ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ 'ಎದ್ದೇಳು ಮಂಜುನಾಥ' ಸಿಕ್ಕಿದ್ದ; ಬೆಳ್ಳಂಬೆಳಗ್ಗೆ ನಾಲ್ಕು ಗಂಟೆಗೆ ಅಲ್ಲೇನು ಮಾಡ್ತಿದ್ದ?
ಕನ್ನಡ ಚಿತ್ರರಂಗದ ಅದ್ಭುತ ಸಿನಿಮಾಗಳಲ್ಲಿ 'ಎದ್ದೇಳು ಮಂಜುನಾಥ' ಕೂಡ ಒಂದು. ಇದು ನವರಸ ನಾಯಕ ಜಗ್ಗೇಶ್ ಹಾಗೂ ಗುರುಪ್ರಸಾದ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ ಅಂದರೂ ತಪ್ಪಾಗುವುದಿಲ್ಲ. ಸಿನಿಪ್ರಿಯರನ್ನು ಅದರಲ್ಲೂ ಹಾಸ್ಯ ಪ್ರೇಮಿಗಳನ್ನು ಹೊಟ್ಟೆ ಹುಣ್ಣಾಗುವಂತೆ ನಟಿಸಿದ ಸಿನಿಮಾವಿದು. ಹಾಸ್ಯ ಜೊತೆ ಜೊತೆಗೆ ಸಮಾಜಕ್ಕೆ ಸಂದೇಶವನ್ನು ಕೊಟ್ಟು ಬಾಕ್ಸಾಫೀಸ್ನಲ್ಲಿ ಗೆದ್ದ ಸಿನಿಮಾವಿದು.
'ಎದ್ದೇಳು ಮಂಜುನಾಥ' ಸಿನಿಮಾವನ್ನು ಟಿಪಿಕಲ್ ಕಮರ್ಷಿಯಲ್ ಸಿನಿಮಾಗಳ ಸಾಲಿಗೆ ಸೇರಿಸುವುದಕ್ಕೆ ಆಗುವುದಿಲ್ಲ. ಹಾಗಂತ ಇದು ಕೇವಲ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಮಾತ್ರ ಪ್ರದರ್ಶನ ಕಾಣುವ ಸಿನಿಮಾನೂ ಆಗಿರಲಿಲ್ಲ. ಎರಡೂ ಪ್ರಕಾರದ ಸಿನಿಮಾಗಳ ಮಧ್ಯೆ ಇನ್ನೊಂದು ಪ್ರಕಾರವನ್ನು ಹುಟ್ಟುಹಾಕಿದ ಚಿತ್ರ. ಗುರುಪ್ರಸಾದ್ ನಿರೂಪಣಾ ಶೈಲಿ, ನವರಸ ನಾಯಕ ಜಗ್ಗೇಶ್ ನಟನೆ ಈ ಸಿನಿಮಾ ಹೈಲೈಟ್ ಆಗಿತ್ತು.

'ಮಠ' ಬಳಿಕ ತೆರೆಕಂಡ ಈ ಸಿನಿಮಾಗೆ ಸಿನಿ ರಸಿಕರು ಮೆಚ್ಚಿ ಹೊಗಳಿ ಕೊಂಡಾಡಿದ್ದರು. ಇಂತಹ ಸಿನಿಮಾದ ಕಥೆ ಹೇಗೆ ಹುಟ್ಟಿತು? ಬೆಂಗಳೂರಿನ ಕೆಆರ್ ಮಾರ್ಕೆಟ್ನಲ್ಲಿ ಈ ಸಿನಿಮಾದ ಕಥೆ ಹೇಗೆ ಸಿಕ್ತು? ಗುರುಪ್ರಸಾದ್ ಗಾಂಧಿನಗರದಲ್ಲಿ ಕುಡುಕರನ್ನು ಹುಡುಕಿಕೊಂಡು ಹೋಗಿದಾಗ ಏನೇನಾಯ್ತು? ಅನ್ನೋದನ್ನು ಫಿಲ್ಮಿಬೀಟ್ ಕನ್ನಡಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅದನ್ನು ತಿಳಿಯಲು ಮುಂದೆ ಓದಿ..
ಕೆಆರ್ ಮಾರುಕಟ್ಟೆನಲ್ಲಿ ಎದ್ದೇಳು ಮಂಜುನಾಥ ಕಥೆ
ಸಿನಿಮಾ ನಿರ್ದೇಶಕರಿಗೆ ಕಥೆ ಯಾವಾಗ, ಎಲ್ಲಿ ಹುಟ್ಟುತ್ತೆ ಅಂತ ಹೇಳುವುದಕ್ಕೆ ಆಗುವುದಿಲ್ಲ. 'ಮಠ' ಬಳಿಕ ಸಿನಿಮಾ ಮಾಡುವುದಕ್ಕೆ ಹೊರಟಾಗ ನಿರ್ದೇಶಕ ಗುರುಪ್ರಸಾದ್ಗೆ 'ಎದ್ದೇಳು ಮಂಜುನಾಥ' ಸಿಕ್ಕಿದ್ದು ಕೆಆರ್ ಮಾರುಕಟ್ಟೆಯಲ್ಲಿ ಹೂವು ಮಾರುವ ಜಾಗದಲ್ಲಿ. ಆ ಸಂದರ್ಭವನ್ನು ಗುರುಪ್ರಸಾದ್ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.
"ಕೆಆರ್ ಮಾರುಕಟ್ಟೆಯಲ್ಲಿ ಹೋಗುತ್ತಿದ್ದಾಗ ಎದ್ದೇಳು ಮಂಜುನಾಥ ಕಥೆಗೆ ಐಡಿಯಾ ಸಿಕ್ಕಿದ್ದು. ಮಾರುಕಟ್ಟೆ ಒಳಗೆ ಹೋಗುತ್ತಿದ್ದಾಗ ಅಲ್ಲಿ ಹೂವಿನ ಅಂಗಡಿ ಎಲ್ಲಾ ಇದೆ. ಅಲ್ಲಿ ಒಬ್ಬ ಕುಡಿದು ಮಲಗಿದ್ದ. ಅಲ್ಲಿಗೆ ಬೆಳಗ್ಗೆ ನಾಲ್ಕು ಗಂಟೆಗೆ ಹೂವುಗಳು ಬರುತ್ತವೆ. ಅವೆಲ್ಲರೂ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ದುಡಿಯುತ್ತಿರುವಾಗ, ಇವನು ಕುಡಿದು ಮಲಗಿದ್ದ. ಅದು ತಲೆಯಲ್ಲಿ ಕೂತುಕೊಳ್ತು. ಏನಿರಬಹುದು ಇವನ ಜೀವನ ತತ್ವ? ಅವನಿಗೆ ಎಚ್ಚರ ಆದರೆ.. ಏನಿದು ನಾಲ್ಕು ಗಂಟೆಗೆ ಎದ್ದು ಸಾಯ್ತಿದ್ದಾರೆ. ಕುಡಿದು ನೆಮ್ಮದಿಯಾಗಿ ಮಲಗುವುದನ್ನು ಬಿಟ್ಟು ಅಂತ ಹೇಳಬಹುದು. ಇಂತಹ ಧೋರಣೆಯನ್ನಿಟ್ಟುಕೊಂಡು ಬದುಕಲು ಸಾಧ್ಯವೇ? ಹೀಗೆ ಯೋಚನೆ ಶುರುವಾಗುತ್ತು." ಎಂದು ಎದ್ದೇಳು ಮಂಜುನಾಥ್ ಕಥೆ ಹುಟ್ಟಿದ ಬಗ್ಗೆ ರಿವೀಲ್ ಮಾಡಿದ್ದಾರೆ.

ಗಾಂಧಿನಗರದ ಕುಡುಕರನ್ನು ಎಬ್ಬಿಸಿದ ನಿರ್ದೇಶಕ
'ಎದ್ದೇಳು ಮಂಜುನಾಥ'ನಿಗಾಗಿ ಸಂಶೋಧನೆಗಳು ಶುರುವಾಗಿದ್ದವು. ಹೀಗಾಗಿ ಗಾಂಧಿನಗರದಲ್ಲಿ ಕುಡಿದು ಮಲಗಿರುವವರನ್ನೆಲ್ಲಾ ಹುಡುಕಾಡಿದ್ದರು. ಕುಡಿದು ಮಲಗಿದ್ದವರನ್ನು ಎಬ್ಬಿಸಿ ಮಾತಾಡಿದ್ದರು. ಅಂದಿನ ತೆಗೆಸಿಕೊಂಡ ಫೋಟೊಗಳು ಇಂದಿಗೂ ಅವರ ಬಳಿ ಇದೆಯಂತೆ. "ಮೆಜೆಸ್ಟಿಕ್ ಹತ್ತಿರ ಗಾಂಧಿನಗರ ಇದೆಯಲ್ಲ ಅಲ್ಲಿಗೆ ಹೋದರೆ, ಅಲ್ಲಿ ಈತರ ಕುಡಿದು ಮಲಗಿರುವವರು ಇರುತ್ತಾರೆ. ಹೀರೊ ಅಂದರೆ, ಕಮರ್ಷಿಯಲ್ ಲೆಕ್ಕದಲ್ಲಿ ಬೇರೆ. ಹೀಗಾಗಿ ಕುಡಿದಿರೋರು ಅಂದರೆ ಏನು ಇವರ ತತ್ವ. ಖಿನ್ನತೆನಾ? ಅಥವಾ ಕುಡಿತಾನೇ ಮುಖ್ಯನಾ? ಏನೀತರ ಅಂತ. ಹೀಗಾಗಿ ಒಬ್ಬರನ್ನು ಎಬ್ಬಿಸಿ ಕೇಳಿದ್ದೀನಿ. ನನ್ನ ಬಳಿ ಫೋಟೊಗಳು ಇವೆ." ಎನ್ನುತ್ತಾರೆ ಗುರುಪ್ರಸಾದ್.
ಗೋಕರ್ಣದಲ್ಲಿ ಹುಚ್ಚನಲ್ಲದ ಹುಚ್ಚ ಸಿಕ್ಕಿದ್ದ
"ಗೋಕರ್ಣದಲ್ಲಿ ಒಬ್ಬ ಸಿಗುತ್ತಾನೆ. ಆತನನ್ನು ಹುಚ್ಚ ಅಂತಿರುತ್ತಾರೆ. ಕೂದಲೆಲ್ಲ ಬಿಟ್ಟು ಕೊಂಡು ಓಡಾಡುತ್ತಿರುತ್ತಾನೆ. ನನಗೆ ಇವನು ಹುಚ್ಚ ಅಲ್ಲ ಅಂತ ಅನಿಸಿತ್ತು. ಅವನು ನಡೆಯುವಾಗ ಆರಾಮಾಗಿ ಹೋಗುತ್ತಿದ್ದಾನೆ. ಇವನು ಹುಚ್ಚ ಅಲ್ಲ. ಇವನದ್ದು ಏನೋ ಕ್ಯಾರೆಕ್ಟರ್ ಇದೆ ಅಂತ ಅನಿಸಿತ್ತು. ನನಗೆ ಹುಚ್ಚನ ಪಾತ್ರ ಬೇಕಿರುತ್ತೆ. ಅವನನ್ನು ಕರೆದು ಆಕ್ಟ್ ಮಾಡುತ್ತೀಯಾ ಅಂದೆ. ವಿಷ್ಣುವರ್ಧನ್ ಸರ್ ತರ ಎಲ್ಲಾ ಆಕ್ಟ್ ಮಾಡುತ್ತಾನೆ. ಎರಡನೇ ಸಿನಿಮಾದಲ್ಲಿ ಅವನನ್ನು ಆಕ್ಟ್ ಮಾಡಿಸಿದ್ದೇನೆ." ಎಂದು ಪಾತ್ರಗಳನ್ನು ಹುಡುಕುವ ಪರಿಯನ್ನೂ ವಿವರಿಸಿದ್ದಾರೆ.
ಈಗ 'ರಂಗನಾಯಕ'
'ಎದ್ದೇಳು ಮಂಜುನಾಥ' ಸಿನಿಮಾ ರಿಲೀಸ್ ಆದ ಹಲವು ವರ್ಷಗಳ ಬಳಿಕ ಜಗ್ಗೇಶ್ ಹಾಗೂ ಗುರುಪ್ರಸಾದ್ ಕಾಂಬಿನೇಷನ್ನಲ್ಲಿ 'ರಂಗನಾಯಕ' ಸಿನಿಮಾ ನಿರ್ಮಾಣ ಆಗಿದೆ. ಇದೇ ಮಾರ್ಚ್ 8ರಂದು ಗ್ರ್ಯಾಂಡ್ ಆಗಿ ರಿಲೀಸ್ ಕೂಡ ಆಗುತ್ತಿದೆ. ಹೀಗಾಗಿ ಈ ಸಿನಿಮಾ ಕೂಡ 'ಎದ್ದೇಳು ಮಂಜುನಾಥ'ಗಿಂತಲೂ ಎಂಟರ್ಟೈನಿಂಗ್ ಆಗಿರಬಹುದು ಎಂದು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.


Click it and Unblock the Notifications











