'ಸು ಫ್ರಮ್ ಸೋ'ನಲ್ಲಿ ಭಾವುಕರನ್ನಾಗಿಸಿದ್ದ ಭಾನುವಿನ ಅಸಲಿ ಹೆಸರೇನು? ಈ ಪಾತ್ರ ಸಿಕ್ಕಿದ್ದೇಗೆ?
ಕನ್ನಡದ ಚಿತ್ರರಂಗಕ್ಕೆ ಹೊಸ ಭರವಸೆ ತಂದುಕೊಟ್ಟ ಸಿನಿಮಾ 'ಸು ಫ್ರಮ್ ಸೋ'. ಈ ಸಿನಿಮಾದಲ್ಲಿ ನಟಿಸಿರುವವರು ಬಹುತೇಕ ಹೊಸ ಪ್ರತಿಭೆಗಳೇ. ಹೊಟ್ಟೆ ಹುಣ್ಣಾಗಿಸುವಷ್ಟು ಈ ಸಿನಿಮಾ ನಗಿಸಿ ಜನರ ಮನಗೆದ್ದಿದೆ. ಪ್ರತಿಯೊಂದು ಪಾತ್ರವೂ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ಆಗಿ ಎರಡು ವಾರ ಆಗುತ್ತಿದ್ದರೂ ಬಹುತೇಕ ಕಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಇಷ್ಟು ದಿನ ರವಿ ಅಣ್ಣ, ಅಶೋಕ ಹಾಗೂ ಭಾವನ ಪಾತ್ರಗಳನ್ನು ಹೊಗಳಿ ಕೊಂಡಾಡಿದ್ದಾರೆ. ಇಷ್ಟು ಮಂದಿ ಜನರನ್ನು ನಗಿಸಿ ಮನಗೆದ್ದಿದ್ದರೆ, ಇನ್ನೊಂದು ಪಾತ್ರ ಜನರನ್ನು ಭಾವುಕರನ್ನಾಗಿ ಮಾಡಿ ಮನಸ್ಸು ಗೆದ್ದಿದೆ. ಅದುವೇ ಭಾನು ರೋಲ್. ಈ ಪಾತ್ರದಲ್ಲಿ ನಟಿಸಿದವರ ಅಸಲಿ ಹೆಸರು ಸಂಧ್ಯಾ ಅರಕೆರೆ. ಬಹುತೇಕ ಕರಾವಳಿ ಭಾಗದ ಕಲಾವಿದರ ಮಧ್ಯೆ ಇವರೊಬ್ಬರೇ ಮಂಡ್ಯ ಮೂಲದ ನಟಿಯಾಗಿದ್ದರು.

ಭಾವನಾತ್ಮಕ ಸನ್ನಿವೇಶಗಳಲ್ಲಿ ಭಾನು ಅಲಿಯಾಸ್ ಸಂಧ್ಯಾ ಅರಕೆರೆಯವರದ್ದು ಕಣ್ಣೀರು ಹಾಕಿಸುವ ಪಾತ್ರ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಕೂಡ ಇವರ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಭಾನು ಪಾತ್ರಕ್ಕೆ ಹೊಗಳಿಕೊಂಡಾಡುತ್ತಿದ್ದಾರೆ. ಅದಾಗಲೇ ರಾಜ್ ಬಿ ಶೆಟ್ಟಿಯವರ ಸಿನಿಮಾದಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿ ಅನುಭವಿರುವ ಈ ನಟಿಗೆ 'ಸು ಫ್ರಮ್ ಸೋ' ಹೊಸ ಇಮೇಜ್ ಕೊಟ್ಟಿದೆ. ಹಾಗಿದ್ದರೆ, ಈ ನಟಿಯ ಹಿನ್ನೆಲೆಯೇನು? ಈ ಪಾತ್ರ ಸಿಕ್ಕಿದ್ದು ಹೇಗೆ? ತಿಳಿಯುವುದಕ್ಕೆ ಮುಂದೆ ಓದಿ.
ಸಿನಿಮಾ ಪ್ರಿಯರಿಗೆ ಸಂಧ್ಯಾ ಅರಕೆರೆ ಎನ್ನುವುದಕ್ಕಿಂತ ಭಾನು ಅಂದರೆ ಬಹುಬೇಗನೆ ಅರ್ಥ ಆಗುತ್ತೆ. 'ಸು ಫ್ರಮ್ ಸೋ' ಸಂಧ್ಯಾ ಅರಕೆರೆಯವರಿಗೆ ಆ ಮಟ್ಟಿಗೆ ಹೆಸರು ತಂದುಕೊಟ್ಟಿದೆ. ಈ ಸಿನಿಮಾ ನೋಡಿದವರೆಲ್ಲರೂ ಈ ನಟಿ ಕೂಡ ಮಂಗಳೂರಿನವರೇ ಎಂದು ಭಾವಿಸಿದ್ದರು. ಆದರೆ, ಅವರು ಹಿನ್ನೆಲೆ ಬಹಳ ದೊಡ್ಡದಿದೆ. ನಟನೆಯ ಅನುಭವನೂ ದೊಡ್ದದು. ಸಿನಿಮಾ ಕಡೆಗೆ ತನ್ನ ಜರ್ನಿಯ ಬಗ್ಗೆ, 'ಸು ಫ್ರಮ್ ಸೋ'ಗೆ ಅವಕಾಶ ಸಿಕ್ಕಿದ್ದರ ಬಗ್ಗೆ ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್ಗೆ ರಿವೀಲ್ ಮಾಡಿದ್ದಾರೆ.

ಸಂಧ್ಯಾ ಅರಕೆರೆ ಯವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ್ಣ ತಾಲೂಕಿನ ಅರಕೆರೆಯವರು. ಪಿಯುಸಿವರೆಗೂ ತಮ್ಮ ಶಿಕ್ಷಣವನ್ನು ಅರಕೆರೆಯಲ್ಲಿಯೇ ಓದಿದ್ದಾರೆ. ಆರ್ಟ್ಸ್ನಲ್ಲಿ ಪಿಯುಸಿಯನ್ನು ಮುಗಿಸಿದ ಬಳಿಕ ಡಿಗ್ರಿ. ಪದವಿ ಮುಗಿಯುತ್ತಿದ್ದಂತೆ ಸೀದಾ ನೀನಾಸಂಗೆ ಸೇರಿಕೊಂಡರು. ಅಲ್ಲಿ ಮೂರು ವರ್ಷ ತಿರುಗಾಟವನ್ನು ಮುಗಿಸಿಕೊಂಡು ಏನು ಮಾಡಬೇಕು ಎಂದು ಗೊತ್ತಾಗದೇ ಇರುವಾಗ ಅವರ ಸ್ನೇಹಿತರು ಎಂ.ಎ.ಗೆ ಸೇರಿಕೊಂಡಿದ್ದರು. ನಾಟಕ ಮಾಡುವುದು ಎಲ್ಲಿ ಮಿಸ್ ಆಗುತ್ತೆ ಅಂತಲೋ ಎಂ.ಎ. ಸೇರಿಕೊಂಡರು. ಎರಡನೇ ವರ್ಷದಲ್ಲಿ ಇದ್ದಾಗ 'ಸುಳಿ' ಎನ್ನುವ ಸಿನಿಮಾಗೆ ಅವಕಾಶ ಸಿಕ್ಕಿತ್ತು.
'ಸುಳಿ' ಸಿನಿಮಾ ಇವರ ಬದುಕಿಗೆ ಒಂದು ಟರ್ನಿಂಗ್ ಪಾಯಿಂಟ್. 'ಸುಳಿ' ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದವರೊಬ್ಬರು 'ಭೀಮಸೇನಾ' ಸಿನಿಮಾಗೆ ರೆಫರ್ ಮಾಡಿದ್ದರು. ಆ ಪಾತ್ರವನ್ನು ಅನನ್ಯಾ ಭಟ್ ಮಾಡಬೇಕಿತ್ತು. ಅವರು ಆ ಪಾತ್ರವನ್ನು ಮಿಸ್ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಅನನ್ಯಾ ಭಟ್ ಮಾಡಬೇಕಿದ್ದ ಪಾತ್ರ ಸಂಧ್ಯಾ ಅರಕೆರೆಯವರ ಪಾಲಾಗಿತ್ತು. ಹಾಗೇ ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಗೆ ಅವಕಾಶ ಸಿಗುತ್ತಾ ಹೋಯ್ತು.
"ಬೆಂಗಳೂರು ಸಮುದಾಯ ತಂಡದಲ್ಲಿ ಮಾಲ್ತೇಶ್ ಎನ್ನುವವರು ಕೆಲಸ ಮಾಡುತ್ತಿದ್ದರು. ಅವರು ನಾಟಕ ಹಾಗೂ ಎಂಎ ಮಾಡುವಾಗ ನನ್ನೊಂದಿಗೆ ಓದಿದ್ದರು. ಅವರು ರೂಪಾಂತರ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಿನಿಮಾಗೆ ಸಣ್ಣಗಿರುವ ಹುಡುಗಿಯೊಬ್ಬರು ಬೇಕಿತ್ತು. ಆ ವೇಳೆ ನನ್ನ ಫೋಟೋ ಅಲ್ಲಿ ಪಾಸ್ ಮಾಡಲಾಗಿದೆ. ಮಾಲ್ತೇಶ್ ಫೋಟೋ ಕಳಿಸಿದ ಬಳಿಕ ಮೊದಲು ಕಾಲ್ ಮಾಡಿದ್ದು ರೋಹಿತ್. ಅವರು ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಒಂದು ಪುಟ್ಟ ಪಾತ್ರವಿರುತ್ತೆ. ಎರಡು ಲೈನ್ ಡೈಲಾಗ್ ಇರುತ್ತೆ ಮಾಡಬಹುದಾ? ಅಂತ ಹೇಳಿದರು. ಆ ಪಾತ್ರಕ್ಕೆ ಆಡಿಷನ್ ಮಾಡಿದರು. ಬಳಿಕ 'ಟೋಬಿ' ಸಿನಿಮಾಗೂ ಆಡಿಷನ್ ಮಾಡಿದರು. ಈಗ ಸು ಫ್ರಮ್ ಸೋ" ಎಂದು ಸಂಧ್ಯಾ ಅರಕೆರೆ ಹೇಳಿದ್ದಾರೆ.


Click it and Unblock the Notifications











