17 ವರ್ಷಗಳ ಬಳಿಕ ರಿಲೀಸ್ ಆಗ್ತಿರೋ ಉಪೇಂದ್ರ-ರಮ್ಯಾ ಸಿನಿಮಾ 'ರಕ್ತ ಕಾಶ್ಮೀರ'ದ ಒರಿಜಿನಲ್ ಟೈಟಲ್ ಏನು ಗೊತ್ತಾ?
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಮೋಹಕತಾರೆ ರಮ್ಯಾ ಇಬ್ಬರದ್ದೂ ಎವರ್ಗ್ರೀನ್ ಜೋಡಿ. ಈ ಕಾಂಬಿನೇಷನ್ ಸಿನಿಮಾ ಬ್ಲಾಕ್ಸಾಫೀಸ್ನಲ್ಲಿ ಗೆದ್ದಿರುವ ಉದಾಹರಣೆಗಳು ಹೆಚ್ಚಿವೆ. ಈ ಜೋಡಿ ನಟಿಸಿದ 'ಗೌರಮ್ಮ',' ಕಠಾರಿ ವೀರ ಸುರಸುಂದರಾಗಿ' ಅಂತ ಸಿನಿಮಾಗಳು ಸಿನಿಪ್ರಿಯರನ್ನು ತೆರೆಮೇಲೆ ರಂಜಿಸಿವೆ. ಈ ಎರಡು ಸಿನಿಮಾಗಳ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಅದು ರಿಲೀಸ್ ಆಗಿರಲಿಲ್ಲ.
ಕನ್ನಡದ ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಉಪೇಂದ್ರ ಹಾಗೂ ರಮ್ಯಾ ಜೋಡಿ ಹಿಟ್ ಪೇರ್ ಅಂತ ಸಾಬೀತಾಗಿದ್ದಾಗಲೇ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಇನ್ನೇನು ಸಿನಿಮಾ ರಿಲೀಸ್ ಆಗೇ ಬಿಡುತ್ತೆ ಅಂತ ಎದುರು ನೋಡುತ್ತಿದ್ದಾಗಲೇ ತೆರೆಮರೆಗೆ ಸರಿದು ಬಿಟ್ಟಿತ್ತು. ಇಬ್ಬರ ಅಭಿಮಾನಿಗಳು ಆ ಸಿನಿಮಾ ಮರೆ ಮುಂದೆ ಸಾಗಿದ್ದರು.

ಈಗ ಉಪೇಂದ್ರ ನಿರ್ದೇಶಿಸಿರುವ 'ಯುಐ' ರಿಲೀಸ್ ಆಗುತ್ತಿರುವ ಬೆನ್ನಲ್ಲೇ 17 ವರ್ಷಗಳ ಹಿಂದೆ ಸೈಲೆಂಟ್ ಆಗಿದ್ದ ಸಿನಿಮಾ ಕೂಡ ಸದ್ದು ಮಾಡುತ್ತಿದೆ. ಅಷಕ್ಕೂ ಈಗ 'ರಕ್ತ ಕಾಶ್ಮೀರ' ಅಂತ ಟೈಟಲ್ ಇಟ್ಟು ರಿಲೀಸ್ಗೆ ಮುಂದಾಗಿರುವ ಈ ಸಿನಿಮಾದ ಅಸಲಿ ಟೈಟಲ್ ಬೇರೆನೇ ಇತ್ತು. ಭರ್ಜರಿ ಪ್ರಚಾರದ ಬಳಿಕವೂ ಸಿನಿಮಾ ಬಿಡುಗಡೆಯಾಗಲೇ ಇಲ್ಲ. ಹಾಗಿದ್ದರೆ ಒರಿಜಿನಲ್ ಟೈಟಲ್ ಯಾವುದು? ಯಾಕೆ ರಿಲೀಸ್ ಆಗಲಿಲ್ಲ. ತಿಳಿಯಲು ಮುಂದೆ ಓದಿ.
ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಉಪೇಂದ್ರ ಹಾಗೂ ರಮ್ಯಾ 17 ವರ್ಷಗಳ ಹಿಂದೆ ಈ ಮೂರು ಹೆಸರುಗಳು ಸಾಕಿತ್ತು. ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದ ಈ ಮೂವರು ಸೇರಿ ಒಂದು ಸಿನಿಮಾಗೆ ಕೈ ಹಾಕಿದ್ದರು. ಅದು ಮೇಲ್ನೋಟಕ್ಕೆ ಫ್ಯಾಂಟಿಸಿ ಸಿನಿಮಾ ಇರಬಹುದೆಂದು ಅಂದಾಜಿಸಲಾಗಿತ್ತು. ಯಾಕಂದ್ರೆ ಸಿನಿಮಾ ಟೈಟಲ್ ಹಾಗಿತ್ತು. 17 ವರ್ಷಗಳ ಹಿಂದೆ ಈ ಸಿನಿಮಾಗೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಇಟ್ಟಿದ್ದ ಹೆಸರು 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್'.

ಇದೇ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಸಿನಿಮಾದ ಟೈಟಲ್ ಅನ್ನು 'ರಕ್ತ ಕಾಶ್ಮೀರ' ಅಂತ ಬದಲಾಯಿಸಿ ಬಿಡುಗಡೆ ಮಾಡುವುದಕ್ಕೆ ಹೊರಟಿದೆ ಚಿತ್ರತಂಡ. 17ವರ್ಷಗಳ ಹಿಂದೆ ಇನ್ನೇನು ಸಿನಿಮಾ ಮುಗಿದು ಬಿಡುಗಡೆಯಾಗಬೇಕು ಅಂತಿದ್ದಾಗ ನಿರ್ಮಾಪಕರು ಹಣಕಾಸಿನ ತೊಂದರೆಯಲ್ಲಿ ಸಿಕ್ಕಿಕೊಂಡಿದ್ದರು. ಹೀಗಾಗಿ ಸಿನಿಮಾ ಬ್ಯಾಂಕ್ ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಈಗ ಆ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. MDM ಪ್ರೊಡಕ್ಷನ್ ಈ ಸಿನಿಮಾ ನಿರ್ಮಿಸಿದ್ದು, ಮುಂದಿನ ವರ್ಷ (2025) ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.
'ರಕ್ತ ಕಾಶ್ಮೀರ' ಭಯೋತ್ಪಾದನೆಯ ಹಿನ್ನೆಲೆಯನ್ನು ಇಟ್ಟುಕೊಂಡು ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕಥೆಯನ್ನು ಹೆಣೆದಿದ್ದರು. ಭಾರತದ ಗಡಿ ಭಾಗದಲ್ಲಷ್ಟೇ ಭಯೋತ್ಪಾದಕರು ಇಲ್ಲ. ಬೆಂಗಳೂರಿನಲ್ಲೂ ಉಗ್ರಗಾಮಿಗಳು ಇದ್ದಾರೆ ಅನ್ನೋದನ್ನು ಕಥೆಯಲ್ಲಿ ಹೇಳಲಾಗಿದೆ. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಪ್ರಧಾನಿ ಮೋದಿಯ ಹೇಳಿಕೆಯನ್ನು ಇಲ್ಲಿ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಮರೆತೇ ಹೋಗಿದ್ದ ಸಿನಿಮಾ ಮತ್ತೆ ಮುನ್ನೆಲೆಗೆ ಬಂದಿದೆ. ಉಪೇಂದ್ರ, ರಮ್ಯ, ದೊಡ್ಡಣ್ಣ, ಓಂಪ್ರಕಾಶ್ ರಾವ್, ತೆಲುಗು ನಟಿ ನಟಿ ಅನಿಲ ಹಾಗೂ ಕುರಿ ಪ್ರತಾಪ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದು, ಎಂ ಎಸ್ ರಮೇಶ್ ಅವರ ಸಂಭಾಷಣೆ ಈ ಸಿನಿಮಾಗಿದೆ. ಸದ್ಯ ಹೊಸ ವರ್ಷಕ್ಕೆ ಈ ಸಿನಿಮಾ ರಿಲೀಸ್ ಮಾಡುವ ಆಲೋಚನೆಯಲ್ಲಿದ್ದಾರೆ. ಆದರೆ, ಇನ್ನೂ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ.


Click it and Unblock the Notifications











