ತೆಲುಗು ಸಿನಿಮಾ ಮಾಡೋಕೆ ಹೋಗಿ 3 ಕಾರು, ₹16 ಕೋಟಿ ಕಳ್ಕೊಂಡ ನಾಗಶೇಖರ್.. ಮುಂದೇನಾಯ್ತು?
ಸ್ಯಾಂಡ್ವುಡ್ನ ಬೆಳ್ಳಿ ಪರದೆ ಮೇಲೆ ಒಳ್ಳೊಳ್ಳೆ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟ ನಿರ್ದೇಶಕ ನಾಗಶೇಖರ್. 'ಅರಮನೆ', 'ಸಂಜು ವೆಡ್ಸ್ ಗೀತಾ', 'ಮೈನಾ' ದಂತಹ ಲವ್ ಕಮ್ ಎಮೋಷನಲ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ. ಇತ್ತೀಚೆಗೆ ಶ್ರೀನಗರ ಕಿಟ್ಟಿ, ರಚಿತಾ ರಾವ್ ಕಾಂಬಿನೇಷನ್ನಲ್ಲಿ 'ಸಂಜು ವೆಡ್ಸ್ ಗೀತಾ 2' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ನಿರೀಕ್ಷೆ ಮಾಡಿದಷ್ಟು ಯಶಸ್ಸು ತಂದುಕೊಟ್ಟಿಲ್ಲ.
ಹೀಗಾಗಿ ಮತ್ತೊಂದು ದೃಶ್ಯಗಳನ್ನು ಸೇರಿಸಿ 'ಸಂಜು ವೆಡ್ಸ್ ಗೀತಾ 2' ಮರುಬಿಡುಗಡೆ ಮಾಡಲಾಗಿದೆ. ಈ ವೇಳೆ ನಾಗಶೇಖರ್ ಅವರಿಗೆ ಕಷ್ಟಗಳು ಎದುರಾಗಿವೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಚಾರಕ್ಕೆ ಬರುತ್ತಿಲ್ಲ ಎಂದು ವಿವಾದ ಮಾಡಿಕೊಂಡಿದ್ದಾರೆ. ಇವೆಲ್ಲ ಏನೇ ಇದ್ದರೂ ನಾಗಶೇಖರ್ ಪ್ರೇಕ್ಷಕರಿಗೆ ವಿಜ್ಯೂವಲಿ ಒಂದೊಳ್ಳೆ ಅನುಭವನ್ನು ಕೊಡುವ ಕೊಡಿವಂತಹ ನಿರ್ದೇಶಕ. ಇತ್ತೀಚೆಗೆ ನಿರ್ದೇಶಿಸಿದ ಸಿನಿಮಾಗಳಲ್ಲಿ ಸ್ಕ್ರೀನ್ಪ್ಲೇ ಮಾಡುವಲ್ಲಿ ಎಡವಿ ಕೋಟಿ ಲೆಕ್ಕದಲ್ಲಿ ಹಣವನ್ನು ಕಳೆದುಕೊಂಡಿದ್ದೂ ಇದೆ.

ಐದು ವರ್ಷಗಳ ಹಿಂದೆ ನಾಗಶೇಖರ್ ತೆಲುಗು ಸಿನಿಮಾ ಮಾಡುವುಕ್ಕೆ ಮುಂದಾಗಿದ್ದರು. ಸ್ನೇಹಿತರೊಬ್ಬರನ್ನು ಜೊತೆಗೂಡಿಸಿಕೊಂಡು 'ಗುರ್ತುಂದಾ ಸೀತಾಕಾಲಂ' ಎನ್ನುವ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದರು. ಇದು ಕನ್ನಡದಲ್ಲಿ ಹಿಟ್ ಆಗಿದ್ದ 'ಲವ್ ಮಾಕ್ಟೇಲ್' ಸಿನಿಮಾದ ರಿಮೇಕ್. ತಮನ್ನಾ ಭಾಟಿಯಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಡಾರ್ಲಿಂಗ್ ಕೃಷ್ಣ ಮಾಡಿದ ಪಾತ್ರದಲ್ಲಿ ಸತ್ಯದೇವ್ ನಟಿಸಿದ್ದರು. ಆದರೆ, ನಿರೀಕ್ಷೆ ಮಾಡಿದಂತೆ ಸಿನಿಮಾ ಗಳಿಸಲಿಲ್ಲ. ಇದರಿಂದ ನಾಗಶೇಖರ್ಗೆ ಸಿಕ್ಕಾಪಟ್ಟೆ ನಷ್ಟ ಆಗಿತ್ತು.
'ಗುರ್ತುಂದಾ ಸೀತಾಕಾಲಂ' ಸಿನಿಮಾ ಮಾಡಿ ಮೋಸ ಹೋಗಿದ್ದು, 16 ಕೋಟಿ ರೂಪಾಯಿ, 3 ದುಬಾರಿ ಕಾರನ್ನು ಕಳೆದುಕೊಂಡಿದ್ದನ್ನು ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ. ತೆಲುಗು ಸಿನಿಮಾ ಮಾಡುವುದಕ್ಕೆ ಎಲ್ಲಿ ಎಡವಿದ್ದು ಅನ್ನೋದನ್ನು ರಿವೀಲ್ ಮಾಡಿದ್ದಾರೆ.
"ತೆಲುಗು ಸಿನಿಮಾ ಮಾಡುವಾಗ ಕೋವಿಡ್ ಕಾಲ. ಆಗ ನಾನು ಮತ್ತು ನನ್ನ ಸ್ನೇಹಿತ ವಿಜಯ್ ಭಾವನಾ ರವಿ ಎಂಬುವವರು ಇಬ್ಬರೂ ಪ್ಲಾನ್ ಮಾಡಿದ್ವಿ. ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ವಿ. ಅಲ್ಲಿ ಒಂದಷ್ಟು ಸಾಲಗಳನ್ನು ಮಾಡಿದ್ವಿ. ಅಲ್ಲಿ ಸಾಲ ಕೊಡುವುದಕ್ಕೆ ಅಂತ ಬಂದವರು ನಮ್ಮಿಂದ ಸಿನಿಮಾವನ್ನೇ ಬರೆಸಿಕೊಂಡರು. ಅದರಿಂದ ಬರುವ ಹಣವನ್ನೆಲ್ಲಾ ತೆಗೆದುಕೊಂಡರು. ಆ ಮೇಲೆ ನಾನೇ ಡಿಸ್ಟ್ರಿಬ್ಯೂಟ್ ಮಾಡುತ್ತೀನಿ ಅಂತ ಹೇಳಿದರು. ಅದಕ್ಕೆ ನಮ್ಮಿಂದ ಒಂದಷ್ಟು ಡಾಕ್ಯೂಮೆಂಟ್ಗೆ ಸಹಿಯನ್ನು ಮಾಡಿಸಿಕೊಂಡರು. ಆ ಮೇಲೆ ಸಿನಿಮಾ ರಿಲೀಸ್ ಆಯ್ತು." ಎಂದು ತಮಗಾದ ಮೋಸದ ಬಗ್ಗೆ ನಾಗಶೇಖರ್ ರಿವೀಲ್ ಮಾಡಿದ್ದಾರೆ.

ತೆಲುಗು ಮಂದಿ ಮಾಡಿಸಿಕೊಂಡಿರುವ ಡಾಕ್ಯೂಮೆಂಟ್ನಲ್ಲಿ ಏನೂ ಇರಲಿಲ್ಲ. ಅವರಿಗೆ ಬರಬೇಕಿದ್ದ ಹಣದ ಬಗ್ಗೆ ಎಲ್ಲೂ ಮಾಹಿತಿನೇ ಇರಲಿಲ್ಲ. ಖಾಲಿ ಪೇಪರ್ನಲ್ಲಿ ಸಹಿ ಮಾಡಿಸಿಕೊಂಡು ಇಟ್ಟುಕೊಂಡಿದ್ದರು ಎನ್ನುತ್ತಾರೆ ನಾಗಶೇಖರ್. "ತುಂಬಾ ಅದ್ಧೂರಿಯಾಗಿ ಮಾಡಿದ ಸಿನಿಮಾ. ಫೋಟೊಗ್ರಾಫಿಯಲ್ಲಿ ಅದ್ಭುತವಾಗಿ ಈ ಸಿನಿಮಾವನ್ನು ಮಾಡಲಾಗಿತ್ತು. ಸ್ವತ: ತಮನ್ನಾ ಅಂತೂ ಖುಷಿಯಾಗಿಬಿಟ್ಟರು. ಮ್ಯೂಸಿಕ್, ತಾರಾಗಣ ಲೆಕ್ಕದಲ್ಲಿ ದೊಡ್ಡ ಸಿನಿಮಾ. ಕೊನೆಗೆ ಸಿನಿಮಾ ರಿಲೀಸ್ ಆಯ್ತು. ಡಿಸೆಂಬರ್ 9ಕ್ಕೆ ರಿಲೀಸ್ ಆಯ್ತು. ನಾನು 11 ಗಂಟೆಗೆ ಥಿಯೇಟರ್ನಿಂದ ಆಚೆ ಬಂದೆ. ಜೋರು ಮಳೆ ಬರುತ್ತಿತ್ತು." ಎಂದು ಸಿನಿಮಾ ಸೋಲಿಗೆ ಮಳೆ ಕಾರಣ ಎಂದು ನಾಗಶೇಖರ್ ಹೇಳಿದ್ದಾರೆ.
ಅಷ್ಟೊತ್ತಿಗಾಗಲೇ ನಾಗಶೇಖರ್ ತೆಲು ಸಿನಿಮಾ ಮಾಡುವುದಕ್ಕೆ ಹೋಗಿ ಕಾರನ್ನು ಮಾರಿಕೊಂಡಿದ್ದರು. "ಮೂರು ಕಾರು ಮಾರಿದ್ದೆ. ಒಂದು ಬೆನ್ಜ್, ಔಡಿ ಕ್ಯೂ 7, ಇನ್ನೊಂದು ಇನ್ನೋವಾ. ಬೆಂಗಳೂರಿನಿಂದ ಮೂರು ಕಾರು ತೆಗೆದುಕೊಂಡು ಹೋಗಿದ್ದೆ. ಅಷ್ಟೊತ್ತಿಗೆ ಮೂರನ್ನೂ ಮಾರಿದ್ದೆ. ಮಳೆಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದರು. ಎರಡು ದಿನ ನೋಡಿದೆ ಜನರು ಬೋಂಡಾ ಬಜ್ಜಿ ತೆಗೆದುಕೊಳ್ಳುವುದಕ್ಕೂ ಆಚೆ ಬರುತ್ತಿಲ್ಲ. ಮೂರನೇ ದಿನ ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಸಕ್ಸಸ್ ಮೀಟ್ ಮಾಡಿದೆ. ನಾಲ್ಕನೇ ದಿನ ಎದ್ದು ಬರಬೇಕಾದರೆ, ಅಮ್ಮನಿಗೆ ಫೋನ್ ಮಾಡಿದೆ. 16 ಕೋಟಿ ರೂಪಾಯಿ ಹೋಯ್ತು ಅಂದೆ. ಸರಿ ಬಾ ಮುಂದೆ ₹30 ಕೋಟಿ ಹಾಕಿ ಸಿನಿಮಾ ಮಾಡು. ₹60 ಕೋಟಿ ಬರಬಹುದು ಅಂದರು" ತೆಲುಗು ಸಿನಿಮಾ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











