ಪೊಲೀಸ್ ಆಗಬೇಕೆಂದುಕೊಂಡಿದ್ದ ನಿರ್ದೇಶಕ ಪವನ್ ಒಡೆಯರ್ ಹೀಗಾದರು...
ಅಂದುಕೊಂಡಂತೆಯೇ ಜೀವನದ ಗುರಿ ಸಾಧಿಸುವುದು ಸುಲಭದ ಮಾತಲ್ಲ. ಹಾಗೆ ಅಂದುಕೊಂಡ ಗುರಿ ಇದ್ದಕ್ಕಿದ್ದಂತೆ ಬದಲಾಗುವುದೂ ಸಾಮಾನ್ಯ. ಎಷ್ಟೋ ಮಂದಿ ತಮ್ಮ ಬದುಕಿನ ಪಯಣದ ನಿರ್ಧಾರವನ್ನು ಬದಲಿಸಿಕೊಂಡಿದ್ದಾರೆ. ಕೆಲವರು ಪದೇ ಪದೇ ತಮ್ಮ ನಿರ್ಧಾರ ಬದಲಿಸಿಕೊಳ್ಳುತ್ತಾರೆ. ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಅವರಲ್ಲಿ ನಿರ್ದೇಶಕ ಪವನ್ ಒಡೆಯರ್ ಒಬ್ಬರು.
ಪವನ್ ಒಡೆಯರ್ ತಮ್ಮ ರಂಜನಾತ್ಮಕ ಚಿತ್ರಗಳಿಂದ ಹೆಸರಾದವರು. ಗೆಲುವಿನ ಸೂತ್ರ ಕಂಡುಕೊಂಡಿರುವ ನಿರ್ದೇಶಕರಲ್ಲಿ ಅವರೂ ಒಬ್ಬರು. ನಿರ್ದೇಶಕರಾಗಿ ಖ್ಯಾತಿ ಗಳಿಸಿದ ಬಳಿಕ ನಾಯಕರಾಗಿಯೂ ಒಂದು ಸಿನಿಮಾದಲ್ಲಿ ಪ್ರಯೋಗಕ್ಕೆ ಒಡ್ಡಿಕೊಂಡಿದ್ದರು. ಆದರೆ ಅವರ ಕನಸು ಬೇರೆಯದೇ ಇತ್ತು. ಮುಂದೆ ಓದಿ...

ಪೊಲೀಸ್ ಆಗಬೇಕೆಂಬ ಕನಸು
ತಮ್ಮ ಹಳೆಯ ಫೋಟೊವೊಂದನ್ನು ಹಂಚಿಕೊಂಡಿರುವ ಪವನ್ ಒಡೆಯರ್, 'ಇದು ನಾನೇ. ನನ್ನ ಮೊದಲ ಕಿರುಚಿತ್ರ ಮಾಡುವ ಸಂದರ್ಭದ ಫೋಟೊ. ನಾನು ಪೊಲೀಸ್ ಆಗಬೇಕೆಂದು ಯಾವಾಗಲೂ ಬಯಸುತ್ತಿದ್ದೆ. ಪೊಲೀಸ್ ಆಗಬೇಕು ಅನ್ನೊ ಕನಸು ನನಸಾಗಲೇ ಇಲ್ಲ' ಎಂದು ಬೇಸರದಿಂದ ತಿಳಿಸಿದ್ದಾರೆ.

ಸಾಫ್ಟ್ವೇರ್ ಎಂಜಿನಿಯರ್ ಡೈರೆಕ್ಟರ್ ಆದರು
ಚಿತ್ರರಂಗಕ್ಕೆ ಬರುವ ಮುನ್ನ ಪವನ್, ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರು. ಸಿನಿಮಾ ರಂಗದ ಸೆಳೆತ ಅವರನ್ನು ಸಾಫ್ಟ್ವೇರ್ ಕೆಲಸ ಬಿಟ್ಟು ಬರುವಂತೆ ಮಾಡಿತು. ಬಳಿಕ ಮೊದಲು ಅವರು ಸೇರಿಕೊಂಡಿದ್ದ ಯೋಗರಾಜ್ ಭಟ್ಟರ ತಂಡದಲ್ಲಿ. ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅವರು 'ಗೋವಿಂದಾಯ ನಮಃ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಿರ್ದೇಶಕಾಗಿ ಜನಪ್ರಿಯರಾದರು.

ಪತ್ನಿ ಕೂಡ 'ಪೊಲೀಸ್' ಆಗಿದ್ದರು
ಪವನ್ ಒಡೆಯರ್ ಮಾತ್ರವಲ್ಲ, ಅವರ ಪತ್ನಿ, ನಟಿ ಅಪೇಕ್ಷಾ ಪುರೋಹಿತ್ ಕೂಡ 'ಪೊಲೀಸ್' ಆಗಿದ್ದರು. ಪವನ್ ಹಂಚಿಕೊಂಡಿದ್ದು ತಮ್ಮ ಹಳೆಯ ಕಿರುಚಿತ್ರದ ಫೋಟೊವನ್ನು. ಅವರ ಪತ್ನಿ ಅಪೇಕ್ಷಾ, ಟಿ.ಎನ್. ಸೀತಾರಾಮ್ ನಿರ್ದೇಶನದ 'ಕಾಫಿ ತೋಟ' ಚಿತ್ರದಲ್ಲಿ ಅವರು ಪೊಲೀಸ್ ಆಗಿ ನಟಿಸಿದ್ದರು. ಅವರ ಪಾತ್ರಕ್ಕೆ ಸೈಮಾ ಪ್ರಶಸ್ತಿ ಕೂಡ ದೊರಕಿತ್ತು. ಅ ಫೋಟೊವನ್ನು ಕೂಡ ಇತ್ತೀಚೆಗೆ ಅಪೇಕ್ಷಾ ಶೇರ್ ಮಾಡಿದ್ದರು.

ಪೊಲೀಸ್ ಮೇಡಂ ಮತ್ತು ಸರ್!
'ಗೂಗ್ಲಿ' ಚಿತ್ರದಲ್ಲಿ ಯಶ್ ಅವರಿಗೂ ಪವನ್ 'ಪೊಲೀಸ್' ಪೋಷಾಕು ತೊಡಿಸಿದ್ದರು. 'ರಣವಿಕ್ರಮ'ದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಹೊಸ ಗೆಟಪ್ ನೀಡಿದ್ದರು. ಪವನ್ ಅವರ ಪೋಸ್ಟ್ಗೆ ಬಗೆಬಗೆಯ ಕಾಮೆಂಟ್ಗಳು ಬಂದಿವೆ. ಪವನ್ ಮತ್ತು ಅಪೇಕ್ಷಾ ಅವರ ಪೊಲೀಸ್ ದಿರಿಸಿನ ಎರಡೂ ಫೋಟೊಗಳನ್ನು ಸೇರಿಸಿ, 'ನೋಡ್ರಿ ನಮ್ಮ ಮೇಡಂ ಮತ್ತು ಸರ್ ಹೆಂಗದಾರ' ಎಂಬ ಮೀಮ್ ತಯಾರಿಸಿದ್ದಾರೆ.

ಪೊಲೀಸ್ ಆಗದಿದ್ದದ್ದು ಒಳ್ಳೆಯದೇ ಆಯ್ತು...
'ನೀವು ಪೊಲೀಸ್ ಆಗಿದ್ದರೆ ಪೊಲೀಸರ ಕಥೆ ತೋರಿಸೋರು ಯಾರು?', 'ಆ ಕನಸು ನನಸಾಗಲಿಲ್ಲ ಅಂತ ಯಾಕೆ ತಲೆ ಕೆಡಸ್ಕೊತಿರಿ ಸರ್, ನೀವು ಅಗದಿದ್ದಿದ್ದೆ ಒಳ್ಳೆದು, ಇಲ್ಲದಿದ್ದರೆ ನಮಗೆ "ಗೂಗ್ಲಿ" ನಟಸಾರ್ವಭೌಮ" ದಂಥ ಅದ್ಭುತ ಸಿನಿಮಾ ಸಿಗ್ತಿತ್ತಾ?', 'ನಾವು ಏನಾಗಬೇಕು ಅಂತ ಕನಸು ಕಾಣ್ತಿವೊ ಅದನ್ನು ನನಸು ಮಾಡುವ ಒಂದೇ ಒಂದು ಸಾಧನ ಅಂದರೆ ಅದು ಸಿನೆಮಾ.. ಅದನ್ನು ನೀವು ಸಾಧಿಸಿದ್ದೀರ ಸಾರ್...ಅದೃಷ್ಟವಂತರು' ಎಂದು ಅನೇಕರು ಹೇಳಿದ್ದಾರೆ.


Click it and Unblock the Notifications











