"ಅಣ್ಣಾವ್ರು, ಅಪ್ಪು ಹೇಳಿಕೊಟ್ಟ ಪಾಠವನ್ನು ಜೀವ ಇರೋವರೆಗೂ ಬಿಡಲ್ಲ": ದುನಿಯಾ ವಿಜಯ್
ಈ ವರ್ಷ ಆರಂಭದಿಂದಲೂ ತಣ್ಣಗಿದ್ದ ಸ್ಯಾಂಡಲ್ವುಡ್ ಮುಂದಿನ ತಿಂಗಳಿಂದ ಸದ್ದು ಮಾಡುವ ಹಾಗೆ ಕಾಣಿಸುತ್ತಿದೆ. 'ಭೀಮ'ನಿಂದ ಬಾಕ್ಸಾಫೀಸ್ ಬೂಮ್ ಬೂಮ್ ಆಗುವ ಎಲ್ಲಾ ಸಾಧ್ಯತೆಗಳು ಇವೆ. ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಬಿಡುಗಡೆಗೆ ಸನಿಹದಲ್ಲಿದೆ. ಈ ಕಾರಣಕ್ಕೆ ದುನಿಯಾ ವಿಜಯ್ ಭರ್ಜರಿಯಾಗಿ ಪ್ರಚಾರವನ್ನು ಆರಂಭಿಸಿದ್ದಾರೆ.
ರಾಮನಗರದಲ್ಲಿ ನಡೆದ ಚಾಮುಂಡಿ ಉತ್ಸವದಲ್ಲಿ ದುನಿಯಾ ವಿಜಯ್ ಭಾಗಿಯಾಗಿದ್ದರು. ಈ ವೇದಿಕೆಯಲ್ಲಿ 'ಭೀಮ' ಸಿನಿಮಾದ ಪ್ರಚಾರ ಮಾಡುವುದಕ್ಕೆ ವಿಜಯ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ದುನಿಯಾ ವಿಜಯ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಡುವಿನ ವೇಳೆ ಅಣ್ಣಾವ್ರು ಹಾಗೂ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

ರಾಮನಗರದ ಚಾಮುಂಡಿ ಉತ್ಸವ ವೇದಿಕೆ ಮೇಲೆ ದುನಿಯಾ ವಿಜಯ್ ಅವಕಾಶಗಳನ್ನು ಕೊಟ್ಟಿದ್ದನ್ನು ಅರ್ಜುನ್ ಜನ್ಯ ನೆನಪಿಸಿಕೊಂಡಿದ್ದರು. "ಅಣ್ಣ ನಾನು ಆರಂಭದಲ್ಲಿ ಬಂದಾಗ, ನನಗೆ ಸಿನಿಮಾಗಳನ್ನು ಕೊಟ್ಟು, ಕೈ ಹಿಡಿದು ಚಿತ್ರರಂಗದಲ್ಲಿ ನಾನು ಇಲ್ಲಿವರೆಗೂ ಬಂದು ನಿಂತಿದ್ದೇನೆ ಅಂದರೆ, ಬಹಳ ಮುಖ್ಯವಾದ ಕಾರಣ ದುನಿಯಾ ವಿಜಯ್ ಅಣ್ಣ." ಎಂದು ಅರ್ಜುನ್ ಜನ್ಯ ಹೇಳುತ್ತಿದ್ದಂತೆ ದುನಿಯಾ ವಿಜಯ್ ದೊಡ್ಮನೆಯನ್ನು ನೆನಪಿಸಿಕೊಂಡರು.
"ನಾನು ಅದನ್ನೆಲ್ಲ ಕಲಿತಿದ್ದು ಅಣ್ಣಾವ್ರ ಮನೆಯಿಂದ. ಪುನೀತ್ ರಾಜ್ಕುಮಾರ್ ಸರ್ ಕಡೆಯಿಂದ. ಹಾಗಾಗಿ ನಮ್ಮ ಜೀವ ಇರುವವರೆಗೂ ಅವರು ಹೇಳಿಕೊಟ್ಟಂತಹ ಪಾಠಗಳನ್ನು ನಾವು ಬಿಡುವುದಿಲ್ಲ. ಹಾಗಾಗಿ ಇವತ್ತು ಆ ದು:ಖನೂ ಇದೆ. ಅವರನ್ನು ಸದಾ ನೆನಪಿಸಿಕೊಳ್ಳುತ್ತೇನೆ ಅನ್ನುವ ಖುಷಿನೂ ಇದೆ. ನಾನೇನು ಮಾಡಿಲ್ಲ. ಅವರು ಏನು ಮಾಡಿದ್ದಾರೋ ಅದರಲ್ಲಿ ಸಣ್ಣದನ್ನು ಮಾಡಿದ್ದೇವೆ ಅಷ್ಟೇ." ದುನಿಯಾ ವಿಜಯ್ ಹೇಳಿದ್ದಾರೆ. ಈ ಮಾತಿಗೆ ಅಪ್ಪು ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ದುನಿಯಾ ವಿಜಯ್ ಎದುರು ಅಪ್ಪು ಅಭಿಮಾನಿಯೊಬ್ಬ 'ರಾಜಕುಮಾರ' ಸಿನಿಮಾದ "ಬೊಂಬೆ ಹೇಳುತೈತೆ.." ಹಾಡನ್ನು ಹಾಡಿದ್ದರು. ಅದನ್ನು ಕೇಳಿ ವಿಜಯ್ ಭಾವುಕರಾಗಿದ್ದೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದೆ.
ಇನ್ನು ಚಾಮುಂಡಿ ಉತ್ಸವದಲ್ಲಿ ರಾಮನಗರಕ್ಕೂ 'ಭೀಮ' ಸಿನಿಮಾಗೂ ಒಂದು ನಂಟು ಇದೆ. ಅದನ್ನು ಇದೇ ವೇಳೆ ಚಾಮುಂಡಿ ಉತ್ಸವದಲ್ಲಿ ರಿವೀಲ್ ಮಾಡಿದ್ದಾರೆ. "ಭೀಮ ಸಿನಿಮಾದ ವಿಶೇಷ ಏನು ಅಂದರೆ, ಈ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಓಪನ್ ಆಗುವುದೇ, ನಮ್ಮ ಈ ರಾಮನಗರ ಸರ್ಕಲ್ನಿಂದ. ಇಲ್ಲಿ ಬಂದು ಗಾಡಿಯನ್ನು ಆಕ್ಸಿಡೆಂಟ್ ಮಾಡಿ, ಇಲ್ಲಿಂದ ಅಟ್ಟಿಸಿಕೊಂಡು ಆ ಮಸೀದಿ ಹತ್ತಿರ ಹೋಗಿ, ಅಲ್ಲಿಂದ ಕರೆದುಕೊಂಡು ಸೀದಾ ಬೆಂಗಳೂರಿಗೆ ಹೋಗುತ್ತೇನೆ. ಹಾಗಾಗಿ ತುಂಬಾ ನೆನಪಿನಲ್ಲಿರುವ ಸರ್ಕಲ್ ಇದು." ಎಂದು ದುನಿಯಾ ವಿಜಯ್ ಹೇಳಿದ್ದಾರೆ.


Click it and Unblock the Notifications











