DK Shivakumar Oath Taking: ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ; ಹಂಸಲೇಖ ಹೇಳಿದಂತೆ ರವಿಚಂದ್ರನ್ 'MLC' ಆಗ್ತಾರಾ?
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉಪಮುಖ್ಯಮಂತ್ರಿಯಾಗಿದ್ದ ಡಿಕೆ ಶಿವಕುಮಾರ್ ಇನ್ಮುಂದೆ ಸಿಎಂ ಡಿಕೆ ಶಿವಕುಮಾರ್. ಕೆಲವು ತಿಂಗಳು ಇಂತಹದ್ದೊಂದು ಕ್ಷಣಕ್ಕಾಗಿ ಡಿಕೆಶಿ ಅಭಿಮಾನಿಗಳು, ಬೆಂಬಲಿಗರು ಎದುರು ನೋಡುತ್ತಿದ್ದರು. ಆ ಕ್ಷಣ ಕೊನೆಗೂ ಬಂದೇ ಬಿಟ್ಟಿದೆ. ಈ ವೇಳೆ ಎಲ್ಲಾ ಕ್ಷಣದ ಗಣ್ಯರಿಗೂ ಆಹ್ವಾನವನ್ನು ನೀಡಲಾಗಿದೆ.
ಇತ್ತ ಡಿಕೆ ಶಿವಕುಮಾರ್ ಕನ್ನಡ ಚಿತ್ರರಂಗದ ಗಣ್ಯರಿಗೂ ಆಹ್ವಾನವನ್ನು ನೀಡಿದ್ದರು. ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಹಂಸಲೇಖ ಹೇಳಿದ ಒಂದು ಮಾತಿನ ಬಗ್ಗೆ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ಹಂಸಲೇಖ ಹೇಳಿದಂತೆ ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಎಂಎಲ್ಸಿ ಆಗಬಹುದೇ? ಹಂಸಲೇಖ ಇಂತಹದ್ದೊಂದು ಸುಳಿವು ನೀಡಿದರೇ?

ನಾನೊಂದು ತೀರ.. ನೀನೊಂದು ತೀರ ಅಂತಾಗಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹಂಸಲೇಖ ಇತ್ತೀಚೆಗೆ ಮತ್ತೆ ಒಂದಾಗಿದ್ದಾರೆ. 'ಕ್ರೇಜಿ ಬ್ರಹ್ಮ' ಕಾರ್ಯಕ್ರಮದಲ್ಲಿ ಈ ಜೋಡಿ ಮತ್ತೆ ಒಂದಾಗಿದ್ದು ಸಂಗೀತ ಪ್ರೇಮಿಗಳ ಕಿವಿಗಳು ಮತ್ತೆ ಅರಳಿವೆ. ರವಿಚಂದ್ರನ್ 65ನೇ ಹುಟ್ಟುಹಬ್ಬದಂದು ನಡೆದ ಈ ಕಾರ್ಯಕ್ರಮದಲ್ಲಿ ಹಂಸಲೇಖ ರಾಜಕೀಯ ಚರ್ಚೆಯೊಂದಕ್ಕೆ ನಾಂದಿ ಹಾಡಿದರೇ? ಸದ್ಯ ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆ ಇಂತಹದ್ದೊಂದು ಚರ್ಚೆಯಂತೂ ಆಗುತ್ತಿದೆ.
ರವಿಚಂದ್ರನ್ 'MLC'
ಇದೇ 'ಕ್ರೇಜಿ ಬ್ರಹ್ಮ' ಕಾರ್ಯಕ್ರಮದಲ್ಲಿ ಹಂಸಲೇಖ ಹಾಗೂ ರವಿಚಂದ್ರನ್ ಇಬ್ಬರೂ ಮತ್ತೆ ಅದೇ ಆತ್ಮೀಯತೆಯಲ್ಲಿಯೇ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ತಮ್ಮ ವೃತ್ತಿ ಬದುಕಿಗೆ ಬೆಳಕಾದ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಮನಸಾರೆ ಹೊಗಳಿದ್ದಾರೆ. ನೆಚ್ಚಿನ ನಟನ ಬರ್ತ್ಡೇಯಂದೆ ಚಿನ್ನದ ಪದಕ ತೊಡಿಸಿ ಶುಭ ಹಾರೈಸಿಸಿದ್ದಾರೆ. ಈ ವೇಳೆ ಹಂಸಲೇಖ ರಾಜಕೀಯ ಚರ್ಚೆಯೊಂದಕ್ಕೆ ನಾಂದಿ ಹಾಡಿದ್ದಾರೆ. ಕ್ರೇಜಿ ಬ್ರಹ್ಮ ವೇದಿಕೆ ಮೇಲೆ "ರವಿಚಂದ್ರನ್ ಅವರ ಕ್ಲಾಸ್ಮೇಟ್ ಡಿ.ಕೆ.ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗುತ್ತಿದ್ದಾರೆ. ಹೀಗಾಗಿ ನಮ್ಮ ಯಜಮಾನರು ಕೂಡ ಶೀಘ್ರದಲ್ಲೇ MLC ಆಗುವ ಸಾಧ್ಯತೆ ಇದೆ" ಎಂದು ಹೇಳಿ ಟ್ವಿಸ್ಟ್ ಕೊಟ್ಟಿದ್ದರು.
ಹಂಸಲೇಖ 'MLC' ಟ್ವಿಸ್ಟ್
ಹಂಸಲೇಖ ಹೀಗೆ ಹೇಳುತ್ತಿದ್ದಂತೆ ರವಿಚಂದ್ರನ್ ಅಭಿಮಾನಿಗಳು ಥ್ರಿಲ್ ಆಗಿಬಿಟ್ಟರು. ಕೂಡಲೇ ಹಂಸಲೇಖ ಅದಕ್ಕೊಂದು ಜಾಣತನದ ವ್ಯಾಖ್ಯಾನವನ್ನು ನೀಡಿದರು. ಇಲ್ಲಿ MLC ಎಂದರೆ 'ಮೆಂಬರ್ ಆಫ್ ಲೆಜಿಸ್ಲೇಟಿವ್ ಕೌನ್ಸಿಲ್' ಅಲ್ಲ, 'ಮ್ಯೂಸಿಕ್ ಲವಿಂಗ್ ಸಿನಿಮಾ' ಎಂದು ನಾದ ಬ್ರಹ್ಮ ಹಂಸಲೇಖ ಹೇಳಿ ಟ್ವಿಸ್ಟ್ ಕೊಟ್ಟಿದ್ದರು. ಹೀಗಿದ್ದರೂ ಡಿಕೆ ಶಿವಕುಮಾರ್ ಸಿಎಂ ಆದ ಬೆನ್ನಲ್ಲೇ ರವಿಚಂದ್ರನ್ ಎಂಎಲ್ಸಿ ಆಗಬಹುದೇ? ಹಂಸಲೇಖ ಈ ಬಗ್ಗೆ ಸುಳಿವು ನೀಡಿರಬಹುದೇ? ಎಂಬ ಅನುಮಾನ ಕ್ರೇಜಿ ಅಭಿಮಾನಿಗಳನ್ನು ಕಾಡುವುದಕ್ಕೆ ಶುರು ಮಾಡಿದೆ.

ರವಿಚಂದ್ರನ್ ಭಾವುಕ
ಡಿಕೆ ಶಿವಕುಮಾರ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕ್ಲಾಸ್ಮೇಟ್. ಹೀಗಾಗಿ ಇಬ್ಬರಲ್ಲೂ ಆತ್ಮೀಯತೆಯಿದೆ. ಇತ್ತೀಚೆಗೆ ನಡೆದ ಉತ್ಸವದಲ್ಲಿ ಕಷ್ಟ ಕಾಲದಲ್ಲಿ ಡಿಕೆ ಶಿವಕುಮಾರ್ ನೆರವನ್ನು ರವಿಚಂದ್ರನ್ ನೆನಪಿಸಿಕೊಂಡಿದ್ದರು. ಅಲ್ಲದೇ, ತಮ್ಮ ವೈಯಕ್ತಿಕ ಜೀವನದ ಏಳುಬೀಳುಗಳನ್ನು ಹಂಚಿಕೊಂಡು ಭಾವುಕರಾದರು. "ಸಿನಿಮಾದ ಹುಚ್ಚಿಗಾಗಿ 15 ವರ್ಷಗಳ ಕಾಲ ನನ್ನ ಹೆಂಡತಿ, ಮಕ್ಕಳನ್ನು ಕಡೆಗಣಿಸಿದ್ದೆ. ನಾನು ಸೋತಾಗ, ಗೆದ್ದಾಗ ಎಲ್ಲಾ ಸಮಯದಲ್ಲೂ ಪತ್ನಿ ಸುಮತಿ ಜವಾಬ್ದಾರಿಯಿಂದ ನೋಡಿಕೊಂಡರು. ಅವಳು ಇಲ್ಲದೇ ಹೋಗಿದ್ದರೆ, ನನ್ನ ಬದುಕು ಇಷ್ಟೊಂದು ಸುಂದರವಾಗಿರುತ್ತಿರಲಿಲ್ಲ. ನಾನು ನಟಿಸಿದ 'ಮನೆದೇವರು' ಸಿನಿಮಾದ ಜಾನೂ ಪಾತ್ರಕ್ಕೆ ಸ್ಪೂರ್ತಿಯೇ ನನ್ನ ಪತ್ನಿ ಸುಮತಿ" ಎಂದು ಪತ್ನಿಯ ತ್ಯಾಗವನ್ನು ಸ್ಮರಿಸಿದ್ದರು.
ಕ್ರೇಜಿಸ್ಟಾರ್ ಎಂಎಲ್ಸಿ ಆಗಬಹುದೇ?
ರವಿಚಂದ್ರನ್ ಇದೂವರೆಗೂ ರಾಜಕೀಯದ ಬಗ್ಗೆ ಎಲ್ಲೂ ಹೇಳಿಕೆಗಳನ್ನು ಕೊಟ್ಟಿಲ್ಲ. ಎಲ್ಲೂ ರಾಜಕೀಯದ ಬಗ್ಗೆ ಆಸಕ್ತಿಯನ್ನು ಹೊರ ಹಾಕಿಲ್ಲ. ಅಷ್ಟೇ ಅಲ್ಲದೇ, ರಾಜಕೀಯಕ್ಕೂ, ರವಿಚಂದ್ರನ್ಗೂ ಹೊಂದಾಣಿಕೆ ಆಗುತ್ತಾ? ಅನ್ನೋದು ಸದ್ಯಕ್ಕೆ ಊಹಿಸಿಕೊಳ್ಳುವುದು ಕಷ್ಟ. ಆದರೆ, ಒಂದು ವೇಳೆ ಡಿಕೆ ಶಿವಕುಮಾರ್ ಅವಕಾಶ ಕೊಟ್ಟರೆ, ಕ್ರೇಜಿಸ್ಟಾರ್ ನೋ ಅನ್ನುವ ಸಾಧ್ಯತೆನೂ ಇಲ್ಲ.


Click it and Unblock the Notifications
