ಅಣ್ಣ ಚಿರಂಜೀವಿ ಸರ್ಜಾಗೆ ದನಿಯಾಗಲಿದ್ದಾರೆ ಧ್ರುವ ಸರ್ಜಾ
ಚಿರಂಜೀವಿ ಸರ್ಜಾ ನಮ್ಮನ್ನಗಲಿ ಸುಮಾರು 20 ದಿನಗಳು ಕಳೆದಿವೆ. ಅವರ ಹಠಾತ್ ಸಾವಿನ ನೋವು ಇನ್ನೂ ಗಾಢವಾಗಿದೆ. ಈ ನೋವಿನ ನಡುವೆಯೇ ಅವರು ಬಿಟ್ಟುಹೋದ ಸಿನಿಮಾಗಳಿಗೆ ಮರುಜೀವ ನೀಡುವ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತಿದೆ.
Recommended Video
ಚಿರಂಜೀವಿ ಸರ್ಜಾ ಅಭಿನಯದ 'ಶಿವಾರ್ಜುನ' ಚಿತ್ರ ಲಾಕ್ ಡೌನ್ ಆರಂಭಕ್ಕೂ ಮುನ್ನ ಬಿಡುಗಡೆಯಾಗಿತ್ತು. ಆದರೆ ಅವರು ನಟಿಸಿದ್ದ ಇನ್ನೂ ನಾಲ್ಕು ಚಿತ್ರಗಳು ತೆರೆಕಾಣುವುದು ಬಾಕಿ ಇದೆ. ಅದರಲ್ಲಿ ರಾಮ್ ನಾರಾಯಣ್ ನಿರ್ದೇಶನದ 'ರಾಜಮಾರ್ತಾಂಡ' ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಉಳಿದ ಮೂರು ಚಿತ್ರಗಳ ಚಿತ್ರೀಕರಣ ಇನ್ನೂ ಬಾಕಿ ಇದೆ.
ಅಣ್ಣನ ಸಾವಿನ ಆಘಾತದ ಮಧ್ಯೆಯೇ ಧ್ರುವ ಸರ್ಜಾ ತಮ್ಮ ಜವಾಬ್ದಾರಿಗಳನ್ನು ಪೂರೈಸುತ್ತಿದ್ದಾರೆ. ಬಾಕಿ ಉಳಿದಿರುವ 'ಪೊಗರು' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ಅವರು ಸಿದ್ಧತೆ ನಡೆಸಿದ್ದಾರೆ. ಹಾಗೆಯೇ ಚಿರಂಜೀವಿ ಸರ್ಜಾ ಅವರ ಚಿತ್ರಕ್ಕೂ ನೆರವಾಗಲು ಮುಂದಾಗಿದ್ದಾರೆ. ಮುಂದೆ ಓದಿ...

ಡಬ್ಬಿಂಗ್ಗೆ ಧ್ರುವ ಸರ್ಜಾ ಒಪ್ಪಿಗೆ
ರಾಮ್ ನಾರಾಯಣ್ ನಿರ್ದೇಶನದ 'ರಾಜಮಾರ್ತಾಂಡ' ಚಿತ್ರದ ನಾಯಕ ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಧ್ವನಿ ನೀಡಲು ಧ್ರುವ ಸರ್ಜಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ನಿರ್ಮಾಪಕ ಶಿವಕುಮಾರ್ ಅವರಿಗೆ ಧ್ರುವ ಸರ್ಜಾ ಈ ಭರವಸೆ ನೀಡಿದ್ದಾರೆ.

ಬಿಡುವಿನ ಅವಧಿಯಲ್ಲಿ ಡಬ್ಬಿಂಗ್
'ರಾಜಮಾರ್ತಾಂಡ' ಚಿತ್ರದ ಒಂದು ಡುಯೆಟ್ ಹಾಡಿನ ಚಿತ್ರೀಕರಣ ಮತ್ತು ಡಬ್ಬಿಂಗ್ ಮಾತ್ರ ಬಾಕಿ ಇದೆ. ಈ ನಡುವೆ ಚಿರಂಜೀವಿ ಪಾತ್ರಕ್ಕೆ ಡಬ್ಬಿಂಗ್ ಮಾಡಲು ಧ್ರುವ ಮುಂದಾಗಿರುವುದು ಚಿತ್ರತಂಡಕ್ಕೆ ನೆಮ್ಮದಿ ನೀಡಿದೆ. ಬಾಕಿ ಉಳಿದಿರುವ ಹಾಡಿನ ಚಿತ್ರೀಕರಣವನ್ನು ಕೈ ಬಿಡುವ ಸಾಧ್ಯತೆ ಇದೆ.
ಧ್ರುವ ಸರ್ಜಾ ತಮ್ಮ 'ಪೊಗರು' ಚಿತ್ರದ ಕಾರ್ಯವನ್ನೂ ಮುಗಿಸಬೇಕಿದೆ. ಹೀಗಾಗಿ ಬಿಡುವಿನ ಅವಧಿಯಲ್ಲಿ 'ರಾಜಮಾರ್ತಾಂಡ' ಚಿತ್ರತಂಡಕ್ಕೆ ಸಹಾಯ ಮಾಡಬೇಕಿದೆ. ಅವರಿಗೆ ಅನುಕೂಲವಾಗುವ ದಿನದಂದೇ ಡಬ್ಬಿಂಗ್ ಆರಂಭಿಸಲು ರಾಮ್ ನಾರಾಯಣ್ ಉದ್ದೇಶಿಸಿದ್ದಾರೆ.

ಡಬ್ಬಿಂಗ್ಗೆ ದರ್ಶನ್ ಕೂಡ ಸಿದ್ಧ
ವಿಶೇಷವೆಂದರೆ ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಧ್ವನಿ ನೀಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಉತ್ಸಾಹ ತೋರಿಸಿದ್ದಾರಂತೆ. ತಮ್ಮ ಆತ್ಮೀಯ ಗೆಳೆಯನಾಗಿದ್ದ ಚಿರಂಜೀವಿ ಸರ್ಜಾ ಅವರಿಗಾಗಿ ಚಿತ್ರತಂಡಕ್ಕೆ ಬೆಂಬಲ ನೀಡಲು ದರ್ಶನ್ ಬಯಸಿದ್ದಾರೆ. ಚಿರಂಜೀವಿ ಪಾತ್ರಕ್ಕೆ ಬೇಕಾದರೆ ಡಬ್ಬಿಂಗ್ ಮಾಡುವುದಾಗಿ ನಿರ್ಮಾಪಕರ ಬಳಿ ದರ್ಶನ್ ಹೇಳಿದ್ದಾರಂತೆ.

ಹಳಗನ್ನಡದ ಸಂಭಾಷಣೆ
ಈ ಚಿತ್ರದಲ್ಲಿ ಅನೇಕ ಹಳಗನ್ನಡದ ಸಂಭಾಷಣೆಗಳಿವೆ. ಅದರಲ್ಲಿಯೂ ಕೆಲವು ಸನ್ನಿವೇಶಗಳಲ್ಲಿ ಬಹಳ ಸುದೀರ್ಘ ಸಂಭಾಷಣೆಗಳಿವೆ. ಹೀಗಾಗಿ ಚಿತ್ರದ ಡಬ್ಬಿಂಗ್ ವಿಚಾರದಲ್ಲಿ ಚಿರಂಜೀವಿ ಬಹಳ ಗಮನ ಹರಿಸಿದ್ದರು. ಈಗ ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ ಸಂಪೂರ್ಣ ನ್ಯಾಯ ಸಲ್ಲಿಸುತ್ತಾರೆ ಎಂಬ ಭರವಸೆ ಇದೆ ಎಂದು ರಾಮ್ ನಾರಾಯಣ್ ಹೇಳಿದ್ದಾರೆ.

ಮೂರು ಸಿನಿಮಾಗಳು ಬಾಕಿ
ಚಿರಂಜೀವಿ ಸರ್ಜಾ ಅಭಿನಯದ ರಣಂ, ಕ್ಷತ್ರಿಯ ಮತ್ತು ಏಪ್ರಿಲ್ ಚಿತ್ರಗಳ ಚಿತ್ರೀಕರಣ ಸಹ ಬಾಕಿ ಉಳಿದಿವೆ. ಅವುಗಳಲ್ಲಿ ರಣಂ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಿತ್ತು. ಈ ಚಿತ್ರಗಳ ಚಿತ್ರೀಕರಣದಲ್ಲಿ ಯಾವ ರೀತಿಯ ಹೊಂದಾಣಿಕೆಗಳನ್ನು ಮಾಡಲಾಗುತ್ತದೆ ಎನ್ನುವುದು ಇನ್ನೂ ತೀರ್ಮಾನವಾಗಬೇಕಿದೆ.


Click it and Unblock the Notifications











