ಬೇಬಿ ಇಂದಿರಾ ಮದುವೆಯಾಗಿದ್ದು ಯಾರನ್ನು ಗೊತ್ತಾ? ಇವರ ಪತಿ ಕನ್ನಡದಲ್ಲಿ ನಟಿಸಿದ ಸಿನಿಮಾ ಯಾವುದು?
70 ಹಾಗೂ 80ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿದ ನಟಿ ಬೇಬಿ ಇಂದಿರಾ. ಬಾಲ ನಟಿಯಾಗಿ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸಿಂಹದ ಮರಿ ಸೈನ್ಯ' ಇಂದಿಗೂ ಕನ್ನಡ ಚಿತ್ರರಂಗದ ಅತ್ಯದ್ಭುತ ಕನ್ನಡದ ಮಕ್ಕಳ ಸಿನಿಮಾ ಅನ್ನುವುದರಲ್ಲಿ ಅನುಮಾನವಿಲ್ಲ.
ಬೇಬಿ ಇಂದಿರಾ ಇತ್ತೀಚೆಗೆ ಕನ್ನಡದ ನಿರ್ದೇಶಕ ಕಮ್ ನಿರೂಪಕ ರಘುರಾಮ್ ಅವರ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದಾರೆ. ಕಳೆದ ಹಲವು ವರ್ಷಗಳಿಂದ ತೆರೆ ಮರೆಯಲ್ಲಿದ್ದ ಬೇಬಿ ಇಂದಿರಾ ಅವರನ್ನು ಹುಡುಕಿ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಅವರ ಬದುಕಿನ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಇದರಲ್ಲಿ ಅವರು ಮದುವೆ ವಿಷಯ ಕೂಡ ಒಂದು.

ಬೇಬಿ ಇಂದಿರಾ ಮದುವೆ ಆಗಿದ್ದು ಯಾರನ್ನ? ಅವರ ಪತಿ ಹೇಗಿದ್ದಾರೆ? ಅನ್ನೋ ಕುತೂಹಲ ಸಿನಿಪ್ರಿಯರಿಗೆ ಇದ್ದೇ ಇರುತ್ತೆ. ತಂದೆ ಆಸೆಯ ಮೇರೆಗೆ ಬೇಬಿ ಇಂದಿರಾ ಫೆಬ್ರವರಿ 10, 1989ರಂದು ತಿರುಪತಿಯಲ್ಲಿ ಮದುವೆ ಆಗಿದ್ದರು. ಅವರ ಪತಿ ಶ್ರೀಧರ್ ಕೂಡ ಬಹುತೇಕ ತಮಿಳು ಸಿನಿಮಾಗಳಲ್ಲಿ ಬಾಲ ನಟನಾಗಿ ನಟಿಸಿದ್ದರು. ಹಾಗೇ ಕನ್ನಡದ 'ಮಣಿಕಂಠನ ಮಹಿಮೆ' ಸಿನಿಮಾದಲ್ಲಿ ನಾರದನಾಗಿಯೂ ನಟಿಸಿದ್ದಾರೆ. ತಮ್ಮ ಮದುವೆ ಹಾಗೂ ಪತಿ ಬಗ್ಗೆ ಮಾಹಿತಿ ಯೂಟ್ಯೂಬ್ ಚಾನೆಲ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
"ನನ್ನ ತಂದೆಗೆ ತುಂಬಾ ದೊಡ್ಡದಾಗಿ ಮದುವೆ ಮಾಡಬೇಕು ಅಂತ ಆಸೆಯಿತ್ತು. ನನ್ನ ತಂದೆ ಆಸೆಯನ್ನು ಅವರ ಬೇಡ ಅಂತ ಹೇಳಲಿಲ್ಲ. ಆದರೆ, ನನ್ನ ಪತಿಗೆ ಸಿಂಪಲ್ ಆಗಿ ಮದುವೆ ಆಗಬೇಕು ಅಂತಿತ್ತು. ಕೇವಲ 70 ರಿಂದ 80 ಮಂದಿ ಅಷ್ಟೇ ಮದುವೆಯಲ್ಲಿ ಇದ್ದರು. ಅವರ ಕಡೆಯಿಂದ ನಮ್ಮ ಕಡೆಯಿಂದ ಕುಟುಂಬಗಳಷ್ಟೇ ಇದ್ದರು." ಎಂದು ತಿರುಪತಿಯಲ್ಲಿ ನಡೆದ ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ.
ಬೇಬಿ ಇಂದಿರಾ ಪತಿ ಕೂಡ ಬಾಲ ನಟನಾಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಕೂಡ ಬೇಬಿ ಇಂದಿರಾ ಅವರಂತೆಯೇ 3 ವರ್ಷವಾಗಿರುವಾಗಲೇ ಚಿತ್ರರಂಗಕ್ಕೆ ಬಂದಿದ್ದರು. ಅವರು ನಟಿಸಿರುವ ಬಹುತೇಕ ಸಿನಿಮಾಗಳಲ್ಲಿ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ.

"ತಮಿಳುನಾಡು ಮಾಜಿ ಸಿಎಂ ಅನ್ನ ದೊರೈ ಇದ್ದರಲ್ಲ. ಅವರು ಸಿನಿಮಾದಲ್ಲಿ ಎದೆಯುಂ ತಾಂಗುಂ ಎದೆಯುಂ ಅನ್ನೋ ಸಿನಿಮಾ ಮಾಡಿದ್ದರು. ಆ ಸಿನಿಮಾ ನಟಿಸುವುದಕ್ಕೆ ಒಬ್ಬ ಚಿಕ್ಕ ಹುಡುಗ ಬೇಕಾಗಿತ್ತು. ಆ ವೇಳೆ ಸ್ಕೂಲ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಇವರನ್ನು ನೋಡಿ, ಅಣ್ಣಾ ದೊರೈ ಅವರೇ ಕರೆದುಕೊಂಡು ಹೋಗಿದ್ದರು. ಹಾಗೆ ನನ್ನ ಪತಿ ಸಿನಿಮಾ ಜರ್ನಿ ಶುರುವಾಗಿತ್ತು." ಎಂದು ಬೇಬೆ ಇಂದಿರಾ ಹೇಳಿಕೊಂಡಿದ್ದಾರೆ.
ಎ ವಿ ವೆಂಕಟರಮಣ ರಾವ್ ತಾಯಿ ಸೀತಾಮಣಿ ಅವರ 5ನೇ ಮಗ ಬೇಬಿ ಇಂದಿರಾ ಅವರ ಪತಿ ಶ್ರೀಧರ್. ತಮಿಳುನಾಡಿನ ಕೃಷ್ಣಗಿರಿಯಲ್ಲಿ ಸ್ಕೂಲ್ ಮಾಸ್ಟರ ಆಗಿದ್ದರು. ಬಳಿಕ ಮಕ್ಕಳ ಶಿಕ್ಷಣಕ್ಕಾಗಿ ಚೆನ್ನೈಗೆ ಬಂದು ನೆಲೆಸಿದ್ದರು. ಇಲ್ಲಿ ಶಾಲೆಯ ಕಾರ್ಯಕ್ರಮದಲ್ಲಿ ಶ್ರೀಧರ್ ಪರ್ಫಾಮೆನ್ಸ್ ನೋಡಿ ಲೆಜೆಂಡ್ ಅಣ್ಣಾ ದೊರೈ ಸಿನಿಮಾ ಕರೆದುಕೊಂಡು ಹೋಗಿದ್ದರು.
"ನನಗೆ ಶ್ರೀಧರ್ ನಟಿಸಿದ ಕಂದನ್ ಕರುಣೈ ಅನ್ನುವ ಸಿನಿಮಾ ಇಷ್ಟ. ಅದರಲ್ಲಿ ಅವರು ಬಾಲ ಮುರುಗನ್ ಪಾತ್ರದಲ್ಲಿ ನಟಿಸಿದ್ದರು. ಅವರ ಚಿತ್ರಗಳಲ್ಲಿ ನನಗೆ ಬಹಳ ಹಿಡಿಸಿದ ಚಿತ್ರ ಅದು. ಸಾವಿತ್ರಿ ಅಮ್ಮ, ಜೆಮಿನಿ ಗಣೇಶನ್ ಅಂತಹ ಲೆಜೆಂಡ್ಗಳ ಜೊತೆ ಇವರು ಅವರ ಸಮಾನಾಗಿ ನಟನೆ ಮಾಡಿದ್ದಾರೆ. ಮುರುಗನಾಗಿ 10 ಸಿನಿಮಾ ಮಾಡಿದ್ದಾರೆ. ಅಯ್ಯಪ್ಪ ಸ್ವಾಮಿಯಾಗಿ ತುಂಬಾ ಸಿನಿಮಾ ಮಾಡಿದ್ದಾರೆ. ಎಲ್ಲಾ ದೇವರ ಪಾತ್ರಗಳನ್ನು ಮಾಡಿದ್ದಾರೆ." ಎಂದು ಬೇಬಿ ಇಂದಿರಾ ನೆನಪಿಸಿಕೊಂಡಿದ್ದಾರೆ.
ಅಂದ್ಹಾಗೆ, ಕನ್ನಡ ಸಿನಿಮಾ 'ಮಣಿಕಂಠನ ಮಹಿಮೆ' ಸಿನಿಮಾದಲ್ಲಿ ನಾರದರ ಪಾತ್ರದಲ್ಲಿ ನಟಿಸಿದ್ದರು. ನಾರದನ ಪಾತ್ರದಲ್ಲಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಮಣಿಕಂಠನ ಮಹಿಮೆ' ಸಿನಿಮಾ ಮಾಡಿದ ಬಳಿಕ ಎರಡು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ನಿರ್ದೇಶಕ, ಸ್ಕ್ರಿಪ್ಟ್ ಅಂತ ಬ್ಯುಸಿಯಾದರು. ಪತಿಗೆ ಬೇಬಿ ಇಂದಿರಾ ಕೂಡ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ನೆರವಾಗಿದ್ದರು.
ಹಾಗೇ ಮದುವೆ ಆದ ಬಳಿಕ ಕನ್ಸ್ಟ್ರಕ್ಷನ್ 'ಮಾಸ್ಟರ್ಸ್' ಅನ್ನುವ ಕಂಪನಿ ಶುರು ಮಾಡಿದ್ದರು. "ನಾನು ಜಮೀನನ್ನು ಖರೀದಿ ಮಾಡಿ, ಅಲ್ಲಿ ಮನೆಗಳನ್ನು ಕಟ್ಟಿ ಕೊಡುತ್ತಿದ್ದೆವು. ಆಮೇಲೆ ಜಾಯಿಂಟ್ ವೆಂಚರ್ಸ್ ಮಾಡಿದ್ದೇವೆ. 35 ವರ್ಷಗಳ ಜರ್ನಿಯಲ್ಲಿ ಚೆನ್ನೈ, ಕೊಯಮತ್ತೂರಿನಲ್ಲಿ 100 ರಿಂದ 120 ಪ್ರಾಜೆಕ್ಟ್ಗಳನ್ನು ಮಾಡಿದ್ದೇವೆ." ಎನ್ನುತ್ತಾರೆ ಬೇಬಿ ಇಂದಿರಾ. ಈಗ ಇನ್ಫಿನಿಟಿ ಫೌಂಡೇಷನ್ಸ್ ಅಂತಾಗಿದ್ದು,ಪುತ್ರರಾದ ಪ್ರಶಾಂತ್ ಹಾಗೂ ರಕ್ಷಿತ್ ಕೂಡ ಪಾರ್ಟ್ನರ್ ಆಗಿದ್ದಾರೆ. ಸಿನಿಮಾ ಫೀಲ್ಡ್ ಬಿಟ್ಟು, ಉದ್ಯಮದದಲ್ಲಿ ಬೇಬಿ ಇಂದಿರಾ ಮುಂದುವರೆದಿದ್ದಾರೆ.


Click it and Unblock the Notifications











