ಲಾಕ್ಡೌನ್ನಲ್ಲಿಯೇ ವಿಶಿಷ್ಟ ಪ್ರಯೋಗದ ಸಿನಿಮಾ ಮಾಡಲಿದ್ದಾರೆ 'ಮಠ' ಗುರುಪ್ರಸಾದ್
ನಿರ್ದೇಶಕ 'ಮಠ' ಗುರುಪ್ರಸಾದ್ ಈಗೇನು ಮಾಡುತ್ತಿದ್ದಾರೆ? ದೂರದ ಫಾರ್ಮ್ ಹೌಸ್ ಒಂದರಲ್ಲಿ ಕುಳಿತು 'ರಂಗನಾಯಕ' ಚಿತ್ರದ ಕಥೆ ಹೊಸೆಯುತ್ತಿದ್ದಾರೆ. ಲಾಕ್ಡೌನ್ ಕಾರಣದಿಂದ ಹೊರಗೆಲ್ಲೂ ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಿನವೂ ಫೇಸ್ಬುಕ್ನಲ್ಲಿ ಲೈವ್ ಬಂದು ತಮ್ಮ ಅನುಭವದ, ಕಂಡು ಕೇಳಿದ ಒಂದಷ್ಟು ಹಾಸ್ಯ ಪ್ರಸಂಗಗಳನ್ನು ಹೇಳಿ ವೀಕ್ಷಕರಿಗೆ ರಸಾಯನ ಉಣಬಡಿಸುತ್ತಿದ್ದಾರೆ.
Recommended Video
ಇದರ ನಡುವೆಯೇ ಅವರು ಮತ್ತೊಂದು ಸಿನಿಮಾಕ್ಕೆ ಸಿದ್ಧತೆ ನಡೆಸಿದ್ದಾರೆ. ಲಾಕ್ ಡೌನ್ ನಡುವೆಯೇ ಅವರು ಕಥೆಯನ್ನು ಪೂರ್ಣಗೊಳಿಸಿದ್ದಾರೆ. ಗುರುಪ್ರಸಾದ್ ಅವರ ಸಿನಿಮಾಗಳಲ್ಲಿ ಹೊರಾಂಗಣ ಚಿತ್ರೀಕರಣ ತೀರಾ ಕಡಿಮೆ. 'ಮಠ', 'ಎದ್ದೇಳು ಮಂಜುನಾಥ', 'ಡೈರೆಕ್ಟರ್ಸ್ ಸ್ಪೆಷಲ್' ಮತ್ತು 'ಎರಡನೆಯ ಸಲ' ಚಿತ್ರಗಳಲ್ಲಿ ಬಹುತೇಕ ಭಾಗ ಒಳಾಂಗಣದಲ್ಲಿ ಚಿತ್ರೀಕರಣಗೊಂಡಿದ್ದವು. ಮುಂದೆ ಓದಿ...

ಒಳಾಂಗಣದಲ್ಲಿಯೇ ಸಿನಿಮಾ
ಲಾಕ್ ಡೌನ್ ನಡುವೆಯೇ ಹಾಸ್ಯ ಕಥಾ ಹಂದರದ ಚಿತ್ರವನ್ನು ಮಾಡಲು ಅವರು ತಯಾರಿ ನಡೆಸಿದ್ದಾರೆ. ಲಾಕ್ಡೌನ್ನಲ್ಲಿ ಹೊರಗೆ ಎಲ್ಲಿಗೂ ಹೋಗುವಂತಿಲ್ಲ. ಈ ಸಂದರ್ಭದಲ್ಲಿ ಅವರು ಸಂಪೂರ್ಣ ಒಳಾಂಗಣದಲ್ಲಿಯೇ ಕಡಿಮೆ ಕಲಾವಿದರು, ತಂತ್ರಜ್ಞರನ್ನು ಬಳಸಿಕೊಂಡು ಚಿತ್ರೀಕರಣ ಆರಂಭಿಸಲಿದ್ದಾರಂತೆ.

ನಿರ್ಮಾಪಕರ ಜತೆ ಒಪ್ಪಂದ
ಇದಕ್ಕಾಗಿ ಅವರು ಕಥೆಯೊಂದನ್ನು ಸಿದ್ಧಪಡಿಸಿದ್ದಾರೆ. ನಿರ್ಮಾಪಕರೊಬ್ಬರೊಂದಿಗೆ ಒಪ್ಪಂದ ನಡೆಸುವ ಮಾತುಕತೆ ಬಾಕಿ ಉಳಿದಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ. ನಾಲ್ಕು ಗೋಡೆಯ ನಡುವಿನ ಚಿತ್ರವಾದರೂ ಸುಮಾರು ಎರಡೂವರೆ ಗಂಟೆ ಚಿತ್ರ ಇರಲಿದೆಯಂತೆ.

ಆಪ್ನಲ್ಲಿ ಹಣ ಕೊಟ್ಟು ವೀಕ್ಷಿಸಿ
ಅಂದಹಾಗೆ, ಈ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವುದಿಲ್ಲ. ಬದಲಾಗಿ ಗುರುಪ್ರಸಾದ್ ಅವರ ಅಧಿಕೃತ ಆಪ್ನಲ್ಲಿ ಬಿಡುಗಡೆಯಾಗಲಿದೆ. ವೀಕ್ಷಕರು 100 ರೂ ಪಾವತಿ ಮಾಡುವ ಮೂಲಕ ಆಪ್ನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ.

ಇದಕ್ಕೆ ಬೇರೆ ಕಲಾವಿದರು ಬೇಕಿಲ್ಲ
ಹಾಗಾದರೆ ಚಿತ್ರದ ಹೀರೋ ಯಾರು? ಹೀರೋಯಿನ್ ಯಾರು? ಕಥೆ ಏನಿರಲಿದೆ? ಸದ್ಯಕ್ಕೆ ಅವರು ಗುಟ್ಟುಬಿಟ್ಟುಕೊಟ್ಟಿಲ್ಲ. ಒಬ್ಬರ ರಂಜಕನಾಗಿ ಯಾವುದೇ ಕಲಾವಿದರ ಅಗತ್ಯವಿಲ್ಲ. ನಾನೇ ಎಲ್ಲರನ್ನೂ ನಗಿಸುತ್ತೇನೆ. ಪ್ರತಿ ದಿನ ಫೇಸ್ಬುಕ್ ಲೈವ್ ಮೂಲಕ ಜನರನ್ನು ತಲುಪುತ್ತಿದ್ದೇನೆ ಎಂದಿದ್ದಾರೆ.

ಅಪರೂಪದ ಪ್ರಯೋಗ
ಪರಿಸ್ಥಿತಿ ಸುಧಾರಿಸಿದರೆ ಜಗ್ಗೇಶ್ ಅವರೊಂದಿಗಿನ 'ರಂಗನಾಯಕ' ಚಿತ್ರವನ್ನು ಮುಂದುವರಿಸುತ್ತೇನೆ. ಆದರೆ ಅಲ್ಲಿಯವರೆಗೆ ಲಾಕ್ ಡೌನ್ ಅವಧಿಯಲ್ಲಿ ಒಂದು ಸಿನಿಮಾ ಮಾಡಬಹುದು ಅನ್ನುವುದನ್ನು ಸಾಬೀಪಡಿಸಲು ಪ್ರಯತ್ನ ಮಾಡಲಿದ್ದೇನೆ. ಇದು ಅಪರೂಪದ ಪ್ರಯೋಗವಾಗಿರಲಿದೆ ಎಂದು ತಿಳಿಸಿದ್ದಾರೆ.


Click it and Unblock the Notifications











