ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು? ಅರಣ್ಯ ಸಚಿವ ಈಶ್ವರ್ ಖಂಡ್ರೇ ಹೇಳೋದೇನು?
ಡಾ.ವಿಷ್ಣುವರ್ಧನ್ ಸ್ವಾರಕ ವಿಚಾರವಾಗಿ ಅಭಿಮಾನಿಗಳ ಕೆಂಗಣ್ಣಿಗೆ ಹಿರಿಯ ನಟ ಬಾಲಕೃಷ್ಣ ಕುಟುಂಬ ಗುರಿಯಾಗಿತ್ತು. ಇತ್ತೀಚೆಗ ರಾತ್ರೋ ರಾತ್ರಿ ವಿಷ್ಣು ಸ್ಮಾರಕವನ್ನು ನೆಲಸಮ ಮಾಡಿದ ಮೇಲಂತೂ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಈಗ ರಾಜ್ಯ ಸರ್ಕಾರ ಬಾಲಣ್ಣನ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ. ಅಭಿಮಾನ್ ಸ್ಟುಡಿಯೋ ಇರುವ ಸ್ಥಳವನ್ನು 'ಅರಣ್ಯ ಭೂಮಿ' ಎಂದು ಘೋಷಿಸಿದ್ದು, ಅರಣ್ಯಾಧಿಕಾರಿಯೊಬ್ಬರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಅರಣ್ಯಾಧಿಕಾರಿ ಬೆಂಗಳೂರು ಜಿಲ್ಲಾಧಿಕಾರಿಗೆ ಬರೆದ ಪತ್ರವೀಗ ಬಾಲಕೃಷ್ಣ ಕುಟುಂಬಕ್ಕೆ ಹೊಸ ಸಂಕಷ್ಟ ತಂದೊಡ್ಡಿದೆ. ಈ ಪತ್ರದ ಬಗ್ಗೆ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಎಂಬುವವರು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಎಂಬುವವರಿಗೆ ಪತ್ರ ಬರೆದಿದ್ದು, ಇದರಲ್ಲಿ ಅಭಿಮಾನ್ ಸ್ಟುಡಿಯೋ ಅರಣ್ಯ ಭೂಮಿ ಎಂಬುವುದರ ಬಗ್ಗೆ ಮಹತ್ವದ ವಿಷಯಗಳನ್ನು ಚರ್ಚೆ ಮಾಡಲಾಗಿದೆ.

1970ರಲ್ಲಿ ದಿವಂಗತ ಹಿರಿಯ ನಟ ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣಕ್ಕೆಂದು 20 ಎಕರೆ ಭೂಮಿಯನ್ನು ನೀಡಲಾಗಿತ್ತು. ಈಗಾಗಲೇ ವರದಿಯಾಗಿರುವ ಪ್ರಕಾರ, 20 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲಾಗಿತ್ತು. ಗುತ್ತಿಗೆ ಅವಧಿ ಮುಗಿದ ನಂತರ ಮತ್ತೆ ಅದನ್ನು ವಿಸ್ತರಿಸಲಾಗಿತ್ತು. ಅಷ್ಟೇ ಅಲ್ಲದೆ ಯಾವುದೇ ಷರತ್ತು ಇಲ್ಲದೆ, ಸರ್ಕಾರವು ಯಾವುದೇ ಪರಿಹಾರ ನೀಡದೆ ಮಂಜೂರಾತಿಯನ್ನು ರದ್ದುಪಡಿಸಿ, ಜಾಗವನ್ನು ಹಿಂಪಡೆಯಬಹುದೆಂದು ಸ್ಪಷ್ಟವಾಗಿ ಹೇಳಲಾಗಿತ್ತು. ಈಗ ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳುತ್ತಾ? ಅನ್ನೋ ಚರ್ಚೆ ಶುರುವಾಗಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ವಿಷ್ಣುದಾದ ಸ್ಮಾರಕಕ್ಕೆ ಸಂಬಂಧಿಸಿದಂತೆ ಬಾಲಕೃಷ್ಣ ಮಕ್ಕಳು ಹಾಗೂ ಸಾಹಸ ಸಿಂಹ ಅಭಿಮಾನಿಗಳ ಮಧ್ಯೆ ಆಗಾಗ ವಾದ-ವಿವಾದಗಳು ನಡೆಯುತ್ತಲೇ ಇತ್ತು. ಇತ್ತೀಚೆಗೆ ಸ್ಮಾರಕವನ್ನು ನೆಲಸಮ ಮಾಡಿದ್ದು ವಿಷ್ಣು ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸಿತ್ತು. ಈ ಮಧ್ಯೆ ಬಾಲಕೃಷ್ಣ ಕುಟುಂಬಕ್ಕೆ ಅರಣ್ಯ ಇಲಾಖೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಅಭಿಮಾನ್ ಸ್ಟುಡಿಯೋವನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತಾ? ಅನ್ನೋ ಪ್ರಶ್ನೆ ಎದುರಾಗಿದೆ.

70ರ ದಶಕದಲ್ಲಿ ಸರ್ಕಾರ ಮಂಜೂರು ಮಾಡಿದ್ದ 20 ಎಕರೆ ಜಾಗದಲ್ಲಿ 10 ಎಕರೆಯನ್ನು ಮಾರಾಟ ಮಾಡಲಾಗಿದೆ. 2004ರಲ್ಲಿ ಬಾಲಕೃಷ್ಣ ಮಕ್ಕಳಾದ ಶ್ರೀನಿವಾಸ್ ಮತ್ತು ಗಣೇಶ್ ಆರ್ಥಿಕ ಸಂಕಷ್ಟದ ಕಾರಣವೊಡ್ಡಿ ಮಾರಾಟ ಮಾಡುವುದಕ್ಕೆ ಅಂದಿನ ಜಿಲ್ಲಾಧಿಕಾರಿಗೆ ಅನುಮತಿ ಕೋರಿದ್ದರು. 10 ಎಕರೆ ಮಾರಾಟದಿಂದ ಬಂದ ಹಣವನ್ನು ಸ್ಟುಡಿಯೋ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿತ್ತು. ಈ ಬಗ್ಗೆ ಬಾಲಣ್ಣನ ಮಕ್ಕಳು ಸರ್ಕಾರಕ್ಕೆ ಭರವಸೆಯನ್ನೂ ನೀಡಿದ್ದರು. ಆದರೆ, ಆ ಹಣದಿಂದ ಸ್ಟುಡಿಯೋ ಅಭಿವೃದ್ಧಿಯಾಗಿಲ್ಲ ಎಂದು ಅರಣ್ಯಾಧಿಕಾರಿ ಬರೆದ ಪತ್ರದಲ್ಲಿ ಹೇಳಲಾಗಿದೆ.
ಅರಣ್ಯ ಇಲಾಖೆ ಬರೆದ ಪತ್ರದ ಸಾರಾಂಶ ಹೀಗಿದೆ. ಬೆಂಗಳೂರಿನ ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮದ ಸರ್ವೆ ನಂ. 26ರಲ್ಲಿರುವ ಈ ಭೂಮಿಯನ್ನು ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಲಾಗಿತ್ತು. ಅದನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗಿದೆ. ಅಲ್ಲದೆ, ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ. ಈ ಕೂಡಲೆ ಜಮೀನನನ್ನು ವಶಕ್ಕೆ ಪಡೆಯುವಂತೆ ಅರಣ್ಯಾಧಿಕಾರಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ಅರಣ್ಯಾಧಿಕಾರಿ ಈ ಪತ್ರ ಬರೆಯುವುದಕ್ಕೆ ಕಾರಣವಿದೆ. ಹಿರಿಯ ನಟ ಬಾಲಕೃಷ್ಣ ಅವರ ಮೊಮ್ಮಗ ಕಾರ್ತಿಕ್ ಅವರು 1 ಎಕರೆಗೆ 14 ಕೋಟಿ ರೂ.ನಂತೆ, 144 ಕೋಟಿ ರೂಪಾಯಿಗೆ ಈ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದರು. ಈ ಮಾಹಿತಿ ಅರಣ್ಯಾಧಿಕಾರಿಗೆ ತಲುಪಿದ ಬಳಿಕ ಜಿಲ್ಲಾಧಿಕಾರಿಗೆ ಪತ್ರ ಬರೆದು ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇತ್ತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, "ನಮ್ಮ ಅಧಿಕಾರಿಗಳು ಪತ್ರ ಬರೆಯೋದು ನಿರಂತರವಾಗಿ ನಡೆಯುವ ಕೆಲಸ. ನಮ್ಮ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಎಲ್ಲಾ ವಿಷಯಗಳು ಚರ್ಚೆಗೆ ಬರುತ್ತವೆ. ಸರಿಯಾದ ಸಮಯಕ್ಕೆ ನನ್ನ ಕಡೆಯಿಂದ ಅವರಿಗೆ ಏನು ಸೂಚನೆ ಕೊಡಬೇಕೋ ಅದನ್ನು ಕೊಡುತ್ತೇನೆ" ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.


Click it and Unblock the Notifications











