'ಸಿಗರೇಟ್'ನಿಂದ ಕಥೆ ಹೇಳಿಸಲು ಹೊರಟಿದ್ದ ಡೈರೆಕ್ಟರ್; ಕ್ಯೂನಲ್ಲಿತ್ತು 'ಪ್ರಜಾಕೀಯ'
ಗುರುಪ್ರಸಾದ್ ಅಂತಹ ಕ್ರಿಯಾಶೀಲ ನಿರ್ದೇಶಕನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಗುರುಪ್ರಸಾದ್ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದ ಅಪರೂಪದ ಮಾಣಿಕ್ಯ. ಅವರಿಗೆ ಸಿಕ್ಕ ಅವಕಾಶಗಳನ್ನು ಅವರೂ ಬಳಸಿಕೊಳ್ಳಲಿಲ್ಲ. ಅವರನ್ನು ಚಿತ್ರರಂಗವೂ ಬಳಸಿಕೊಳ್ಳಲಿಲ್ಲ. ಎರಡೂ ಕಡೆಯಿಂದಲೂ ತೆರೆಮರೆಯಲ್ಲಿ ಏನೇನೋ ನಡೆದು ಹೋಗಿದೆ.
ಹೆಚ್ಚು ಕಡಿಮೆ ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಇದ್ದರೂ ನಿರ್ದೇಶನ ಅಂತ ಮಾಡಿದ್ದು ಬೆರಳೆಣಿಯಷ್ಟು ಸಿನಿಮಾಗಳು ಮಾತ್ರ. ಮನಸ್ಸು ಮಾಡಿದ್ದರೆ ಗುರುಪ್ರಸಾದ್ ಕನ್ನಡ ಚಿತ್ರರಂಗವನ್ನು ಯಾವಾಗಲೋ ಪ್ಯಾನ್ ಇಂಡಿಯಾ ಲೆವೆಲ್ಗೆ ತೆಗೆದುಕೊಂಡು ಹೋಗಬಹುದಿತ್ತು. ಆದರೆ, ಪ್ಯಾನ್ ಇಂಡಿಯಾ ನನ್ನ ಲೆವೆಲ್ಗೆ ಅಲ್ಲ ಅಂದುಕೊಂಡಿದ್ದು ಮತ್ತೊಂದು ದುರಂತ.

ಗುರುಪ್ರಸಾದ್ಗೆ ಹಠ ಜಾಸ್ತಿ. ನೆಟ್ಫ್ಲಿಕ್ಸ್ ತನ್ನ ಸಿನಿಮಾಗಳನ್ನು ಖರೀದಿ ಮಾಡಬೇಕು. ಕನ್ನಡದಕ್ಕೆ ಮೊದಲ ಆಸ್ಕರ್ ಪ್ರಶಸ್ತಿ ತರಬೇಕು. ಇಂತಹದ್ದೇ ಒಂದಿಷ್ಟು ಹಠದಲ್ಲೇ ಬದುಕಿದ್ದರು. ಅದನ್ನು ಕಾರ್ಯಗತಕ್ಕೆ ತಂದಿದ್ದರೆ, ಅವರು ಅಂದುಕೊಂಡಿದ್ದೆಲ್ಲ ಸಾಧಿಸುತ್ತಿದ್ದರೋ ಏನು? ಆದರೆ, ಹೇಳಿದ್ದೆಲ್ಲವೂ ಮಾಡಿಲ್ಲ. ಮಾಡಿದ್ದೆಲ್ಲವೂ ಪರ್ಫೆಕ್ಟ್ ಆಗಿರಲಿಲ್ಲ. ಇವೆಲ್ಲ ಏನೇ ಇದ್ದರೂ, ಗುರುಪ್ರಸಾದ್ ತಲೆಯಲ್ಲಿ ಸಿನಿಮಾ ಮಾಡಬಹುದಾದ ಅದ್ಭುತ ಕಲ್ಪನೆಗಳಿದ್ದವು. ಅವುಗಳಲ್ಲಿ ಕೆಲವನ್ನು ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ. ಅದನ್ನು ಕೇಳಿದರೆ, ಅಯ್ಯೋ ಮಿಸ್ ಆಯ್ತಲ್ಲ ಅಂತ ಮರುಕ ಪಡುತ್ತೀರ.
ಗುರುಪ್ರಸಾದ್ ಕನ್ನಡ ಚಿತ್ರರಂಗದ ಅಪ್ರತಿಮ ಬುದ್ಧಿವಂತ ಅನ್ನೋದರಲ್ಲಿ ಎರಡು ಮಾತಿಲ್ಲ. ಬೇರೆ ನಿರ್ದೇಶಕರಂತೆ ಇವರ ಆಲೋಚನೆ ಇರಲೇ ಇಲ್ಲ. 'ಮಠ', 'ಎದ್ದೇಳು ಮಂಜುನಾಥ'. 'ಡೈರೆಕ್ಟರ್ ಸ್ಪೆಷಲ್', 'ಎರಡನೇ ಸಲ'ದಂತಹ ಸಿನಿಮಾಗಳೇ ಸಾಕ್ಷಿ. ಇವುಗಳಲ್ಲಿ ಕೆಲವು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಅದೇ ಮತ್ತೆ ಕೆಲವು ಪ್ರೇಕ್ಷಕರಿಗೆ ಹಿಡಿಸಿಲ್ಲ. ಆದರೂ, ತಾನು ಸಿನಿಮಾ ಮಾಡುವ ದಾಟಿಯನ್ನು ನಿಲ್ಲಿಸಲಿಲ್ಲ. ಗುರುಪ್ರಸಾದ್ ಸಾಯುವುದಕ್ಕೆ ಕೆಲವು ದಿನಗಳ ಹಿಂದಷ್ಟೇ ಅವರ ಆತ್ಮೀಯರೊಂದಿಗೆ ಎರಡು ಸ್ಟೋರಿ ಕಾನ್ಸೆಪ್ಟ್ ಅನ್ನು ಹಂಚಿಕೊಂಡಿದ್ದರು. ಆ ಕಲ್ಪನೆಗಳೇ ಅದ್ಭುತ ಅನಿಸುತ್ತವೆ.

ಮೊದಲನೆಯದ್ದು 'ಸೀಗರೇಟ್' ಸ್ಟೋರಿ. ಗುರುಪ್ರಸಾದ್ ತಮ್ಮ ಬಳಿಯಿದ್ದ ಒಂದು ಕಥೆಯನ್ನು ಸಿಗರೇಟಿನ ಮೂಲಕ ಹೇಳುವುದಕ್ಕೆ ಹೊರಟಿದ್ದರಂತೆ. ನಿರ್ದೇಶಕನೊಬ್ಬ ಸಿಗರೇಟು ಹೊತ್ತಿಸುತ್ತಾನೆ. ಅಲ್ಲಿಂದ ಸಿಗರೇಟು ಕಥೆ ಹೇಳುವುದಕ್ಕೆ ಶುರು ಮಾಡುತ್ತೆ. ನಿರ್ದೇಶಕನಿಗೆ ಕಥೆ ಹೊಳೆದ ದಿನದಿಂದ ಜೊತೆಯಲ್ಲಿ ಇರುವ ಸಿಗರೇಟ್ ಆತನ ಕತೆಯನ್ನು ಪ್ರೇಕ್ಷಕರಿಗೆ ವಿವರಿಸುತ್ತಾ ಹೋಗುತ್ತೆ. ಈ ಕಲ್ಪನೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತೇನೆ ಎಂದಿದ್ದರಂತೆ.
ಎರಡನೆಯದ್ದು ಉಪ್ಪಿಯ 'ಪ್ರಜಾಕೀಯ'ವನ್ನು ಇಟ್ಟುಕೊಂಡು ಕಥೆಯನ್ನು ಹೆಣೆದಿದ್ದರಂತೆ. ಅದಕ್ಕೆ 'ಮಜಾಕೀಯ' ಅಂತ ಟೈಟಲ್ ಕೂಡ ಇಟ್ಟಿದ್ದರು ಎನ್ನುತ್ತಾರೆ ಅವರ ಆಪ್ತರು. ಹೀಗೆ ಗುರುಪ್ರಸಾದ್ ತಲೆಯಲ್ಲಿ ಯಾರೂ ಊಹಿಸಲು ಸಾಧ್ಯವೇ ಇಲ್ಲದಂತಹ ಕಥೆಗಳು ಹೊಳೆಯುತ್ತಿತ್ತು. ಇಂತಹ ಹಲವು ಕಥೆಗಳು ಅವರ ಬಳಿ ಇದ್ದವು. ಆದರೆ, ಅದನ್ನು ತೆರೆಮೇಲೆ ತರುವುದಕ್ಕೆ ಗುರುಪ್ರಸಾದ್ ಸೋಲುತ್ತಿದ್ದರು.
ಗುರುಪ್ರಸಾದ್ ಕಥೆಗಳು ಬಹುಬೇಗನೇ ಹೊಳೆಯುತ್ತಿದ್ದವು. ಅವೂ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನು ಕೊಡುತ್ತವೆ ಅಂತ ಅನಿಸುತ್ತವೆ. ಆದರೆ, ಅದನ್ನು ತೆರೆಮೇಲೆ ತರುವುದಕ್ಕೆ ಪರದಾಡುತ್ತಿದ್ದರು. ಯಾಕಂದ್ರೆ, ಕುಡಿತದ ದಾಸನಾಗಿದ್ದ ಗುರುಪ್ರಸಾದ್ ರಾತ್ರಿಯಿಡಿ ಮಧ್ಯಪಾನ ಮಾಡುತ್ತಾ ಕಥೆ ಬಗ್ಗೆ ಯೋಚಿಸುತ್ತಿದ್ದರು. ಬೆಳಗ್ಗೆ ಆಗುವಷ್ಟರಲ್ಲಿ ಶಕ್ತಿಯೇ ಇರುತ್ತಿರಲಿಲ್ಲ. ಹೀಗಾಗಿ ಅದು ಅಲ್ಲಿಗೆ ನಿಂತು ಬಿಡುತ್ತಿತ್ತು. ಶಿಸ್ತಿನ ಜೀವನ ನಡೆದಿದ್ದರೆ, ಗುರುಪ್ರಸಾದ್ ಅವರನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವೇ ಇರುತ್ತಿರಲಿಲ್ಲ ಅನ್ನೋದು ಆಪ್ತರ ನೋವಿನ ಮಾತು.


Click it and Unblock the Notifications











