ಶಿವಮೊಗ್ಗದ ರಿಪ್ಪನ್ಪೇಟೆಯಲ್ಲಿ ಅಪ್ಪು ಪುತ್ಥಳಿಗೆ ಅವಮಾನ; ರೊಚ್ಚಿಗೆದ್ದ ರಾಜವಂಶದ ಫ್ಯಾನ್ಸ್
ಕರ್ನಾಟಕ ರತ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ ಎರಡು ವರ್ಷಗಳ ಮೇಲಾಗಿದೆ. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡಿದ್ದರೂ, ಅವರದ್ದೇ ನೆನಪಿನಲ್ಲಿ ಅಭಿಮಾನಿಗಳು ಮುಂದೆ ಸಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸುವ ಕೆಲಸ ನಡೆದಿದೆ.
ಪುನೀತ್ ರಾಜ್ಕುಮಾರ್ ಅಗಲಿದ ಬಳಿಕ ರಾಜ್ಯದ ಗ್ರಾಮಗಳ ಬಡಾವಣೆಗೆ ಅಪ್ಪು ಹೆಸರನ್ನು ಇಟ್ಟು ತಮ್ಮ ಅಭಿಮಾನವನ್ನು ಮೆರೆಯುತ್ತಿದ್ದಾರೆ. ಶಿವಮೊಗ್ಗದ ರಿಪ್ಪನ್ಪೇಟೆ ಸಮೀಪವಿರುವ ಗವಟೂರು ಗ್ರಾಮದಲ್ಲಿ ಪುನೀತ್ ಅಭಿಮಾನಿಗಳು ಪುತ್ಥಳಿ ನಿಲ್ಲಿಸಿದ್ದರು. ಹಾಗೇ ಬಡಾವಣೆಗೆ ನಾಮಫಲಕವನ್ನು ಹಾಕಿ, ಪುನೀತ್ ರಾಜ್ಕುಮಾರ್ ಬಗ್ಗೆ ತಮ್ಮ ಅಭಿಮಾನವನ್ನು ತೋರಿಸಿದ್ದರು.

ಇಲ್ಲಿ ಯಾರೋ ಕಿಡಿಗೇಡಿಗಳು ಪುನೀತ್ ರಾಜಕುಮಾರ್ ಪುತ್ಥಳಿಯನ್ನು ಬೀಳಿಸಿ ಅವಮಾನ ಮಾಡಿದ್ದಾರೆ. ಇಷ್ಟೇ ಅಲ್ಲದೆ ನಾಮಫಲಕವನ್ನು ಅಳಿಸಿ ಹಾಕಲು ಬಣ್ಣ ಬಳಿದಿದ್ದಾರೆ. ಇದು ರಾಜವಂಶದ ಅಭಿಮಾನಿಗಳನ್ನು ಕೆರಳಿಸಿದೆ. ಕರ್ನಾಟಕ ರತ್ನ ಡಾ.ಪುನೀತ್ರಾಜ್ಕುಮಾರ್ ಅವರಿಗೆ ಮಾಡಿರುವ ಅವಮಾನ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಈ ಪ್ರಕರಣವನ್ನು ಸ್ಥಳೀಯ ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂದು ರಾಜವಂಶದ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ. "ಸ್ಥಳೀಯ ಪೋಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ಸಮಸ್ತ ರಾಜವಂಶದ ಅಭಿಮಾನಿಗಳು ವ್ಯಾಪಕವಾಗಿ ಪ್ರತಿಭಟಿಸಬೇಕಾಗುತ್ತದೆ ಎಂದು ಮನವಿ ಮತ್ತು ಎಚ್ಚರಿಕೆ ನೀಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ರಾಜವಂಶ ಕೂಡ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ನೋವಿನಿಂದ ಇನ್ನೂ ಹೊರಬಂದಿಲ್ಲ. ಅದರಲ್ಲೂ ಶಿವರಾಜ್ಕುಮಾರ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅಪ್ಪು ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಅಪ್ಪು ನೋಡಲು ಯಾಕೆ ಸಮಾಧಿಗೆ ಹೋಗುವುದಿಲ್ಲ ಎಂದು 'ಕ್ಯಾಪ್ಟನ್ ಮಿಲ್ಲರ್' ಸಂದರ್ಶನದ ವೇಳೆ ತಿಳಿಸಿದ್ದರು.

"ಎಲ್ಲರೂ ನೀವ್ಯಾಕೆ ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಬರುವುದಿಲ್ಲ ಎಂದು ಕೇಳುತ್ತಾರೆ. ಆದರೆ, ನನಗೆ ಸಮಾಧಿ ಭೇಟಿ ಮಾಡಿ ತಮ್ಮನನ್ನು ನೋಡುವುದರಲ್ಲಿ ನಂಬಿಕೆ ಇಲ್ಲ. ಎಲ್ಲೋ ಹೋಗಿದ್ದಾನೆ. ಮುಂದಿನ ವರ್ಷ ಬರುತ್ತಾನೆ ಅಂತ ಕಾಯುತ್ತಲೇ ದಿನ ಕಳೆಯುತ್ತೇನೆ. ಅಪ್ಪು ಬಗ್ಗೆ ಒಂದೇ ಒಂದು ದಿನ ಮಾತಾಡದೇ ಇರುವುದಿಲ್ಲ. ಏನಾದರೂ ಒಂದು ವಿಷಯಕ್ಕೆ ಅಪ್ಪು ನೆನಪಿಸಿಕೊಳ್ಳುತ್ತಲೇ ಇರುತ್ತೇನೆ." ಎಂದು ಶಿವಣ್ಣ ಹೇಳಿದ್ದರು.
ಹೀಗಾಗಿ ಪುನೀತ್ ಕಳೆದುಕೊಂಡ ನೋವು ಅಭಿಮಾನಿಗಳಿಗಷ್ಟೇ ಅಲ್ಲ ಅವರ ಕುಟುಂಬಕ್ಕೂ ಇನ್ನೂ ಹಾಗೇ ಇರುವಾಗಲೇ ಕಿಡಿಗೇಡಿಗಳು ಇಂತ ಕೃತ್ಯ ಎಸಗಿದ್ದಾರೆ. ಹೀಗಾಗಿ ಪೊಲೀಸರು ಕೂಡ ತಪ್ಪು ಮಾಡಿದವರನ್ನು ಬಂಧಿಸಬೇಕು. ಅವರಿಗೆ ಶಿಕ್ಷೆಯಾಗಬೇಕು ಎಂದು ಅಪ್ಪು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.


Click it and Unblock the Notifications











