ಧ್ರುವ ಸರ್ಜಾ ವಿರುದ್ಧ ಪಕ್ಕದ ಮನೆಯವರಿಂದಲೇ ದೂರು; ಮ್ಯಾನೇಜರ್, ಫ್ಯಾನ್ಸ್ ಅನ್ನೂ ಬಿಟ್ಟಿಲ್ಲ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಕೆಡಿ' ಸಿನಿಮಾದ ಪ್ರಮೋಷನ್ ಶುರು ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿಯೇ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ. ಇದು ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ಹಾಗಂತ ಕೇವಲ ಧ್ರುವ ಸರ್ಜಾ ಅಷ್ಟೇ ಅಲ್ಲ. ಅವರ ಮ್ಯಾನೇಜರ್, ಡ್ರೈವರ್ ಹಾಗೂ ಅಭಿಮಾನಿಗಳ ವಿರುದ್ಧವೂ ದೂರು ದಾಖಲಾಗಿದೆ. ಆಕ್ಷನ್ ಪ್ರಿನ್ಸ್ ಪಕ್ಕದ ಮನೆಯವರಿಂದಲೇ ಈ ದೂರು ದಾಖಲು ಮಾಡಲಾಗಿದೆ. ಇದರಲ್ಲಿ ನಟ ಧ್ರುವ ಸರ್ಜಾ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಅಷ್ಟಕ್ಕೂ ಏನಿದು ಹೊಸ ವಿವಾದ? ಧ್ರುವ ಸರ್ಜಾ ವಿರುದ್ಧ ಕೇಸ್ ದಾಖಲಿಸಿದ್ದೇಕೆ? ಅಂತಹದ್ದು ಏನಾಯ್ತು? ಅಂತ ನೋಡುವುದಾರೇ,

ಬನಶಂಕರಿಯಲ್ಲಿರುವ ಧ್ರುವ ಸರ್ಜಾ ಅವರ ಪಕ್ಕದ ಮನೆಯವರಾದ ಮನೋಜ್ ಎಂಬುವವರು ದೂರನ್ನು ದಾಖಲು ಮಾಡಿರೋ ವ್ಯಕ್ತಿ. ಧ್ರುವ ಸರ್ಜಾ ಸಿನಿಮಾ ಹೀರೋ ಆಗಿದ್ದರಿಂದ ಪ್ರತಿ ನಿತ್ಯ ಅಭಿಮಾನಿಗಳು ಅವರನ್ನು ನೋಡುವವುದಕ್ಕೆ ಬರುತ್ತಾರೆ. ಕೆಲವರು ನಡೆದುಕೊಂಡು ಬಂದರೆ, ಮತ್ತೆ ಕೆಲವರು ಬೈಕ್, ಸ್ಕೂಟರ್ಗಳಲ್ಲಿ ಬರುತ್ತಲೇ ಇರುತ್ತಾರೆ. ಇದರಿಂದ ತಮಗೆ ತೊಂದರೆಯಾಗಿದೆ ಎಂದು ದೂರನ್ನು ದಾಖಲಿಸಲಾಗಿದೆ.
ಹೌದು, ತಮ್ಮ ಮನೆಯ ಮುಂದೆ ಧ್ರುವ ಸರ್ಜಾ ಅಭಿಮಾನಿಗಳು ಅಡ್ಡಾದಿಡ್ಡಿಯಾಗಿ ಬೈಕ್ಗಳನ್ನು ನಿಲ್ಲಿಸುತ್ತಾರೆ. ಮನೆ ಮುಂದೆನೇ ಧೂಮಪಾನ ಮಾಡುತ್ತಾರೆ. ಮನೆಯ ಗೋಡೆಗಳಿಗೆ ಉಗಿಯುತ್ತಾರೆ. ಇದರಿಂದ ಅಕ್ಕ ಪಕ್ಕದ ಮನೆಯವರಿಗೆ ತೊಂದರೆಯಾಗುತ್ತೇ ಎಂದು ಧ್ರುವ ಸರ್ಜಾ, ಅವರ ಮ್ಯಾನೇಜರ ಹಾಗೂ ಅಭಿಮಾನಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪಕ್ಕದ ಮನೆಯವರಾದ ಮನೋಜ್ ದಾಖಲಿಸಿದ ದೂರನ್ನು ಬನಶಂಕರಿ ಪೊಲೀಸರು ಸ್ವೀಕರಿಸಿದ್ದಾರೆ. ಆದರೆ, ಎಫ್ಐಆರ್ ಹಾಕಿ ಎಂದು ಒತ್ತಡ ಹಾಕಿದ್ದರು ಎನ್ನಲಾಗಿದೆ. ಆದರೆ ದೂರಿನ ನೀಡಿದ್ದರಿಂದ ಪೊಲೀಸರು NCR ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಅವರ ಮ್ಯಾನೇಜರ್ ಹಾಗೂ ಅಭಿಮಾನಿಗಳಿಗೆ ಪೊಲೀಸರು ಸೂಚನೆ ನೀಡುವ ಸಾಧ್ಯತೆಯಿದೆ.
ಸದ್ಯ ಈ ದೂರಿನ ಬಗ್ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಮ್ಯಾನೇಜರ್ ಪ್ರತಿಕ್ರಿಯೆ ನೀಡಿಲ್ಲ. ಧ್ರುವ ಕನ್ನಡ ಚಿತ್ರರಂಗದ ಸ್ಟಾರ್ ನಟ ಆಗಿದ್ದರಿಂದ ಅವರನ್ನು ಹುಡುಕಿಕೊಂಡು ಅಭಿಮಾನಿಗಳು ಬರೋದು ಸಹಜ. ಹಾಗಂತ ಅಭಿಮಾನಿಗಳು ಮನಸ್ಸಿಗೆ ಬಂದಂತೆ ನಡೆದುಕೊಳ್ಳುವುದೂ ಕೂಡ ತಪ್ಪು. ಶಿಸ್ತಿನಿಂದ ವರ್ತಿಸಿ, ಅಕ್ಕ ಪಕ್ಕದ ಮನೆಯವರಿಗೆ ತೊಂದರೆ ಕೊಡದೇ ಹೋದರೆ ಇಂತಹ ಪ್ರಸಂಗ ಬರುವುದಿಲ್ಲ. ತನ್ನ ನೆಚ್ಚಿನ ನಟನ ಮೇಲೆ ಆರೋಪಗಳು ಬರೋದೂ ಇಲ್ಲ.
ಸದ್ಯ ಧ್ರುವ ಸರ್ಜಾ ತಮ್ಮ ಸಿನಿಮಾದ ಬಿಡುಗಡೆ ತಯಾರಿಯಲ್ಲಿ ಇದ್ದಾರೆ. ಕೆವಿಎನ್ ಸಂಸ್ಥೆ ನಿರ್ಮಿಸಿರುವ ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ 'ಕೆಡಿ' ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನಿಮಾ ಮುಂದಿನ ವರ್ಷ ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನೂ ರಿಲೀಸ್ ಡೇಟ್ ಕನ್ಫರ್ಮ್ ಆಗಬೇಕಿದೆ. ಬಹು ತಾರಾಗಣದ ಈ ಸಿನಿಮಾ ಗೆಲ್ಲಿಸಿ ಧ್ರುವ ಸರ್ಜಾರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡುತ್ತಾರಾ? ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











