Dileep Raj; ದಿಲೀಪ್ ರಾಜ್ ಅಗಲಿಕೆ ನೋವಲ್ಲೇ ಮದುವೆ ಫೋಟೊ ಹಂಚಿಕೊಂಡ ಪತ್ನಿ; 'ಫಾರ್ಎವರ್' ಎನ್ನುವ ಭಾವುಕ
ಕನ್ನಡ ಚಿತ್ರರಂಗ ಮತ್ತೊಬ್ಬ ಅದ್ಭುತ ನಟ ದಿಲೀಪ್ ರಾಜ್ ಅವರನ್ನು ಕಳೆದುಕೊಂಡಿದೆ. ನಿನ್ನೆ (ಮೇ 13) ದಿಲೀಪ್ ರಾಜ್ ಹಠಾತ್ ಹೃದಾಯಾಘಾತದಿಂದ ನಿಧನರಾಗಿದ್ದರು. ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕ್. ಫಿಟ್ ಆಗಿದ್ದ ದಿಲೀಪ್ ರಾಜ್ ದಿಢೀರನೇ ಹೀಗೆ ಹೃದಯಾಘಾತಕ್ಕೆ ಬಲಿಯಾಗಿದ್ದನ್ನು ಚಿತ್ರರಂಗ ಹಾಗೂ ಕಿರುತೆರೆ ಮಂದಿ ಸಹಿಸಿಕೊಳ್ಳುತ್ತಿಲ್ಲ.
ದಿಲೀಪ್ ರಾಜ್ ಆಪ್ತರಿಗೆ ಈ ಮಟ್ಟಿಗೆ ಶಾಕ್ ಆಗಿರುವಾಗ ಇನ್ನು ಅವರ ಕುಟುಂಬ ಇನ್ನೆಷ್ಟು ನೋವು ಅನುಭವಿಸುತ್ತಿರಬಹುದು? ಪತಿ ದಿಢೀರ್ ಅಗಲಿಕೆ ಅವರ ಪತ್ನಿ ಶ್ರೀವಿದ್ಯಾ ರಾಜ್ ಅವರಿಗೂ ಶಾಕ್ ಆಗಿತ್ತು. ಪತಿಯ ಮೃತದೇಹದ ಮುಂದೆ ಅವರ ಕಣ್ಣೀರು ಮುಗಿಲು ಮುಟ್ಟಿತ್ತು. ದಿಲೀಪ್ ರಾಜ್ ಮುಂದೆ ಗೋಳಾಡುತ್ತಿರುವ ದೃಶ್ಯ ಎಂತಹವರ ಕಣ್ಣನ್ನೂ ಒದ್ದೆಯಾಗಿಸಿತ್ತು.

ಪತಿ ದಿಲೀಪ್ ರಾಜ್ ಅಗಲಿಕೆ ನೋವಿನಲ್ಲಿಯೇ ಪತ್ನಿ ಶ್ರೀವಿದ್ಯಾ ರಾಜ್ ಅವರ ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ದಿಲೀಪ್ ರಾಜ್ ದಿಢೀರ್ ಅಗಲಿಗೆಯನ್ನು ಅವರ ಪತ್ನಿಗೆ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಪತಿ ನೆನೆದು ಭಾವುಕರಾಗಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ನೋವಿನಿಂದಲೇ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ದಿಲೀಪ್ ರಾಜ್ ಅಗಲಿಕೆ ಯಾರಿಗೂ ನಂಬೋಕೆ ಆಗುತ್ತಿಲ್ಲ. ಕೇವಲ 47ನೇ ವಯಸ್ಸಿಗೆ ಫಿಟ್ ಅಂಡ್ ಫೈನ್ ಆಗಿದ್ದ ದಿಲೀಪ್ ರಾಜ್ ಇಹಲೋಕ ತ್ಯಜಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಚಿತ್ರರಂಗದಲ್ಲಿ ನಾಯಕನಾಗಿ ನೆಲೆ ಕಂಡುಕೊಳ್ಳುವುದಕ್ಕೆ ದಶಕಗಳ ಕಾಲ ಶ್ರಮ ಪಟ್ಟಿದ್ದರು. ಆದರೆ, ಸಿನಿಮಾಗಳಲ್ಲಿ ನಾಯಕನಾಗಿ ಯಶಸ್ಸು ಕಾಣದೇ ಹೋದರೂ, ಕಿರುತೆರೆಯಲ್ಲಿ ನಿರ್ಮಾಪಕರಾಗಿ ಗೆದ್ದಿದ್ದರು.
ಇಷ್ಟು ಕಷ್ಟ ಪಟ್ಟಿದ್ದಕ್ಕೆ ಈಗ ಅವರಿಗೆ ಯಶಸ್ಸು ಸಿಗುತ್ತಿತ್ತು. ಒಂದರ ಹಿಂದೊಂದು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದರು. ಅವರು ನಿರ್ಮಿಸಿದ ಧಾರಾವಾಹಿಗಳಿಗೆ ಯಶಸ್ಸು ಕೂಡ ಸಿಗುತ್ತಿತ್ತು. ಇತ್ತೀಚೆಗೆ 'ಕೃಷ್ಣ ರುಕ್ಕು' ಅನ್ನೋ ಧಾರಾವಾಹಿಯನ್ನು ಆರಂಭ ಮಾಡಿದ್ದರು. ಅಷ್ಟರಲ್ಲೇ ಅವರ ಬಾಳಲ್ಲಿ ವಿಧಿ ಆಟ ಆಡಿದೆ. ಫ್ಯಾಮಿಲಿ ಮ್ಯಾನ್ ಆಗಿದ್ದ ದಿಲೀಪ್ ರಾಜ್ ಅಗಲಿಕೆಯ ಶಾಕ್ನಿಂದ ಪತ್ನಿ ಶ್ರೀವಿದ್ಯಾ ಅವರಿಗೆ ಹೊರ ಬರುವುದಕ್ಕೆ ಆಗುತ್ತಿಲ್ಲ. ತಮ್ಮ ಮದುವೆ ಫೋಟೊವನ್ನು ಹಂಚಿಕೊಂಡು 'ಎಂದೆಂದಿಗೂ' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಈ ಫೋಟೊಗೆ ನೆಟ್ಟಿಗರು ಕೂಡ ಭಾವುಕರಾಗಿ ಕಾಮೆಂಟ್ ಮಾಡುತ್ತಿದ್ದಾರೆ. "ದೇವರ ಮಗ ದೇವರ ಪಾದವನ್ನೇ ಸೇರಿ, ಕುಟುಂಬಕ್ಕೆ ತುಂಬಲಾರದ ನೋವು ನೀಡಿದರು. ಓಂ ಶಾಂತಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರೆ, "ನಾವು ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ಅಂತ ನಂಬೋಕೆ ಆಗುತ್ತಿಲ್ಲ. ನಮ್ಮ ಮನಸ್ಸಿನಲ್ಲಿ ನೀವು ಸದಾ ಇರುತ್ತೀರ" ಎಂದು ಇನ್ನೊಬ್ಬರು ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ನಿಮಗೆ ಆ ದೇವರು ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ಕೊಡಲಿ" ಎಂದು ಶ್ರೀವಿದ್ಯಾ ರಾಜ್ ಅವರಿಗೆ ಧೈರ್ಯ ತುಂಬಿದ್ದಾರೆ.
ದಿಲೀಪ್ ರಾಜ್ ನಿರ್ಮಿಸುತ್ತಿರುವ ಧಾರಾವಾಹಿಗಳ ನಿರ್ಮಾಣದ ಜವಾಬ್ದಾರಿಯನ್ನು ಪತ್ನಿ ಶ್ರೀವಿದ್ಯಾ ಅವರೇ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಸದ್ಯ ಚಿತ್ರೀಕರಣದಲ್ಲಿರುವ ಸೀರಿಯಲ್ಗಳು ಯತಾವತ್ತಾಗಿ ನಡೆಯಲಿವೆ ಎಂದು ಹೇಳಲಾಗುತ್ತಿದೆ. ಕನ್ನಡ ಕಿರುತೆರೆಗೆ ವಿಭಿನ್ನ ಕಥಾ ಹಂದರವುಳ್ಳ ಕೌಟುಂಬಿಕ ಧಾರಾವಾಹಿಗಳನ್ನು ದಿಲೀಪ್ ರಾಜ್ ನೀಡಿದ್ದಾರೆ. ಆ ಜವಾಬ್ದಾರಿಯನ್ನು ಶ್ರೀವಿದ್ಯಾ ರಾಜ್ ಅವರು ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನಲಾಗಿದೆ.


Click it and Unblock the Notifications
