ದುನಿಯಾ ವಿಜಯ್ ಎದುರು ಕೆ.ಮಂಜು ಪುತ್ರ ಆರ್ಭಟ; ತೆರೆಮೇಲೆ ಅಬ್ಬರಿಸಲು 'ಮಾರುತ' ರೆಡಿ
ಕಲಾ ಸಾಮ್ರಾಟ್ ಎಸ್.ನಾರಾಯಣ್ ಹಾಗೂ ದುನಿಯಾ ವಿಜಯ್ ಬಹಳ ದಿನಗಳ ಬಳಿಕ ಮತ್ತೆ ಒಂದಾಗಿದ್ದಾರೆ. ಇಬ್ಬರೂ ಜೊತೆ ಸೇರಿ ಸಿನಿಮಾ ಮಾಡಿದ್ದಾರೆ. ಅದುವೇ 'ಮಾರುತ'. ಈ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಕೆ.ಮಂಜು ಹಾಗೂ ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ನಾಲ್ಕು ಮಂದಿ ಅನುಭವಿಗಳು ಸೇರಿ ಮಾಡಿದ ಸಿನಿಮಾವಿದು. ಒಂದ್ಕಡೆ ಎಸ್.ನಾರಾಯಣ್, ಇನ್ನೊಂದು ಕಡೆ ದುನಿಯಾ ವಿಜಯ್, ಮತ್ತೊಂದು ಕಡೆ ಕೆ. ಮಂಜು ಹಾಗೂ ರಮೇಶ್ ಯಾದವ್ 'ಮಾರುತ' ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಹೀಗಾಗಿ 'ಮಾರುತ' ಕರ್ನಾಟಕದ ಬಾಕ್ಸಾಫೀಸ್ನಲ್ಲಿ ಮೋಡಿ ಮಾಡಬಹುದೆಂಬ ನಿರೀಕ್ಷೆ ಹುಟ್ಟಾಕಿದೆ.

ಇನ್ನು ದುನಿಯಾ ವಿಜಯ್ ಬ್ಯಾಕ್ ಟು ಬ್ಯಾಕ್ ಯಶಸ್ಸಿನ ರುಚಿ ಕಂಡಿದ್ದಾರೆ. ಅವರೇ ನಿರ್ದೇಶಿಸಿದ 'ಸಲಗ' ಹಾಗೂ 'ಭೀಮ' ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇದೇ ಜೋಷ್ನಲ್ಲಿ 'ಮಾರುತ' ಕೂಡ ಮೋಡಿ ಮಾಡುತ್ತಾ? ದುನಿಯಾ ವಿಜಯ್ ಅವರೊಂದಿಗೆ ಶ್ರೇಯಸ್ ಮಂಜು ಲಕ್ ಕೂಡ ಕುಲಾಯಿಸುತ್ತಾ? ಅನ್ನೋದನ್ನು ಕನ್ನಡ ಚಿತ್ರರಂಗ ಎದುರು ನೋಡುತ್ತಿದೆ.
ಎಸ್.ನಾರಾಯಣ್ ನಿರ್ದೇಶಿಸಿರುವ 'ಮಾರುತ' ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ ಎಂದು ತಂಡ ಹೇಳಿಕೊಂಡಿದೆ. ಈಗಾಗಲೇ ರಿಲೀಸ್ ಆಗಿರುವ ಹಾಡುಗಳು ಹಾಗೂ ಟೀಸರ್ ಗಮನ ಸೆಳೆದಿವೆ. ಅಂದ್ಹಾಗೆ ಇಲ್ಲೊಂದು ಟ್ವಿಸ್ಟ್ ಇದೆ. ಎಸ್.ನಾರಾಯಣ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಶ್ರೇಯಸ್ ಮಂಜು ಹೀರೋ. ಈ ಯುವ ನಟನಿಗೆ ಬೆಂಬಲವಾಗಿ ದುನಿಯಾ ವಿಜಯ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ಸದ್ಯಕ್ಕೆ ದುನಿಯಾ ವಿಜಯ್ ಪಾತ್ರವೇನು ಅನ್ನೋ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಈಗಾಗಲೇ ರಿವೀಲ್ ಮಾಡಿರುವ ಪೋಸ್ಟರ್ ಹಾಗೂ ಲುಕ್ಗಳನ್ನು ನೋಡಿದರೆ, ದುನಿಯಾ ವಿಜಯ್ ಪವರ್ಫುಲ್ ಮಾಸ್ ಮಾತ್ರದಲ್ಲಿ ಕಾಣಿಸಿಕೊಂಡಿರುವ ಸೂಚನೆ ಸಿಕ್ಕಿದೆ. ಕೈಯಲ್ಲಿ ಗನ್ ಹಿಡಿದು ದುನಿಯಾ ವಿಜಯ್ ಖಡಕ್ ಲುಕ್ ಕೊಟ್ಟಿದ್ದಾರೆ. ಇತ್ತ ಶ್ರೇಯಸ್ ಮಂಜು ಲವರ್ ಬಾಯ್ ಇಮೇಜ್ ಕಾಣಿಸುತ್ತಿದೆ.

'ಮಾರುತ' ಸಿನಿಮಾಗೆ ಎಸ್.ನಾರಾಯಣ್ ಅವರ ನಿರ್ದೇಶನದ ಜೊತೆ ಸಂಗೀತ ಸಂಯೋಜನೆ ಕೂಡ ಅವರೇ ಮಾಡಿರೋದು ವಿಶೇಷ. ಇನ್ನು ಸಿನಿಮಾಗೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಮಾಡಿದ್ದಾರೆ. ಶಿವಪ್ರಸಾದ್ ಯಾದವ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದರೆ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮಾಡಿದ್ದಾರೆ. ಮೋಹನ್ ಕುಮಾರ್ ಹಾಗೂ ಸಂತು ನೃತ್ಯ ನಿರ್ದೇಶನ ಮಾಡಿದ್ದಾರೆ.
ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು ಜೊತೆ ನಾಯಕಿಯಾಗಿ ಬೃಂದಾ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ನಿಶ್ವಿಕಾ ನಾಯ್ಡು, ಸಾಧುಕೋಕಿಲ, ರಂಗಾಯಣ ರಘು, ತಾರಾ ಅನುರಾಧಾ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ ಹಾಗೂ ಸುಜಯ್ ಶಾಸ್ತ್ರಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಇನ್ನೊಂದು ವಿಶೇಷ ಅಂದರೆ, ಅತಿಥಿ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಹು ನಿರೀಕ್ಷಿತ ಸಿನಿಮಾ ಅಕ್ಟೋಬರ್ 31ರಂದು ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ.


Click it and Unblock the Notifications











