"ಕನ್ನಡ ನೆಲ, ಜಲ, ಭಾಷೆ ತಂಟೆಗೆ ಬರಬೇಡಿ"; ತಮಿಳುನಾಡಿನಲ್ಲಿ ಎಂಜಿಆರ್ ಪಕ್ಕ ನಿಂತು ಹೇಳಿದ್ರು ಅಣ್ಣಾವ್ರು
ಕನ್ನಡ ಭಾಷೆ, ನೆಲ, ಜಲ ವಿಚಾರ ಬಂದಾಗ ಸದಾ ಮುಂದೆ ನಿಲ್ಲುತ್ತಿದ್ದವರು ಕನ್ನಡ ಕಣ್ಮಣಿ ಡಾ. ರಾಜ್ಕುಮಾರ್. ಕನ್ನಡ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತೇನೆ. ಭಾಷೆ ಭಾಷೆಯಲ್ಲಿ ನಟಿಸಲ್ಲ ಎಂದು ಹೇಳಿದವರು, ತಮ್ಮ ಮಾತಿಗೆ ತಕ್ಕಂತೆ ನಡೆದುಕೊಂಡವರು. ಅಣ್ಣಾವ್ರ ಕನ್ನಡ ಪ್ರೀತಿಗೆ ಗೋಕಾಕ್ ಚಳುವಳಿಯೇ ದೊಡ್ಡ ನಿದರ್ಶನ.
ಇತ್ತೀಚೆಗೆ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ಈವರೆಗೆ ಅದಕ್ಕೆ ಕ್ಷಮೆ ಕೇಳಲಿಲ್ಲ. ತಮ್ಮ 'ಥಗ್ ಲೈಫ್' ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೆ ಅಡ್ಡಿಯಾಗಿದೆ. ಆದರೂ ಕಮಲ್ ಹಠ ಬಿಡುತ್ತಿಲ್ಲ. ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಹಸ ಮಾಡಿದ ಅವರಿಗೆ ಅಲ್ಲಿಯೂ ಹಿನ್ನಡೆಯಾಗಿದೆ. ಅಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಣ್ಣನ ಎದುರಲ್ಲೇ ಕಮಲ್ ಮಾತನಾಡಿ "ತಮಿಳಿನಿಂದ ಹುಟ್ಟಿದ ಭಾಷೆ ಕನ್ನಡ" ಎಂದಿದ್ದರು. ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಕಮಲ್ ಹಾಸನ್ ಹೀಗೆ ಹೇಳಿದಾಗ ನಮ್ಮ ಶಿವಣ್ಣ ಯಾಕೆ ಸುಮ್ಮನಿದ್ದರು ಎಂದು ಕೆಲವರು ಕೇಳುತ್ತಿದ್ದಾರೆ.

ಕನ್ನಡ ನೆಲ, ಭಾಷೆಯ ವಿಚಾರ ಬಂದಾಗ ಸದಾ ಮುಂದೆ ನಿಲ್ಲುತ್ತಿದ್ದ ಅಣ್ಣಾವ್ರು ಒಮ್ಮೆ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ "ಕನ್ನಡ ನೆಲ, ಭಾಷೆ ತಂಟೆಗೆ ಬರಬೇಡಿ" ಎಂದಿದ್ದರು. ಈ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಕನ್ನಡಿಗರ ಮೇಲೆ ತಮಿಳರ ದರ್ಪ ಇಂದು ನಿನ್ನೆಯದಲ್ಲ. ಅದಕ್ಕೆ ಶತಮಾನಗಳ ಇತಿಹಾಸವೇ ಸಾಕ್ಷಿಯಾಗಿದೆ. ದೇಶಕ್ಕೆ ಸ್ವತಂತ್ರ ಬಂದು ಭಾಷಾವಾರು ರಾಜ್ಯಗಳಾಗಿ ವಿಗಂಡನೆಯಾದ ಬಳಿಕ ಇದಯ ಮತ್ತಷ್ಟು ಹೆಚ್ಚಾಯಿತು. ಕನ್ನಡಿಗರು ಸೌಮ್ಯ ಸ್ವಭಾವದವರು. ಸುಖಾಸುಮ್ಮನೆ ಬೇರೆಯವರ ಮೇಲೆ ದರ್ಪ, ಅಟ್ಟಹಾಸ ಮೆರೆಯುವುದಿಲ್ಲ. ಆದರೆ ತಮಿಳರು ಪದೇ ಪದೆ ಕಾಲುಕೆರೆದುಕೊಂಡು ಕಿರಿಕ್ ಮಾಡಿರುವ ಉದಾಹರಣೆಗಳಿವೆ.
1983- 84ರ ಸಮಯದಲ್ಲಿ ಬೆಂಗಳೂರಿನಲ್ಲಿ ಕೆಲ ತಮಿಳು ಸಂಘಟನೆಗಳ ನಾಯಕರು "ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿ" ಎಂದು ಮನವಿ ಮಾಡಿದ್ದರು. ಇಲ್ಲಿ ತಮಿಳರು ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಹಾಗಾಗಿ ಇದನ್ನು ಕರ್ನಾಟಕ ಅಥವಾ ತಮಿಳುನಾಡಿಗೆ ಸೇರಿಸುವ ಬದಲು ಕೇಂದ್ರಾಡಳಿತ ಪ್ರದೇಶ ಮಾಡುವುದು ಉತ್ತಮ ಎಂದಿದ್ದರು. ಅದಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದರು. ಅಣ್ಣಾವ್ರು ನೀಡಿದ ಎಚ್ಚರಿಕೆಗೆ ಕೇಂದ್ರ ಸರ್ಕಾರ ಸುಮ್ಮನಾಗಿತ್ತು. ಅಂದಿನ ತಮಿಳುನಾಡು ಸಿಎಂ ಎಂಜಿಆರ್ ಬೆಂಗಳೂರಿಗ ಬಂದು ಡಾ. ರಾಜ್ ಕ್ಷಮೆ ಕೇಳಿದ್ದರು.

'ಯಾರಿವನು' ಸಿನಿಮಾ ಚಿತ್ರೀಕರಣದ ವೇಳೆ ಅಣ್ಣಾವ್ರ ಮೇಲೆ ಹಲ್ಲೆ ನಡೆದಿದ್ದು ಗೊತ್ತೇಯಿದೆ. ಊಟಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಕೆಲ ದುಷ್ಕರ್ಮಿಗಳು ಬಂದು ದಾಳಿ ನಡೆಸಿದ್ದರು. ಈ ಘಟನೆಯ ಬಗ್ಗೆ ಕೇಳಿದ್ದ ಪ್ರಶ್ನೆಗೆ ಅಣ್ಣಾವ್ರು ಅಂದು ತಮಿಳುನಾಡಿನ ವೇದಿಕೆಯಲ್ಲೇ ಉತ್ತರಿಸಿದ್ದರು. ಈ ಎರಡೂ ಘಟನೆಗಳನ್ನು ಡಾ. ರಾಜ್ಕುಮಾರ್ ಅವರ ಅಭಿಮಾನಿ, ಬಿಜೆಪಿ ಮುಖಂಡ ಎನ್ಆರ್ ರಮೇಶ್ ನೆನಪು ಮಾಡಿಕೊಂಡಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಈ ಬಗ್ಗೆ ಮಾತನಾಡಿದ್ದಾರೆ.
"1983-84ರಲ್ಲಿ ಬೆಂಗಳೂರು ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಹಲಸೂರು ಭಾಗದ ತಮಿಳು ಸಂಘದವರು ಒತ್ತಾಯಿಸಿದ್ದರು. ಎಐಎಡಿಎಂಕೆ ನಾಯಕ ಪುಗಳೆಂದ್ರಿ ಎಂಬುವವರ ನೇತೃತ್ವದಲ್ಲಿ ತಮಿಳುನಾಡು ಸಿಎಂ ಎಂಜಿಆರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಕೊಟ್ಟಿದ್ದರು. ಈ ಬಗ್ಗೆ ಕೇಂದ್ರಕ್ಕೆ ಎಂಜಿಆರ್ ಪತ್ರ ಬರೆಯುತ್ತಾರೆ" ಎಂದು ಆ ಘಟನೆಯನ್ನು ಎನ್ಆರ್ ರಮೇಶ್ ಮೆಲುಕು ಹಾಕಿದ್ದಾರೆ.

ಎಂಜಿಆರ್ ಪತ್ರಕ್ಕೆ ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರ ಒಂಧು ಸಮಿತಿಯನ್ನು ರಚಿಸಿತ್ತು. ಬಳಿಕ ಅಣ್ಣಾವ್ರು ಕೇಂದ್ರಕ್ಕೆ ಕೊಟ್ಟ ಎಚ್ಚರಿಕೆ ಏನು ಎಂದು ಎನ್ಆರ್ ರಮೇಶ್ ವಿವರಿಸಿದ್ದಾರೆ. "ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಮಾಹಿತಿ ಸಂಗ್ರಹಕ್ಕೆ ಕೇಂದ್ರ 5 ಜನರ ಸಮಿತಿ ರಚಿಸಿತ್ತು. ಅವತ್ತಿನ ಗೃಹ ಸಚಿವರಾದ ಎಸ್. ಪಿ ಚೌಹಾಣ್, ವಿದೇಶಾಂಗ ಸಚಿವರಾದ ನವಲ್ ಕಿಶೋರ್ ಶರ್ಮಾ ನೇತೃತ್ವದಲ್ಲಿ ಸಮಿತಿ ರಚನೆ ಆಗಿತ್ತು. ಬೆಂಗಳೂರಿನಲ್ಲಿ ಶೇಕಡಾ 35% ತಮಿಳು ಭಾಷಿಕರು ಇದ್ದಾರೆ ಎಂದು ಎಂಜಿಆರ್ ಕೇಂದ್ರಕ್ಕೆ ಪತ್ರ ಬರೆದಿದ್ದರು. ಹಾಗಾಗಿ ಸಮಿತಿ ಪರಿಶೀಲನೆಗೆ ಮುಂದಾಗಿತ್ತು" ಎಂದಿದ್ದಾರೆ.
"ಕೇಂದ್ರ ಸರ್ಕಾರದ ಸಮಿತಿ ಹೀಗೆ ಬೆಂಗಳೂರಿಗೆ ಬಂದು ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಬಗ್ಗೆ ಪರಿಶೀಲನೆಗೆ ಬರುವ ವಿಚಾರ ರಾಜ್ಯದಲ್ಲಿ ಗೊತ್ತಾಗಿತ್ತು. ಕೆಲವರು ಪ್ರತಿಭಟನೆ ಆರಂಭಿಸಿದ್ದರು. ಮರುದಿನವೇ ಐಲ್ಯಾಂಡ್ ಹೋಟೆಲ್ನಲ್ಲಿ ಡಾ. ರಾಜ್ಕುಮಾರ್ ಸುದ್ದಿಗೋಷ್ಠಿ ಕರೆದಿದ್ದರು. ಅಣ್ಣಾವ್ರು ಆಗ ಹೆಚ್ಚು ಅದೇ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದರು. ಅಲ್ಲಿಗೆ ಪತ್ರಕರ್ತರನ್ನು ಆಹ್ವಾನಿಸಿ ಮಾತನಾಡಿದ್ದರು. 'ಒಂದು ವೇಳೆ ಕೇಂದ್ರದ ಆ ಸಮಿತಿ ಬೆಂಗಳೂರಿಗೆ ಬಂದರೆ, ನಾಡಿದ್ದು ನಾನು ನಗರದ ಕೆಜಿ ರಸ್ತೆಯಲ್ಲಿ ಪ್ರತಿಭಟನೆಗೆ ಕೂರುತ್ತೇನೆ' ಎಂದು ಎಚ್ಚರಿಕೆ ಕೊಟ್ಟಿದ್ದರು. ಅಷ್ಟಕ್ಕೆ ಕೇಂದ್ರ ಸರ್ಕಾರ ಬೆಚ್ಚಿಬಿದ್ದು ಸುಮ್ಮನಾಗಿತ್ತು. ಹೀಗೆ ಅಣ್ಣಾವ್ರ ಒಂದೇ ಒಂದು ಸಾಲಿನ ಎಚ್ಚರಿಕೆ ಬೆಂಗಳೂರನ್ನು ಕೇಂದ್ರಾಡಳಿ ಪ್ರದೇಶ ಮಾಡಬೇಕು ಎನ್ನುವ ಕೂಗಿನ ಹುಟ್ಟಡಗಿಸಿತ್ತು" ಎಂದು ಎನ್ಆರ್ ರಮೇಶ್ ನೆನಪು ಮಾಡಿಕೊಂಡಿದ್ದಾರೆ.
ಹೀಗೆ ಅಣ್ಣಾವ್ರು ಹೇಳಿಕೆ ಕೊಟ್ಟು ಕೇಂದ್ರ ಸರ್ಕಾರ ಸುಮ್ಮನಾಗುತ್ತಿದ್ದಂತೆ ತಮಿಳುನಾಡು ಸಿಎಂ ಎಂಜಿಆರ್ ಬೆಂಗಳೂರಿಗೆ ಓಡೋಡಿ ಬಂದಿದ್ದರು. ಫೆಬ್ರವರಿ 9, 1984ರಂದು ಸುದ್ದಿಗೋಷ್ಠಿ ಕರೆದು "ರಾಜ್ಕುಮಾರ್ ನನ್ನ ಸಹೋದರ. ನನಗೆ ಆ ಉದ್ದೇಶ ಇರಲಿಲ್ಲ. ದಯವಿಟ್ಟು ಕ್ಷಮಿಸಿ" ಎಂದು ಅಣ್ಣಾವ್ರ ಕೆನ್ನೆಗೆ ಮುತ್ತು ಕೊಟ್ಟು ಹೋಗುತ್ತಾರೆ. ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆ ಫೋಟೊ ಅದೇ ಸಂದರ್ಭದ್ದು ಎಂದು ಎನ್ಆರ್ ರಮೇಶ್ ಮಾಹಿತಿ ನೀಡಿದ್ದಾರೆ.
'ಯಾರಿವನು' ಸಿನಿಮಾ ಚಿತ್ರೀಕರಣದ ವೇಳೆ ಅಣ್ಣಾವ್ರ ಮೇಲೆ ಹಲ್ಲೆ ನಡೆದಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಚೆನ್ನೈನಲ್ಲಿ 'ಫಿಲ್ಮ್ ಫೇರ್ ಸೌತ್ ಅವಾರ್ಡ್' ಕಾರ್ಯಕ್ರಮ ನಡೆದಿತ್ತು. ಅದಕ್ಕೂ ಮುನ್ನ ಅಣ್ಣಾವ್ರ ಮೇಲಿನ ಹಲ್ಲೆಯನ್ನು ಎಂಜಿಆರ್ ಖಂಡಿಸಿದ್ದರು. ಅವರ ಮೇಲೆ ದಾಳಿ ಮಾಡಿದ್ದ 17 ಜನರನ್ನು ಬಂಧಿಸುವಂತೆ ಆದೇಶ ನೀಡಿದ್ದರು. ಫಿಲ್ಮ್ ಫೇರ್ ಕಾರ್ಯಕ್ರಮಕ್ಕೆ ಹೋದಾಗ ಮಾಧ್ಯಮದವರು ಈ ಘಟನೆಗೆ ಬಗ್ಗೆ ಡಾ. ರಾಜ್ ಬಳಿ ಪ್ರಶ್ನೆ ಕೇಳಿದ್ದರು. ಆಗ ಇಲ್ಲ ನಾನು ಮಾಧ್ಯಮದ ಮುಂದೆ ಮಾತನಾಡಲ್ಲ, ವೇದಿಕೆಯಲ್ಲೇ ಉತ್ತರಿಸುತ್ತೇನೆ ಎಂದು ಹೇಳಿ ಸುಮ್ಮನಾಗಿದ್ದರು.
"ಶ್ರಾವಣ ಬಂತು ಚಿತ್ರಕ್ಕೆ ಅತ್ಯುತ್ತಮ ನಟ ಫಿಲ್ಮ್ ಫೇರ್ ಪ್ರಶಸ್ತಿ ಬಂದಿತ್ತು. ಅಂದು ಕಾರ್ಯಕ್ರಮದಲ್ಲಿ ಎಂಜಿಆರ್, ರಜನಿಕಾಂತ್, ಜೈಶಂಕರ್, ಕಮಲ್ ಹಾಸನ್, ಶಿವಾಜಿ ಗಣೇಶನ್, ತೆಲುಗಿನ ನಾಗೇಶ್ವರರಾವ್ ಸಹ ಇರುತ್ತಾರೆ. ಆಗ ತಾನೇ ಗೋಕಾಕ್ ಚಳುವಳಿ, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆನ್ನುವ ಕೂಗು, ತಮ್ಮ ಮೇಲಿನ ಹಲ್ಲೆ ಘಟನೆಗಳೆಲ್ಲಾ ನಡೆದಿತ್ತು. ಅದೆಲ್ಲದರ ಬಗ್ಗೆ ಮಾಧ್ಯಮದವರು ಪ್ರಶ್ನೆ ಹೇಳಿದ್ದರು. ಹಾಗಾಗಿ ಅಣ್ಣಾವ್ರು ವೇದಿಕೆಯಲ್ಲಿ ಮಾತನಾಡಿ "ಕನ್ನಡ ನೆಲ, ಜಲ, ಭಾಷೆಯ ವಿಚಾರಕ್ಕೆ ಯಾರು ಬರಬೇಡಿ. ನಿಮ್ಮ ರಾಜ್ಯದ ಬಗ್ಗೆ ನೀವು ನೋಡ್ಕೊಳಿ, ಬೇರೆ ರಾಜ್ಯದ ಬಗ್ಗೆ ನಿಮಗೆ ಚಿಂತೆ ಯಾಕೆ" ಎಂದು ಕೇಳಿದ್ದರು ಎಂದು ಎನ್ಆರ್ ರಮೇಶ್ ತಿಳಿಸಿದ್ದಾರೆ.


Click it and Unblock the Notifications











