ಲೂಸ್ ಮಾದ ಯೋಗಿ 'ಫಾರೆವರ್'; 51ನೇ ಸಿನಿಮಾ ಧ್ರುವ ಸರ್ಜಾ ಕ್ಲಾಪ್
ಲೂಸ್ ಮಾದ ಯೋಗಿ ಮತ್ತೆ ಸ್ಯಾಂಡಲ್ವುಡ್ನಲ್ಲಿ ಬ್ಯುಸಿಯಾಗುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ವಿನಯ್ ರಾಜ್ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಗ್ರಾಮಾಯಣ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಇನ್ನೂ ಥಿಯೇಟರ್ನಲ್ಲಿ ಇರುವಾಗಲೇ ಮತ್ತೊಂದು ಹೊಸ ಪ್ರಾಜೆಕ್ಟ್ಗೆ ಯೋಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಈಗಾಗಲೇ ಯೋಗಿ ಕೈಯಲ್ಲಿ ಕೆಲ ಸಿನಿಮಾಗಳು ಇವೆ. ಇದರ ಹಿಂದೆನೇ ಇನ್ನೊಂದು ಸಿನಿಮಾ ಸೆಟ್ಟೇರಿದೆ. ಅದುವೇ ಲೂಸ್ ಮಾದ ಯೋಗಿಯ 51ನೇ ಸಿನಿಮಾ 'ಫಾರೆವರ್'. ಇತ್ತೀಚೆಗೆ ಈ ಸಿನಿಮಾ ಅದ್ಧೂರಿಯಾಗಿ ಟೇಕಾಫ್ ಆಗಿದೆ. ಈ ಸಿನಿಮಾದ ಮುಹೂರ್ತಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.

ಈ ಸಿನಿಮಾವನ್ನು ಸುಪ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ.ವೆಂಕಟನಾರಾಯಣ್(ಠಾಗೋರ್ ಕೃಷ್ಣ) ನಿರ್ಮಾಣ ಮಾಡುತ್ತಿದ್ದಾರೆ. 'ಚಂದ್ರಿಕ' ಖ್ಯಾತಿಯ ಯೋಗೇಶ್ ಎಂ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿದ್ದು, ಚಿತ್ರದ ಮೊದಲ ಸನ್ನಿವೇಶಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ.
ಇವರೊಂದಿಗೆ ಶಾಸಕ ಕೃಷ್ಣಪ್ಪ ಅವರು ಕ್ಯಾಮೆರಾ ಚಾಲನೆ ಮಾಡಿದ್ರೆ, 'ನಾಗರಹಾವು' ಸಿನಿಮಾದ ನಿರ್ಮಾಪಕ ಸಾಜಿದ್ ಖುರೇಶಿ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಮಾಡಿದ್ದಾರೆ. ಗಣ್ಯರೆಲ್ಲರು ಸೇರಿ ಟ್ಯಾಂಕರ್ ಮೇಲಿದ್ದ ಶೀರ್ಷಿಕೆಯನ್ನು ಅನಾವರಣ ಮಾಡಿದ್ದು ವಿಶೇಷವಾಗಿತ್ತು. ಚಿತ್ರರಂಗ ಸಾಕಷ್ಟು ಗಣ್ಯರು ಹಾಗೂ ಸಹಸ್ರಾರು ಅಭಿಮಾನಿಗಳು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು. ಈ ವೇಳೆ ಧ್ರುವ ಸರ್ಜಾ ವಿಶೇಷ ಅತಿಥಿಯಾಗಿ ಬಂದಿದ್ದಕ್ಕೆ ಲೂಸ್ ಮಾದ ಯೋಗಿ ಖುಷಿ ವ್ಯಕ್ತಪಡಿಸಿದ್ದಾರೆ.

"ನಾನು ಹಾಗೂ ಧ್ರುವ ಸರ್ಜಾ ಒಂದೇ ಸ್ಕೂಲ್ ನಲ್ಲಿ ಓದಿದವರು. ಮೆಚ್ಚಿನ ಗೆಳೆಯ ಅವರು. ಅವರು ಬಂದು ನಮ್ಮ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಖುಷಿಯಾಗಿದೆ. ಸುಮಾರು ಎರಡು ವರ್ಷಗಳ ನಂತರ ನಾನು ನಾಯಕನಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ನಡೆಯುತ್ತಿದೆ. ಬಹಳ ಅದ್ದೂರಿಯಾಗಿಯೇ ನಡೆದಿದೆ. ಚಿತ್ರ ಕೂಡ ಇಷ್ಟೇ ಅದ್ದೂರಿಯಾಗಿರುತ್ತದೆ. ನಿರ್ದೇಶಕರು ಒಂದೊಳ್ಳೆ ಕಥೆ ಬರೆದಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಫಸ್ಟ್ ಲುಕ್ ಪೋಸ್ಟರ್ ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್ ಅಲ್ಲದೆ ಮತ್ತೊಂದು ಇದೆ. ಅದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇವೆ. ನಾನು ತುಂಬಾ ಬೈಕ್ ಇಷ್ಟ ಪಡುತ್ತೇನೆ. ಬೈಕ್ ರೈಡರ್ ಕೂಡ. ಈ ಕಥೆ ಅದಕ್ಕೆ ಹತ್ತಿರವಾಗಿರುವುದು ಮತ್ತಷ್ಟು ಇಷ್ಟವಾಯಿತು. ಬೆಂಗಳೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ. ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡುವುದಾಗಿ ಹೇಳಿರುವ ನಿರ್ಮಾಪಕರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ" ಎಂದು ಲೂಸ್ ಮಾದ ಯೋಗಿ ಹೇಳಿದ್ದಾರೆ.
ಹಾಗೇ ನಿರ್ದೇಶಕ ಯೋಗೇಶ್ ಸಿನಿಮಾ ಬಗ್ಗೆ ಮಾತಾಡಿದ್ದಾರೆ. "ನಾನು ಮೂರು ವರ್ಷಗಳಲ್ಲಿ ಅತೀ ಹೆಚ್ಚು ಬಾರಿ ವಿಮಾನದಲ್ಲಿ ಪ್ರಯಾಣ ಮಾಡಿದ್ದೇನೆ. ವಿಮಾನ ಹತ್ತಿದ ತಕ್ಷಣ ಮೊಬೈಲ್ ಪಕ್ಕಕ್ಕೆ ಇಟ್ಟು ಈ ಚಿತ್ರದ ಕಥೆ ಬರೆಯುತ್ತಿದ್ದೆ. ಪ್ರತಿಬಾರಿ ಯೋಗಿ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುವಾಗ ಈ ವರ್ಷದ ಹುಟ್ಟುಹಬ್ಬಕ್ಕೆ ಸಿನಿಮಾ ಆರಂಭ ಮಾಡೋಣ ಅಂತ ಹೇಳುತ್ತಿದ್ದೆ. ಕಾಲ ಈಗ ಕೂಡಿ ಬಂದಿದೆ. ಇತ್ತೀಚೆಗಷ್ಟೇ ಯೋಗಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲೇ ಮುಹೂರ್ತ ನಡೆದಿರುವುದು ಖುಷಿಯಾಗಿದೆ. ನಮ್ಮ ಚಿತ್ರಕ್ಕೆ ಯುಗ ಮರೆಯದ ಪ್ರೇಮ ಕಥೆ ಎಂಬ ಅಡಿಬರಹವಿದೆ. ಹಾಗಾಗಿ ಇದೊಂದು ಪ್ರೇಮಕಥೆ. ಆದರೆ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ವಿಶೇಷವಾದ್ದದ್ದು ಮತ್ತೊಂದಿದೆ. ಅದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ" ಎಂದು ನಿರ್ದೇಶಕ ಯೋಗೇಶ್ ಮುನಿಸಿದ್ದಪ್ಪ ಹೇಳಿದರು.
"ಒಂದು ತುಳು ಚಿತ್ರದಲ್ಲಿ ನಟಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ" ಎಂದು ನಾಯಕಿ ಆಕಾಂಕ್ಷ ರಾವ್ ಹರ್ಷ ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಶಕ ಪ್ರದ್ಯೂತನ್ ಹಾಡುಗಳ ಬಗ್ಗೆ ಮಾಹಿತಿ ನೀಡಿದ್ರೆ, ಛಾಯಾಗ್ರಾಹಕ ಸಂಕೇತ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


Click it and Unblock the Notifications