ಬೆಂಗಳೂರು ಫಿಲ್ಮ್ ಫೆಸ್ಟಿವಲ್ಗೆ 'ಶಿವಮ್ಮ' ಯಾಕಿಲ್ಲ? ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ಹೇಳಿದ್ದೇನು?
ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಅದರದ್ದೇ ಆದ ಘನತೆ ಗೌರವಿದೆ. ಪ್ರತಿ ವರ್ಷ ದೇಶ-ವಿದೇಶಗಳಿಂದ ಸಾವಿರಾರು ಸಿನಿಮಾಗಳು ಬರುತ್ತವೆ. ಪೈಪೋಟಿಗೆ ನಿಲ್ಲುತ್ತವೆ. ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಯಶಸ್ಸಿಯಾಗಿ ನಡೆಯುತ್ತಿದೆ. ಸಿನಿಪ್ರಿಯರು ಕೂಡ ಆಸಕ್ತಿ ತೋರುತ್ತಿರುವುದರಿಂದ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಪ್ರತಿವರ್ಷದಂತೆ ಈ ವರ್ಷವೂ ಕೂಡ (2024) ಅಂತರಾಷ್ಟ್ರೀಯ ಬೆಂಗಳೂರು ಚಲನ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಫೆಬ್ರವರಿ 29 ರಿಂದ ಮಾರ್ಚ್ 7ನೇ ತಾರೀಕಿನವರೆಗೂ ಈ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ. ಅದಕ್ಕೆ ಬೇಕಿರೋ ಸಕಲ ಸಿದ್ಧತೆಗಳು ಕೂಡ ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ ಕನ್ನಡ ಸಿನಿಮಾ ಶಿವಮ್ಮ ಆಯ್ಕೆಯಾಗದೇ ಇರೋದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಶಿವಮ್ಮ' ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ವಿವಿಧ ಚಲನ ಚಿತ್ರೋತ್ಸವಗಳಲ್ಲಿ ಭಾಗಿಯಾಗಿ ಪ್ರಶಸ್ತಿಯನ್ನು ಗೆದ್ದಿದೆ. ಹೀಗಿರುವಾಗ ಅಂತರಾಷ್ಟ್ರೀಯ ಬೆಂಗಳೂರು ಚಲನ ಚಿತ್ರೋತ್ಸವದಲ್ಲಿ 'ಶಿವಮ್ಮ' ಆಯ್ಕೆ ಆಗದೇ ಇರುವುದಕ್ಕೆ ಮಂಸೋರೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಶಿವಮ್ಮ' ಸಿನಿಮಾಗೆ ನ್ಯಾಯ ಸಿಗಲೇಬೇಕು" ಎಂದು ಅಭಿಯಾನ ಶುರು ಮಾಡಿದ್ದಾರೆ.
"ಈ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜೈ ಶಂಕರ್ ಅವರ 'ಶಿವಮ್ಮ' ಆಯ್ಕೆಯಾಗದಿರುವುದು ಆಶ್ಚರ್ಯ ತಂದಿದೆ. ಸುದ್ದಿಯೊಂದರಲ್ಲಿ ಓದಿದ ಪ್ರಕಾರ ಅವರ ಸಿನೆಮಾ 2023ರಲ್ಲಿ ಸೆನ್ಸಾರ್ ಪ್ರಮಾಣಪತ್ರ ಪಡೆದಿದೆ ಎಂದರೆ , ಚಿತ್ರೋತ್ಸವದ ಮಾನದಂಡದ ಪ್ರಕಾರ ಆಯ್ಕೆಯಾಗಲು ಎಲ್ಲಾ ಅರ್ಹತೆಯನ್ನು ಪಡೆದಿದೆ. ಬುಸಾನ್ ಸೇರಿದಂತೆ ವಿವಿಧ ದೇಶಗಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿರುವ ಸಿನಿಮಾ ಆಯ್ಕೆಯಾಗದಿರುವುದಕ್ಕೆ ನೀಡಿರುವ ಕಾರಣ ಸಮಂಜಸವಾಗಿಲ್ಲ. ಅರ್ಹ ಸಿನಿಮಾನ ಆಯ್ಕೆ ಮಾಡದಿರುವುದು ದುರಂತ . 'ಶಿವಮ್ಮ' ಸಿನಿಮಾಗೆ ನ್ಯಾಯ ಸಿಗಲೇಬೇಕು . #Biffes2024" ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಒತ್ತಾಯ ಮಾಡಿದ್ದಾರೆ.

ಅಂದ್ಹಾಗೆ, 'ಶಿವಮ್ಮ' ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಶಿವಮ್ಮನ ಕಥೆಯನ್ನು ತೆರೆಮೇಲೆ ತಂದಿದ್ದು ನಿರ್ದೇಶಕ ಜೈ ಶಂಕರ್. ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಶಿವಮ್ಮನ ಕಥೆಯೇ ಈ ಸಿನಿಮಾ. ಅನಾರೋಗ್ಯ ಪೀಡಿತನಾಗಿರುವ ಪತಿ. ಮಕ್ಕಳ ಭವಿಷ್ಯವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿರುವ ಈ ಮಹಿಳೆ ಸಂಸಾರ ದೂಗಿಸಲು ನೆಟ್ವರ್ಕಿಂಗ್ ಬ್ಯುಸಿನೆಸ್ಗೆ ಸೇರಿಕೊಳ್ಳುತ್ತಾರೆ. ಹಾಗೇ ತಮ್ಮ ಗ್ರಾಮದ ಜನರನ್ನು ಹೇಗೆಲ್ಲ ಪ್ರೇರೆಪಿಸುತ್ತಾರೆ ಅನ್ನೋದೇ ಕಥೆ.
ಕಮರ್ಷಿಯಲ್ ಸಿನಿಮಾಗಳ ಹೀರೊ ರಿಷಬ್ ಶೆಟ್ಟಿ ಇಂತಹ ವಿಶಿಷ್ಠ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಹಲವು ಚಲನ ಚಿತ್ರೋತ್ಸವಗಳಲ್ಲಿ ಭಾಗಿಯಾಗಿ ಕೆಲವು ಪ್ರಶಸ್ತಿಗಳನ್ನು ಗೆದ್ದು ಬಂದಿದೆ. ಪಕ್ಕಾ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಇಂತಹ ವಿಶಿಷ್ಠ ಚಿತ್ರಗಳ ನಿರ್ಮಾಣದ ಕಡೆಗೂ ರಿಷಬ್ ಶೆಟ್ಟಿ ಗಮನ ಹರಿಸಿದ್ದಾರೆ. ಜೈ ಶಂಕರ್ ಅಂತಹ ಯುವ ನಿರ್ದೇಶಕರು ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಆದರೆ, ಇಂತಹ ಸಿನಿಮಾಗಳನ್ನು ಪ್ರೋತ್ಸಾಹ ಮಾಡುವ ಅಗತ್ಯವಿದೆ. ವಿದೇಶದ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನ ಕಂಡಿದ್ದೇನೋ ಸರಿ. ಕನ್ನಡದ ನೆಲದಲ್ಲೇ ನಡೆಯುತ್ತಿರುವ ಚಲನ ಚಿತ್ರೋತ್ಸವಗಳಲ್ಲಿ 'ಶಿವಮ್ಮ' ಆಯ್ಕೆಯಾಗಬೇಕಿತ್ತು. ಈ ಮೂಲಕ ಈ ಪ್ರಯೋಗಾತ್ಮಕ ಸಿನಿಮಾವನ್ನು ಸಿನಿಪ್ರಿಯರು ನೋಡಿ ಅವರೇ ಪ್ರಚಾರ ಮಾಡುತ್ತಿದ್ದರು. ಇದರಿಂದ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಮಾಡಿ, ಜನರನ್ನು ಕರೆತರುವ ಸಾಧ್ಯತೆಗಳು ಇತ್ತು. ಆದ್ರೀಗ ಆ ಅವಕಾಶವನ್ನು 'ಶಿವಮ್ಮ' ಸಿನಿಮಾ ಕಳೆದುಕೊಂಡಿದೆ. ಇತ್ತ ಮಂಸೋರೆ ಕೂಡ ತಮ್ಮ ಅಭಿಪ್ರಯಾ ಹೊರ ಹಾಕಿದ್ದಾರೆ. ಪರಿಣಾಮ,ಇನ್ನೊಂದು ವಾರದಲ್ಲಿ 'ಶಿವಮ್ಮ' ಬೆಂಗಳೂರು ಫಿಲ್ಮ್ ಫೆಸ್ಟಿವಲ್ಗೆ ಸೇರ್ಪಡೆಯಾಗುತ್ತಾ? ಅನ್ನೋದನ್ನು ನೋಡಬೇಕಿದಯಷ್ಟೇ.


Click it and Unblock the Notifications











