'ಅಪ್ಪು' ಸಿನಿಮಾ ನಿರ್ದೇಶಕನ ಕೈ ಹಿಡಿದ ದುನಿಯಾ ವಿಜಯ್; ಪುರಿ ಜಗನ್ನಾಥ್ ಗೆಲ್ಲಿಸುತ್ತಾರಾ ಇಬ್ಬರು ವಿಜಯ್?
ಒಂದು ಕಾಲದಲ್ಲಿ ದಕ್ಷಿಣ ಭಾರತದ ಆಕ್ಷನ್ ಡೈರೆಕ್ಟರ್ ಆಗಿದ್ದವರು ಪುರಿ ಜಗನ್ನಾಥ್. ಇವರು ಆಕ್ಷನ್ ಕಟ್ ಹೇಳಿದ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಶಿವಣ್ಣನನ್ನು 'ಯುವರಾಜ' ಮಾಡಿದ ನಿರ್ದೇಶಕ. ಪುನೀತ್ ರಾಜ್ಕುಮಾರ್ ಅನ್ನು ಮೊದಲ ಬಾರಿಗೆ ಹೀರೋ ಮಾಡಿದ್ದು ಕೂಡ ಇವರೇ. ಆದರೆ, ಇತ್ತೀಚೆಗ್ಯಾಕೋ ಪುರಿ ಜಗನ್ನಾಥ್ಗೆ ಗೆಲುವು ಅನ್ನೋದು ಮರೀಚಿಕೆಯಾಗಿಬಿಟ್ಟಿದೆ.
ವಿಜಯ್ ದೇವರಕೊಂಡ ಹಾಗೂ ಅನನ್ಯ ಪಾಂಡೆಯನ್ನು ಇಟ್ಟುಕೊಂಡು 'ಲೈಗರ್' ಅಂತಹ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಕೈ ಸುಟ್ಟಿಕೊಂಡಿದ್ದರು. ಈ ಹೀನಾಯ ಸೋಲಿನ ಬಳಿಕ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದರು. ಅದುವೇ 'ಡಬಲ್ ಇಸ್ಮಾರ್ಟ್ ಶಂಕರ್'. ಈ ಸಿನಿಮಾ ಕೂಡ ಬಾಕ್ಸಾಫೀಸ್ನಲ್ಲಿ ಕೈ ಹಿಡಿಯಲಿಲ್ಲ. 'ಲೈಗರ್'ಗೆ ಪುರಿ ಜಗನ್ನಾಥ್ ಕಥೆ ಮುಗಿತು ಅಂದುಕೊಂಡವರು ಇಸ್ಮಾರ್ಟ್ ಆಗುವುದಕ್ಕೆ ಹೋಗಿ ಸೋತಿದ್ದರು.

ಎರಡು ಬಿಗ್ ಫ್ಲಾಪ್ ಕೊಟ್ಮೇಲೂ ಪುರಿ ಜಗನ್ನಾಥ್ ಎದೆಗುಂದಲಿಲ್ಲ. ಮರಳಿ ಯತ್ನವ ಮಾಡು ಎನ್ನುವಂತೆ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ. ತಮಿಳಿನ ಮೋಸ್ಟ್ ಸಕ್ಸಸ್ಪುಲ್ ನಟ ವಿಜಯ್ ಸೇತುಪತಿ ಜೊತೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಈಗ ಆ ತಂಡಕ್ಕೆ ಸ್ಯಾಂಡಲ್ವುಡ್ನ ಕರಿಚಿರತೆ ದುನಿಯಾ ವಿಜಯ್ ಸೇರ್ಪಡೆಯಾಗಿದ್ದಾರೆ. ಹಾಗಿದ್ದರೆ, ಪುರಿ ಜಗನ್ನಾಥ್ ಸಿನಿಮಾದಲ್ಲಿ ದುನಿಯಾ ವಿಜಯ್ಗೆ ಯಾವ ಪಾತ್ರ? ಪುರಿಗೆ ಈ ಬಾರಿಯಾದರೂ ಗೆಲುವು ತಂದು ಕೊಡುತ್ತಾರಾ ಇಬ್ಬರು ವಿಜಯ್? ತಿಳಿಯುವುದಕ್ಕೆ ಮುಂದೆ ಓದಿ.
ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾಗೆ ನಟಿ ಚಾರ್ಮಿ ಕೌರ್ ಸಾಥ್ ಕೊಟ್ಟಿದ್ದಾರೆ. ಎರಡು ಸಿನಿಮಾಗಳ ಬಳಿಕ ಕೈ ಸುಟ್ಟುಕೊಂಡಿದ್ದರೂ, ಮತ್ತೆ ನಿರ್ಮಾಣಕ್ಕೆ ಇಳಿದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಆತಂಕಕ್ಕೆ ಕಾರಣವಾಗಿದ್ದಂತ ನಿಜ. ಯಾಕಂದ್ರೆ, ಈಗಾಗಲೇ ಪುರಿ ಜಗನ್ನಾಥ್ ಸಾಕಷ್ಟು ನಷ್ಟದಲ್ಲಿ ಇದ್ದಾರೆ ಅನ್ನೋ ಸುದ್ದಿ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದ್ದಾರೆ. ಆದರೂ, ಈ ಬಾರಿಗೆ ಆಯ್ಕೆ ಮಾಡಿಕೊಂಡಿರುವ ಕಲಾವಿದರ ಪಟ್ಟಿಯನ್ನು ನೋಡಿ ಸಮಾಧಾನಗೊಂಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ವಿಜಯ್ ಸೇತುಪತಿ ತಮ್ಮ ಸಿನಿಮಾದ ಹೀರೋ ಎಂದು ಪುರಿ ಜಗನ್ನಾಥ್ ಘೋಷಿಸಿದ್ದರು. ತಮಿಳು ಎಂಟ್ರಿ ಕೊಡುತ್ತಿದ್ದಂತೆ ಬಹುಭಾಷಾ ನಟಿ ಟಬು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈಗ ಸ್ಯಾಂಡಲ್ವುಡ್ನ ಸ್ಟಾರ್ ನಟ ದುನಿಯಾ ವಿಜಯ್ ಕೂಡ ಒಪ್ಪಿಗೆ ಕೊಟ್ಟಿದ್ದಾರೆ. ಹೀಗಾಗಿ ಈ ಪ್ರಾಜೆಕ್ಟ್ ಬಗ್ಗೆ ದಕ್ಷಿಣ ಭಾರತದಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಇಲ್ಲಿ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆಂದು ಹೇಳಲಾಗಿದೆ.
ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ ಈ ಸಿನಿಮಾ ದುನಿಯಾ ವಿಜಯ್ ನಟಿಸುತ್ತಿರುವ ಎರಡನೇ ತೆಲುಗು ಸಿನಿಮಾ ಆಗಲಿದೆ. ವಿಜಯ್ ಸೇತುಪತಿ ಹೀರೋ ಅಂದ್ಮೇಲೆ ತಮಿಳಿನಲ್ಲಿಯೂ ರಿಲೀಸ್ ಆಗೋದು ಗ್ಯಾರಂಟಿ. ಹೀಗಾಗಿ ದುನಿಯಾ ವಿಜಯ್ಗೆ ಇದು ಮೊದಲ ತಮಿಳು ಸಿನಿಮಾ ಆಗಲಿದೆ. ಹಾಗೇ ದುನಿಯಾ ವಿಜಯ್ ಆಯ್ಕೆ ಮಾಡಿದ್ದಾರೆ ಅಂದ್ಮೇಲೆ ಕನ್ನಡದಲ್ಲಿಯೂ ರಿಲೀಸ್ ಆಗಬಹುದು ಎಂದು ನಿರೀಕ್ಷೆ ಮಾಡಬಹುದು. ಒಟ್ನಲ್ಲಿ ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಅಂತ ಹೇಳಬಹುದು.
ದುನಿಯಾ ವಿಜಯ್ ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. 'ಸಲಗ' ಹಾಗೂ 'ಭೀಮ' ಎರಡು ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿತ್ತು. ಈ ಮಧ್ಯೆ ಬಾಲಕೃಷ್ಣ ನಟಿಸಿದ 'ವೀರ ಸಿಂಹ ರೆಡ್ಡಿ' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿ ಗೆದ್ದಿದ್ದರು. ಈಗ ಮತ್ತೊಮ್ಮೆ ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಜೊತೆ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











