"ದರ್ಶನ್ ಎಡಗಾಲಿನ ಸ್ಪರ್ಶ ಕಡಿಮೆ ಆಗಿದೆ"; ಬಿಜಿಎಸ್ ಆಸ್ಪತ್ರೆ ವೈದ್ಯರು ಹೇಳಿಕೆಗೆ ಫ್ಯಾನ್ಸ್ನಲ್ಲಿ ಹೆಚ್ಚಿದ ಆತಂಕ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಇರುವಾಗ ದರ್ಶನ್ಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು. ಈ ಬೆನ್ನಲ್ಲೇ ಜಾಮೀನು ನೀಡಬೇಕು ಎಂದು ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ವಾದ ಮಂಡಿಸಿದ ಬೆನ್ನಲ್ಲೇ ಬೇಲ್ ಮಂಜೂರಾಗಿತ್ತು. ಈ ವೇಳೆ ದರ್ಶನ್ ಇಷ್ಟ ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಅನುಮತಿಯನ್ನು ನೀಡಿತ್ತು.
ಈ ಬೆನ್ನಲ್ಲೇ ದರ್ಶನ್ ಇಂದು (ನವೆಂಬರ್ 1) ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಜಿಎಸ್ ಆಸ್ಪತ್ರೆಗೆ ಬಂದ ವೇಳೆ ದರ್ಶನ್ ಕಾರಿನಿಂದ ಉಳಿಯುವುದಕ್ಕೂ ಪರದಾಡಿದ್ದರು. ಬೆನ್ನು ನೋವು ಹಾಗೂ ಕಾಲು ನೋವಿನಿಂದ ದರ್ಶನ್ ಬಳಲುತ್ತಿದ್ದಿದ್ದು ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಈಗಾಗಲೇ ದರ್ಶನ್ ಬೆನ್ನು ನೋವಿಗೆ ಸಂಬಂಧಿಸಿದ ಮಾಹಿತಿಯನ್ನು ಬಿಜಿಎಸ್ ಆಸ್ಪತ್ರೆಯ ವೈದ್ಯರು ಪಡೆದಿದ್ದಾರೆ.

ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಬೆನ್ನು ನೋವಿಗೆ ನುರಿತ ವೈದ್ಯರ ತಂಡವನ್ನು ನೇಮಿಸಲಾಗಿದೆ. ಈಗಾಗಲೇ ದರ್ಶನ್ಗೆ ಒಂದಿಷ್ಟು ಪರೀಕ್ಷೆಗಳನ್ನು ಮಾಡಬೇಕಿದೆ. ಆ ಪರೀಕ್ಷೆಯ ವರದಿ ಬಂದ ಬಳಿಕ ಯಾವ ರೀತಿಯ ಚಿಕಿತ್ಸೆ ನೀಡಬೇಕು ಅನ್ನುವುದನ್ನು ತೀರ್ಮಾನ ಮಾಡುತ್ತಾರೆ. ಸದ್ಯ ದರ್ಶನ್ ಅವರ ಎಡಗಾಲಿನಲ್ಲಿ ಸ್ಪರ್ಶ ಕಡಿಮೆ ಆಗಿದೆ ಎಂದು ಬಿಜಿಎಸ್ ಆಸ್ಪತ್ರೆಯ ನ್ಯೂರೋ ಸರ್ಜನ್ ಆದ ನವೀನ್ ಅಪ್ಪಾಜಿ ಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದರು. ಸುಮಾರು 131 ದಿನಗಳ ಬಳಿಕ ಹೈಕೋರ್ಟ್ನಿಂದ ಆರು ವಾರಗಳ ಕಾಲ ಜಾಮೀನು ಪಡೆದು ಹೊರ ಬಂದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ದರ್ಶನ್ರನ್ನು ಶಿಫ್ಟ್ ಮಾಡಿದ ಬಳಿಕ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ತೀವ್ರ ಬೆನ್ನು ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ದರ್ಶನ್ ಜಾಮೀನು ಕೋರಿದ್ದರು. ಅನಾರೋಗ್ಯವನ್ನು ಪರಿಗಣಿಸಿದ ಹೈಕೋರ್ಟ್ ನ್ಯಾಯಾಧೀಶರು ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದ್ದಾರೆ.
ಜಾಮೀನು ನೀಡುವುದರ ಜೊತೆಗೆ ದರ್ಶನ್ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಬಳಿಕ ವೈದ್ಯರು ವರದಿಯನ್ನು ಕೋರ್ಟ್ಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ಬೆನ್ನಲ್ಲೇ ದರ್ಶನ್ ಬಿಜಿಎಸ್ಗೆ ದಾಖಲಾಗಿದೆ. ದರ್ಶನ್ರನ್ನು ಪರಿಶೀಲಿಸಿದ ಬಳಿಕ ನ್ಯೂರೋ ಸರ್ಜನ್ ನವೀನ್ ಅಪ್ಪಾಜಿ ಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಎಡಗಾಲಿನ ಬಗ್ಗೆ ಕೊಟ್ಟಿರುವ ಹೇಳಿಕೆ ಅಭಿಮಾನಿಗಳನ್ನು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

"ದರ್ಶನ್ ಬೆನ್ನು ನೋವು ಅಂತ ಹೇಳಿ ಬಂದು ಅಡ್ಮಿಟ್ ಆಗಿದ್ದಾರೆ. ಪರಿಶೀಲನೆ ಮಾಡಿದಾಗ ಬೆನ್ನು ನೋವಿನಿಂದ ಕಾಲು ಸೆಳೆತ ಜಾಸ್ತಿ ಆಗಿದೆ. ಮತ್ತೆ ಕಾಲಿನಲ್ಲಿ ವೀಕ್ನೆಸ್ ಇದೆ. ಎಡಗಡೆ ಕಾಲು ಆಡಿಸುವುದು ಸ್ವಲ್ಪ ಕಡಿಮೆ ಆಗಿದೆ. ಇನ್ನು ಪರಿಶೀಲನೆ ಮಾಡಿ ಮುಂದೆ ಯಾವ ರೀತಿ ಚಿಕಿತ್ಸೆ ಕೊಡಬೇಕು ಅಂತ ನೋಡಬೇಕು." ಎಂದು ಬಿಜಿಎಸ್ ವೈದ್ಯರಾದ ನವೀನ್ ಅಪ್ಪಾಜಿ ಗೌಡ ಮಾಹಿತಿ ನೀಡಿದ್ದಾರೆ.
ಹಾಗೇ ದರ್ಶನ್ಗೆ ಯಾವೆಲ್ಲ ತಪಾಸಣೆ ಆಗಬೇಕು ಅನ್ನೋದನ್ನು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. "ಇನ್ನೂ ಎಂಆರ್ಐ, ಎಕ್ಸ್ರೇ ಸೇರಿದಂತೆ ರಕ್ತ ಪರೀಕ್ಷೆಗಳನ್ನು ಮಾಡಬೇಕಾಗುತ್ತೆ. ಈ ಹಿಂದೆ ಮಾಡಿದ ಎಂಆರ್ಐ ಮತ್ತು ಫಿಲಂಸ್ ನಮಗೆ ಲಭ್ಯವಿಲ್ಲ. ಆದ್ದರಿಂದ ನಾವು ಇನ್ನೊಂದು ಬಾರಿ ಮಾಡಬೇಕಾಗುತ್ತೆ. ಪ್ರೆಸೆಂಟ್ ಕಂಡೀಷನ್ ತುಂಬಾ ನೋವಿದೆ ಎನ್ನುತ್ತಿದ್ದಾರೆ. ಎಡಗಡೆ ಕಾಲು ಸ್ವಲ್ಪ ವೀಕ್ನೆಸ್ ಇದೆ. ಇನ್ನೂ ಪರೀಕ್ಷೆಗಳು ಆಗಬೇಕು. ಆನಂತರ ಆಪರೇಷನ್ ಮಾಡಬೇಕಾ? ಇಲ್ಲ ಫಿಸಿಯೋಥೆರಪಿ ಅಷ್ಟೇ ಸಾಕಾ? ಅನ್ನುವುದು ನೋಡಬೇಕು." ಎನ್ನುತ್ತಾರೆ ವೈದ್ಯರು.
ಸದ್ಯ ದರ್ಶನ್ರನ್ನು ವಿಐಪಿ ಸೂಟ್ಗೆ ಶಿಫ್ಟ್ ಮಾಡಿ ಬೆನ್ನು ನೋವಿಗೆ ಮೆಡಿಸಿನ್ ನೀಡಲಾಗಿದೆ. ಆದರೆ, ಎಡಗಾಲಿ ಸ್ಪರ್ಶ ಕಡಿಮೆ ಆಗಿದೆ ಅನ್ನೋ ಮಾಹಿತಿಯನ್ನು ನೀಡುತ್ತಿದ್ದಾರೆ. "ನೋವಿಗೆ ಔಷಧಿಯನ್ನು ಕೊಟ್ಟಿದ್ದೇವೆ. ಎಲ್ಲಾ ಪರೀಕ್ಷೆಗಳು ಬರುವುದಕ್ಕೆ 48 ಗಂಟೆಗಳು ಆಗುತ್ತೆ. ಸದ್ಯ ಅವರ ಎಡಗಾಲಿನಲ್ಲಿ ಸ್ಪರ್ಶ ಕಡಿಮೆ ಆಗಿದೆ." ಎಂದು ವೈದ್ಯರು ಹೇಳಿದ್ದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.


Click it and Unblock the Notifications











