"ನಮ್ಮ ದುಡ್ಡು ಕೊಟ್ಟು ಬ್ಲಾಕ್ ಆಗಿದೆ"; 'ಥಗ್ ಲೈಫ್' ಕರ್ನಾಟಕ ವಿತರಕ ವೆಂಕಟೇಶ್ ಮಾತು
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಸದ್ಯಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಆಗುವ ಸುಳಿವು ಸಿಗುತ್ತಿಲ್ಲ. ಕನ್ನಡ ಭಾಷೆಯ ಇತಿಹಾಸದ ಬಗ್ಗೆ ತಪ್ಪಾಗಿ ಮಾತನಾಡಿ ಕಮಲ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ಗೆ ಹೋದರೂ ಪ್ರಯೋಜನವಾಗುತ್ತಿಲ್ಲ.
ಕರ್ನಾಟಕ ಬಿಟ್ಟು ಬೇರೆ ಕಡೆಗಳಲ್ಲಿ 'ಥಗ್ ಲೈಫ್' ಸಿನಿಮಾ ತೆರೆಗೆ ಬಂದಿದೆ. ಆದರೆ ಚಿತ್ರಕ್ಕೆ ನೆಗೆಟಿವ್ ಟಾಕ್ ಬಂದಿದ್ದು ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದೆ. 4 ದಿನಗಳ ಲಾಂಗ್ ವೀಕೆಂಡ್ನಲ್ಲಿ ಸಿನಿಮಾ ವಿಶ್ವದಾದ್ಯಂತ 73 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಕಮಲ್ ಹಾಗೂ ಮಣಿರತ್ನಂ ಕಾಂಬಿನೇಷನ್ ಚಿತ್ರಕ್ಕೆ ಇದು ಕಮ್ಮಿ ಎನ್ನಲಾಗ್ತಿದೆ. ಅದಕ್ಕಿಂತ ಮುಖ್ಯವಾಗಿ ತಮಿಳು ಪ್ರೇಕ್ಷಕರೇ ಚಿತ್ರವನ್ನು ಹೀನಾಯವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಅಂದಾಜು 8.50 ಕೋಟಿ ರೂ.ಗೆ ಕಮಲಾಕರ್ ವೆಂಕಟೇಶ್ ಎಂಬುವವರು 'ಥಗ್ ಲೈಫ್' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ 10 ದಿನ ಬಾಕಿ ಇದ್ದಾಗ ಕಮಲ್ ಹಾಸನ್ ವಿವಾದ ಸೃಷ್ಟಿಸಿಕೊಂಡಿದ್ದರು. ಹಾಗಾಗಿ ರಾಜ್ಯದಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಿಂತು ಹೋಗಿತ್ತು. ಸೂಕ್ತ ಭದ್ರತೆ ನೀಡಿ ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡಬೇಕೆಂದು 'ರಾಜ್ಕಮಲ್ ಫಿಲ್ಮ್ಸ್' ಸಂಸ್ಥೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು.
ಹೈಕೋರ್ಟ್ನಲ್ಲಿ ಬೆಂಬಲ ಸಿಗಬಹುದು ಎಂದುಕೊಂಡಿದ್ದವರಿಗೆ ನಿರಾಸೆ ಕಾದಿತ್ತು. ಕಮಲ್ ಹಾಸನ್ ಹೇಳಿಕೆ ಖಂಡಿಸಿದ್ದ ನ್ಯಾಯಮೂರ್ತಿ ನಾಗ ಪ್ರಸನ್ನ ತರಾಟೆಗೆ ತೆಗೆದುಕೊಂಡಿದ್ದರು. ಕಮಲ್ ಕ್ಷಮೆ ಕೇಳಿದ್ದರೆ ಎಲ್ಲವೂ ಸರಿಹೋಗುತ್ತಿತ್ತು. ನೆಲ ಜಲ ಭಾಷೆಯ ವಿಚಾರದಲ್ಲಿ ರಾಜಿ ಇಲ್ಲ. ಹಿಂದೆ ರಾಜಗೋಪಾಲ ಆಚಾರಿ ಇದೇ ರೀತಿ ಕನ್ನಡದ ಬಗ್ಗೆ ಮಾತನಾಡಿ ಬಳಿಕ ಕ್ಷಮೆ ಕೇಳಿದ್ದ ಘಟನೆಯನ್ನು ನೆನಪಿಸಿದ್ದರು.
ಕರ್ನಾಟಕ ಹೈಕೋರ್ಟ್ನಲ್ಲಿ ಹಿನ್ನೆಲೆಯಾದ ಬೆನ್ನಲ್ಲೇ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ನಲ್ಲಿ ಕೂಡ ಕಮಲ್ ಹಾಸನ್ಗೆ ಹಿನ್ನೆಡೆಯಾಗಿದ್ದು ಕರ್ನಾಟಕ ಹೈಕೋರ್ಟ್ನಲ್ಲೇ ವಿವಾದ ಬಗೆಹರಿಸಿಕೊಳ್ಳುವಂತೆ ನ್ಯಾಯಧೀಶರು ಹೇಳಿದ್ದಾರೆ. ಹಾಗಾಗಿ ಈ ವಾರವೂ 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗುವುದು ಅನುಮಾನ ಎನ್ನುವಂತಾಗಿದೆ. ಸಿನಿಮಾ ವಿತರಣೆಗೆ ಹಣ ಕೊಟ್ಟು ವಿತರಕ ವೆಂಕಟೇಶ್ ಗೊಂದಲಕ್ಕೆ ಸಿಲುಕಿದ್ದಾರೆ.
ಸದ್ಯದ ಪರಿಸ್ಥಿತಿ ಬಗ್ಗೆ ವಿತರಕ ವೆಂಕಟೇಶ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. "ಮುಂದೇನು ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ. ನಮ್ಮ ಹಣ ಕೊಟ್ಟು ಈಗ ಅದು ಬ್ಲಾಕ್ ಆಗುವಂತಾಗಿದೆ. ನಾಳಿನ ಕೋರ್ಟ್ ವಿಚಾರಣೆ ಬಳಿಕ ಮುಂದೇನು ಎನ್ನುವುದನ್ನು ಕಾದುನೋಡಬೇಕಿದೆ. ನಾವು ಸಿನಿಮಾ ಬಿಡುಗಡೆಗೆ ತಯಾರಿ ನಡೆಸಲು ಸಿದ್ಧರಾಗಿದ್ದೆವು. ಅಷ್ಟರಲ್ಲೇ ಈ ರೀತಿ ಆಯಿತು. ಸಿನಿಮಾ ಬಿಡುಗಡೆಗೆ 200 ಸ್ಕ್ರೀನ್ ಬ್ಲಾಕ್ ಮಾಡಿಕೊಂಡಿದ್ದೆವು ಎನ್ನುವುದೆಲ್ಲಾ ಸುಳ್ಳು. ಎಷ್ಟು ಮೊತ್ತಕ್ಕೆ ರೈಟ್ಸ್ ತೆಗೆದುಕೊಂಡಿದ್ದೆವು ಎಂದು ಹೇಳಲು ಸಾಧ್ಯವಿಲ್ಲ, ಇನ್ನು ಒಪ್ಪಂದದ ಪ್ರಕಾರ ಒಂದಷ್ಟು ಹಣ ಕೊಟ್ಟಿದ್ದೇವೆ" ಎಂದು ಹೇಳಿದ್ದಾರೆ.
ವೆಂಕಟೇಶ್ ಅವರ ತಂದೆ ಕಮಲಾಕರ್ ಸಹ ವಿತರಕರಾಗಿ ಗುರ್ತಿಸಿಕೊಂಡಿದ್ದರು. ಈ ಹಿಂದೆ 'ಅಮರನ್', 'ಮಹಾರಾಜ' ಸಿನಿಮಾಗಳನ್ನು ರಾಜ್ಯದಲ್ಲಿ ವಿತರಣೆ ಮಾಡಿದ್ದರು. ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವನ್ನು ಹೈದರಾಬಾದ್-ಕರ್ನಾಟಕ ಭಾಗಗಳಲ್ಲಿ ಬಿಡುಗಡೆ ಮಾಡಿದ್ದರು.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕರ್ ಮಾತನಾಡಿ "ಕಮಲ್ ಹಾಸನ್ ಕ್ಷಮೆ ಕೇಳುವವರಿಗೂ ಸಿನಿಮಾ ಬಿಡುಗಡೆಗೆ ಅವಕಾಶವಿಲ್ಲ. ಕೋರ್ಟ್ ತೀರ್ಪು ಏನು ಬರುತ್ತದೆ ನೋಡೋಣ. ವಿತರಕರು ಸಿನಿಮಾ ರೈಟ್ಸ್ ಕೊಂಡುಕೊಂಡಿದ್ದರು. ಚಿತ್ರಮಂದಿರದ ಮಾಲೀಕರು ಅಡ್ವಾನ್ಸ್ ಕೊಡುವ ಮುನ್ನ ವಿವಾದ ಭುಗಿಲೆದ್ದಿತ್ತು. ಇಲ್ಲದಿದ್ದರೆ ಪ್ರದರ್ಶಕರು ಹಣ ಕೊಟ್ಟು ಸಮಸ್ಯೆ ಎದುರಿಸುವಂತಾಗಿತ್ತು" ಎಂದಿದ್ದಾರೆ.


Click it and Unblock the Notifications











