'ಡೊನೇಷನ್ ಗೇಟ್' ಹಗರಣ: ಸ್ಯಾಂಡಲ್ ವುಡ್ ತಾರೆಯರ ವಾಗ್ದಾಳಿ
ಸಿ.ಎಂ ಸಿದ್ದರಾಮಯ್ಯನವರ ಆತ್ಯಾಪ್ತ ಎಂ.ಎಲ್.ಸಿ ಗೋವಿಂದರಾಜ್ ಅವರ ಮನೆಯಲ್ಲಿ ಸಿಕ್ಕಿದೆ ಎನ್ನಲಾದ ಡೈರಿಯಲ್ಲಿ ದಾಖಲಾಗಿರುವ 'ಕಪ್ಪು ಕಾಣಿಕೆ'ಯ ಅಂಶಗಳು ಈಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಡೈರಿಯಲ್ಲಿ ಉಲ್ಲೇಖ ಅಗಿರುವ ಸಾಂಕೇತಾಕ್ಷರಗಳು ಹಾಗೂ ಕೋಟ್ಯಾಂತರ ರೂಪಾಯಿ ಮೊತ್ತ ಈಗ ಕಾಂಗ್ರೆಸ್ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.[ಡೊನೇಷನ್ ಗೇಟ್ ಹಗರಣ : ಯಾರು ಏನು ಹೇಳುತ್ತಿದ್ದಾರೆ?]
ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುತ್ತಿರುವ ಈ ದೊಡ್ಡ ಸ್ಕ್ಯಾಮ್ ಬಗ್ಗೆ ಸ್ಯಾಂಡಲ್ ವುಡ್ ಮಂದಿ.. ಅದರಲ್ಲೂ ರಾಜಕೀಯ ಹಿನ್ನಲೆ ಇರುವ ತಾರೆಯರು ಏನು ಹೇಳ್ತಾರೆ ಅಂತ ನೋಡೋಣ ಬನ್ನಿ....

ನಟ, ರಾಜಕಾರಣಿ ಜಗ್ಗೇಶ್ ಏನಂದರು.?
''ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಗೆ ಹೋಗುವ ಮುನ್ನ ಸತ್ಯ ಹೊರಬರಲಿ ಅಂತ ರಾಯರ ಸ್ತೋತ್ರ ಓದಿ ಹೋದೆ. ಸಂಜೆಗೆ ರಾಯರು ಕಣ್ಣು ಬಿಟ್ಟರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಗುಂಡೂರಾವ್ ರವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಕೋಟ್ಯಾಂತರ ರೂಪಾಯಿ ಹಣ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಸಿಕ್ಕಿದೆ. ಸಚಿವರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಹೈಕಮಾಂಡ್ ಗೆ ಹಣ ನೀಡಿರುವುದು ಬಹಿರಂಗವಾಗಿದೆ. ಇಷ್ಟೆಲ್ಲ ಮಾಡಿರುವವರಿಗೆ ಸತ್ಯಮೇವ ಜಯತೆ ಹೆಸರಿನಲ್ಲಿ ಪ್ರತಿಭಟನೆ ಮಾಡಲು ನೈತಿಕತೆ ಇದೆಯೇ.?'' - ಜಗ್ಗೇಶ್, ನಟ, ರಾಜಕಾರಣಿ [ಕಾಂಗ್ರೆಸ್ 'ಸತ್ಯಮೇವ ಜಯತೆ' ಬಲೂನಿಗೆ 'ಡೊನೇಶನ್ ಗೇಟ್' ಪಿನ್ ಚುಚ್ಚಿದ ಬಿಜೆಪಿ]

ರಾಜಕಾರಣಿ ಶಿಲ್ಪಾ ಗಣೇಶ್ ಹೇಳಿದ್ದೇನು.?
''ಜನರ ಮುಂದೆ ಕಾಂಗ್ರೆಸ್ ವಿಷ್ಯ ಬಹಿರಂಗ ಆಗಿದೆ. ಇನ್ನು ಯಾವುದೇ ಡೌಟ್ ಇಲ್ಲ. ಅವರಿಗೆ ಜವಾಬ್ದಾರಿ ಅನ್ನೋದು ಇದ್ರೆ, ನೈತಿಕ ಹೊಣೆ ಹೊತ್ತು ಎಲ್ಲರೂ ರಾಜೀನಾಮೆ ಕೊಡಬೇಕು. ಸರ್ಕಾರ ನಡೆಸಲು ಅವರಿಗೆ ಅರ್ಹತೆ ಇಲ್ಲ. ಜನರ ದುಡ್ಡನ್ನ ಇವರೆಲ್ಲ ಯಾವ ರೀತಿ ದುರುಪಯೋಗ ಪಡಿಸಿಕೊಂಡಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ.?'' - ಶಿಲ್ಪಾ ಗಣೇಶ್, ನಿರ್ಮಾಪಕಿ, ರಾಜಕಾರಣಿ

ತಪ್ಪಿಸಿಕೊಳ್ಳೋಕೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾರೆ
''ತೆರಿಗೆ ಇಲಾಖೆಗೆ ಕೊಟ್ಟಿರುವ ಡೈರಿ ಹೇಗೆ ಮಿಸ್ ಅಯ್ತು ಅಂತ ಗೋವಿಂದರಾಜು ಅವರೇ ಕೇಸ್ ಹಾಕಿದ್ದಾರೆ. ಅವರಾಗಿ ಅವರೇ ಒಪ್ಪಿಕೊಂಡಿರುವಾಗ ಈಗ ಹ್ಯಾಂಡ್ ರೈಟಿಂಗ್ ನನ್ನದಲ್ಲ ಯಾಕೆ ಹೇಳ್ತಿದ್ದಾರೆ.? ಹಾಗಾದ್ರೆ, ಕೇಸ್ ಹಾಕಿದ್ದು ಯಾಕೆ.? ಸಿಕ್ಕಿಬಿದ್ದಮೇಲೆ ಬಿಜೆಪಿ ಪಿತೂರಿ ಅಂತ ಹೇಳ್ತಾರೆ. ಅವರು ತಪ್ಪಿಸಿಕೊಳ್ಳೋಕೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾರೆ'' - ಶಿಲ್ಪಾ ಗಣೇಶ್, ನಿರ್ಮಾಪಕಿ, ರಾಜಕಾರಣಿ

ಹೀಗೆ ಬಿಟ್ಟರೆ ಸ್ಟೀಲ್ ಬ್ರಿಡ್ಜ್ ಪಕ್ಕ ಗೋಲ್ಡ್ ಬ್ರಿಡ್ಜ್ ಬರುತ್ತೆ!
''ಸ್ಟಿಲ್ ಬ್ರಿಡ್ಜ್ ಹೆಸರಿನಲ್ಲಿ ಎಷ್ಟೆಲ್ಲಾ ಲೂಟಿ ಮಾಡಿದ್ದಾರೆ ಅಂತ ಇಡೀ ರಾಜ್ಯಕ್ಕೆ ಗೊತ್ತಾಗ್ತಿದೆ. ಇನ್ನಾದರೂ ಜನ ಎಚ್ಚೆತ್ತಿಕೊಳ್ಳಬೇಕು. ನನ್ನ ಪ್ರಕಾರ ಎಲೆಕ್ಷನ್ ಬರುವವರೆಗೆ ಕಾಯುವ ಪ್ರಶ್ನೆಯೇ ಇಲ್ಲ. ಈಗಲೇ ಎಲೆಕ್ಷನ್ ಆಗಬೇಕು. ಇಲ್ಲಾಂದ್ರೆ, ಸ್ಟೀಲ್ ಬ್ರಿಡ್ಜ್ ಆಯ್ತು, ಪಕ್ಕದಲ್ಲಿ ಗೋಲ್ಡ್ ಬ್ರಿಡ್ಜ್ ಅಂತ ಶುರು ಮಾಡ್ತಾರೆ'' - ಶಿಲ್ಪಾ ಗಣೇಶ್, ನಿರ್ಮಾಪಕಿ, ರಾಜಕಾರಣಿ

ಜಯ ನಮ್ಮದೇ!
''ಹಾಸಿ ಹೊದ್ದುಕೊಳ್ಳುವಷ್ಟು ಭ್ರಷ್ಟಾಚಾರದ ದಂತ ಕತೆಗಳು, ಐಟಿ-ಇಡಿ ದಾಳಿಗಳು, ಪತ್ತೆಯಾದ ಕೋಟ್ಯಾಂತರ ರೂಪಾಯಿಗಳ ರೊಕ್ಕ, ಕೆಜಿಗಟ್ಟಲೆ ಚಿನ್ನ... ಹೀಗೆ ಜನರಿಗೆ ಉತ್ತರಿಸಲು ಇಷ್ಟನ್ನು ಇಟ್ಟುಕೊಂಡು, ಅವಾಚ್ಯ ಪದಗಳಲ್ಲಿ ಬಿಜೆಪಿ ಮತ್ತು ಬಿ.ಎಸ್.ವೈ ಮೇಲೆ ವೈಯುಕ್ತಿಕ ಟೀಕಾ ಪ್ರಹಾರ ಮಾಡುವ ಕಾಂಗ್ರೆಸ್ ನ ಬರಗೆಟ್ಟತನವನ್ನು ಏನನ್ನಬೇಕು.? ದಿನೇಶ್ (ಗುಳುಂ) ರಾವ್ ಅವರು ತಮ್ಮ ಕುಟುಂಬದವರು ವಶ ಪಡಿಸಿಕೊಂಡಿರುವ 65 ಎಕರೆ ಸರ್ಕಾರಿ ಜಮೀನಿನ ಬಗ್ಗೆ ಖಾಮೋಶ್? ಡೈರಿಯಿಂದ ಕಪ್ಪ ಸಲ್ಲಿಕೆಯ ವಿಚಾರ ಸೋರಿಕೆಯಾಗಿದೆ ಎನ್ನುತ್ತೀರೆ ವಿನಃ ಅಂತಹ ಡೈರಿಯೇ ಇಲ್ಲ ಅಥವಾ ಡೈರಿಯಲ್ಲಿ ಅಂತಹ ಉಲ್ಲೇಖಗಳಿಲ್ಲ ಎನ್ನುತ್ತಿಲ್ಲವಲ್ಲ? ಅಂದರೆ ಡೈರಿಯಲ್ಲಿ ನೋಟಿಂಗ್ಸಿವೆ! 'ಸತ್ಯಮೇವ ಜಯತೆ' ರ್ಯಾಲಿ ಮಾಡ್ತೀರಾ, ಮಾಡಿ? ನಿಮ್ಮ ಸತ್ಯಗಳೆಲ್ಲ ಬಯಲಾದಾಗ ಜಯ ನಮ್ಮದೆ!'' - ಮಾಳವಿಕಾ ಅವಿನಾಶ್

ಬೇಸರ ಆಗ್ತಿದೆ
''ಇತ್ತೀಚಿನ ರಾಜ್ಯ ರಾಜಕೀಯ ನೋಡಿದರೆ ಬೇಸರವಾಗುತ್ತದೆ. ಆರೋಪಗಳು, ಪ್ರತ್ಯಾರೋಪಗಳಿಂದ ನಮ್ಮ ರಾಜಕಾರಣಿಗಳು ಹೊರಬರುವುದು ಯಾವಾಗ? ನಮ್ಮ ದೇಶ ಸುಭಿಕ್ಷವಾಗುವುದು ಯಾವಾಗ ಎಂಬ ಪ್ರಶ್ನೆ ಏಳುತ್ತಿದೆ'' - ಸುನಿಲ್ ಕುಮಾರ್ ದೇಸಾಯಿ, ಚಿತ್ರ ನಿರ್ದೇಶಕ

ಎಲ್ಲವೂ ಬದಲಾಗಬೇಕು
''ಇಂದಿನ ರಾಜಕೀಯವೆಂದರೆ, ಅವರ ಮೇಲೆ ಇವರು, ಇವರ ಮೇಲೆ ಅವರು ಗೂಬೆ ಕೂರಿಸುವುದೆಂದೇ ಅರ್ಥ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಆದರೆ, ಇದು ಬದಲಾಗಬೇಕು. ನಾವು ಮತದಾನ ಮಾಡಿ ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು ನಮ್ಮ ಆಶಯಗಳಿಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು'' - ಭಾವನಾ, ಚಿತ್ರ ನಟಿ


Click it and Unblock the Notifications











