'ಪುಷ್ಪ 2' ನೋಡಲು ಅವಸರ: ರೈಲ್ವೆ ಟ್ರ್ಯಾಕ್ ದಾಟುತ್ತಿದ್ದ 19 ಯುವಕನ ಮೇಲೆ ಹರಿದ ರೈಲು
ದೊಡ್ಡಬಳ್ಳಾಪುರ: ನಿನ್ನೆ (ಡಿಸೆಂಬರ್ 5) ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷೆಯ ಸಿನಿಮಾ 'ಪುಷ್ಪ 2' ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಈ ಸಿನಿಮಾ ನೋಡಲು ಹೋಗಿ ಯುವಕನೊಬ್ಬ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆಂಧ್ರದಲ್ಲೂ 'ಪುಷ್ಪ 2' ವೀಕ್ಷಿಸಲು ಹೋಗಿ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿದ್ದಳು. ಈಗ ದೊಡ್ಡಬಳ್ಳಾಪುರದಲ್ಲಿ 19 ವರ್ಷ ಯುವಕನೊಬ್ಬ ಸಾವನ್ನಪ್ಪಿದ್ದಾನೆ.
ಈ ಘಟನೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸಮೀಪ ನಡೆದಿದೆ. 19 ಯುವಕ ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾವನ್ನು ನೋಡುವುದಕ್ಕೆ ಅವಸರವಾಗಿ ರೈಲ್ವೆ ಟ್ರ್ಯಾಕ್ ಅನ್ನು ದಾಟುತ್ತಿದ್ದ. ಈ ವೇಳೆ ವೇಗವಾಗಿ ಬರುತ್ತಿದ್ದ ರೈಲನ್ನು ಗಮನಿಸದ ಯುವ ಟ್ರ್ಯಾಕ್ಗೆ ಇಳಿದಿದ್ದ. ಈ ವೇಳೆ ಆತನ ಮೇಲೆ ರೈಲು ಹರಿದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಈ ದುರಂತದಲ್ಲಿ ಸಾವನ್ನಪ್ಪಿದ ಯುವಕ ಪ್ರವೀಣ್ ತಮಚಲಂ ಎಂದು ಗುರುತಿಸಲಾಗಿದೆ. ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿ ವಾಸವಿದ್ದ ಎಂದು ಹೇಳಲಾಗುತ್ತಿದೆ. ಈತ ಮೂಲತ: ಆಂಧ್ರಪ್ರದೇಶದ ಶ್ರೀಕಾಕುಲಂ ನಿವಾಸಿ ಎಂದು ವರದಿಯಾಗಿದೆ. ಐಟಿಐ ಡಿಪ್ಲೋಮ ಶಿಕ್ಷಣ ಪಡೆದಿದ್ದ ಪ್ರವೀಣ್ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಸ್ನೇಹಿತರೊಂದಿಗೆ ವಾಸವಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಪ್ರವೀಣ್ ಹಾಗೂ ಆತನ ಇಬ್ಬರು ಗೆಳೆಯರು 'ಪುಷ್ಪ 2' ಸಿನಿಮಾ ನೋಡುವುದಕ್ಕೆ ಹೊರಟಿದ್ದರು. ಗಾಂಧಿನಗರದ ವೈಭವ್ ಚಿತ್ರಮಂದಿರದಲ್ಲಿನ 10 ಗಂಟೆ ಶೋಗೆ ಸಿನಿಮಾ ನೋಡಬೇಕಿತ್ತು. ಹೀಗಾಗಿ ಮೂವರು ಅವಸರವಾಗಿ ಚಿತ್ರಮಂದಿರದ ಕಡೆಗೆ ಹೊರಟಿದ್ದಾರೆ. ಈ ವೇಳೆ ರೈಲು ವೇಗವಾಗಿ ಬರುವುದನ್ನು ಗಮನಿಸದ ಪ್ರವೀಣ್ ಟ್ರ್ಯಾಕ್ಗೆ ಇಳಿದು ಪ್ರಾಣವನ್ನು ಕಳೆದುಕೊಂಡಿದ್ದಾನೆ.
ಈ ಘಟನೆ ನಿನ್ನೆ ಬೆಳಗ್ಗೆ ಸುಮಾರು 9 ಗಂಟೆಗೆ ನಡೆದಿದ್ದು, ಪ್ರವೀಣ್ ಜೊತೆಗೆ ಇದ್ದ ಇಬ್ಬರು ಗೆಳೆಯರನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಅಪಘಾತ ನೋಡಿ ಹೆದರಿದ ಇಬ್ಬರು ಸ್ನೇಹಿತರು ಘಟನಾ ಸ್ಥಳದಿಂದ ಕಾಣೆಯಾಗಿದ್ದಾರೆ. ಹೀಗಾಗಿ ಸ್ನೇಹಿತರನ್ನು ಪೊಲೀಸರು ಹುಡಕಾಡುತ್ತಿದ್ದು, ಅವರು ಸಿಕ್ಕದ ಬಳಿಕ ಈ ಘಟನೆ ಹೇಗೆ ನಡೆಯಿತು ಅನ್ನೋದು ಬೆಳಕಿಗೆ ಬರಲಿದೆ.
ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2' ರಿಲೀಸ್ ವೇಳೆ ಆಂಧ್ರದಲ್ಲೂ ಇಂತಹದ್ದೇ ದುರ್ಘಟನೆ ನಡೆದಿದೆ. ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ 'ಪುಷ್ಪ 2' ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಲ್ಲು ಅರ್ಜುನ್ ಅದೇ ಚಿತ್ರಮಂದಿರಲ್ಲಿ ಸಿನಿಮಾ ನೋಡುವುದಕ್ಕೆ ಬಂದಾಗ, ಅಭಿಮಾನಿಗಳು ಚಿತ್ರಮಂದಿರಕ್ಕೆ ನುಗ್ಗಿದ್ದರು. ಈ ನೂಕು ನುಗ್ಗಲಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು.
39 ವರ್ಷದ ಮಹಿಳೆ 'ಪುಷ್ಪ 2' ಸಿನಿಮಾ ನೋಡುವುದಕ್ಕೆ ತಮ್ಮ ಇಬ್ಬರು ಪುತ್ರರು ಹಾಗೂ ಪತಿಯೊಂದಿಗೆ ಹೈದರಾಬಾದ್ನ ಸಂದ್ಯಾ ಚಿತ್ರಮಂದಿಕ್ಕೆ ಬಂದಿದ್ದರು. ಈ ವೇಳೆ ನಡೆದ ಘಟನೆಯಲ್ಲಿ ರೇವತಿ ಎನ್ನುವ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮಗನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ನಿನ್ನೆ (ಡಿಸೆಂಬರ್ 5) ದೊಡ್ಡಬಳ್ಳಾಪುರ ಸಮೀಪ ಅಂಧ್ರ ಪ್ರದೇಶದ ಯುವ ಪ್ರವೀಣ್ ಕೂಡ ಸಿನಿಮಾ ಮೇಲಿನ ಕ್ರೇಜ್ಗಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. 'ಪುಷ್ಪ 2' ಬಿಡುಗಡೆಯಾದ ದಿನದಿಂದ ಒಂದಲ್ಲ ಒಂದು ಇಂತಹ ಘಟನೆಗಳಿಂದ ಸಿನಿಮಾ ಸುದ್ದಿಯಲ್ಲಿದೆ. ಸದ್ಯ ಈ ಘಟನೆಯಿಂದ ಅಲ್ಲು ಅರ್ಜುನ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ 2' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಮೊದಲ ದಿನ ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆಯನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಸಿನಿಮಾಗೆ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋದನ್ನು ನೋಡಬೇಕಿದೆ.


Click it and Unblock the Notifications











