ವಿಷ್ಣುದಾದ ಸಿನಿಮಾಗೆ ಜಗ್ಗೇಶ್ ಕ್ಲ್ಯಾಪ್ ಡೈರೆಕ್ಟರ್ ಆಗಿದ್ರು; ಆ ಸಿನಿಮಾ ಯಾವುದು ಗೊತ್ತೇ?
ಜಗ್ಗೇಶ್ಗೆ ಅಭಿಮಾನಿಗಳು ನವರಸ ನಾಯಕ ಅಂತ ಸುಮ್ ಸುಮ್ನೆ ಈ ಬಿರುದು ಕೊಟ್ಟಿಲ್ಲ. ನಟನೆಯಲ್ಲಿ ಹಾಸ್ಯವಷ್ಟೇ ಹೈಲೈಟ್ ಆಗಿದ್ದರೂ, ನವರಸಗಳನ್ನು ವ್ಯಕ್ತಪಡಿಸುವ ನಟ. ಕನ್ನಡ ಚಿತ್ರರಂಗದಲ್ಲಿ ಜಗ್ಗೇಶ್ ನವರಸ ನಾಯಕನಾಗಿ ಬೆಳೆಯುವುದಕ್ಕೆ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಅದೆಷ್ಟು ಕಷ್ಟ ಪಟ್ಟಿದ್ದಾರೆ ಅನ್ನೋದನ್ನು ಈಗಾಗಲೇ ಅದೆಷ್ಟೊ ಬಾರಿ ಹೇಳಿಕೊಂಡಿದ್ದಾರೆ.
ನವರಸ ನಾಯಕ ಜಗ್ಗೇಶ್ ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟ. ಸುಮಾರು ನಾಲ್ಕು ದಶಕಗಳಿಂದ ಕನ್ನಡದ ಸಿನಿಪ್ರಿಯರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದಾರೆ. ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯ ಅವರ ಮತ್ತೊಂದು ಸಿನಿಮಾ 'ರಂಗನಾಯಕ' ಬಿಡುಗಡೆಗೆ ಸಜ್ಜಾಗಿ ನಿಂತಿದೆ. ನಾಳೆ (ಮಾರ್ಚ್ 8) ರಾಜ್ಯದಾದ್ಯಂತ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

'ಮಠ'. 'ಎದ್ದೇಳು ಮಂಜುನಾಥ'ದಂತಹ ಸಿನಿಮಾಗಳನ್ನು ಕೊಟ್ಟಿರುವ ಜೋಡಿಯೇ 'ರಂಗನಾಯಕ' ಸಿನಿಮಾವನ್ನು ಹೊತ್ತು ಪ್ರೇಕ್ಷಕರ ಮುಂದೆ ಬರುತ್ತಿದೆ. ಇದೇ ವೇಳೆ ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ ಇಬ್ಬರೂ ಅನುಶ್ರೀ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಜಗ್ಗೇಶ್ ಸಾಹಸ ಸಿಂಹ ವಿಷ್ಣುವರ್ಧನ್ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದನ್ನು ಹೇಳಿಕೊಂಡಿದ್ದಾರೆ. ಹಾಗಿದ್ರೆ, ವಿಷ್ಣುದಾದ ನಟಿಸಿದ ಯಾವ ಸಿನಿಮಾಗೆ ಜಗ್ಗೇಶ್ ಕ್ಲ್ಯಾಪ್ ಡೈರೆಕ್ಟರ್ ಆಗಿದ್ದರು? ತಿಳಿಯಲು ಮುಂದೆ ಓದಿ..
ಜಗ್ಗೇಶ್ ತುರುವೆಕೆರೆಯ ಜಡೇ ಮಾಯಸಂದ್ರ ಅನ್ನುವ ಪುಟ್ಟ ಗ್ರಾಮದಿಂದ ಬಂದವರು. ನಟನಾಗಲೇ ಬೇಕು ಅಂತ ಪಣ ತೊಟ್ಟು ಚಿತ್ರರಂಗದಲ್ಲಿ ಹೋರಾಡಿ ಗೆದ್ದವರು. ಇಂದು ಸ್ಟಾರ್ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಒಬ್ಬ ನಟನಾಗಲೇ ಬೇಕು ಅಂತ ಪಣತೊಟ್ಟು ಚಿತ್ರರಂಗಕ್ಕೆ ಬಂದಿದ್ದ ಜಗ್ಗೇಶ್ ತಮ್ಮ ಸ್ಟೈಲ್ನಲ್ಲಿ ಅಂದಿದ್ದ ತನ್ನ ಗುರಿಯನ್ನು ನೆನಪಿಸಿಕೊಂಡಿದ್ದಾರೆ.
"ಯಾರು ಜಗ್ಗೇಶ.. ಒಂದು 40 ಮನೆಯ ಗ್ರಾಮದ ಹಳ್ಳಿಯ ಹುಡುಗ. ಅವರನಿಗೆ ಒಂದು ಕನಸು ಬರುತ್ತೆ. ರಾಜಕುಮಾರ್ ಕಾಲದಲ್ಲಿ ನಾನೊಬ್ಬ ನಟ ಆಗಬೇಕು ಅಂತ ಅನಿಸುತ್ತೆ. ಅಂದು ನಾನು ರಾಜಕೀಯವನ್ನೆಲ್ಲ ನಿರೀಕ್ಷೆ ಮಾಡಿದವನಲ್ಲ." ಎಂದು ಸಂದರ್ಶನದ ವೇಳೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೇ ತನ್ನ ವಿದ್ಯಾಭ್ಯಾಸವೇನು? ಇಂಗ್ಲಿಷ್ ಭಾಷೆಯ ಮೇಲೆ ತನಗಿರುವ ಹಿಡಿತ ಬಗ್ಗೆನೂ ಹೇಳಿಕೊಂಡಿದ್ದಾರೆ.

"ನಾನು ಡಿಗ್ರಿ ಮಾಡಿಕೊಂಡೆ. ಬಿಎಸ್ಸಿ ಮಾಡಿದೆ. ನನಗೆ ಇಂಗ್ಲಿಷ್ ಬರೋದಿಲ್ಲ ಅಂತ ಮಾತಾಡಿಕೊಳ್ತಿದ್ರು. ನಾನು ಹೌಸ್ನಲ್ಲಿ ಮಾತಾಡುತ್ತಿದ್ದರೆ. ಇವನು ಹೇಗೆ ಇಂಗ್ಲಿಷ್ ಮಾತಾಡುತ್ತಾನೆ. ಯಾವ ರಾತ್ರಿ ಕಲಿತುಕೊಂಡು ಬಿಟ್ಟ ಅಂತ ಯೋಚನೆ ಮಾಡಿದ್ರು. ನಾನು ಡಿಗ್ರಿಯಲ್ಲಿಂದ ಮಾತಾಡುತ್ತೇನೆ." ಎಂದು ಹಾಸ್ಯ ಮೂಲಕವೇ ಇಂಗ್ಲಿಷ್ ಬರುವುದಿಲ್ಲ ಅನ್ನೋರಿಗೆ ತಿರುಗೇಟು ಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ಚಿತ್ರರಂಗದ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿದ್ದು, ವಿಷ್ಣುವರ್ಧನ್ ಸಿನಿಮಾದಲ್ಲಿ ಕ್ಲ್ಯಾಪ್ ಡೈರೆಕ್ಟರ್ ಆಗಿದ್ದನ್ನು ನೆನಪಿಸಿಕೊಂಡಿದ್ದಾರೆ.
"ವಿಷ್ಣುವರ್ಧನ್ ಅವರ ನೀ ತಂದ ಕಾಣಿಕೆ ಸಿನಿಮಾಗೆ ದ್ವಾರಕೀಶ್ ಅವರು ನಿರ್ದೇಶಕರು. ಅದಕ್ಕೆ ನಾನು ಕ್ಲ್ಯಾಪ್ ಅಸಿಸ್ಟೆಂಟ್. ಎಲ್ಲಾ ಡಿಪಾರ್ಟ್ಮೆಂಟ್ನಲ್ಲೂ ಕೆಲಸ ಮಾಡಿದ್ದೇನೆ." ಎಂದು ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್ನಲ್ಲಿ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.


Click it and Unblock the Notifications











