"ಮತ್ತೊಂದು ವರ್ಷ, ಅನಂತ್ ಸರ್ಗೆ ಪದ್ಮ ಪ್ರಶಸ್ತಿ ಇಲ್ಲ."; ನಿರ್ದೇಶಕ ಹೇಮಂತ್ ರಾವ್ ಬೇಸರ
ಸುಮಾರು ಮೂರು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ನಾಗ್ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಬೇಕು ಅಂತ ಅಭಿಯಾನ ಆರಂಭ ಆಗಿತ್ತು. ಕನ್ನಡ ಚಿತ್ರರಂಗದ ಸ್ಟಾರ್ ನಟರುಗಳೇ ಈ ಅಭಿಯಾನದಲ್ಲಿ ಭಾಗಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿತ್ತು.
ಕನ್ನಡ ಚಿತ್ರರಂಗ ಸೇರಿದಂತೆ ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಎಲ್ಲರೂ ಲೆಜೆಂಡರಿ ನಟ ಅನಂತ್ನಾಗ್ ಅವರಿಗೆ ಪದ್ಮ ಪ್ರಶಸ್ತಿಯನ್ನು ಆರಂಭ ನೀಡಬೇಕು ಅಂತ ಧ್ವನಿಗೂಡಿಸಿದ್ದರು. ಕಳೆದ ಮೂರು ನಾಲ್ಕು-ವರ್ಷಗಳಿಂದ ಚಿತ್ರರಂಗದವರೇ ಸ್ವಯಂ ಪ್ರೇರಿತರಾಗಿ ಪದ್ಮ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರಲು ಪ್ರಯತ್ನ ಪಡುತ್ತಲೇ ಇದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ.

ಈ ವರ್ಷ ಕೂಡ ಕನ್ನಡದ ಲೆಜೆಂಡರಿ ನಟ ಅನಂತ್ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಬಾರಿ ಕೂಡ ನಿರಾಸೆ ಆಗಿದೆ. ಪ್ರಶಸ್ತಿಗಳ ಪಟ್ಟಿಯಲ್ಲಿ ಲೆಜೆಂಡರಿ ನಟ ಆನಂತ್ನಾಗ್ ಅವರ ಹೆಸರು ಇಲ್ಲ. ಈ ಕಾರಣಕ್ಕೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಿರ್ದೇಶಕ ಹೇಮಂತ್ ಎಂ ರಾಮ್ ತಮ್ಮ ಎಕ್ಸ್ ಖಾತೆಯಲ್ಲಿ ಬೇಸರ ಹೊರ ಹಾಕಿದ್ದಾರೆ.
2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಸಾಲಿನಲ್ಲಿ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳಿಗೆ ಜನರೇ ತಮ್ಮ ನಡುವೆ ಇರುವ ಸಾಧಕರ ಹೆಸರನ್ನು ಶಿಫಾರಸು ಮಾಡಬಹುದೆಂದು ಮನವಿ ಮಾಡಿದ್ದರು. ಆ ವೇಳೆನೂ 'ಅನಂತ್ನಾಗ್ ಫಾರ್ ಪದ್ಮ' ಹ್ಯಾಶ್ಟ್ಯಾಗ್ನಲ್ಲಿ ಅಭಿಯಾನ ಆರಂಭ ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೂ ನಡೆಯುತ್ತಲೇ ಇದೆ.

ನಿನ್ನೆಯಷ್ಟೇ (ಜನವರಿ 26) ಪದ್ಮ ಪ್ರಶಸ್ತಿ ಅನೌನ್ಸ್ ಆಗಿದೆ. ಈ ಪಟ್ಟಿಯಲ್ಲೂ ಅನಂತ್ನಾಗ್ ಹೆಸರು ಇಲ್ಲ. ಹೀಗಾಗಿ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದ ನಿರ್ದೇಶಕ ಹೇಮಂತ್ ಎಂ ರಾವ್ ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. "ಮತ್ತೊಂದು ವರ್ಷ, ಅನಂತ್ ಸರ್ಗೆ ಪದ್ಮ ಪ್ರಶಸ್ತಿ ಇಲ್ಲ." ಎಂದು ಬೇಸರ ಹೊರ ಹಾಕಿದ್ದಾರೆ.
ಹಾಗೇಯೇ.. "ಬೇರೆ ಚಿತ್ರರಂಗದ ಶ್ರೇಷ್ಠ ಕಲಾವಿದರು ಹಾಗೂ ದಂತಕಥೆಗಳನ್ನು ನಡೆಸಿಕೊಳ್ಳುವ ರೀತಿಯನ್ನು ನೋಡಿ ಅಸೂಯೆ ಪಡುವುದನ್ನು ನನಗೆ ತಡೆಯಲು ಆಗಲಿಲ್ಲ. ನಾಲ್ಕು ದಶಕಗಳಿಂದ ಚಿತ್ರರಂಗಕ್ಕೆ ಅದ್ಭುತ ಸೇವೆ ಸಲ್ಲಿಸಿರುವ ವ್ಯಕ್ತಿಯನ್ನು ಒಂದೇ ಒಂದು ಬಾರಿ ಪರಿಗಣನೆಗೆ ತೆಗೆದುಕೊಳ್ಳದೆ ಇರುವುದೇ ದುರಂತ. ಇದು ನಂಬಲಸಾಧ್ಯ." ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆದರೆ, ಸ್ವತ: ಅನಂತ್ನಾಗ್ ಅವರೇ ಪದ್ಮ ಪ್ರಶಸ್ತಿ ಬಗ್ಗೆ ಅಭಿಯಾನವನ್ನು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ದಯವಿಟ್ಟು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅನಂತ್ ನಾಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಅನ್ನುವ ಅಭಿಯಾನವನ್ನು ಮತ್ತೆ ಆರಂಭ ಮಾಡಬೇಡಿ. ನೀವು ಅಭಿಯಾನ ಆರಂಭಿಸಿ ಮತ್ತೆ ಆ ಪ್ರಶಸ್ತಿ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದೆ ಇದ್ದಾಗ ನಿಜವಾಗಲೂ ಬೇಸರ ಆಗುತ್ತೆ. ಈ ಕಾರಣಕ್ಕೆ ಅಭಿಯಾನವನ್ನು ನಿಲ್ಲಿಸಿಬಿಡಿ. ಈ ಪ್ರಶಸ್ತಿಯ ಹಿಂದೆ ಬೇರೆ ಬೇರೆ ಲೆಕ್ಕಾಚಾರಗಳು ಇರುತ್ತವೆ." ಎಂದು ಅನಂತ್ ನಾಗ್ ಎರಡು ವರ್ಷಗಳ ಹಿಂದೇನೆ ಮನವಿ ಮಾಡಿದ್ದರು.
ಅನಂತ್ನಾಗ್ ಕನ್ನಡ ಚಿತ್ರರಂಗದ ಲೆಜೆಂಡರಿ ನಟ. ಆದರೆ, ಇವರು ಕನ್ನಡ ಅಷ್ಟೇ ಅಲ್ಲದೆ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆ ಸೇರಿ ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರತೀಯ ಸಿನಿಮಾ ಕ್ಷೇತ್ರಕ್ಕೆ ನಾಲ್ಕೂವರೆ ದಶಕದಿಂದ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಈ ಕಾರಣಕ್ಕೆ ಪದ್ಮ ಪ್ರಶಸ್ತಿ ನೀಡಬೇಕು ಅನ್ನೋದು ಕನ್ನಡ ಚಿತ್ರರಂಗದ ಒತ್ತಾಸೆಯಾಗಿತ್ತು.


Click it and Unblock the Notifications











