡಿಗರು" ಎಂದು ಪ್ರೇಮ್ ಹೇಳಿದ್ದಾರೆ.


Click it and Unblock the Notifications











